Sunday, 8th September 2024

ಅಸಾಧ್ಯಗಳ ನಡುವೆ ಸಾಧ್ಯವಾಗುವುದೇ ಬದುಕು !

ಇದೇ ಅಂತರಂಗ ಸುದ್ದಿ

vbhat@me.com

ಕೆಲ ವರ್ಷಗಳ ಹಿಂದೆ ನಾನು ದಿಲ್ಲಿಗೆ ಹೋಗುವಾಗ ವಿಮಾನ ಹಿಡಿಯುವುದು ಸಾಧ್ಯವೇ ಇರಲಿಲ್ಲ. ವಿಮಾನ ತಪ್ಪಿ ಹೋಗುವುದು ನೂರಕ್ಕೆ ನೂರು ನಿಜವಾಗಿತ್ತು. ಕಾರಣ ನಾನು ಮನೆಯಿಂದ ಹೊರಡುವುದೇ ತಡವಾಗಿತ್ತು. ಕಾರಣ ನಾನು ಎದ್ದಿದ್ದೇ ತಡವಾಗಿತ್ತು. ಕಾರಣ ನಾನು ಅಲಾರಂ ಇಟ್ಟು ಕೊಂಡಿದ್ದರೂ ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿ ಇದ್ದುದರಿಂದ ಅದು ಕೂಗಿಕೊಳ್ಳಲೇ ಇಲ್ಲ.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬೆಳಗ್ಗೆ ಆರು ಗಂಟೆ ಹತ್ತು ನಿಮಿಷಕ್ಕೆ ದಿಲ್ಲಿಗೆ ವಿಮಾನ ನಿಗದಿಯಾಗಿತ್ತು. ನಾನು ಐದು ಗಂಟೆ ಹತ್ತು ನಿಮಿಷಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇರಬೇಕಿತ್ತು. ಆದರೆ ನಾನು ಮನೆಯಿಂದ ಹೊರಟಿದ್ದೇ ಬೆಳಗ್ಗೆ ನಾಲ್ಕೂವರೆಗೆ. ನಲವತ್ತು ನಿಮಿಷದಲ್ಲಿ ಏರ್‌ ಪೋರ್ಟ್ ತಲುಪುವುದು ಸಾಧ್ಯವೇ ಇರಲಿಲ್ಲ. ನನ್ನ ಮನೆಯಿಂದ ಅಲ್ಲಿಗೆ ಹೋಗಲು ಬೆಳಗಿನ ಜಾವದ ಸಮಯ ದಲ್ಲೂ ಕನಿಷ್ಠ ಒಂದೂಕಾಲು ಗಂಟೆ ಬೇಕು. ಏನೇ ತಿಪ್ಪರಲಾಗ ಹಾಕಿದರೂ ಐದು ಮುಕ್ಕಾಲಕ್ಕಿಂತ ಮುಂಚೆ ಏರ್‌ಪೋರ್ಟ್ ತಲುಪಲು ಸಾಧ್ಯವಿರಲಿಲ್ಲ.

