Sunday, 8th September 2024

ಜಿಯೋ ಪೊಲಿಟಿಕ್ಸ್ ಹಿಂಬಾಲಿಸುವ ಮಜವೇ ಬೇರೆ

ಶಿಶಿರ ಕಾಲ

shishirh@gmail.com

ಜಿಯೋ ಪೊಲಿಟಿಕ್ಸ್. ದೇಶ ದೇಶಗಳ ನಡುವಿನ ರಾಜಕೀಯ, ಅಂತಾ ರಾಷ್ಟ್ರೀಯ ಬೆಳವಣಿಗೆಗಳು, ಆರ್ಥಿಕ ಸಂಬಂಧ, ನಿರ್ಬಂಧಗಳು, ವಿದೇಶಾಂಗ ನೀತಿ, ಆಂತರಿಕ ಕಲಹಗಳು, ಗಡಿ ಗಲಾಟೆಗಳು ಇವೇ ಮೊದಲಾದ ಸುದ್ದಿಗಳನ್ನು ಹಿಂಬಾಲಿಸು ವಷ್ಟು ಮಜ ಇನ್ನೊಂದರಲ್ಲಿಲ್ಲ. ಜಿಯೋಪೊಲಿಟಿಕ್ಸ್ ಗೆ ಸುದ್ದಿರಂಜನೆಯಲ್ಲಿ ಮೊದಲ ಸ್ಥಾನ.

ಇದು ಥೇಟ್ ಮಾಂಗಲ್ಯ, ಪುಟ್ಟ ಗೌರಿ ಮದುವೆ ಮೊದಲಾದ ಧಾರಾ ವಾಹಿಯ ತರಹ. ಹಿಂಬಾಲಿಸಲು ಯಾವಾಗ ಬೇಕಾದರೂ ಶುರುಮಾಡ ಬಹುದು. ಕಥೆ, ಸುದ್ದಿ ಎಲ್ಲಿಂದ ಶುರುವಾಯಿತು ಎಂದು ತಿಳಿದಿರ ಬೇಕೆಂದೇನೂ ಇಲ್ಲ, ಆದರೆ ಗೊತ್ತಿದ್ದರೆ ಒಳ್ಳೆಯದು. ಇತಿಹಾಸ ಗೊತ್ತಿದ್ದರೆ ಇನ್ನಷ್ಟು ಮೆರಗು. ಇದಕ್ಕೆ ಕೊನೆಯೆಂಬುದು ಇಲ್ಲ. ಕೆಲವು ಬೆಳವಣಿಗೆಗಳು, ಸಂಘರ್ಷಗಳು ಈ ತಿಂಗಳು ಮುಗಿಯಬಹುದು, ಮುಂದಿನ ವಾರ ಮುಗಿಯಬಹುದು ಎಂದು ಅಂದುಕೊಳ್ಳುತ್ತಿದ್ದಂತೆಯೇ ಅಂದು ತಿರುವು ಬಂದು ಬಿಡುತ್ತದೆ.

ಕೊನೆ ಮುಟ್ಟುದಿರುವುದೇ ಜಾಸ್ತಿ. ಕೆಲವು ಸಂಘರ್ಷಗಳು ಕೊನೆಗೊಂದು ದಿನ ಸುದ್ದಿಯೇ ಆಗದೇ ನಿಂತುಬಿಡುತ್ತವೆ. ಸಂಬಂಧಗಳು ರೂಪಾಂತರವಾಗುತ್ತಲಿರುತ್ತವೆ. ಇದರ ನಡುವೆ ಪಾತ್ರಧಾರಿಗಳು, ಆಳುವವರು ಬದಲಾಗುತ್ತಾರೆ ಆದರೆ ಕಥೆ ಮಾತ್ರ ಹಾಗೆಯೇ ಮುಂದುವರಿಯುತ್ತದೆ. ಜಿಯೋಪೊಲಿಟಿಕ್ಸ್ ಅನ್ನು ನಿತ್ಯ ನಿರಂತರ ಹಿಂಬಾಲಿಸಬಹುದು, ಸುಸ್ತೆನ್ನಿಸಿದರೆ ಮಧ್ಯದಲ್ಲಿ ಕೆಲವು ಸಮಯ ಬ್ರೇಕ್ ತೆಗೆದುಕೊಳ್ಳಬಹುದು. ಎಷ್ಟೇ ಉದ್ದದ ಬ್ರೇಕ್ ತೆಗೆದುಕೊಂಡರೂ ಕಥೆ ಎಲ್ಲಿಯವರೆಗೆ ಬಂತು ಎಂದು ತಿಳಿದುಕೊಳ್ಳಲು ಹೆಚ್ಚಿನ ಸಮಯ ಬೇಡ. ಅದೆಲ್ಲದರ ನಡುವೆ ಕೆಲವು ಉಪ ಕಥೆಗಳು ಬಿಟ್ಟುಹೋಗಬಹುದು, ಆದರೆ ಕಥೆ ಯಾವಾಗ ಬೇಕಾದರೂ ಹಿಡಿತಕ್ಕೆ ಸಿಕ್ಕಿಬಿಡುತ್ತದೆ.

