Monday, 28th October 2024

Janamejaya Umarji Column: ಸಾಂಸ್ಕೃತಿಕ ಮಾರ್ಕ್ಸ್‌ವಾದದ ರಾಜಕಾರಣ

ಚರ್ಚಾ ವೇದಿಕೆ

ಜನಮೇಜಯ ಉಮರ್ಜಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರಾದ ಮೋಹನ್ ಭಾಗವತ್ ಅವರು ಇತ್ತೀಚಿನ ವಿಜಯ ದಶಮಿ ದಿನದಂದು ನೀಡಿದ ಸಂದೇಶದಲ್ಲಿ, ಸಾಂಸ್ಕೃತಿಕ ಮಾರ್ಕ್ಸ್‌ವಾದವು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಹೇಗೆ ಅಪಾಯಕಾರಿ ಎಂಬುದರ ಕುರಿತು ಹೇಳಿದ್ದರು. ಯಾವುದೇ ದೇಶದ ಆಡಳಿತ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಇದ್ದೇ ಇರುತ್ತವೆ. ಯಾರೋ ಒಬ್ಬರು ಅಧಿಕಾರಕ್ಕೆ ಬರುತ್ತಾರೆ.

ಇದು ಇಷ್ಟು ಸರಳ ಅಂದುಕೊಂಡರೆ ಅಲ್ಲ. ‘ಪರ್ಯಾಯ ರಾಜಕಾರಣ’ ಎಂಬ ಹೆಸರಿನ ಮೂರನೇ ಆಟಗಾರರೂ ಇರುತ್ತಾರೆ. ಇದರ ಕಥೆ, ಚಿತ್ರಕಥೆ ಎಲ್ಲವೂ ಸಾಂಸ್ಕೃತಿಕ ಮಾರ್ಕ್ಸ್ವಾದದ್ದು. ಜಾತಿ, ಮತ, ಪ್ರಾದೇಶಿಕತೆಯ ಆಧಾರ ದಲ್ಲಿ ವಿಭಜನೆ, ಪ್ರತ್ಯೇಕತೆಯ ಚಿಂತನೆ, ಅರಾಜಕತೆಗಳ ಮೂಲಕ ಅಧಿಕಾರ ಬದಲಾವಣೆ ಇದು ಮೂರನೆಯ ಆಟಗಾರರ ವಿಧಾನ. ಇವರ ಸೋಲು ದೇಶದ ಗೆಲುವು. ಯುರೋಪಿನ ದೇಶಗಳು ಇದರಿಂದ ತ್ರಸ್ತರಾಗಿರುವುದರ ಬಗ್ಗೆ ಪುಸ್ತಕಗಳು ಬರುತ್ತಿವೆ.

ಶ್ರೀಲಂಕಾ ದಿವಾಳಿಯಾಗುವಂತಾಗಿದ್ದಕ್ಕೆ, ಬಾಂಗ್ಲಾದೇಶದ ಇತ್ತೀಚಿನ ವಿದ್ಯಮಾನಗಳ ಹಿಂದೆ ಮೂರನೆಯ ಆಟಗಾರರಿದ್ದಾರೆ ಎಂದರೆ ಕಾಕತಾಳೀಯವೇನಲ್ಲ. ಬಾಂಗ್ಲಾದೇಶದಲ್ಲಿನ ಹಿಂದೂಗಳ ಪರಿಸ್ಥಿತಿ ಹೇಳತೀರದು. ಅದು ಸ್ವತಂತ್ರವಾಗುವ ಸಮಯದಲ್ಲಿ ಜನರಿಗೆ ಊಟ-ವಸತಿ ನೀಡಿದ ಸಂಸ್ಥೆಗಳೂ ಈಗ ದಾಳಿಗೆ ಗುರಿಯಾದವು. ಕರ್ನಾಟಕದಲ್ಲಿಯೂ ನಾಯಕರೊಬ್ಬರು ‘ಬಾಂಗ್ಲಾದೇಶದ ಪರಿಸ್ಥಿತಿ ಉಂಟಾಗಬಹುದು’ ಎಂದು ಹೇಳಿದ್ದು ಸುದ್ದಿಯಾಗಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಕಾರಣಕ್ಕೆ ನಡೆಯುತ್ತಿರುವ ಕೆಲವು ಪ್ರತಿಭಟನೆಗಳ ಸ್ವರೂಪ, ಗಣೇಶ ಮೆರವಣಿಗೆ, ದುರ್ಗಾ ಪೂಜಾ ಪೆಂಡಾಲುಗಳ ಮೇಲೆ ನಡೆದ ಕಲ್ಲುತೂರಾಟದ ಘಟನೆಗಳು ಆತಂಕಕಾರಿಯಾಗಿವೆ. ಹುಬ್ಬಳ್ಳಿಯಲ್ಲಿ, ಬೆಂಗಳೂ ರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಗಳಲ್ಲಿ ಹಿಂದೆ ನಡೆದ ದಾಂಧಲೆಗಳ
ಸ್ವರೂಪವು ಕಾನೂನು-ಸುವ್ಯವಸ್ಥೆಯನ್ನು ಅಸ್ವಸ್ಥಗೊಳಿಸುವಂಥದ್ದು.

