Thursday, 19th September 2024

ಹಾರರ್‌ ಸಿನಿಮಾ ವಿಮರ್ಶೆ- ಆತ್ಮ ವಿಮರ್ಶೆ

ತುಂಟರಗಾಳಿ

ಸಿನಿಗನ್ನಡ

ಚಿತ್ರರಂಗದಲ್ಲಿ ಆಗಾಗಾ ಹೊಸ ಖಾಯಿಲೆಗಳು ಶುರು ಆಗುತ್ತಿರುತ್ತವೆ. ಕೆಲವನ್ನು ಖಾಯಿಲೆ ಅನ್ನೋದೋ ಅಥವಾ ಖಯಾಲಿ ಅನ್ನೋದು ಗೊತ್ತಾಗಲ್ಲ. ಆದ್ರೆ, ಇತ್ತೀಚೆನ ಬಾಯ್ಕಾಟ್ ಸಂಸ್ಕೃತಿಯ ಜೊತೆಗೆ ಈಗ ನಮ್ಮ ಭಾವನೆಗಳಿಗೆ ಧಕ್ಕೆ ಬಂದಿದೆ ಅಂತ ಬೊಬ್ಬೆ ಹಾಕಿ, ತಮಗೆ ಆಗದವರ ಸಿನಿಮಾಗಳಿಗೆ ಕೊಕ್ಕೆ ಹಾಕುವ ಮನಸ್ಥಿತಿಗಳು ಜಾಸ್ತಿ ಆಗುತ್ತಿವೆ.

ಇದಕ್ಕೆ ಕಾರಣ ರಾಜ ಕೀಯ ಅಂದ್ರೆ ತಪ್ಪಿಲ್ಲ. ಚಿತ್ರರಂಗದಲ್ಲಿ ಪೊಲಿಟಿಕಲ್ ಸಿನಿಮಾಗಳು ಬರೋದು ಕಾಮನ್. ಆದರೆ ಸಿನಿಮಾಗಳಿಗೇ ಪೊಲಿಟಿಕಲ್ ಆಂಗಲ್ ಬರ್ತಾ ಇರೋದು ಕೆಟ್ಟ ಬೆಳವಣಿಗೆ. ಇಲ್ಲಿ ಗಮನಿಸಬೇಕಾದ ಅಂಶಗಳು ಅಂದ್ರೆ ಇವ್ಯಾವೂ ಒಳ್ಳೆಯ ಉದ್ದೇಶದಿಂದ ಅಥವಾ ನಿಜವಾದ ಭಾವನೆಗಳಿಗೆ ಧಕ್ಕೆ ತರೋ ಸಂಗತಿಗಳಲ್ಲ. ಬದಲಾಗಿ ಚಿತ್ರಕ್ಕೆ ಸಂಬಂಧಪಟ್ಟ ಯಾರಾದರೂ ಒಂದು ರಾಜಕೀಯ ಪಂಗಡದ ಪರ ಮಾತಾಡಿದರೆ ಅವರ ವಿರೋಧಿ ಪಕ್ಷಗಳು ಬೇಕೆಂತಲೇ ಮಾಡುತ್ತಿರುವ ಬೃಹನ್ನಾಟಕಗಳು ಇವು. ಮಾತೆತ್ತಿದರೆ ಅವರಿಗೆ ಅವಮಾನ ಆಗಿದೆ, ಇವರಿಗೆ ಅವಮಾನ ಆಗಿದೆ ಅಂತ ಕುಂಟು ನೆಪ ಹೂಡಿ ಸಮಾಜದ ಆರೋಗ್ಯ ಕೆಡಿಸುವ ಪ್ರಯತ್ನಗಳು ಇವು. ಇದು ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದು ತುಂಬಾ ಕೀಳಾಗಿ ವರ್ತಿಸುತ್ತಿರುವ ಅನೇಕ ಉದಾಹರಣೆಗಳನ್ನು ನಾವು ಇಂದು ನೋಡಬೇಕಾಗಿರೋದು ದುರದೃಷ್ಠಕರ.