ಜಿಯೋ ಪೊಲಿಟಿಕ್ಸ್ ಎಂದರೆ ಅದು ಮೆಗಾ ಧಾರಾವಾಹಿಗಳಂತೆಯೇ. ಅಕ್ಷರಶಃ ಎಡಿಕ್ಟಿವ್. ದೇಶ ದೇಶಗಳ ನಡುವಿನ ಸಂಬಂಧ, ಒಂದು ದೇಶದ ಬಗೆಗಿನ ಸುದ್ದಿ ಇವೆಲ್ಲವನ್ನು ಯಾವತ್ತೂ ಒಂದೇ ಪತ್ರಿಕೆ ಅಥವಾ ವಿಷಯ ಮೂಲವನ್ನಿಟ್ಟುಕೊಂಡು ಹಿಂಬಾಲಿಸಬಾರದು. ಹಾಗೆ ಸುದ್ದಿಯ ತುಣುಕುಗಳನ್ನಷ್ಟೇ ಪ್ರತ್ಯೇಕವಾಗಿ ಓದುತ್ತ, ತಿಳಿಯುತ್ತ ಹೋದರೆ ಇದೆಲ್ಲದರ ಹಿನ್ನೆಲೆಯ ಅಂತ್ ಪಾರ್ ಹತ್ತದೇ ಬೇಸರ ಬಂದುಬಿಡುತ್ತದೆ. ಆಗ ಒಂದೇ ಬೆಳವಣಿಗೆಯನ್ನು ನಾನಾ ರೀತಿ, ನಮ್ಮದೇ ರೀತಿಯಲ್ಲಿ, ಅತಾರ್ಕಿಕವಾಗಿ ವಿಶ್ಲೇಷಿಸಲು ಶುರುವಿಟ್ಟುಕೊಂಡುಬಿಡುತ್ತೇವೆ.

ಇದನ್ನು ಕೆಲವರು ರಾಜಕೀಯ ಚರ್ಚೆ ಮಾಡುವಾಗ ಕಾಣಬಹುದು. ಅಂದು ಸಂಪೂರ್ಣ ದೃಷ್ಟಿಕೋನದ ಕೊರತೆ ಎದ್ದು
ಕಾಣಿಸುತ್ತಿರುತ್ತದೆ. ಒಂದು ಅಂತಾರಾಷ್ಟ್ರೀಯ ಘಟನೆಯನ್ನು ಗ್ರಹಿಸುವಾಗ ಅನ್ಯ ಅಭಿಪ್ರಾಯವಿರುವ ಉಳಿದ ದೇಶಗಳಲ್ಲಿ
ಆ ಘಟನೆ ಹೇಗೆ ಸುದ್ದಿ ಮಾಡುತ್ತಿದೆ ಎಂಬುದನ್ನೆಲ್ಲ ಗ್ರಹಿಸುತ್ತ ಹೋಗಬೇಕು. ಕ್ರಮೇಣ, ಪ್ರತಿಯೊಂದು ದೇಶದ ಭಿನ್ನತೆ
ಎದ್ದು ಕಾಣಿಸಲು ಶುರುವಾಗುತ್ತದೆ. ಜಗತ್ತಿನ ಪ್ರತೀ ದೇಶಕ್ಕೂ ಅದರದೇ ಆದ ಒಂದು ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವ ಸಾಮಾನ್ಯ ವಾಗಿ ಅಧ್ಯಕ್ಷ ಅಥವಾ ಪ್ರಧಾನಿ ಬದಲಾದಾಗ ಬದಲಾಗುವುದಿಲ್ಲ.

ಅದು ಅರ್ಥವಾಗುತ್ತ ಹೋಗುತ್ತದೆ. ಜಿಯೋಪೊಲಿಟಕ್ಸ್ ಅನ್ನು ಹಿಂಬಾಲಿಸುವುದರಿಂದ ಬಹಳ ಲಾಭಗಳಿವೆ. ಒಂದು ಅಂತಾ ರಾಷ್ಟ್ರೀಯ ಬೆಳವಣಿಗೆಯ ಕಾರಣ, ಹಿನ್ನೆಲೆ, ಮುನ್ನೆಲೆ, ದಿಶೆ, ದಿಕ್ಕು ಇವೆಲ್ಲ ಥಟ್ಟನೆ ಅರ್ಥ ವಾಗಬೇಕೆಂದರೆ ಜಿಯೋ ಪೊಲಿಟಿಕ್ಸ್ ನ ಅಂದಾಜು ಇರಲೇ ಬೇಕು. ಆಗ ಮಾತ್ರ ಸರಿಯಾದ ರೀತಿಯಲ್ಲಿ ಅನಿಸಿಕೆ ಬೆಳೆಸಿಕೊಳ್ಳಲು ಸಾಧ್ಯ. ನಮ್ಮ ದೇಶ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಎಲ್ಲಿದೆ ಎನ್ನುವುದನ್ನು ತಿಳಿಯಲು ಕೂಡ ಇದು ಅತ್ಯಂತ ಅವಶ್ಯಕ.