ಅಲ್ಲದೇ ಹನುಮಂತನ ಬಾಲದಂಥ ಕ್ಯೂನಲ್ಲಿ ನಿಂತು, ಬೋರ್ಡಿಂಗ್ ಪಾಸ್ ಪಡೆಯುವ ಹೊತ್ತಿಗೆ, ಗೇಟ್ ಕ್ಲೋಸ್ ಆಗಿರುತ್ತದೆ. ಆನಂತರ ಯಾರೇ ಬಂದರೂ ಬಿಡುವುದಿಲ್ಲ. ಈ ಮಧ್ಯೆ, ತಕ್ಷಣ ಏರ್‌ಲೈನ್ಸ್ ಸಂಸ್ಥೆಗೆ ಫೋನ್ ಮಾಡಿ ಕೇಳಿದೆ. ವಿಮಾನ ರೈಟ್‌ಟೈಮಿಗೆ ಹೊರಡುವುದೆಂದು ಹೇಳಿದರು. ಕೆಲಸ ಕೆಟ್ಟಿತು, ಫ್ಲೈಟ್ ಮಿಸ್ ಆಗೋದು ಗ್ಯಾರಂಟಿ ಎಂಬುದು ನಿಶ್ಚಿತವಾಯಿತು. ಇನ್ನು ವಿಮಾನ ನಿಲ್ದಾಣದ ತನಕ ಹೋಗಿ ಪ್ರಯೋಜನವಿಲ್ಲ ಎಂದು ನಿರ್ಧರಿಸಿದೆ. ನನ್ನ ಪತ್ನಿಯೂ ‘ಸುಮ್ನೆ ಯಾಕೆ ಅಲ್ಲಿ ತನಕ ಹೋಗಿ ಹಿಂದೆ ಬರ್ತೀರಾ? ಫ್ಲೈಟ್ ಮಿಸ್ ಆಗೋದರಲ್ಲಿ ಅನುಮಾನವೇ ಇಲ್ಲ. ಯಾಕೆ ತೊಂದರೆ ತೆಗೆದುಕೊಳ್ತೀರಾ?’ ಎಂದಳು.

ಆದರೂ ಅದೃಷ್ಟ ಪರೀಕ್ಷಿಸೋಣ ಎಂದು ಹೊರಟೆ. ಆಶ್ಚರ್ಯ ಅಂದ್ರೆ, ನಾನು ವಿಮಾನ ಹೊರಡಲು ಇನ್ನೂ ಇಪ್ಪತ್ತು ನಿಮಿಷಗಳಿರುವಾಗಲೇ ವಿಮಾನದೊಳಗೆ ಬಂದು ಕುಳಿತು, ಪತ್ನಿಗೆ ಫೋನ್ ಮಾಡಿದರೆ ಅವಳು ನಂಬಲಿಲ್ಲ. ನಂತರ ಗಗನಸಖಿಯ ಪ್ರಕಟಣೆಯ ದನಿ ಕೇಳಿದಾಗಲೇ ಆಕೆಗೂ ಆಶ್ಚರ್ಯ. ನಮ್ಮ ದೇಶದಲ್ಲಿ ಇರುವಂಥ ಅವ್ಯವಸ್ಥೆ, ಅಸ್ತವ್ಯಸ್ತತೆ (chaos) ಬೇರೆಲ್ಲೂ ಇರಲಿಕ್ಕಿಲ್ಲ. ಆದರೂ ಎಲ್ಲವೂ ಸುಖಾಂತ್ಯವಾಗುತ್ತದೆ ಎಂಬುದು ನನಗೆ ನೂರಾರು ಸಲ ಅನುಭವಕ್ಕೆ ಬಂದಿದೆ. ಈ ಘಟನೆಯಲ್ಲಿ ವ್ಯವಸ್ಥೆಯದೇನೂ ತಪ್ಪಿಲ್ಲ. ಪ್ರಮಾದವಾಗಿದ್ದು ನನ್ನಿಂದ. ನಾನು ಸಮಯಕ್ಕೆ ಸರಿ ಯಾಗಿ ಅಥವಾ ಮುಂಚಿತವಾಗಿ ಹೋಗಿದ್ದಿದ್ದರೆ ಇಷ್ಟೆ ಗಂಡಾಗುಂಡಿ ಮಾಡಬೇಕಾದ ಅಗತ್ಯವಿರಲಿಲ್ಲ. ಈ ರೀತಿಯ ಅನುಭವ ನಿಮಗೂ ಆಗಿರ ಬಹುದು. ಕೊನೆ ಕ್ಷಣದಲ್ಲಿ ಪವಾಡ ಸದೃಶ ಎಂಬಂತೆ ಕಾರ್ಯಸಿದ್ಧಿಯಾಗಿರಬಹುದು.