ಇದರಿಂದ ಕೋಟಿಗಟ್ಟಲೆ ಹಣ ಹಾಕಿ ಸಿನಿಮಾ ಮಾಡುವ ಮಂದಿ ಈಗ ಏನಾದರೂ ಮಾಡು, ಮೊದಲು ಸಿನಿಮಾನ ಸಿನಿಮಾ ಥರ ನೋಡು ಅಂತ ಇಂಥ ಕಿರಿಕ್ ಪಾರ್ಟಿಗಳಿಗೆ ಹೇಳಬೇಕಾಗಿರೋ ಪರಿಸ್ಥಿತಿ ಬಂದಿದೆ. ಇಂಥ ಬೆಳವಣಿಗೆಗಳನ್ನು ನೋಡಿದಾಗ ಒಮ್ಮೊಮ್ಮೆ, ಸರಿಯೋ ತಪ್ಪೋ, ಸಿನಿಮಾ ಅನ್ನೋದು ನಿರ್ದೇಶಕರ ಸ್ವಾತಂತ್ರ್ಯ, ಅವರಿಗೆ ಇಷ್ಟ ಆಗಿದ್ದನ್ನು ಅವರು ಮಾಡ್ತಾರೆ, ನಿಮಗೆ ಇಷ್ಟ ಇದ್ರೆ ನೋಡಿ, ಇಂದ್ರೆ ಬಿಡಿ ಅನ್ನೋ ಕಾನೂನು ಬಂದ್ರೆ ಒಳ್ಳೆಯದು ಅನ್ನಿಸೋದು ನಿಜ.

ಲೂಸ್ ಟಾಕ್
ಶಿವರಾಜ್ ಕುಮಾರ್(ಕಾಲ್ಪನಿಕ ಸಂದರ್ಶನ) 
ಏನ್ ಶಿವಣ್ಣ, ಶಿವರಾತ್ರಿ ಮುಗಿದು ಬಿಸಿಲು ಶುರುವಾಗುತ್ತೆ ಅಂತ ‘ಭೈರತಿ ರಣಗಲ್ ಹವಾ’ ಶುರು ಮಾಡಿದ್ರಾ?

-ಶಿವ ಇದ್ದ ಕಡೆ ಹವಾ ಇರ್ಲೇಬೇಕ..

ಮತ್ತೆ ನೀವು, ಮಚ್ಚು ಲಾಂಗು ಸಿನಿಮಾನೇ ಮಾಡೋಕೆ ಶುರು ಮಾಡಿದ್ದೀರಾ ಅನ್ಸುತ್ತೆ?
-ಜನ ಅಂಥ ಸಿನಿಮಾಗಳನ್ನೇ ಮೆಚ್ಚಿದಾಗ ನಾನು ಮಚ್ಚು ಲಾಂಗು ಬಿಟ್ಟರೆ ಮೆಚ್ಚನಾ ಪರಮಾತ್ಮನು

ನಿಮ್ಮ ವೇದ ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೂ ಪ್ರಾಮುಖ್ಯತೆ ಇತ್ತು ಅಲ್ವಾ?
-ಆ ಸಿನಿಮಾ ಹಾಗಿತ್ತು. ಆ ಕಥೆಯಲ್ಲಿ ಅವರೂ ಒಂಥರಾ SHEವರಾಜ್ ಕುಮಾರ್‌ಗಳೇ..

ವೇದ ಸಿನಿಮಾನ ತೆಲುಗಲ್ಲೂ ರಿಲೀಸ್ ಮಾಡಿದ್ರಿ, ಇನ್ನು ಮುಂದೆ ನಿಮ್ಮ ಸಿನಿಮಾಗಳನ್ನ ಪ್ಯಾನ್ ಇಂಡಿಯಾ ಮಾಡ್ತೀರಾ?
-ಅವೆಲ್ಲ ನಂಗೊತ್ತಿಲ್ಲ, ವೇದ ಸಿನಿಮಾದಲ್ಲಿ ನಾನು ಹಿಡಿದ ಕತ್ತಿಯ ಅಲುಗು, ತೆಲುಗು ಸಿನಿಮಾದಲ್ಲೂ ಮಿಂಚುತ್ತೆ ಅನ್ನಿಸ್ತು, ಮಾಡಿದೆ ಅಷ್ಟೇ.