ಇಂದು ಪ್ರತಿದೇಶವು ತನ್ನದೇ ನಿಲುವಿನ ಸುದ್ದಿಯನ್ನು ನೂರು ಬಗೆಯಲ್ಲಿ ಬಿತ್ತರಿಸುತ್ತದೆ ಮತ್ತು ಅವೆಲ್ಲವೂ ಎಲ್ಲರಿಗೂ
ಇಂಟರ್‌ನೆಟ್ಟಿನ ಮೂಲಕ ಲಭ್ಯವಿದೆ. ಹಾಗಾಗಿ ತಿಳಿಯುವಾಗ ಅಂದಿಷ್ಟು ಗೊಂದಲ ಸಾಮಾನ್ಯ. ಇದೆಲ್ಲದರ ನಡುವೆ
ಸರಿಯಾದ, ಸತ್ಯವಾದ ಅಭಿಪ್ರಾಯ ನಮ್ಮದಾಗಬೇಕೆಂದರೆ ಜಿಯೋಪೊಲಿಟಿಕ್ಸ್ ಜ್ಞಾನ ಬೇಕು. ಮೋದಿ ಅದೇಕೆ ಅಷ್ಟು
ವಿದೇಶ ಪ್ರವಾಸ ಮಾಡುತ್ತಾರೆ, ಇಷ್ಟು ಖರ್ಚಿನ ಲಾಭವೇನು ಇಂತಹ ಪ್ರಶ್ನೆಗಳಿಗೆ ಉತ್ತರ ಇನ್ನೊಬ್ಬರು ಬರೆದದ್ದನ್ನು ಓದಿ
ತಿಳಿದುಕೊಳ್ಳುವುದಕ್ಕಿಂತ ನಾವೇ ಸುದ್ದಿಗಳನ್ನು ಗ್ರಹಿಸುತ್ತ ಅಂದಾಜಿಸುತ್ತ ಹೋಗಬಹುದು.

ಇದು ಪ್ರತಿಯೊಂದು ಪ್ರಜಾಪ್ರಭುತ್ವದ ಅವಶ್ಯಕತೆ ಕೂಡ ಹೌದು. ಇಲ್ಲದಿದ್ದರೆ ರಾಜ್ಯಕ್ಕೆ ಮುಖ್ಯಮಂತ್ರಿಯಿದ್ದಂತೆ ದೊಡ್ಡ ಜಾಗ ದೇಶಕ್ಕೆ ಪ್ರಧಾನಿ ಎಂದನಿಸಿಬಿಡುತ್ತದೆ. ದೇಶ ಉದ್ಧಾರ ಮಾಡಬೇಕಾದ ಪ್ರಧಾನಿ ವಿದೇಶ ಏಕೆ ಸುತ್ತುತ್ತಾರೆ ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಜಿಯೋಪೊಲಿಟಿಕ್ಸ್ ನಲ್ಲಿ ಕೆಲವೊಮ್ಮೆ ವಿಚಿತ್ರ ಸುದ್ದಿಗಳು ಎದುರಾಗುತ್ತವೆ. ಕೆಲವೊಂದಿಷ್ಟು ರಾಷ್ಟ್ರಾಧ್ಯಕ್ಷರು, ಬಲಿಷ್ಠ ನಾಯಕರು ಕೆಲವೊಂದು ದೇಶಗಳಲ್ಲಿ ಒಂದಿಷ್ಟು ಕಾಲ ಮಾಯವಾಗಿಬಿಡುತ್ತಾರೆ.

ಅವರು ಸಂಪೂರ್ಣ ಮೀಡಿಯಾ ಮತ್ತು ಸಾರ್ವಜನಿಕರ ಕಣ್ಣಿಗೆ ಆ ಸಮಯದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಯಾವುದೇ ಸಭೆ ಸಮಾರಂಭದಲ್ಲಿ ಅಥವಾ ಇನ್ನೆಲ್ಲಿಯೋ ಬಹಿರಂಗವಾಗಿ ಹೊರಬರುವುದೇ ಇಲ್ಲ. ಕೆಲವೊಮ್ಮೆ ಒಂದೆರಡು ತಿಂಗಳು ಕಳೆದ ನಂತರ ಈ ದೇಶದ ಅಧ್ಯಕ್ಷ ಇಂತಿಷ್ಟು ದಿನದಿಂದ ಎಲ್ಲಿಯೂ ಹೊರಗೆ ಕಾಣಿಸಿಕೊಂಡಿಲ್ಲ ಎನ್ನುವ ಸುದ್ದಿ ಮಾತ್ರ ಕೆಲವು ವಿರೋಧಿ ದೇಶಗಳ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಆ ದೇಶದ ಪತ್ರಿಕೆಗಳನ್ನು, ಟಿವಿಯನ್ನು ನೋಡಿದರೆ ಅಲ್ಲಿ ಒಬ್ಬ
ಅಧ್ಯಕ್ಷನಿzನೆ ಎನ್ನುವ ಸುಳಿವೇ ಇರುವುದಿಲ್ಲ. ಅದಕ್ಕೆ ಒಂದಿಷ್ಟು ಸಮಜಾಯಿಷಿ ಸಿಕ್ಕಿದರೆ ಸಿಕ್ಕೀತು, ಇಲ್ಲದಿದ್ದರೆ ಇಲ್ಲ.

ಯಾರೂ ಅಧಿಕೃತವಾಗಿ ಈ ಮಹಾನುಭಾವ ಎಲ್ಲಿದ್ದಾನೆ ಎಂದು ಹೇಳುವುದಿಲ್ಲ. ಎಲ್ಲವು ನಿಗೂಢ. ಕಳೆದ ಒಂದು ದಶಕದಲ್ಲಿ ಹಲವು ಬಾರಿ ಇದು ನಡೆದದ್ದು ನೋಡಬಹುದು. ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಕೋವಿಡ್ ಸಮಯದಲ್ಲಿ ಒಂದಿಷ್ಟು ತಿಂಗಳು ಮಾಯವಾಗಿಬಿಟ್ಟಿದ್ದ. ಅಮೆರಿಕದ ಪತ್ರಿಕೆಗಳಲ್ಲಿ ತಿಂಗಳೆರಡು ಕಳೆದಾಗ ಕಿಮ್ ಜೊಂಗ್ ಉನ್ ಸತ್ತೇ ಹೋಗಿದ್ದಾನೆ ಎನ್ನುವ ರೀತಿಯ ಸುದ್ದಿ ಬಿತ್ತರಿಸಿದ್ದವು. ೩ ತಿಂಗಳ ನಂತರ, ಯಾವಾಗ ಈ ಊಹಾಪೋಹ ಹೆಚ್ಚಿತೋ, ಕಿಮ್‌ನ ಕೆಲವು ವಿಡಿಯೊ ತುಣಕುಗಳು ಇಂಟರ್‌ನೆಟ್ಟಿನಲ್ಲಿ ಕಾಣಿಸಿಕೊಳ್ಳಲು ಶುರುವಾದವು.

