Monday, 16th September 2024

’ಜಮ್ಮು’ವಿನಲ್ಲಿ ’ರೋಷಿನಿ’ ಕಾಯ್ದೆಯಡಿ ’ಲ್ಯಾಂಡ್ ಜಿಹಾದ್’ ನಡೆದಿತ್ತೇ ?

ವೀಕೆಂಡ್ ವಿಥ್‌ ಮೋಹನ್‌

ಮೋಹನ್ ವಿಶ್ವ

ಜಿಹಾದಿಗಳು ಅಕ್ರಮ ಶಸ್ತ್ರಾಸ್ತ್ರ ಹಿಡಿದು ಯುದ್ಧ ಮಾಡಿಯಾಯಿತು, ನಂತರ ‘ಜಿಹಾದಿ’ಗಳ ಪ್ರೀತಿ ಪ್ರೇಮದ ಆಟ ‘ಲವ್ ಜಿಹಾದ್’ ಆಯಿತು, ಇವೆರಡರ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ದಿಲ್ಲದೇಎರಡು ದಶಕಗಳಿಂದ ‘ಲ್ಯಾಂಡ್ ಜಿಹಾದ್’ಆಗಿದೆಯೆಂಬ
ಮಾತುಗಳು ಈಗ ಕೇಳಿಬರುತ್ತಿವೆ.

ಏನಪ್ಪಾ ಇದು ‘ಲ್ಯಾಂಡ್ ಜಿಹಾದ್’ಎಂದು ಆಶ್ಚರ್ಯಪಡಬೇಡಿ, ನಮ್ಮಲ್ಲೂ ಪಾದರಾಯನಪುರ, ಶಿವಾಜಿನಗರ, ತಿಲಕ್ ನಗರ,
ಗೋರಿಪಾಳ್ಯ, ಗುರಪ್ಪನಪಾಳ್ಯದಂಥ ಬಡಾವಣೆಗಳನ್ನು ಮುಸಲ್ಮಾನರು ನಿಧಾನವಾಗಿ ಆಕ್ರಮಿಸಿಕೊಂಡು ಅಲ್ಲಿನ ಹಿಂದುಗಳಿಗೆ ಉಸಿರುಗಟ್ಟಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರೋ ಅದೇ ರೀತಿಯಲ್ಲಿ ಜಮ್ಮುವಿನಲ್ಲಿ ಸಾವಿರಾರು ಎಕರೆ ವಿಸ್ತೀರ್ಣದ ಭೂಭಾಗವನ್ನು ಕಾಯ್ದೆಯೊಂದರ ಮೂಲಕ ವಶಪಡಿಸಿಕೊಂಡು ತಮ್ಮ ಅಧಿಪತ್ಯ ಸ್ಥಾಪಿಸಿದ್ದಾರೆ.

2001ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ‘ಫಾರೂಕ್ ಅಬ್ದುಲ್ಲಾ’ ನೇತೃತ್ವದ ಸರಕಾರವು ಒಂದು ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯನ್ವಯ ಅಕ್ರಮವಾಗಿ ಸರಕಾರಿ ಜಾಗವನ್ನು ಆಕ್ರಮಿಸಿಕೊಂಡಿರುವ ಅಲ್ಲಿನ ನಾಗರೀಕರು ಸರಕಾರಕ್ಕೆ ಇಂತಿಷ್ಟು ಹಣವನ್ನು ಪಾವತಿ ಮಾಡಿ ಸಕ್ರಮ ಮಾಡಿಕೊಳ್ಳಬಹುದಾಗಿತ್ತು. ಎಷ್ಟು ಹಣವನ್ನು ಕಟ್ಟಬೇಕೆಂಬುದನ್ನು ಅಂದಿನ ಸರಕಾರವು ನಿರ್ಧರಿಸಿತ್ತು, ಹಣದ ಜೊತೆಗೆ ಒಂದಷ್ಟು ನಿಯಮಾವಳಿಗಳನ್ನು ತಂದಿತ್ತು. ಯಾರ್ಯಾರು ಈ ನಿಯಮದಡಿಯಲ್ಲಿ ಬರುತ್ತಾರೋ ಅವರೆಲ್ಲರೂ ಸರಕಾರಕ್ಕೆ ಅರ್ಜಿ ಹಾಕಿ ಸರಕಾರವು ನಿಗದಿ ಪಡಿಸಿದ ಶುಲ್ಕವನ್ನು ಕಟ್ಟಿ ಭೂಭಾಗಗಳನ್ನು ಪಡೆಯ
ಬಹುದಿತ್ತು.