ಸರಿ, ಭೈರತಿ ರಣಗಲ್ ಪಾತ್ರದಲ್ಲಿ ನೀವು ನೋಡೋಕೆ ಸೈಲೆಂಟ್, ಆದ್ರೆ, ಆ ಸೈಲೆ ಹಿಂದೆ ಬೇರೆನೇ ಮುಖ ಇತ್ತು ಅಲ್ವಾ?

-ಹೌದು, ನಾನು ಶಿವ…ನನ್ನತ್ರ ಸರಿಯಾಗಿದ್ರೆ ಶಿವಸಂಸ್ಕಾರ, ನಿಗರಾಡಿದ್ರೆ ಶವಸಂಸ್ಕಾರ.

ನೆಟ್ ಪಿಕ್ಸ್
ಖೇಮುನ ಮಾವ ಪುಲ್ ಸೀರಿಯಸ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ಅವರನ್ನು ನೋಡಿದ ಎಲ್ಲಾ ಡಾಕ್ಟರ್‌ಗಳೂ ಅವರು ಬದುಕೋ ಯಾವ
ಸಾಧ್ಯತೆಗಳೂ ಇಲ್ಲ ಅಂತ ಹೇಳಿದ್ರು. ಅಲ್ಲದೆ, ಪೇಷೆಂಟ್ ಪರಿಸ್ಥಿತಿ ಗಂಭೀರವಾಗಿದ್ದುದರಿಂದ ಯಾವ ಡಾಕ್ಟರ್ ಕೂಡ ಆಪರೇಷನ್ ಮಾಡಲು
ಮುಂದೆ ಬರಲಿಲ್ಲ. ಅಳಿಯ ವೇಮು ಕೂಡ ಸ್ವತಃ ಡಾಕ್ಟರ್ ಆಗಿದ್ದ. ಹಾಗಾಗಿ ಖೇಮು ಆಗಿದ್ದಾಗ್ಲಿ ಒಂದ್ ಕೈ ನೋಡೇ ಬಿಡೋಣ ಅಂತ ಆಪರೇಷನ್
ಮಾಡಲು ತಯಾರಾದ.

ಆಪರೇಷನ್‌ಗೆ ಮುಂಚೆ ಮಂಚದ ಮೇಲೆ ಮಲಗಿದ್ದ ಖೇಮು ಮಾವ ಆಪರೇಷನ್ ಛೇಂಬರ್‌ಗೆ ಬಂದ ಖೇಮುವನ್ನು ನೋಡಿ ಸನ್ನೆ ಮಾಡಿ ನಿನ್ನ ಬಳಿ ಏನೋ ಹೇಳಬೇಕು ಹತ್ತಿರ ಬಾ ಅಂತ ಕರೆದ್ರು, ಖೇಮು ಹೋದ. ಖೇಮುನ ಕಿವಿಯಲ್ಲಿ ಅವನ ಮಾವ ಏನೋ ಹೇಳದ್ರು. ಸರಿ ಆಪರೇಷನ್ ಶುರುವಾಯ್ತು, ಸತತ ನಾಲ್ಕು ತಾನು ಆಪರೇಷನ್ ನಡೆಯಿತು. ಏನೇ ಆದ್ರೂ ರೋಗಿ ಬದುಕೊಲ್ಲ ಅಂದಿದ್ದ ಡಾಕ್ಟಗಳಿಗೆ ಅಚ್ಚರಿ ಎಂಬಂತೆ ಆಪರೇಷನ್ ಸಕ್ಸಸ್ ಫಲ, ಇದೊಂದು ವೈದ್ಯಲೋಕದ ವಿಸ್ಮಯ ಎಂದರು ಅವರೆಲ್ಲ.