ಅಮೆರಿಕ ಇದೆಲ್ಲ ಹಳೆಯ ವಿಡಿಯೊಗಳು ಎಂದಿತು. ಅನಂತರದಲ್ಲಿ ಈ ಸುದ್ದಿ ಕ್ರಮೇಣ ಮರೆತೇ ಹೋಯಿತು. ಕಿಮ್ ಅಷ್ಟು ತಿಂಗಳು ಎಲ್ಲಿದ್ದ, ಏನು ಮಾಡುತ್ತಿದ್ದ, ಆತನಿಗೆ ಆರೋಗ್ಯ ಸರಿಯಿರಲಿಲ್ಲವೇ, ಇವೆಲ್ಲ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಚೀನಾದ ಅಧ್ಯಕ್ಷ ಶೀ ಜಿಂಗ್ ಪಿಂಗ್ ಕೂಡ ಕೋವಿಡ್ ಸಮಯದಲ್ಲಿ ಕೆಲವೊಂದಿಷ್ಟು ದಿನ ಮಾಯವಾಗಿಬಿಟ್ಟಿದ್ದ. ಆತ ಕಾಣದಂತಾಗಿದ್ದು ಇದೇನು ಮೊದಲಲ್ಲ. ಆತ ಅಧ್ಯಕ್ಷನಾಗುವ ಕೆಲವೇ ದಿನಗಳ ಮೊದಲು ಕೂಡ ಕೆಲ ದಿನ ಕಾಣೆಯಾಗಿದ್ದ. ಇನ್ನು ಚೀನಾ ಮೊದಲಾದ ದೇಶಗಳಲ್ಲಿ ಪ್ರಭಾವಿ ಜನರು, ಉದ್ಯಮಿಗಳು, ಬಿಲಿಯನೇರ್ ಗಳು ಮಾಯವಾಗುವುದು ಕೂಡ ಅಷ್ಟೇ ಸಾಮಾನ್ಯ.

ಅಲಿಬಾಬಾ ಖ್ಯಾತಿಯ ಜಾಕ್ ಮಾ ಹೆಸರು ಕೇಳಿರಬಹುದು. ಆತ ಸಾಮಾನ್ಯ ವ್ಯಕ್ತಿಯಲ್ಲ. ಭಾರತದ ಅಂಬಾನಿ, ಅದಾನಿ,
ಅಮೆರಿಕಾದ ಜೆ- ಬೆಜೋಸ್, ಎಲಾನ್ ಮನಷ್ಟೇ ಪ್ರಭಾವಿ ಬಿಲಿಯನೇರ್. ಅಂಥವನು ೨೦೨೧ ರಲ್ಲಿ, ಚೀನಾ ಸರಕಾರದ ವಿರುದ್ಧ ಮಾತನಾಡಿದ ನಂತರದಲ್ಲಿ, ಕೆಲವು ತಿಂಗಳುಗಳ ಕಾಲ ಕಾಣಲಿಕ್ಕಿಲ್ಲ. ಅಥವಾ ಆತನನ್ನು ಅಲ್ಲಿನ ಸರಕಾರ ಮಾಯವಾಗಿಸಿಬಿಟ್ಟಿತ್ತು. ಈಗಲೂ ಜಾಕ್ ಮಾ ಎಲ್ಲಿದ್ದಾನೆ ಎಂದು ಖಚಿತವಾಗಿ ತಿಳಿಯುವುದಿಲ್ಲ.

ಥೈಲ್ಯಾಂಡ್ ನಲ್ಲಿದ್ದಾನಂತೆ, ಜಪಾನಿನ ಟೋಕಿಯೋದಲ್ಲಿ ನೆಲೆಸಿದ್ದಾನಂತೆ ಎಂಬಿತ್ಯಾದಿ ಸುದ್ದಿಗಳಿವೆ. ಇಂದಿನ ಇಂಟರ್‌ನೆಟ್ ಯುಗದಲ್ಲಿ ಇಂತಹ ಘಟಾನುಘಟಿಗಳೆಲ್ಲ ಮಾಯವಾಗುವುದು ಎಂದರೆ ನಮ್ಮ ದೇಶದ ಮಟ್ಟಿಗೆ ಅಂದಾಜಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಚೀನಾದಲ್ಲಿ ಅದೆಷ್ಟೋ ಬಿಲಿಯನೇರ್‌ಗಳು ಕಳೆದ ಕೆಲವು ವರ್ಷಗಳಿಂದೀಚೆ ಮಾಯವಾಗಿದ್ದಾರೆ. ಇವೆಲ್ಲ
ಬೆಳವಣಿಗೆ ಆ ದೇಶದ ಬಗೆಗೆ ಒಂದಿಷ್ಟು ಗುಟ್ಟನ್ನು ಹೇಳುತ್ತದೆ. ಅಲ್ಲಿನ ವ್ಯವಸ್ಥೆ ಹೇಗಿದೆ ಎಂದು ಅಂದಾಜಾಗುತ್ತದೆ. ಈ
ಅಂದಾಜಿಲ್ಲದೆ ಚೀನಾದಂತಹ ದೇಶವನ್ನು ಗ್ರಹಿಸಬಾರದು.