ಆದರೂ ಈ ರಸ್ತೆ, ಗುಂಡಿ, ಮಳೆ, ಟ್ರಾಫಿಕ್ ಜಾಮ, ಜನಜಂಗುಳಿ ಮಧ್ಯದಲ್ಲಿಯೂ ನಮ್ಮ ಬದುಕು ಹೇಗೆ ನಡೆಯಬೇಕೋ ಹಾಗೆ ನಡೆಯುತ್ತಿರುತ್ತದೆ. ಇದನ್ನು perfect anarchy ಅಂತ ಕರೆಯುತ್ತಾರೆ. ಮುಂಬೈಯ ಧಾರಾವಿಯ ಕೊಳೆಗೇರಿಯನ್ನು ನೋಡಿದ ವಿದೇಶಿ ವರದಿಗಾರನೊಬ್ಬ ಇಲ್ಲಿ ಲಕ್ಷಾಂತರ ಜನ ಜೀವಿಸುತ್ತಿರುವುದೇ ಒಂದು ಸೋಜಿಗ ಎಂದು ಹೇಳಿದ. ಆದರೆ ಅಲ್ಲಿ ವಾಸಿಸುವ ಜನರಿಗೆ ಅದು ಸಹಜ. ಅವರು ಹುಟ್ಟಿ, ಬೆಳೆದಿದ್ದೇ ಅಲ್ಲಿ. ಅವರಿಗೆ ಅದು ಸಮಸ್ಯೆಯೇ ಅಲ್ಲ. ಭಾರತದ ಜನಸಂಖ್ಯೆ, ಇಲ್ಲಿನ ಟ್ರಾಫಿಕ್, ಜನಜೀವನ ನೋಡಿದ ಅಮೆರಿಕನ್‌ರಿಗೆ ಈ ಜನ ಹೇಗೆ ಜೀವಿಸುತ್ತಿರಬಹುದು ಎಂದು
ಸೋಜಿಗವಾಗಬಹುದು. ಆದರೆ ನಮಗೆ ಅದು ಸೋಜಿಗವಲ್ಲ, ಸಹಜ. ಎಲ್ಲಾ ಅಸಾಧ್ಯಗಳ ನಡುವೆಯೂ ಬದುಕು ಸಾಧ್ಯವಾಗುತ್ತಾ ಹೋಗುತ್ತದೆ.

ಹತ್ತಿ ಚೀಲ ಪೂರ್ತಿ ತುಂಬಿದರೂ, ಇನ್ನೂ ಸ್ವಲ್ಪ ಹತ್ತಿಯನ್ನು ತುರುಕಲು ಜಾಗವಿರುತ್ತದಂತೆ. ಹಾಗೆಯೇ ಎಷ್ಟೇ ಟ್ರಾಫಿಕ್ ಜಾಮ್ ಆದರೂ ನಮ್ಮ ನಮ್ಮ ವಾಹನ ಹೋಗಲು ಸ್ವಲ್ಪ ಜಾಗ ಇದ್ದೇ ಇರುತ್ತದೆ. ಮುಂಬೈ ಲೋಕಲ್ ಟ್ರೈನ್ ಜನರಿಂದ ತುಂಬಿ ತುಳುಕುತ್ತಿದ್ದರೂ ಒಬ್ಬನಿಗೆ ಮೊಳಕೈ ಆಡಿಸಲು ಜಾಗ ಸಿಕ್ಕರೆ ನಾಲ್ಕು ಜನ ಹತ್ತಿಕೊಳ್ಳುವಂತೆ, ನಮ್ಮ ವ್ಯವಸ್ಥೆ ಎಲ್ಲ ಪರಿಧಿಯನ್ನು ದಾಟಿಯೂ ಪುನಃ ಸಹಜ ಸ್ಥಿತಿಗೆ ಬಂದಿರುತ್ತದೆ.