ಇಂಥ ಘಟನೆಗಳು ಸಂಧಿಸುವ ಅರಾಜಕತೆಯ ವ್ಯಾಕರಣವನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರರು
ಸಂವಿಧಾನ ಸಭೆಯಲ್ಲಿ ಮಾಡಿದ ಎರಡು ಭಾಷಣಗಳಲ್ಲಿ ಪ್ರಸ್ತಾಪಿಸಿದ್ದನ್ನು ಸರಸಂಘಚಾಲಕರು ಉಲ್ಲೇಖಿಸಿದರು.
ಆರ್ಥಿಕ ವಿಚಾರಗಳ ಮಾರ್ಕ್ಸ್‌ವಾದವು ಜಗತ್ತಿನಾದ್ಯಂತ ಸರ್ವಾಧಿಕಾರವಾಗಿ ಬದಲಾಗುತ್ತಾ ಬಂದಂತೆ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಈಗ ಸಾಂಸ್ಕೃತಿಕ ಮಾರ್ಕ್ಸ್‌ವಾದ ಎಂಬುದು ಪ್ರವರ್ಧಮಾನಕ್ಕೆ ಬರುತ್ತಲಿದೆ. ಇಲ್ಲಿ ನೇರಯುದ್ಧವಿಲ್ಲ, ಏನಿದ್ದರೂ ಆಂತರಿಕವಾಗಿ ಸಂಸ್ಕೃತಿಯನ್ನು ಶಿಥಿಲ ಮಾಡುವುದು, ತನ್ಮೂಲಕ ದೇಶ ವನ್ನೂ. ಮಾತ್ರವಲ್ಲದೆ, ಧಾರ್ಮಿಕ ಆಚರಣೆಗಳಲ್ಲಿ ಅಪನಂಬಿಕೆ ಹುಟ್ಟಿಸುವುದು, ಅನುಯಾಯಿಗಳಲ್ಲಿಯೇ ಜಗಳ ಹಚ್ಚುವುದು, ಸಂಸ್ಕೃತಿ, ಧರ್ಮ, ಕುಟುಂಬ, ಶಿಕ್ಷಣ ವ್ಯವಸ್ಥೆ, ಮಾಧ್ಯಮಗಳನ್ನು ಬಳಸಿಕೊಂಡು ಒಡೆಯುವ, ಪರಸ್ಪರ ವೈರಭಾವ ಬೆಳೆಸುವ ಕೆಲಸವನ್ನು ಇದು ಮಾಡುತ್ತದೆ.

ಹೀಗೆ ಪಾರಂಪರಿಕ ಮೌಲ್ಯಗಳು ಕುಸಿದಾಗ, ಸಾಮಾಜಿಕ ಸ್ಥಿರತೆಯ ಅಧಃಪತನವಾಗುತ್ತದೆ. ಕಾನೂನುಗಳ ವಿರುದ್ಧ
ಜನರನ್ನು ಎತ್ತಿಕಟ್ಟುವುದೂ ಇದರ ಒಂದು ಭಾಗ. ಇದು ಅಸ್ಥಿರತೆಯನ್ನು ತರುತ್ತದೆ, ಅರಾಜಕತೆಗೆ ಕಾರಣವಾಗು ತ್ತದೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಮಾರ್ಕ್ಸ್‌ವಾದ ಏನು, ಎತ್ತ? ಮಾರ್ಕ್ಸ್‌ವಾದದ ಬಗ್ಗೆ ಅಂಬೇಡ್ಕರರಿಗೆ ಇದ್ದ ಅಭಿಪ್ರಾಯವೇನು ಎಂಬುದರ ಬಗ್ಗೆ ನೋಡೋಣ. ‘ಭಾರತ ರತ್ನ’ ಡಾ. ಬಾಬಾಸಾಹೇಬ್ ಅಂಬೇಡ್ಕರರು ಭಾರತ ವನ್ನು ಚೆನ್ನಾಗಿ ಅರಿತಿದ್ದರು.