ಚೀನಾ ಒಂದು ವೇಳೆ ಭಾರತದ ಮೇಲೆ ದಾಳಿ ಮಾಡಿದರೆ? ತೈವಾನ್ ಮೇಲೆ ಯುದ್ಧ ಸಾರಿದರೆ ಎಂಬಿತ್ಯಾದಿ ಪ್ರಶ್ನೆಗಳು
ಆಗೀಗ ಕೇಳುತ್ತಿರುತ್ತೇವೆ. ಚೀನಾ ಸೈನಿಕರು ಆಗೀಗ ಭಾರತದ ಗಡಿಯಲ್ಲಿ ಬಂದು ನಮ್ಮ ಸೈನಿಕರನ್ನು ಕೈಬಲದಿಂದ
ದೂಡುವುದು ಇವೆಲ್ಲ ನಡೆಯುತ್ತದೆ. ಆದರೆ ಚೀನಿಯರು ಅಲ್ಲೂ ಬಂದೂಕನ್ನು ಬಳಸುವುದಿಲ್ಲ. ಈಗ ಕೆಲವೇ ದಿನಗಳ
ಹಿಂದೆಯೂ ಇಂಥದ್ದೊಂದು ಗಲಾಟೆಯಾಯಿತು. ಭಾರತದ ಸೈನಿಕರು ಅವರನ್ನು ದೂಡಿ ಗಡಿದಾಟಿಸಿ ಬಂದರು. ಇದೆಲ್ಲ
ಏಕೆ ನಡೆಯುತ್ತದೆ? ಭಾರತದ ಮೇಲೆ ಚೀನಾ ದಾಳಿ ಮಾಡಿದರೆ ಚೀನಾ ಗೆಲ್ಲುವುದಿಲ್ಲವೇ? ಸಿಗುವ ಬಾಹ್ಯ ಲೆಕ್ಕಾಚಾರದ
ಪ್ರಕಾರ ಚೀನಾ ದ ಬಳಿ ಹೆಚ್ಚಿನ ಹಣವಿದೆ, ಸೈನಿಕ ಬಲವಿದೆ.

ಶಸ್ತ್ರಾಸ್ತ್ರಗಳು, ಯುದ್ಧವಿಮಾನಗಳು ಕೂಡ ಅವರ ಹತ್ತಿರವೇ ಜಾಸ್ತಿ. ಹೀಗಿರುವಾಗ ಚೀನಿ ಸೈನಿಕರು ಗಡಿಯಲ್ಲಿ ಬಂದು
ನಮ್ಮವರನ್ನು ದೈಹಿಕವಾಗಿ ದೂಡುವುದು ಏಕೆ? ಬದಲಿಗೆ ಯುದ್ಧವನ್ನೇಕೆ ಅವರು ಶುರುಮಾಡುತ್ತಿಲ್ಲ? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಚೀನಾದ ಆಂತರಿಕ ವ್ಯವಸ್ಥೆ ಮತ್ತು ರಾಜಕೀಯ ರೀತಿಯನ್ನು ತಿಳಿಯ ಬೇಕಾಗುತ್ತದೆ. ಚೀನಾ ಜಗತ್ತಿನ ಅತ್ಯಂತ ಹೆಚ್ಚು ಆಹಾರ ಮತ್ತು ಇಂಧನವನ್ನು ಆಮದು ಮಾಡಿಕೊಳ್ಳುವ ದೇಶ. ಸಂಪೂರ್ಣ ಅವಲಂಬನೆಯಿದೆ. ಒಂದು ವೇಳೆ ರಷ್ಯಾದ ಮೇಲೆ ಆರ್ಥಿಕ ಹೇರಿಕೆ ಮಾಡಿದಂತೆ ಅಮೆರಿಕ ಮತ್ತು ಉಳಿದ ರಾಷ್ಟ್ರಗಳು ಚೀನಾದ ಮೇಲೆ ಮಾಡಿದರೆ ಅಲ್ಲಿನ ವ್ಯವಸ್ಥೆ ಒಂದೇ ರಾತ್ರಿಯಲ್ಲಿ ಕುಸಿದು ಬೀಳುವುದು ಪಕ್ಕಾ.

ಏಕೆಂದರೆ ಇಂಧನ ಮತ್ತು ಆಹಾರ ಇವೆರಡರ ಮೇಲೆ ನಿರ್ಬಂಧ ಬಿತ್ತೆಂದರೆ ಚೀನಾದ ಎಲ್ಲ ಆಮದು ನಿಂತು ಮಾರನೆಯ
ದಿನವೇ ಅಲ್ಲಿನ ಕಾರ್ಖಾನೆಗಳು ಬಂದು ಬೀಳುತ್ತವೆ. ಅಮೆರಿಕವನ್ನು ಎದುರು ಹಾಕಿಕೊಂಡರೆ ರಫ್ತು ಯಾರಿಗೆ ಮಾಡುವುದು?
ಇದರ ಹೊಡೆತ ಚೀನಾ ದೇಶಕ್ಕೆ ತಡೆದುಕೊಳ್ಳಲಾಗುವುದಿಲ್ಲ. ಇದು ಚೀನಾ ಯಾವುದೇ ದೇಶದ ಮೇಲೆ ಯುದ್ಧ ಮಾಡ ಲಿಕ್ಕಾಗದ ಇಂದಿನ ಸ್ಥಿತಿಗೆ ಕಾರಣವಾಗಿದೆ. ಇಲ್ಲದಿದ್ದರೆ ಚೀನಾ ಸುಮ್ಮನೆ ಕೂರಲು ಕಾರಣವಿರುತ್ತಿರಲಿಲ್ಲ. ಇತ್ತಕಡೆ ಕಳೆದ ಒಂದು ದಶಕದಿಂದ ಭಾರತ ಅಮೆರಿಕಕ್ಕೆ ತೀರಾ ಹತ್ತಿರವಾಗಿದೆ.