ಈ ವ್ಯವಸ್ಥೆಗೆ ಎಲ್ಲ ಅವ್ಯವಸ್ಥೆಗಳನ್ನು ಹೊಟ್ಟೆಯೊಳಗೆ ತುಂಬಿಕೊಳ್ಳುವ, ಹೀರಿಕೊಳ್ಳುವ, ಎಲ್ಲವನ್ನೂ ಮಟ್ಟಸವಾಗಿಸುವ ಒಂದು ಅಗಾಧ ಶಕ್ತಿಯಿರು ವುದು ಮಾತ್ರ ಸುಳ್ಳಲ್ಲ. ಆ ಶಕ್ತಿಯೇ ಈ ವ್ಯವಸ್ಥೆಯನ್ನು ನಡೆಸುತ್ತಿರುವುದು. ಇಲ್ಲದಿದ್ದರೆ ನನಗೆ ಅಂದು ಫ್ಲೈಟ್ ಮಿಸ್ ಆಗುತ್ತಿತ್ತು. ಈ ಎಲ್ಲ ಅಪಸವ್ಯಗಳ ನಡುವೆಯೇ ನಮ್ಮ ಬದುಕು ಹಸನುಗೊಳ್ಳುತ್ತಿದೆ, ಬದುಕು ಸಾಗುತ್ತಿದೆ. ಅದೇ ಅದ್ಭುತ. ಇಷ್ಟೊಂದು ಜಾತಿ, ಪಂಗಡ, ಕೋಮು, ಧರ್ಮ, ಭಾಷೆ, ವೈರುಧ್ಯ, ಜನಸಂಖ್ಯೆ ಸಮಸ್ಯೆ.. ಇವೆಲ್ಲವುಗಳ ಮಧ್ಯೆಯೇ ಭಾರತ ಇಂದು ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಸಣ್ಣ ಮಾತಲ್ಲ. ನೂರಾ ಮೂವತ್ತು ಕೋಟಿ ಜನ ಒಂದೆಡೆ ಶಾಂತಿ, ಸಹಬಾಳ್ವೆಯಿಂದ ಜೀವಿಸುತ್ತಿರುವುದೇ ಒಂದು ಅಚ್ಚರಿ ಅಲ್ಲವೇ?

ಮೊದಲ ಚುನಾವಣೆ ಯಲ್ಲಿ ಅಟಲ್ ಖರ್ಚು ಮಾಡಿದ್ದು ೮೫೦೦ ರು.!

ಅನೇಕರಿಗೆ ಗೊತ್ತಿಲ್ಲ, ವಾಜಪೇಯಿ ಅವರು ದಿಲ್ಲಿಗೆ ಹೋಗಿದ್ದು ರಾಜಕಾರಣಿಯಾಗಿ ಅಲ್ಲ. ಜನಸಂಘದ ಕಾರ್ಯಕರ್ತರಾಗಿಯೂ ಅಲ್ಲ. ಅವರು ಅಲ್ಲಿಗೆ ಹೋಗಿದ್ದು ಪತ್ರಕರ್ತರಾಗಿ. ಆದರೆ ದೇಶದ ಪ್ರಧಾನಿಯಾಗುವ ಹಂತವನ್ನು ತಲುಪಿದ್ದು ಅವರ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ. ೧೯೫೧ರಲ್ಲಿ ವಾಜಪೇಯಿ ಅವರು ‘ವೀರ ಅರ್ಜುನ’ ಪತ್ರಿಕೆ ಸಂಪಾದಕರಾಗಿ ನಿಯುಕ್ತಗೊಂಡರು. ಡಾ.ಶ್ಯಾಮಪ್ರಸಾದ ಮುಖರ್ಜಿಯವರು ಮೊದಲ ಬಾರಿಗೆ ಭೇಟಿ ಯಾದ ಅಟಲ್‌ಜೀ ಅವರಲ್ಲಿ ಅದೇನೋ ವೈಶಿಷ್ಟ್ಯ ಗುರುತಿಸಿದರು. ಪತ್ರಿಕೆಗಿಂತ ರಾಜಕಾರಣಕ್ಕೆ ಸೂಕ್ತ ವ್ಯಕ್ತಿಯೆಂದು ಅವರನ್ನು ಜನಸಂಘದ ಕೆಲಸಕ್ಕೆ ಹಚ್ಚಿದರು. ಎರಡು ವರ್ಷಗಳ ಕಾಲ ಸಂಪಾದಕರಾಗಿ ಕೆಲಸ ಮಾಡಿದ ಅಟಲ್‌ಜೀ, ಆರಂಭದಲ್ಲಿ ಡಾ.ಮುಖರ್ಜಿ ಅವರ ಸಹಾಯಕರಾದರು. ನಂತರ ಅವರಿಗೆ ಕಾರ್ಯದರ್ಶಿ ಜವಾಬ್ದಾರಿ ನೀಡಲಾಯಿತು.