‘ಇಂದಿರಾ ಗಾಂಧಿ’ ಹೇಗೆ ‘ಉಳುವವನೇ ಒಡೆಯ’ನೆಂಬ ಕಾಯ್ದೆಯಡಿಯಲ್ಲಿ ರೈತರಿಗೆ ಭೂಮಿಯನ್ನು ಹಂಚಿಕೆ ಮಾಡಿದರೋ, ಅದೇ ರೀತಿಯಲ್ಲಿ ಸರಕಾರಿ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡವರಿಗೆ ಶುಲ್ಕ ಪಡೆದು ಸಕ್ರಮ ಮಾಡುವ ರೀತಿಯ ಕಾನೂನು. ಅಲ್ಲಿ ಹಣ ನೀಡುವ ಅಗತ್ಯವಿರಲಿಲ್ಲ, ಇಲ್ಲಿ ಸರಕಾರವು ವಿಧಿಸಿದ ಶುಲ್ಕವನ್ನು ನೀಡಿ ಜಾಗವನ್ನು ಪಡೆಯ ಬೇಕಿತ್ತು.‘ಫಾರೂಕ್ ಅಬ್ದುಲ್ಲಾ’ರ ಸರಕಾರದಲ್ಲಿ ತಂದಂಥ ಈ ಕಾನೂನಿನನ್ವಯ, ಯಾರ್ಯಾರು 1990ರವರೆಗೂ ಸರಕಾರಿ ಜಾಗಗಳನ್ನು ಆಕ್ರಮಿಸಿಕೊಂಡಿದ್ದಾರೆಯೋ ಅವರೆಲ್ಲರೂ ತಮ್ಮ ಜಾಗವನ್ನು ಸಕ್ರಮ ಮಾಡಿಕೊಳ್ಳಬಹುದಿತ್ತು. 1991 ರಿಂದ 2001ರ ವರೆಗಿನ ಅಕ್ರಮವನ್ನು ಸಕ್ರಮ ಮಾಡಲು ಅವಕಾಶವಿರಲಿಲ್ಲ.

2001ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ‘ವಿದ್ಯುತ್’ಶಕ್ತಿಯ ಬರವಿತ್ತು. ಈ ಬರವನ್ನು ನೀಗಿಸಲು ಬೃಹತ್ ‘ವಿದ್ಯುತ್’ ಯೋಜನೆ ಗಳನ್ನು ಜಾರಿಗೆ ತರಬೇಕಿತ್ತು. ಈ ಬೃಹತ್ ಯೋಜನೆಗಳಿಗೆ ಬೇಕಾದ ಹಣವನ್ನು ಹೊಂದಿಸಲು 2001 ರಲ್ಲಿ ಈ ಅಕ್ರಮ – ಸಕ್ರಮ ಕಾಯ್ದೆಯನ್ನು ಜಾರಿಗೆ ತರಲಾಯಿತು. ವಿದ್ಯುತ್ ಬರ ನೀಗಿಸುವ ಸಲುವಾಗಿ ತಂದಂಥ ಕಾನೂನಾಗಿದ್ದರಿಂದ ಇದನ್ನು ರೋಷನಿ ಕಾಯ್ದೆ ಎಂದು ಕರೆಯಲಾಯಿತು. ಈ ಕಾಯ್ದೆಯಿಂದ ಸುಮಾರು 25,000 ಕೋಟಿಯಷ್ಟು ಆದಾಯವನ್ನು ಅಂದಿನ ಫಾರೂಕ್
ಅಬ್ದುಲ್ಲಾ ನೇತೃತ್ವದ ಸರಕಾರ ನಿರೀಕ್ಷಿಸಿತ್ತು. ಈ ಕಾಯ್ದೆಯಡಿ ಅಂದಾಜು ಒಂದು ಲಕ್ಷ ಹೆಕ್ಟೆರ್‌ನಷ್ಟು ಭೂಮಿಯನ್ನು ಸಕ್ರಮ
ಮಾಡಲು ನಿರ್ಧರಿಸಲಾಗಿತ್ತು. ಒಂದು ಲಕ್ಷ ಹೆಕ್ಟೆರ್‌ನಲ್ಲಿ  ಸುಮಾರು 75,000 ಹೆಕ್ಟೇರ್‌ನಷ್ಟು ಭೂಮಿಯನ್ನು ಜಮ್ಮುವಿನಲ್ಲಿ, 25,000 ಹೆಕ್ಟೆೆರ್ ಭೂಮಿಯನ್ನು ಕಾಶ್ಮೀರದಲ್ಲಿ ಸಕ್ರಮ ಮಾಡಲು ಯೋಜಿಸಲಾಗಿತ್ತು.

ಆದರೆ ಅಂದುಕೊಂಡಂತೆ ಒಂದು ಲಕ್ಷ ಹೆಕ್ಟೇರು ಭೂಮಿಯ ಒಡೆತನವನ್ನು ವರ್ಗಾವಣೆ ಮಾಡಲಿಲ್ಲ. ಸುಮಾರು 30,000 ಹೆಕ್ಟೇರು ಭೂಮಿಯ ಒಡೆತನವನ್ನು ಮಾತ್ರ ವರ್ಗಾವಣೆ ಮಾಡಲು ಅನುಮೋದಿಸಲಾಯಿತು. ಅನುಮೋದನೆ ದೊರೆತದ್ದು 30,000 ಹೆಕ್ಟೇರ್‌ಗೆ, ಆದರೆ ನಿಜವಾಗಿಯೂ ಭೂಮಿಯ ಒಡೆತನದ ವರ್ಗಾವಣೆಯಾದದ್ದು ಸುಮಾರು 17,000 ಹೆಕ್ಟೇರು ಮಾತ್ರ. ಈ 17,000 ಹೆಕ್ಟೇರ್‌ನಲ್ಲಿ ಶೇ.90ಕ್ಕಿಂತಲೂ ಹೆಚ್ಚಿನ ಭಾಗ ‘ಜಮ್ಮು’ವಿನಲ್ಲಿರುವ ಭೂಮಿಯಾಗಿತ್ತು. ತಾವು ಅಂದುಕೊಂಡಂತೆ ಮಾಡಲಾಗುತ್ತಿಲ್ಲವೆಂದು ತಿಳಿದ ‘ಫಾರೂಕ್ ಅಬ್ದುಲ್ಲಾ’ನ ಸರಕಾರ ತಾನು ನಿರೀಕ್ಷಿಸುತ್ತಿದ್ದಂಥ 25,000 ಕೋಟಿಯ ಶುಲ್ಕದ ಗುರಿಯನ್ನು ಕೇವಲ 317 ಕೋಟಿಗೆ ಇಳಿಸಿತು, ಇಳಿಸಿದ ನಂತರ ಅಷ್ಟಾದರೂ ಬರಬೇಕಿತ್ತಲ್ಲ, ಆದರೆ ಅಷ್ಟು ಹಣವೂ ಬರಲಿಲ್ಲ ಕೊನೆಗೆ ಕೇವಲ 76 ಕೋಟಿಯ ಶುಲ್ಕ ಬಂತು. ಕೇವಲ 76 ಕೋಟಿಗೆ ಸುಮಾರು 17,000 ಹೆಕ್ಟೇರು ಭೂಮಿಯನ್ನು ಸಕ್ರಮ
ಮಾಡಲಾಗಿತ್ತು. ಈ ಕಾಯ್ದೆಯನ್ವಯ ಹಂಚಿಕೆಯಾದ ಭೂಮಿಯ ಒಡೆತನದ ಮೇಲೆ ಎರಡು ರೀತಿಯ ಅನುಮಾನಗಳು ಕಾಡತೊಡಗಿದ್ದವು.