ಹಾಗಾಗಿಯೇ ಚೀನಾ ಭಾರತದ ಮೇಲೆ ಯುದ್ಧಕ್ಕೆ ನಿಂತರೆ ಆರ್ಥಿಕ ನಿರ್ಬಂಧಗಳು ಹೇರಿಕೆಯಾಗುವುದು ಖಚಿತ.
ಹಾಗಾಗಿಯೇ ಚೀನಾ ಇನ್ನೊಂದೆರಡು ದಶಕದ ಮಟ್ಟಿಗೆ ಇನ್ನೊಂದು ದೇಶದ ಮೇಲೆ ಯುದ್ಧಕ್ಕೆ ನಿಲ್ಲುವುದು ಬಹುತೇಕ
ಅಸಾಧ್ಯ. ಇನ್ನು ಚೀನಾದ ಸೈನ್ಯದಲ್ಲಿಯೂ ಒಂದು ಸಮಸ್ಯೆಯಿದೆ. ಚೀನಾದಲ್ಲಿ ೧೯೮೦ರಿಂದ ೨೦೧೫ ವರೆಗೆ ಈಚೆ ‘ಒನ್
ಚೈಲ್ಡ’ ಪಾಲಿಸಿ ಜಾರಿಯಲ್ಲಿತ್ತಲ್ಲವೇ. ಇದರ ಅರ್ಥ ಇಂದು ಚೀನಾದ ಸೈನ್ಯದಲ್ಲಿರುವವರೆಲ್ಲ ಅವರ ತಂದೆ ತಾಯಂದಿರಿಗೆ
ಒಬ್ಬನೇ ಮಗ.

ಅಲ್ಲಿಯೂ ನಮ್ಮಲ್ಲಿದ್ದಂತೆ ಗಂಡು ಮಗುವೆಂದರೆ ಶ್ರೇಷ್ಠ, ಉತ್ತಮ ಎನ್ನುವ ಭಾವನೆ ಯಾವತ್ತಿನಿಂದಲೂ ಇತ್ತು, ಇದೆ. ಹಾಗಾಗಿ ಸೈನ್ಯದ ಕುಟುಂಬಗಳಲ್ಲಿ, ಸಮಾಜದಲ್ಲಿ ಯುದ್ಧವೆಂದರೆ ತೀವ್ರ ಹಿಂಜರಿಕೆ ಇದೆ. ಚೀನಾ ಯುದ್ಧಕ್ಕೆ ನಿಂತಲ್ಲಿ ಆಂತರಿಕವಾಗಿ ಪ್ರಬಲ ಪ್ರತಿರೋಧ ಎದುರಿಸಬೇಕಾಗುತ್ತದೆ. ಇದು ಅಂತರ್‌ಯುದ್ಧಕ್ಕೆ ಎಡೆಮಾಡಿಕೊಡಬಹುದು. ಈ ಕೆಲವು ಕಾರಣಗಳಿಂದ ಚೀನಾ ಇಂದು ಯುದ್ಧ ಮಾಡುವ ತಾಕತ್ತು ಹೊಂದಿದ್ದರೂ ಸ್ಥಿತಿಯಲ್ಲಿಲ್ಲ. ಸದ್ಯದ ಮಟ್ಟಿಗಂತೂ ಚೀನಾ ಬೊಗಳುವ ನಾಯಿ ಮಾತ್ರ. ಅದಕ್ಕೊಂದು ಮಿತಿಯಿದೆ, ಕಚ್ಚುವುದಿಲ್ಲ.

ನೀವು ಜಿಯೋಪೊಲಿಟಿಕ್ಸ್ ಗ್ರಹಿಸು ವವರಾದರೆ ರಷ್ಯಾ ಯುಕ್ರೇನ್ ಯುದ್ಧ ಒಂದು ಆಶ್ಚರ್ಯದ ಬೆಳವಣಿಗೆ ಎಂದು ಅನ್ನಿಸುವುದಿಲ್ಲ. ಯುಕ್ರೇನ್ ಮೇಲಿನ ಆಕ್ರಮಣಕ್ಕೆ ನ್ಯಾಟೋ ಒಂದನೇ ನೆಪ ಮಾತ್ರ. ಅಸಲಿಗೆ ರಷ್ಯಾಕ್ಕೆ ಉಕ್ರೇನ್ ನೆಲದ ಅವಶ್ಯಕತೆಯಿದೆ. ಇದಕ್ಕೆ ಕಾರಣ ರಷ್ಯಾದ ಜಿಯೋಪೊಲಿಟಿಕ್ಸ್, ವ್ಯವಹಾರ, ಆಹಾರ ಮತ್ತು ಪೆಟ್ರೋಲ್ ರಫ್ತಿಗಿರುವ ಭೌಗೋಳಿಕ ಅಡೆತಡೆಗಳು. ಆ ಕಾರಣಕ್ಕೆ ರಷ್ಯಾ ಈಗ ಕೆಲವು ವರ್ಷಗಳ ಹಿಂದೆ ಉಕ್ರೇನಿನ ಕ್ರೆಮಿಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದು.