ಡಾ.ಮುಖರ್ಜಿ ನಿಧನದ ನಂತರ, ಅಟಲ್‌ಜೀ ಜನಸಂಘದ ಸಕ್ರಿಯ ನಾಯಕರಾಗಿ ಕೆಲಸ ಮಾಡಲಾರಂಭಿಸಿದರು. ನಂತರ ೧೯೫೭ರಲ್ಲಿ ನಡೆದ ಲೋಕ ಸಭಾ ಚುನಾವಣೆಯಲ್ಲಿ ಲಖನೌ, ಮಥುರಾ ಹಾಗೂ ಬಲರಾಮಪುರದಿಂದ ಸ್ಪರ್ಧಿಸಿದರು. ಮೊದಲ ಎರಡು ಕ್ಷೇತ್ರಗಳಲ್ಲಿ ಸೋತು ಮೂರನೇ ಕ್ಷೇತ್ರದಲ್ಲಿ ಜಯ ಗಳಿಸಿದರು. ಬಲರಾಮಪುರದಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಿ, ನಾಮಪತ್ರ ಸಲ್ಲಿಸಲು ಹೋದಾಗ, ಆ ಊರನ್ನು ಅವರು ಅದಕ್ಕಿಂತ ಮೊದಲು ನೋಡಿರಲಿಲ್ಲ. ಇಡೀ ಕ್ಷೇತ್ರದ ಒಂದು ಊರಿನ ಪರಿಚಯವೂ ಇರಲಿಲ್ಲ. ಜನಸಂಘ ಹಾಗೂ ಆರೆಸ್ಸೆಸ್‌ನ ಮೂರ‍್ನಾಲ್ಕು ಕಾರ್ಯಕರ್ತರ ಹೊರತಾಗಿ ಬೇರೆಯವರ ಸಂಪರ್ಕವೂ ಇರಲಿಲ್ಲ. ಅಟಲ್‌ಜೀ ಹತ್ತಿರ ಹಣವೂ ಇರಲಿಲ್ಲ.

ಜನಸಂಘ ಎಂಬ ಪಕ್ಷವಿದೆ, ಅದರ ಸಿದ್ಧಾಂತ ಇವು.. ಎಂಬುದನ್ನು ಜನರಿಗೆ ಪ್ರಚುರಪಡಿಸುವುದಕ್ಕಾಗಿ ಮಾತ್ರ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. ಎಲ್ಲ ಮೂರು ಕ್ಷೇತ್ರಗಳಲ್ಲಿ ಠೇವಣಿ ಉಳಿಸಿಕೊಳ್ಳುವುದು ಕಷ್ಟ ಎಂಬುದು ಅವರಿಗೆ ಗೊತ್ತಿತ್ತು. ಗೆಲ್ಲುವ ಯಾವ ಲಕ್ಷಣವೂ ಇರಲಿಲ್ಲ. ಬಲರಾಮಪುರಕ್ಕೆ ಮೊದಲ ಬಾರಿಗೆ ಆಗಮಿಸಿದಾಗ, ಅವರನ್ನು ಸ್ವಾಗತಿಸಲು ಐವತ್ತು ಜನರೂ ಇರಲಿಲ್ಲ. ಆದರೂ ಅವರು ಬೇಸರಿಸಿಕೊಳ್ಳಲಿಲ್ಲ. ಬಲರಾಮಪುರದ ಜತೆಗೆ ಇನ್ನಿತರ ಎರಡು (ಲಖನೌ ಹಾಗೂ ಮಥುರಾ) ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರಿಂದ, ವಾಜಪೇಯಿ ಅಲ್ಲಿಗೂ ಹೋಗಬೇಕಾಗುತ್ತಿತ್ತು.