ಭಾರತದ ಶಕ್ತಿ ಯಾವುದು? ಕೊರತೆ ಎಲ್ಲಿದೆ? ನ್ಯೂನತೆಯ ಕಾರಣಗಳಾವುವು? ಪರಿಹಾರ ಏನು? ಎಂಬುದರ ಬಗ್ಗೆ ಅವರಿಗೆ ಸ್ಪಷ್ಟತೆ ಇತ್ತು. ಧರ್ಮಶಾಸ್ತ್ರ, ನ್ಯಾಯಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಅವರು, ಜಗತ್ತಿನ ಇತಿಹಾಸ, ಸಾಮಾಜಿಕ ವ್ಯವಸ್ಥೆ ಮತ್ತು ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡಿದ್ದರು.

ಭಾರತದ ಹಿತಕ್ಕೆ ಯಾವುದು ಪೂರಕ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರೂಪಿಸಿದ್ದರು. ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕರಾಗಿದ್ದ ಅವರು, ಕಾನೂನು ಮತ್ತು ಸಾಂವಿಧಾನಿಕ ವಿಧಾನಗಳ ಮೂಲಕವೇ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳನ್ನು ಸಾಧಿಸುವಲ್ಲಿ ಪೂರ್ಣ ನಂಬಿಕೆ ಇಟ್ಟಿದ್ದರು. ಸಾಮಾಜಿಕ ನ್ಯಾಯಕ್ಕೆ ಆಳವಾಗಿ ಬದ್ಧರಾಗಿದ್ದರೂ, ಕಮ್ಯುನಿಸಂ ಕ್ರಾಂತಿ ಮತ್ತು ಬದಲಾವಣೆಯನ್ನು ಸಾಧಿಸುವ ಅದರ ಸರ್ವಾಧಿಕಾರಿ ವಿಧಾನಗಳು ಪ್ರಜಾ ಪ್ರಭುತ್ವಕ್ಕೆ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಭಾವಿಸಿದ್ದರು.

“ರಾಜಕೀಯ ದಲ್ಲಿ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಶ್ರಮಿಸುತ್ತಿರುವ ಯಾವುದೇ ಸಮಾಜದಲ್ಲಿ, ಸರ್ವಾಧಿ ಕಾರಕ್ಕೆ ಸ್ಥಾನವಿಲ್ಲ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ” ಎಂದು ಅಂಬೇಡ್ಕರ್ ಹೇಳಿದ್ದರು.
ಸಂವಿಧಾನ ದೆಡೆಗಿನ ನಿಷ್ಠೆ ಮತ್ತು ಶ್ರದ್ಧೆ: ಅಂತಿಮವಾಗಿ ಸಂವಿಧಾನವನ್ನು ಅಂಗೀಕರಿಸುವ ಸಂದರ್ಭದಲ್ಲಿ, ಅಂಬೇಡ್ಕರ್ ಅವರು 1949ರ ನವೆಂಬರ್ 25ರಂದು ಮಾಡಿದ ಭಾಷಣದಲ್ಲಿ, ಅರಾಜಕತೆಯ ಕುರಿತು ಎಚ್ಚರಿಸಿ ದ್ದಾರೆ. “ಸಂವಿಧಾನವು ಸರಿಯಾದ ಜನರ ಕೈಗಳಲ್ಲಿ ಸಿಕ್ಕರೆ, ಅದು ಉತ್ತಮವಾಗಿರುತ್ತದೆ; ಒಂದೊಮ್ಮೆ ಕೆಟ್ಟ ಜನರ ಕೈಗಳಿಗೆ ಸಿಕ್ಕಿದರೆ ಅದು ಕುಸಿದುಹೋಗಬಹುದು” ಎಂಬ ಅವರ ಮಾತು, ಪ್ರಜಾಪ್ರಭುತ್ವದ ಯುಕ್ತಿ ಮತ್ತು ಸಮತೋಲನ ವನ್ನು ಕಾಪಾಡಿಕೊಳ್ಳಲು ಕಾನೂನಿನ ಗೌರವ ಅತ್ಯಗತ್ಯವೆಂಬ ಸಂದೇಶವನ್ನು ಸಾರುತ್ತದೆ.