ಮುಸಲ್ಮಾನರು ಕಡಿಮೆಯಿರುವ ಜಮ್ಮುವಿನಲ್ಲೇ ಯಾಕೆ ಅಷ್ಟೊಂದು ಭೂಮಿಯನ್ನು ಸಕ್ರಮ ಮಾಡಲಾಯಿತು? ಕಾಶ್ಮೀರದಲ್ಲಿ
ಕೇವಲ ಶೇ.10ರಷ್ಟು ಭೂಮಿಯಾದರೆ, ಜಮ್ಮುವಿನಲ್ಲಿ ಮಾತ್ರ ಶೇ.90ರಷ್ಟು ಭೂಮಿಯನ್ನು ಸಕ್ರಮ ಮಾಡಲಾಗಿತ್ತು.
ಜಮ್ಮುವಿನಲ್ಲಿ ಹಂಚಿಕೆಯಾದಂಥ ಭೂಮಿಯನ್ನು ಅತೀ ಹೆಚ್ಚು ಸಕ್ರಮ ಮಾಡಿಕೊಂಡಂಥ ಜನರ ಧರ್ಮ ಯಾವುದು? ಜಮ್ಮುವಿನ ದೊಡ್ಡ ಭೂಭಾಗವನ್ನು ಕಾಶ್ಮೀರದಂತೆ ಮುಸಲ್ಮಾನ್ ಧರ್ಮಕ್ಕೆ ಸೀಮಿತ ಮಾಡುವ ಹುನ್ನಾರವೇ ನಡೆದಿತ್ತೇ? ಈ ಕಾಯ್ದೆಯಿಂದ ಜಮ್ಮುವಿನಲ್ಲಿ ನಡೆದಿರುವ ಸಾವಿರಾರು ಹೆಕ್ಟೇರು ಭೂಮಿಯ ಮಾಲೀಕತ್ವದ ವರ್ಗಾವಣೆಯನ್ನು ಗಮನಿಸಿದರೆ ಕಾಶ್ಮೀರಿ ಪ್ರತ್ಯೇಕತಾವಾದಿಗಳು, ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಪಾಕಿಸ್ತಾನದೊಂದಿಗೆ ಸೇರಿಸುವ ಹುನ್ನಾರಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಿತ್ತು.

ಫಾರೂಕ್ ಅಬ್ದುಲ್ಲಾ ನಂತರ ಬಂದಂಥ ಮುಫ್ತಿ ಮೋಹಮ್ಮದ್ ಸಯೀದ್ ಸರಕಾರ 2005ರಲ್ಲಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ 1990ರ ವರೆಗೆ ಇದ್ದಂಥ ನಿಬಂಧನೆಯನ್ನು ಸಡಿಲಗೊಳಿಸಿ 2004ರವರೆಗೂ ವಿಸ್ತರಿಸಿತು. ಈ ತಿದ್ದುಪಡಿಯಿಂದ 1990 ಹಾಗೂ 2004ರ ನಡುವೆ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಂಥ ಸರಕಾರಿ ಜಾಗಗಳನ್ನೂ ಸಹ ಸಕ್ರಮ ಮಾಡಲಾಯಿತು. ಈ
ತಿದ್ದುಪಡಿಯಿಂದ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ.