ಎಲ್ಲರೂ ನಿರಾಳವಾಗಿ ಆಪರೇಷನ್ ಕೋಣೆಯಿಂದ ಹೊರಬಂದ ಖೇಮುವನ್ನು ‘ಇದೆ ಹೇಗಾಯ್ತು. ನಿಮ್ಮ ಮಾವ ಆಪರೇಷನ್‌ಗೆ ಮುಂಚೆ ನಿಮ್ಮ ಕಿವಿಯಲ್ಲಿ ಏನೋ ಹೇಳಿದ್ರಂತೆ, ಏನು ಹೇಳಿದ್ರು’ ಅಂತ ಕೇಳಿದ್ರು ಆಸ್ಪತ್ರೆಯ ಸೀನಿಯರ್ ಡಾಕ್ಟರ‍್ಸ್, ಅದಕ್ಕೆ ಖೇಮು ಹೇಳಿದ ‘ಮಾವ ಹೇಳಿದ್ದು ಇಷ್ಟೆ, ನೋಡಪ್ಪ ಅಳಿಮಯ್ಯ, ನಾನು ನಿಮ್ಮ ಮಾವ ಅಂತ ನರ್ವಸ್ ಆಗ್ ಬೇಡ.

ಧೈರ್ಯವಾಗಿ ನನ್ ಕೆಲಸ ನೀನು ಮಾಡು, ಉಳಿದಿದ್ದು ದೇವರಿಗೆ ಬಿಟ್ಟಿದ್ದು, ಆದ್ರೆ ಒಂದ್ ಮಾತ್ ನೆನಪಿಟ್ಟೋ, ನಿಮ್ಮತ್ತೆಗೆ ನನ್ನ ಬಿಟ್ರೆ ಯಾರೂ ಇಲ್ಲ
ನಾನು ಹೆಚ್ಚುಕಮ್ಮಿ ಆಗಿ ಸತ್ತು ಹೋದ್ರೆ, ಅವಳು ನಿಮ್ಮ ಮನೆಯ ಒಂದು ಇರ್ತಾಳೆ, ಅವಳನ್ನ ಚೆನ್ನಾಗಿ ನೋಡ್ಕೊಳಪ್ಪಾ’,

ಲೈನ್ ಮ್ಯಾನ್

ದೆವ್ವದ ಸಿನಿಮಾಗೆ ಬರೆಯೋ ವಿಮರ್ಶೆ
-‘ಆತ್ಮ’ ವಿಮರ್ಶೆ
ವಾಚುಗಳ ಬಗ್ಗೆ ಸಿಕ್ಕಾಪಟ್ಟೆ ಶೋಕಿ ಇರುವವನು
-ವಾಚಾಳಿ
ವಿಲ್ ಬರೆಯಲು ಒಪ್ಪದ ವಯಸ್ಸಾದ ಅಪ್ಪನಿಗೆ ಏನು ಹೇಳಬೇಕು
-ವೇರ್ ದೇರ್ ಈಸ್ ಎ ವಿಲ್ ದೇರ್ ಈಸ್ ಎ ವೇ..
ತನ್ನ ಬಿಟ್ಟು ಬೇರೆ ಹುಡುಗಿ ಜೊತೆ ವಾಸ ಮಾಡ್ತಾ ಇರೋ ಗಂಡನ ಹಿಂದೆ ಮತ್ತೊಂದ್ ಹುಡುಗಿ ಬಿದ್ಳು ಅಂತ ಒರಿಜಿನಲ್ ಹೆಂಡ್ತಿ, ನನ್ ಫ್ಯಾಮಿಲಿ
ಹಾಳ್ ಮಾಡೋಕ್ ಬಂದ್ರೆ ಸರಿ ಇರಲ್ಲ ಅಂದ್ಳಂತೆ

-ಫುಟ್‌ಪಾತ್‌ನಲ್ಲಿ ಮಲಗೋನು, ಅಯ್ಯೋ, ನನ್ ಜೀವ್ನ ಬೀದಿಗ್ ಬಂದ್ಬಿಡುತ್ತೆ ಅಂತ ಭಯ ಪಟ್ಕೊಂಡನಂತೆ, ಹಂಗಾಯ್ತು ಇದು.