“ಸಂವಿಧಾನವು ಏನನ್ನಾದರೂ ಮಾಡಬಲ್ಲದು, ಆದರೆ ಇದು ಜನರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸು ವುದರ ಮೇಲೆ ಅವಲಂಬಿತವಾಗಿದೆ. ಕಾನೂನಿನ ಮೇಲೆ ನಂಬಿಕೆಯಿಲ್ಲದಿದ್ದರೆ ಅರಾಜಕತೆಯ ಸ್ಥಿತಿ ಉಂಟಾಗ ಬಹುದು” ಎನ್ನುವ ಮೂಲಕ ಅಂಬೇಡ್ಕರ್ ಅವರು ಸಂವಿಧಾನವು ಕೇವಲ ಕಾಗದದಲ್ಲಿ ಉಳಿಯಬಾರದು, ಅದನ್ನು ಅನುಸರಿಸುವ ನಿಷ್ಠೆಯ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಅರಾಜಕತೆಯ ಭೀತಿ: ಅಂಬೇಡ್ಕರ್ ಅವರು ದೇಶದ ಪ್ರಜಾಪ್ರಭುತ್ವದ ಪರಿಪೂರ್ಣತೆಗಾಗಿ
1949ರ ನವೆಂಬರ್ 4ರಂದು ನೀಡಿದ ಉಪನ್ಯಾಸದಲ್ಲಿ ಅರಾಜಕತೆಯ ಭೀತಿಯ ಕುರಿತು ಅತ್ಯಂತ ಸ್ಪಷ್ಟವಾಗಿಯೇ
ಹೀಗೆ ಹೇಳಿದ್ದಾರೆ: “ಪ್ರಜಾಪ್ರಭುತ್ವದ ಸಿದ್ಧಾಂತಗಳು ಕೇವಲ ಪುಸ್ತಕಗಳಲ್ಲೇ ಉಳಿದರೆ ಅದು ಜನರಿಗೆ ಉಪಯೋಗ ವಾಗುವುದಿಲ್ಲ. ಸಂವಿಧಾನವು ಸರಕಾರಕ್ಕೆ ಮಾತ್ರವೇ ಬಾಧ್ಯವಲ್ಲ, ಅದು ಪ್ರಜೆಗಳ ಪ್ರಜ್ಞೆಯಲ್ಲಿಯೂ ಬೇರೂರಿ ರಬೇಕು. ಹಕ್ಕು ಮತ್ತು ಕರ್ತವ್ಯಗಳು ಒಂದೇ ಬಂಡಿಯ 2 ಗಾಲಿಗಳು. ಕಾನೂನಿನ ಗೌರವವಿಲ್ಲದೆ ದೇಶವು ಪ್ರಜಾ ಪ್ರಭುತ್ವಕ್ಕೆ ತಕ್ಕಂತೆ ನಡೆಯಲಾರದು. ಕಾನೂನುಬದ್ಧ ಕಾಯಕಗಳು ಮತ್ತು ಪ್ರಜೆಯ ಕರ್ತವ್ಯಗಳ ಪಾಲನೆ ಇಲ್ಲದಿದ್ದರೆ, ರಾಜಕೀಯ ವ್ಯವಸ್ಥೆಯು ಅರಾಜಕತೆಯತ್ತ ಸಾಗಬಹುದು”.