2001ರಲ್ಲಿ ತಂದಂತಹ ಕಾಯ್ದೆಯಲ್ಲಿ ಒಮ್ಮೆ ಹಳೆಯ ಅಕ್ರಮಗಳನ್ನು ಸಕ್ರಮಗೊಳಿಸಲಾಯಿತು. ಆದರೆ ಅದಾದ ಮೂರೇ ವರ್ಷದಲ್ಲಿ ತಿದ್ದುಪಡಿ ಮಾಡುವ ಮೂಲಕ 2001 ರಿಂದ 2004ರ ನಡುವೆ ಅಕ್ರಮವೇ ನಡೆಯದಂತೆ ತಡೆಯುವ ಬದಲು, ಮತ್ತಷ್ಟು ಅಕ್ರಮಗಳನ್ನು ಪೋಷಿಸಲಾಗಿತ್ತು. ‘ಜಮ್ಮು ಕಾಶ್ಮೀರ’ಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದರ ಪರಿಣಾಮವಾಗಿ ಅಲ್ಲಿನ ಆಡಳಿತ ಪಕ್ಷಗಳನ್ನು ಹೇಳುವವರು ಕೇಳುವವರು ಇರಲಿಲ್ಲ, ಅವರದ್ದೇ ಸ್ವಂತ ಸಂವಿಧಾನದಂತಿದ್ದ ನೆಹರು ನೀಡಿದ್ದ ‘ಪರಿಚ್ಚಯ 370’ರ ಅಡಿಯಲ್ಲಿ ಇಷ್ಟೆಲ್ಲಾ ಅಕ್ರಮಗಳನ್ನು ಮಾಡಲಾಗಿತ್ತು.

ಸ್ವತಂತ್ರ್ಯದ ನಂತರ ನೆಹರು ಮಾಡಿದಂಥ ಈ ಅಚಾತುರ್ಯದಿಂದ ‘ಮುಫ್ತಿ’ ಹಾಗೂ ‘ಅಬ್ದುಲ್ಲಾ’ನ ಸಂತತಿಯವರು ಅದೆಷ್ಟು ಸಾವಿರ ಹೆಕ್ಟೇರುಗಳ ಅಕ್ರಮವನ್ನು ಮಾಡಿದ್ದಾರೋ ಅಲ್ಲಾಹುವೇ ಬಲ್ಲ. ಈ ಕಥೆ ಇಲ್ಲಿಗೂ ಮುಗಿಯಲಿಲ್ಲ. ಕಾಂಗ್ರೆಸ್ ಪೋಷಿತ ಸರಕಾರವನ್ನು ನಡೆಸುತ್ತಿದ್ದ ‘ಗುಲಾಮ್ ನಭಿ ಅಜಾದ್’ 2007ರಲ್ಲಿ ಮತ್ತೊಂದು ತಿದ್ದುಪಡಿಯನ್ನು ಮಾಡಿ ದಿನಾಂಕವನ್ನು
2004ರಿಂದ 2007ಕ್ಕೆ ಏರಿಸಿದ. ಈ ತಿದ್ದುಪಡಿಯ ಪರಿಣಾಮವಾಗಿ ಮತ್ತೆ ಮೂರು ವರ್ಷದಲ್ಲಾದ ಅಕ್ರಮಗಳನ್ನು ಸಕ್ರಮ ಗೊಳಿಸಲಾಯಿತು.

ಹಾಳೂರಿನಲ್ಲಿ ಉಳಿದವನೇ ಗೌಡನೆಂಬಂತೆ ಸದಾ ಗಲಭೆಗಳಿಂದ ಕೂಡಿದ್ದ ‘ಜಮ್ಮು ಹಾಗೂ ಕಾಶ್ಮೀರ’ದಲ್ಲಿ ಇವರು ಮಾಡಿದ್ದೇ ಶಾಸನವಾಯಿತು. ಇದರ ಮಧ್ಯೆ ಕೆಲವು ರೈತರಿಗೆ ಕೇವಲ ನೂರು ರುಪಾಯಿಯ ಶುಲ್ಕದಲ್ಲಿ ಅಕ್ರಮವಾಗಿ ವಶಪಡಿಸಿಕೊಂಡಿದ್ದ ಕೃಷಿ ಭೂಮಿಯನ್ನು ಸಕ್ರಮ ಮಾಡಲಾಯಿತು. 2014ರಲ್ಲಿ ‘ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆ ಇಂಡಿಯ’ ನೀಡಿದ ವರದಿಯಲ್ಲಿ ಈ ಕಾಯ್ದೆಯಡಿಯಲ್ಲಿ ನಡೆದಂಥ ಅಕ್ರಮಗಳನ್ನು ಪರಿಶೀಲಿಸಿ ಇದನ್ನು 25,000 ಕೋಟಿ ರುಪಾಯಿಯ ಹಗರಣವೆಂದು ಹೇಳಿತು. ಈ ಕಾಯ್ದೆಯಡಿಯಲ್ಲಿ ಹಲವಾರು ಅಕ್ರಮಗಳು ನಡೆದಿದ್ದು, ಸರಕಾರಿ ಜಮೀನನ್ನು ಅಕ್ರಮ ಮಾಡುವ ಸಲುವಾಗಿ ಸಾವಿರಾರು ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಹಲವು ರಾಜಕೀಯ ನಾಯಕರುಗಳಿಗೆ, ಸರಕಾರಿ ಆಡಳಿತಾಧಿಕಾರಿಗಳಿಗೆ, ಸರಕಾರಿ ನೌಕರರಿಗೆ, ಬಂಡವಾಳ ಶಾಹಿಗಳಿಗೆ ನೀಡಲಾಗಿದೆಯೆಂದು ವರದಿಯಲ್ಲಿ ಉಲ್ಲೇಖಿಸುವ ಮೂಲಕ ದೊಡ್ಡದೊಂದು ಹಗರಣವನ್ನು ಬಯಲಿಗೆಳೆಯಿತು.

ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋದರೆ ಬಹುತೇಕರು ‘ಗುಲ್ ಮಾರ್ಗ್’ಗೆ ಹೋಗಿರುತ್ತೀರಿ, ಈ ‘ಗುಲ್ ಮಾರ್ಗ್’ ಕಣಿವೆಯಲ್ಲಿರುವ ಸಾವಿರಾರು ಎಕರೆಯ ಸರಕಾರಿ ಜಾಗವನ್ನು ಕೆಲವು ಐ.ಎ.ಎಸ್ ಅಧಿಕಾರಿಗಳು ತಮ್ಮ ಪ್ರಭಾವವನ್ನು ಬಳಸಿ ಸರಕಾರವು ವಿಧಿಸಿದ್ದಂಥ ಮಾನದಂಡ ವನ್ನು ಪಾಲಿಸದೆ ಈ ಕಾಯ್ದೆಯಡಿಯಲ್ಲಿ ಹಲವರಿಗೆ ಸಕ್ರಮ ಮಾಡಿಕೊಡಿಸಿರುವ ಬಗ್ಗೆೆ ದೂರು ದಾಖಲಾಯಿತು. ಗುಲ್ ಮಾರ್ಗ್ ಹಗರಣವೆಂದೇ ಕುಖ್ಯಾತಿ ಪಡೆದಿರುವ ಈ ಹಗರಣದಲ್ಲಿ ಸರಕಾರಿ ಅಧಿಕಾರಿ ಬಷೀರ್ ಅಹ್ಮದ್ ಖಾನ್ ಹೆಸರು ಕೇಳಿಬಂತು.

ಈತನ ಅವಧಿಯಲ್ಲಿ ಗುಲ್ ಮಾರ್ಗ್ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಹಲವು ಪ್ರಭಾವಿಗಳಿಗೆ ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ಕಡಿಮೆ ಬೆಲೆಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸಕ್ರಮ ಮಾಡಲಾಗಿದೆ ಯೆಂಬ ಆರೋಪವು ಕೇಳಿಬಂತು.
ಇವೆಲ್ಲವನ್ನೂ ಕಂಡಂಥ ರಾಜ್ಯಪಾಲ ‘ಸತ್ಯಪಾಲ್ ಮಾಲಿಕ್’ ಈ ಕಾಯ್ದೆಯನ್ನು 2018ರಲ್ಲಿ ತಕ್ಷಣಕ್ಕೆ ಜಾರಿ ಬರುವಂತೆ ರದ್ದುಮಾಡಿದರು. 2018ರಲ್ಲಿ ಈ ಕಾಯ್ದೆಯಡಿಯಲ್ಲಿ ಆಗಿರುವ ಅಕ್ರಮಗಳನ್ನು ತನಿಖೆ ಮಾಡಲು ‘ಭ್ರಷ್ಟಾಚಾರ ವಿರೋಧಿ ದಳ’ಕ್ಕೆ ಸೂಚಿಸಿದರು.

ಅದೇ ಸಮಯದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಹಾಕಲಾಯಿತು, ಅರ್ಜಿಯನ್ನು
ವಿಚಾರಣೆ ನಡೆಸಿದ ನ್ಯಾಯಾಲಯವು ಈ ಕಾಯ್ದೆಯು ಸಂವಿಧಾನದ’ದ ವಿರುದ್ಧವಾಗಿದ್ದು ಇದುವರೆಗೂ ಈ ಕಾಯ್ದೆಯಡಿಯಲ್ಲಿ ಸಕ್ರಮವಾಗಿರುವ ಜಾಗಗಳ ಮಾಲೀಕತ್ವ ವರ್ಗಾವಣೆಯನ್ನು ಅಸಿಂಧುಮಾಡಿತು. ಈ ಕಾಯ್ದೆಯಡಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಯನ್ನು ನಡೆಸಲು ಆದೇಶಿಸಿತು, ಜೊತೆಗೆ ಈ ಕಾಯ್ದೆಯಡಿಯಲ್ಲಿ ಭೂಮಿಯನ್ನು ಪಡೆದಿರುವ ರಾಜಕೀಯ ನಾಯಕರು ಹಾಗೂ ಸರಕಾರಿ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಲು ಜಮ್ಮು ಕಾಶ್ಮೀರ ಸರಕಾರಕ್ಕೆ ಸೂಚನೆ ಯನ್ನು ನೀಡಿತು, ಇದರನ್ವಯ ಸರಕಾರವು ಹಲವು ನಾಯಕರು ಹಾಗೂ ಅಧಿಕಾರಿಗಳ ಹೆಸರನ್ನು ಬಹಿರಂಗ ಪಡಿಸಿದೆ.

ನಾನು ಆಗಲೇ ಹೇಳಿದಂತೆ ಜಮ್ಮುವಿನಲ್ಲಿ ಮುಸ್ಲಿಂ ಜನಸಂಖ್ಯೆಯನ್ನು ಹೆಚ್ಚಾಗಿಸಲು ಅತಿ ಹೆಚ್ಚಿನ ಭೂಮಿಯ ವರ್ಗಾವಣೆ ಯನ್ನು ಮಾಡಲಾಗಿತ್ತು. ಉಚ್ಚ ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಸುಮಾರು ಮೂವತ್ತು ಸಾವಿರ ವರ್ಗಾವಣೆ
ಯ ಕಡತಗಳನ್ನು ಗಮನಿಸಿತ್ತು, ಮೂವತ್ತು ಸಾವಿರ ವರ್ಗಾವಣೆಯಲ್ಲಿ ಸುಮಾರು 25,000ದಷ್ಟು ವರ್ಗಾವಣೆಯು ಕೇವಲ ‘ಜಮ್ಮು’ವಿನಲ್ಲೇ ಆಗಿತ್ತು. ಒಂದು ದೊಡ್ಡಭೂಭಾಗವನ್ನೇ ಮುಸಲ್ಮಾನ್ ಪ್ರಾಬಲ್ಯದ ಪ್ರಾಂತ್ಯವನ್ನಾಗಿಸಲು ದೊಡ್ಡದೊಂದು ಸಂಚೇ ನಡೆದಿತ್ತೆಂದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ.

ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದಾಗ ಬಾಯಿ ಬಡೆದುಕೊಂಡಂಥ ಗಂಜಿ ಗಿರಾಕಿಗಳಿಗೆ ಇದರ ಸ್ಪಷ್ಟ ಅರಿವಿತ್ತು, ಅವರ ಪಾಲೂ ಸಹ ಅದರಲ್ಲಿತ್ತು. ಸಾವಿರಾರು ಹೆಕ್ಟೇರು ಸರಕಾರಿ ಭೂಮಿಯನ್ನು ‘ರೋಷನಿ’ ಕಾಯ್ದೆಯಡಿ ಯಲ್ಲಿ ಬೇನಾಮಿಯಾಗಿ ಅವರೂ ಸಹ ವಶಪಡಿಸಿ ಕೊಂಡಿದ್ದರು. ಏಳು ದಶಕಗಳ ಕಾಲ ಆಂತರಿಕ ಗಲಭೆಯಲ್ಲಿ ನಲುಗಿದ್ದ ಜಮ್ಮು ಕಾಶ್ಮೀರವನ್ನು ಸರಿಪಡಿಸಲು ಇದ್ದ ಒಂದೇ ಮಾರ್ಗವೆಂದರೆ ಸಂವಿಧಾನದ ಪರಿಚ್ಛಯ 370ರ ರದ್ಧತಿ.

ಕಾಂಗ್ರೆಸ್ ರದ್ಧತಿ ಮಾಡಲು ತಯಾರಿರಲಿಲ್ಲ, ಯಾಕೆಂದರೆ ತನ್ನ ಪಕ್ಷದ ಹಲವು ನಾಯಕರೂ ಸಹ ಈ ಕಾಯ್ದೆಯಡಿಯಲ್ಲಿ ಸಾವಿರಾರು ಹೆಕ್ಟೇರು ಭೂಮಿಯನ್ನು ಸರಕಾರದಿಂದ ಸ್ವಾಹ ಮಾಡಿದ್ದರು. ಚಿದಂಬರಂ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಪುನಃ ನೀಡುವುದಾಗಿ ಹೇಳಿದ್ದು ಇದೇ ಕಾರಣಕ್ಕಿರಬೇಕು. ಜಗತ್ತಿನೆಲ್ಲೆಡೆ ಹೆಕ್ಟೇರುಗಟ್ಟಲೆ ಆಸ್ತಿ ಮಾಡಿರುವ ಚಿದಂಬರಂ ಈ ಕಾಯ್ದೆಯಡಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಆಸ್ತಿ ಮಾಡಿಲ್ಲವೆಂದರೆ ನಂಬಲಾಗುವುದಿಲ್ಲ.

ಒಂದು ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಸರಕಾರಿ ಜಾಗಗಳ ಅಕ್ರಮ ಸಕ್ರಮ ಮಾಡಲು ಜಾರಿಗೆ ಬಂದಂಥ ರೋಷಿನಿ ಕಾಯ್ದೆಯನ್ನು ಮತ್ತಷ್ಟು ಅಕ್ರಮಗಳಿಗೆ ಬಳಸಿಕೊಳ್ಳಲು ಕಾರಣ ಜಮ್ಮು ಕಾಶ್ಮೀರಕ್ಕಿದ್ದಂಥ ವಿಶೇಷ ಸ್ಥಾನಮಾನ. ತಮ್ಮದೇ ವಿಶೇಷ ಸಂವಿಧಾನದಡಿಯಲ್ಲಿ ಅಧಿಕಾರ ನಡೆಸಿಕೊಂಡು ಬಂದಂಥ ಅಬ್ದುಲ್ಲಾ ಹಾಗೂ ಮುಫ್ತಿಯ ಸಂತಾನ ಸಾವಿರಾರು ಹೆಕ್ಟೇರು ಸರಕಾರಿ ಭೂಭಾಗವನ್ನು ಕೊಳ್ಳೆ ಹೊಡೆದು ಅಲ್ಲಿನ ಬಡವರನ್ನು ಹೊರಜಗತ್ತಿಗೆ ಬರಲು ಬಿಡದೇ ಭಾರತದ ವಿರುದ್ಧ ಸದಾ ಕತ್ತಿ ಮಸೆಯುವಂತೆ ಮಾಡಿದ್ದರು. ಈ ಕಾಯ್ದೆಯಡಿಯಲ್ಲಿ ಕೆಲವು ಬಡವರಿಗೆ ಉಪಯೋಗವಾಗಿದೆ.