ರಷ್ಯಾದ ಆಕ್ರಮಣದ ಸುದ್ದಿ ಮೊದಲು ಬಂದಾಗ, ಹಲವರು ರಷ್ಯಾ ಉಕ್ರೇನಿನ ಮೇಲೆ ಅಣ್ವಸ್ತ್ರವನ್ನು ಪ್ರಯೋಗಿಸಬಹುದೆಂದು ಚರ್ಚಿಸುತ್ತಿದ್ದರು. ಆದರೆ ಅದು ದೂರದ ಮಾತು. ಏಕೆಂದರೆ ರಷ್ಯಾಕ್ಕೆ ಉಕ್ರೇನಿನ ಮೇಲೆ ಗೆಲುವಿಗಿಂತ ಜಾಸ್ತಿ ಅವರ ನೆಲ ಬೇಕು. ಆ ಕಾರಣಕ್ಕೆ ರಷ್ಯಾ ಅಣ್ವಸವನ್ನು ಎಂದಿಗೂ ಉಕ್ರೇನಿನ ಮೇಲೆ ಪ್ರಯೋಗಿಸಲಿಕ್ಕಿಲ್ಲ. ಒಂದು ವೇಳೆ ಅಣ್ವಸ್ತ್ರ ಪ್ರಯೋಗಿಸಿದ್ದೇ ಆದರೆ ಆ ನೆಲದಲ್ಲಿ ವಿಕಿರಣದ ಕಾರಣದಿಂದ ರಷ್ಯಾ ಹೋಗಿ ಕೂತುಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕೆ ಇಂದಿಗೂ ಉಕ್ರೇನಿನ ಅಣುಸ್ಥಾವರಗಳು, ನಗರಗಳು ಹಾಗೆಯೇ ಉಳಿದುಕೊಂಡದ್ದು.

ಒಂದು ವೇಳೆ ಸರ್ವನಾಶ ಮಾಡಬೇಕೆಂದೇ ಅಂದುಕೊಂಡಿದ್ದರೆ ಅಣ್ವಸವಿಲ್ಲದ ಉಕ್ರೇನ್ ಯಾವತ್ತೋ ಮಂಡಿಯೂರ
ಬೇಕಿತ್ತು. ಕೆಲವೊಮ್ಮೆ ಕೆಲವೊಂದು ದೇಶಗಳನ್ನು ಹೊರಗೆ ಕೂತು ಸರಿಯಾಗಿ ಅಂದಾಜಿಸಲು ಸಾಧ್ಯವಾಗುವುದಿಲ್ಲ.
ಅನಾಗುತ್ತಿದೆ ಎನ್ನುವುದೇ ಹೊರ ಜಗತ್ತಿಗೆ ತಿಳಿಯುವುದಿಲ್ಲ. ಪ್ರಜಾಪ್ರಭುತ್ವವಿಲ್ಲದ ದೇಶದ ಹಣೆಬರಹೇ ಇದು. ಈ ನಿಮಿತ್ತ
ಒಂದು ಉದಾಹರಣೆಗೆ ಮತ್ತೆ ಚೀನಾ. ಚೀನಾ ಈಗ ಕೆಲವು ತಿಂಗಳಿನಿಂದ ಅದರ ಜನಸಂಖ್ಯೆಗೆ ಸಂಬಂಧಿಸಿದ ಅಂಕೆ
ಸಂಖ್ಯೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸರಿಮಾಡಲು ಹವಣಿಸುತ್ತಿದೆ.

ಈ ಸಂಬಂಧ ಯುನೈಟೆಡ್ ನೇಶಗೆ ಇತ್ತೀಚೆಗೆ ಕೊಟ್ಟ ಮಾಹಿತಿಯಂತೆ ಚೀನಾ ಬರೋಬ್ಬರಿ ಹತ್ತು ಕೋಟಿ ಜನಸಂಖ್ಯೆಯನ್ನು ಇಳಿಸಿದೆ ಎನ್ನುವ ವರದಿ ವಾಷಿಂಗ್ಟನ್ ಪೋನಲ್ಲಿ ಬಂದಿತ್ತು. ಯುನೈಟೆಡ್ ನೇಶನ ವೆಬ್ ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ ಇದು ಸತ್ಯ. ಆದರೆ ಚೀನಾ ಈ ಸಂಖ್ಯೆ ಸರಿಮಾಡುವ ಕೆಲಸಕ್ಕೆ ಏಕೆ ಕೈ ಹಾಕಿದೆ ಎಂದು ಇನ್ನೂ ಪಕ್ಕಾ ಆಗಿಲ್ಲ. ಅದು ಹೇಗೆ ಚೀನಾದ ಜನಸಂಖ್ಯೆ ಹತ್ತು ಕೋಟಿ ಕಮ್ಮಿಯಾಗಿಬಿಟ್ಟಿತು? ಲೆಕ್ಕ ತಪ್ಪಿzಲ್ಲಿ? ಅಥವಾ ಇಷ್ಟು ವರ್ಷ ಕೊಟ್ಟ ಲೆಕ್ಕವೇ ಸುಳ್ಳೇ? ಇಲ್ಲಿ ಒಂದಿಷ್ಟು ಊಹಿಸ ಬಹುದು. ಒಂದೋ ಹತ್ತು ಕೋಟಿ ಮಂದಿ ಅಲ್ಲಿ ಕೋವಿಡ್ ನಿಂದ ಸತ್ತಿರಬಹುದು, ಅದು ಈಗ ಲೆಕ್ಕಕ್ಕೆ ಸಿಕ್ಕಿರಬಹುದು. ಇಲ್ಲವೇ ಅಲ್ಲಿ ಮೊದಲು ಜನಸಂಖ್ಯೆಯನ್ನು ಅಳೆಯುವ ರೀತಿಯಲ್ಲಿಯೇ ದೋಷವಿದ್ದು ಈಗ ಅದು ಸರಿಯಾ ಗಿರಬಹುದು.