ಶಾಸಕರಿಗೆ ಹಣ ಕೊಟ್ರೆ: ಆಪರೇಷನ್ ಕಮಲ
ಪತ್ರಕರ್ತರಿಗೆ ಹಣ ಕೊಟ್ರೆ: ಕೋ-ಆಪರೇಷನ್ ಕಮಲ
ಗಂಧದ ಗುಡಿ ಸಿನಿಮಾದ ವಿಶೇಷ -ಚಿತ್ರ‘ಮಂದಿರ’ಗಳಲ್ಲಿ ‘ಗಂಧದ ಗುಡಿ’ ಬಂದ ಸಮಯ ಅದು.
ದೇವರ ಹೆಸರು ಬಳಸಿಕೊಂಡು, ದೇವಸ್ಥಾನಗಳನ್ನು ಉದ್ಯಮವನ್ನಾಗಿ ಮಾಡಿಕೊಂಡಿರೋರ ಉದ್ಯೋಗ 
-‘ಗುಡಿ’ ಕೈಗಾರಿಕೆ
ದೀಪಾವಳಿ ಸಮಯದ ಜ್ಞಾನೋದಯ
-ಲೈಫಲ್ಲಿ ಯಾರು, ಯಾವಾಗ, ಹೆಂಗ್ ಬತ್ತಿ ಇಡ್ತಾರೆ ಅಂತ ಬೇಕಾದ್ರೂ ಗೆಸ್ ಮಾಡ್ಬೋದು, ಆದ್ರೆ, ರೋಡಲ್ಲಿ ಯಾರು, ಎಲ್ಲಿ ಪಟಾಕಿ ಇಟ್ಟಿರ್ತಾರೆ ಅಂತ ಗೆಸ್ ಮಾಡೋದ್ ಕಷ್ಟ
ಪೊಲಿಟಿಕಲ್ ಡೌಟ್
-ದೇಶದ ೧೩೦ ಕೋಟಿ ಜನರ ಪರವಾಗಿ ಕೇಳ್ತಾ ಇದ್ದೀನಿ ಅಂತ ಮಾತಾಡ್ತಾರಲ್ಲ, ಇವ್ರಿಗೆಲ್ಲ ನಮ್ಮನ್ನು ಕೇಳದೇ, ನಮ್ಮ ಪರವಾಗಿ ಮಾತಾಡೋ ಅಧಿಕಾರ ಕೊಟ್ಟೋರು ಯಾರು?

ನಾಲ್ಕು ಭಾಷೆಗಳ ಚಿತ್ರಗಳಲ್ಲಿ ನಟಿಸೋ ನಟ- ಚತುರ್ಭಾಷಾ ನಟ
-ನಾಲ್ಕು ಜನ ಮೆಚ್ಚುವಂಥ ಕನ್ನಡ ಮಾತಾಡೋ ನಟ- ಚತುರ ಭಾಷಾ ನಟ
ಒಂದೇ ಘಟನೆಯನ್ನು ಮತ್ತೆ ಮತ್ತೆ ತೋರಿಸಿ ಕಿರಿಕಿರಿ ಮಾಡುವ ಟಿವಿ ಚಾನೆಲ್‌ಗಳ ವರದಿ
-ಘಟ‘ನಾವಳಿ’
ವೆಯ್ಟ್ ಲಿಫ್ಟರ್ ಅಂದ್ರೇನು?
-ತೂಕ ಹೆಚ್ಚಿಸಿಕೊಳ್ಳುವವನು