ಅಂಬೇಡ್ಕರರು ಹೇಳಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ತಥಾಕಥಿತ ‘ಅರಬ್‌ಸ್ಪ್ರಿಂಗ್’ನಿಂದ ಪ್ರಾರಂಭಿಸಿ, ನೆರೆಯ ಬಾಂಗ್ಲಾ ದೇಶದಲ್ಲಿ, ಶ್ರೀಲಂಕಾದಲ್ಲಿ ಏನಾಯಿತು, ನೇಪಾಳದಲ್ಲಿ ಯಾರ ಸರಕಾರ ಬಂತು, ಮಾಲ್ಡೀವ್ಸ್ ಹೇಗೇಗೋ ಆಡುತ್ತಿರುವುದೇಕೆ ಎಂಬುದನ್ನು ಹಾಗೂ ಸಿಎಎ, ಶಹೀನ್‌ಬಾಗ್, ಕೆಂಪುಕೋಟೆಯಲ್ಲಿ ನಡೆದಿದ್ದು ಎಲ್ಲವನ್ನೂ ಪುನರವಲೋಕಿಸಿದಾಗ ವಾಸ್ತವತೆ ಅರಿವಿಗೆ ಬರುತ್ತದೆ. ಭಾರತ ದಾದ್ಯಂತ ನಾಲ್ಕೂ ದಿಕ್ಕುಗಳಲ್ಲಿ, ವಿಶೇಷ ವಾಗಿ ಗಡಿಪ್ರದೇಶ ಮತ್ತು ಬುಡಕಟ್ಟು ಕೇಂದ್ರಿತ ಪ್ರದೇಶಗಳಲ್ಲಿ ಇಂಥ ದುಷ್ಟ ಪ್ರಯತ್ನಗಳನ್ನು ನಾವು ನೋಡುತ್ತಿದ್ದೇವೆ.

ಚುನಾಯಿತ ಸರಕಾರದ ನೀತಿಗಳನ್ನು, ಕಾನೂನನ್ನು ಗಾಳಿಗೆ ತೂರಿ ಪ್ರತಿಭಟಿ ಸುವ ವಿಧಾನಗಳು ತೆರೆದುಕೊಳ್ಳುತ್ತಿರು ವುದು, ದೇಶದ ಕಾನೂನು-ಸುವ್ಯವಸ್ಥೆ ಮತ್ತು ಅಖಂಡತೆಯನ್ನು ಗುರಿಯಾ ಗಿಸಿ ನಡೆಯುತ್ತಿರುವ ಪ್ರಯತ್ನಗಳು ಕಳವಳಕಾರಿ. ಅಂತಾ ರಾಷ್ಟ್ರೀಯ ಶಕ್ತಿಗಳು, ಮಾಧ್ಯಮಗಳು ದೇಶದ ಆಂತರಿಕ ವಿಚಾರಗಳಿಗೆ ಇನ್ನಿಲ್ಲದ ಪ್ರಚಾರ ಕೊಡುವುದು, ದೇಶದ ಹಿತಕ್ಕೆ, ಮಾನವತೆಗೆ ಮಾರಕ. ಇದನ್ನೆಲ್ಲಾ ಕೇಳಿದಾಗ ಆಶ್ಚರ್ಯವೆನಿಸಬಹುದು, ಆದರೆ ಇದು ಸತ್ಯ.

ನಮ್ಮ ರಾಷ್ಟ್ರೀಯ ಜೀವನವು ಸಾಂಸ್ಕೃತಿಕ ಏಕಾತ್ಮಕತೆ ಮತ್ತು ಶ್ರೇಷ್ಠ ನಾಗರಿಕತೆಯ ಸದೃಢ ಅಡಿಪಾಯದ ಮೇಲೆ
ನಿಂತಿದೆ. ನಮ್ಮ ಸಾಮಾಜಿಕ ಜೀವನವು ಉದಾತ್ತ ಮೌಲ್ಯಗಳಿಂದ ಪ್ರೇರಿತವಾಗಿದೆ, ಪಾಲಿಸಿ ಪೋಷಿಸಲ್ಪಟ್ಟಿದೆ. ಆದರೂ ಈ ಮಾಯಾಯುದ್ಧದ ಎಚ್ಚರದಲ್ಲಿ ಇರಬೇಕಾದ ಅವಶ್ಯಕತೆ ಇದೆ. ಅಂಬೇಡ್ಕರರು ಹೇಳುವ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಉಪಾಯಗಳಿಂದ ಬಾಳಬೇಕು ಮತ್ತು ಏಳ್ಗೆ ಕಾಣಬೇಕು. ಇದನ್ನರಿತು, ವೈಚಾರಿಕ ಮತ್ತು ಸಾಂಸ್ಕೃತಿಕ ಮಾಲಿನ್ಯವನ್ನು ಹರಡುವ ಷಡ್ಯಂತ್ರಗಳಿಂದ ಈ ಸಮಾಜವನ್ನು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: Hari Parak Column: ʼಜಗದೀಶನಾಡುವʼ ಜಗವೇ ನಾಟಕ ರಂಗ