ಅಥವಾ ೧೯೮೦ರಲ್ಲಿ ಆದ ಒನ್ ಚೈಲ್ಡ್ ಪಾಲಿಸಿಯಿಂದ ಜನಸಂಖ್ಯೆ ಇಳಿಮುಖವಾಗುತ್ತಿಲ್ಲ ಎಂದು ಇಷ್ಟೂ ಕಾಲ ತನ್ನ ದೇಶದವರಿಗೆ ಸುಳ್ಳುಹೇಳುತ್ತಲೇ ಬಂದದ್ದು ಇದಕ್ಕೆ ಕಾರಣವಿರಬಹುದು ಮತ್ತು ಈಗ ಈ ಅಂತರ ಜಾಸ್ತಿಯಾಗುವುದರಿಂದ ಅದರ ಎಲ್ಲ ವ್ಯವಹಾರಕ್ಕೆ ಹೊಡೆತ ಬೀಳುತ್ತಿದ್ದು, ಈಗ ಸರಿ ಮಾಡಲಿಕ್ಕೆ ಹೊರಟಿರಬಹುದು. ಅಥವಾ ಅಲ್ಲಿ ವೀಗರ್
ಮುಸ್ಲಿಮರ ಮೇಲೆ ನಡೆಯುತ್ತಿರುವ ಅಮಾನವೀಯ ಎಥೆನಿಕ್ ಕ್ಲೆನ್ಸಿಂಗ್‌ನಲ್ಲಿ ಅಷ್ಟು ಮಂದಿ ಸತ್ತಿರಬಹುದು, ಅಥವಾ
ಚೀನಾ ವೀಗರ್ ಮುಸ್ಲಿಮರ ಸರ್ವನಾಶಕ್ಕೆ ನಡೆಸುತ್ತಿರುವ ತಯಾರಿ ಇದಾಗಿರಬಹುದು.

ರಷ್ಯಾ ಉಕ್ರೇನ್ ಯುದ್ಧ ಇನ್ನೆಷ್ಟು ತಿಂಗಳು, ವರ್ಷ ಮುಂದುವರಿಯುತ್ತದೆ? ಇಂಗ್ಲೆಂಡಿನಲ್ಲಿ ಮುಸ್ಲಿಮ್ ಎಕ್ಸ್ಟ್ರೀಮಿಗಳು ದಂಗೆಯೆದ್ದು ಬಾಲ ಬಿಚ್ಚುತ್ತಿರುವುದು ಏಕೆ ಮತ್ತು ಹೇಗೆ ಸಾಧ್ಯವಾಗುತ್ತಿದೆ? ಅಮೆರಿಕ ಏಕೆ ಇಷ್ಟು ಬಲಿಷ್ಠ? ಜಿಡಿಪಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಚೀನಾ ಏಕೆ ಗ್ಲೋಬಲ್ ಪವರ್ ಆಗುವುದಿಲ್ಲ? ಕೆನಡಾ ಭಾರತಕ್ಕೆ ಸ್ನೇಹಿತ ರಾಷ್ಟ್ರವೇ?
ಜಗತ್ತಿನ ಅತಿ ಹೆಚ್ಚು, ಸೌದಿ ಅರೇಬಿಯಾಕ್ಕಿಂತ ಜಾಸ್ತಿ ಪೆಟ್ರೋಲ್ ಇದ್ದರೂ ವೆನಿಜುಯೆಲಾ ಉದ್ಧಾರವೇಕಾಗುವು
ದಿಲ್ಲ? ಅದಕ್ಕೆ ಕಾರಣ ಯಾರು? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಬೇಕಾದಲ್ಲಿ ಜಿಯೋಪೊಲಿಟಿಕ್ಸ್ ನ ಜ್ಞಾನವಿರಬೇಕು.
ಇವೆಲ್ಲವನ್ನೂ ಸಮಗ್ರವಾಗಿ ಗ್ರಹಿಸುವುದು ಸ್ವಲ್ಪ ಕಷ್ಟ ಆದರೆ ಅವಶ್ಯಕ.

ಜಿಯೋಪೊಲಿಟಿಕ್ಸ್ ನ ಅರಿವು ಹೆಚ್ಚಿದಂತೆ ದೇಶದ ಪ್ರಧಾನಿ, ವಿದೇಶಾಂಗ ಮಂತ್ರಿ, ಗ್ರೃಹ ಮಂತ್ರಿ ಇವರೆಲ್ಲರ ಒಂದೊಂದು ನಡೆಯೂ ಎಷ್ಟು ಸೂಕ್ಷ್ಮದ್ದಾಗಿರುತ್ತದೆ ಎನ್ನುವುದು ತಿಳಿಯುತ್ತ ಹೋಗುತ್ತದೆ.

error: Content is protected !!