ಆದರೆ ಕಾಯ್ದೆಯಡಿಯಲ್ಲಿ ಹಂಚಿಕೆಯಾಗಿರುವ ಬಹುಪಾಲು ಭೂಮಿಯನ್ನು ಕೊಳ್ಳೆ ಹೊಡೆದವರು ಮಾತ್ರ ರಾಜಕೀಯ
ನಾಯಕರು ಹಾಗೂ ಅಧಿಕಾರಿಗಳು. 25,000 ಕೋಟಿಯ ನಿರೀಕ್ಷೆಯಲ್ಲಿದ್ದ ಸರಕಾರವು ಕೇವಲ 76 ಕೋಟಿಯನ್ನು ಮಾತ್ರ ಗಳಿಸುತ್ತದೆಯೆಂದರೆ ಅಲ್ಲಿ ನಡೆದಿರುವ ಅಕ್ರಮದ ಪರಮಾವಧಿಯನ್ನು ಸಾಮಾನ್ಯ ನಾಗರೀಕನೂ ಅರ್ಥ ಮಾಡಿಕೊಳ್ಳಬಹುದು. ಜಮ್ಮು ಮತ್ತು ಕಾಶ್ಮೀರವನ್ನು ತೋರಿಸಿ ಭಾರತದಲ್ಲಿನ ಮುಸಲ್ಮಾನರನ್ನು ಒಂದೆಡೆ ಸೇರಿಸುವ ಪ್ರಯತ್ನವು ಏಳು ದಶಕದಿಂದ ಎಗ್ಗಿಲ್ಲದೇ ನಡೆದಿದೆ.

ಕಾಶ್ಮೀರದಲ್ಲಿನ ಹಿಂದುಗಳನ್ನು ಓಡಿಸಿದಷ್ಟು ಸುಲಭವಾಗಿ ಜಮ್ಮುವಿನ ಹಿಂದುಗಳನ್ನು ಓಡಿಸಲು ಸಾಧ್ಯವಿಲ್ಲವೆಂದು ಅರಿತ ಪ್ರತ್ಯೇಕತಾವಾದಿಗಳು ಜಮ್ಮುವಿನಲ್ಲಿ ‘ಲ್ಯಾಂಡ್ ಜಿಹಾದ್’ ನಡೆಸಿದರೆನ್ನಲಾಗುತ್ತಿದೆ. ಹಿಂದುಗಳಿರುವ ಪ್ರದೇಶಗಳಲ್ಲಿ ಹೆಚ್ಚು ಮುಸಲ್ಮಾನರಿಗೆ ಅಕ್ರಮ ಜಾಗಗಳನ್ನು ಸಕ್ರಮ ಮಾಡಿಸಿಕೊಟ್ಟರೆ ಮುಸಲ್ಮಾಾನರ ಪ್ರಾಬಲ್ಯ ಹೆಚ್ಚಾಗಿ ಜಮ್ಮುವಿನಲ್ಲಿರುವ ಹಿಂದುಗಳನ್ನೂ ಸಹ ಓಡಿಸಿಬಿಡಬಹುದೆಂಬ ಆಲೋಚನೆ ಇವರದ್ದು. ಈಗಾಗಲೇ ಕಾಶ್ಮೀರಿ ಪಂಡಿತರ ಮಾರಣ ಹೋಮವನ್ನು ಕಂಡಿದ್ದ ಜಮ್ಮುವಿನ ಹಿಂದುಗಳಿಗೆ ಮುಸಲ್ಮಾನರಿಗೆ ಹೆಚ್ಚಿನ ಜಾಗವನ್ನು ಈ ಕಾಯ್ದೆಯಡಿಯಲ್ಲಿ ನೀಡಿದ್ದೇ ಆಗಿದ್ದಲ್ಲಿ, ಆ ಜಾಗಗಳಲ್ಲಿ ಹಿಂದೂಗಳು ವಾಸವಿರಲು ಆಗದ ಕಾರಣ ನಿಧಾನವಾಗಿ ಜಮ್ಮುವನ್ನು ಬಿಟ್ಟು ಹೊರಬರಬೇಕಾಗುತ್ತದೆ.

ಮುಫ್ತಿ ಹಾಗೂ ಅಬ್ದುಲ್ಲಾನ ಸಂತಾನಗಳು ತುಂಬಾ ವ್ಯವಸ್ಥಿತವಾಗಿ ಸರಕಾರವನ್ನು ದುರ್ಬಳಕೆ ಮಾಡಿಕೊಂಡು ಕಳೆದ ಇಪ್ಪತ್ತು
ವರ್ಷಗಳಿಂದ ರೋಷಿನಿ ಕಾಯ್ದೆಯಡಿಯಲ್ಲಿ ಈ ಕೆಲಸವನ್ನು ಮಾಡುತ್ತಿತ್ತು. ಸಂವಿಧಾನದ ಪರಿಚ್ಛಯ 370ರಿಂದ ಆಗಿದ್ದ
ಅನಾಹುತಗಳ ಬಗ್ಗೆ ಇಲ್ಲಿಯವರೆಗೂ ನಮಗೆ ತಿಳಿದಿದ್ದು ಕೆಲವೇ ಕೆಲವು ವಿಷಯಗಳಷ್ಟೆ, ಆದರೆ ಈ ಕಾಯ್ದೆಯಡಿಯಲ್ಲಿ
ನಡೆದಿರುವ ಈ ಮಟ್ಟದ ಅಕ್ರಮವನ್ನು ನೋಡಿದರೆ ಇವರೆಲ್ಲರೂ ಸೇರಿಕೊಂಡು ಜಮ್ಮುವನ್ನೂ ಸಹ ಹಾಳು ಮಾಡುವ ಬೃಹತ್ ಷಡ್ಯಂತ್ರವನ್ನೇ ಮಾಡಹೊರಟಿದ್ದಾರೆಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಪಾಕಿಸ್ತಾನಕ್ಕೆ ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಕಾಶ್ಮೀರವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಪ್ರತ್ಯೇಕತಾವಾದಿಗಳ ಜೊತೆ ಸೇರಿಕೊಂಡು ಒಳಗೊಳಗೇ ಈ ಕಾಯ್ದೆಯ ಮೂಲಕ ಜಮ್ಮುವನ್ನು ಸಂಪೂರ್ಣ ಮುಸಲ್ಮಾನ್ ಕೇಂದ್ರಿತ ಪ್ರದೇಶ ಮಾಡುವ ಉದ್ದೇಶವಿತ್ತು, ಹಾಗಾಗಿಯೇ 370ನ್ನು ರದ್ದು ಮಾಡುವಾಗ ಅಂಡು ಸುಟ್ಟ ಬೆಕ್ಕಿನಂತೆ ಆಡಲಾಯಿತು.

ಯೂರೋಪಿನ ಹಲವು ದೇಶಗಳಲ್ಲಿ ಕೆಲಸ ಅರಸಿ ಬಂದು ಅಲ್ಲಿನ ಸರಕಾರದಲ್ಲಿ ಪ್ರತಿನಿಧಿಗಳಾಗಿ ನಿಧಾನವಾಗಿ ತಮ್ಮನ್ನು
ಬಹುಸಂಖ್ಯಾತರನ್ನಾಗಿ ಮಾಡಿಕೊಂಡು, ಅಲ್ಲಿನ ಸ್ಥಳೀಯರಿಗೆ ಕಿರುಕುಳ ಕೊಡುತ್ತಿರುವ ಹಲವಾರು ದೃಶ್ಯಗಳು ಈಗಾಗಲೇ
ನಮ್ಮ ಕಣ್ಣ ಮುಂದಿವೆ. ಇದೇ ರೀತಿ ಭಾರತದಲ್ಲೂ ಸಹ ಹಲವು ನಗರಗಳ ಬಡಾವಣೆಗಳಿಗೆ ಲಗ್ಗೆಯಿಟ್ಟು ನೋಡ ನೋಡುತ್ತಲೇ
ಸ್ಥಳೀಯರ ಮುಂದೆ ಸೆಡ್ಡು ಹೊಡೆದು ತಮ್ಮ ಅಧಿಪತ್ಯ ಸ್ಥಾಪಿಸಿರುವ ಹಲವು ಉದಾಹರಣೆಗಳ ಬಗ್ಗೆ ಅಂಕಣದ ಮೊದಲ ಭಾಗದಲ್ಲಿಯೇ ಉದಾಹರಣೆ ಸಮೇತ ಹೇಳಿದ್ದೇನೆ.

ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಹಲವು ಪ್ರದೇಶಗಳ ಹೆಸರುಗಳನ್ನು ಬದಲಾವಣೆ ಮಾಡಿದಾಗ ಕೆಲವರು ವಿರೋಧಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಕಣ್ಣ ಮುಂದೆಯೇ ಜಮ್ಮುವಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ‘ಲ್ಯಾಂಡ್ ಜಿಹಾದ್’ ನಡೆಯುತ್ತಿರುವಾಗ, ಮೊಗಲರ ಆಳ್ವಿಕೆಯಲ್ಲಿ ಅದೆಷ್ಟು ನಗರಗಳ ಭೌಗೋಳಿಕತೆಯನ್ನು ಬದಲಾಯಿಸಿರ ಬಹುದಲ್ಲವೇ? ಊರುಗಳ ಹೆಸರುಗಳನ್ನೇ ಬದಲಾಯಿಸಿ ಅದೆಷ್ಟರ ಮಟ್ಟಿನ ವಿಕೃತಿಯನ್ನು ಮೆರಿದಿರಬಹುದು.

ನಮ್ಮ ಧರ್ಮ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದರೆ ನಮ್ಮಲ್ಲಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು. ಅಮಿತ್ ಶಾ ಹಾಗೂ ಮೋದಿ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಮೂಲಕ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದಾರೆ. ‘ರೋಷಿನಿ’ ಕಾಯ್ದೆಯಲ್ಲಿನ ಅಕ್ರಮಗಳನ್ನು ಬಯಲಿಗೆಳೆದು ಅಕ್ರಮವಾಗಿ ಸರಕಾರಕ್ಕೆ ಮೋಸ ಮಾಡಿ ವರ್ಗಾವಣೆ ಮಾಡಿಕೊಂಡಿರುವಂಥ ಜಾಗವನ್ನು ಪುನಃ ಸರಕಾರದ ಸುಪರ್ದಿಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು
ಮಾಡುತ್ತಿದ್ದಾರೆ.

ಸ್ವತಃ ನ್ಯಾಯಾಲಯವೇ ಕೇಂದ್ರ ದಲ್ಲಿ ತನಿಖೆ ನಡೆಸಲು ಆದೇಶಿಸಿರುವುದರಿಂದ ಈ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಇನ್ನು ಹಲವು ರಾಜಕೀಯ ಮುಖಂಡರ ಹೆಸರುಗಳನ್ನು ಸರಕಾರವು ಬಹಿರಂಗ ಪಡಿಸಬೇಕಿರುವುದರಿಂದ ಹಲವು ನಾಯಕರಲ್ಲಿ ಹೆಚ್ಚಿನ ಆತಂಕ ಮೂಡಿರುವುದಂತೂ ನಿಜ.

Leave a Reply

Your email address will not be published. Required fields are marked *