ಹೀಗಾಗಿ ಹೆಚ್ಚಿನ ಸಮಯವನ್ನು ಬಲರಾಮಪುರಕ್ಕೆಂದು ಕೊಡಲು ಆಗುತ್ತಿರಲಿಲ್ಲ. ನಾಮಪತ್ರ ಸಲ್ಲಿಸಿದ ದಿನ ವಾಜಪೇಯಿ ಎರಡು ಭಾಷಣ ಮಾಡಿದರು. ಅವರ ಮಾತುಗಳನ್ನು ಕೇಳಿದ ಅಲ್ಲಿನ ಮತದಾರರು ಮಂತ್ರಮುಗ್ಧರಾದರು. ಈ ಭಾಷಣಗಳು ಕಾಳ್ಗಿಚ್ಚಿನಂತೆ ಕ್ಷೇತ್ರದಲ್ಲಿ ಪ್ರಚಾರವಾದವು. ಅದಾದ ಬಳಿಕ ಬಲರಾಮಪುರದಲ್ಲಿ ಅವರು ಭಾಷಣ ಮಾಡಿದ್ದು ಐದಾರು ಬಾರಿ ಅಷ್ಟೆ. ಆದರೆ ಅಷ್ಟೊತ್ತಿಗೆ ವಾಜಪೇಯಿ ಅವರು ಅದ್ಭುತ ಮಾತುಗಾರರೆಂಬ ಸುದ್ದಿ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ಪಡೆದಿತು.

ವಾಜಪೇಯಿ ಅವರು ಬಲರಾಮಪುರದಲ್ಲಿ ಖರ್ಚು ಮಾಡಿದ್ದು ಹನ್ನೊಂದು ಸಾವಿರ ರುಪಾಯಿ ಮಾತ್ರ! ಅದೂ ಅವರ ಸ್ವಂತ ಹಣವಲ್ಲ. ಎಲ್ಲವನ್ನೂ ಜನಸಂಘದ ಕಾರ್ಯಕರ್ತರು ಸಂಗ್ರಹಿಸಿದ್ದು. ಚುನಾವಣೆ ಮುಗಿದ ನಂತರ ಸಂಗ್ರಹಿಸಿದ್ದರಲ್ಲಿ ಎರಡೂವರೆ ಸಾವಿರ ರುಪಾಯಿ ಉಳಿದಿತ್ತಂತೆ. ವಾಜ ಪೇಯಿ ಲಖನೌ ಹಾಗೂ ಮಥುರಾದಲ್ಲಿ ದಯನೀಯವಾಗಿ ಪರಾಭವಗೊಂಡರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಬಲರಾಮಪುರದಲ್ಲಿ ಗೆದ್ದರು. ಆ ಚುನಾವಣೆಯಲ್ಲಿ ಜನಸಂಘದ ನಾಲ್ವರು ಗೆದ್ದಿದ್ದರು.

ಗುರುತು, ಪರಿಚಯ, ಸಂಪರ್ಕ ಏನೂ ಇಲ್ಲದ ಕ್ಷೇತ್ರದಿಂದ ಅಟಲ್‌ಜೀ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದಿದ್ದರು. ವಿಚಿತ್ರ ಅಂದರೆ ೧೯೬೨ರಲ್ಲಿ ನಡೆದ ಚುನಾ ವಣೆಯಲ್ಲಿ ಅಟಲ್ ಜೀ ಬಲರಾಮಪುರದಿಂದ ಸೋತುಹೋದರು. ಆದರೆ ೧೯೬೭ರಲ್ಲಿ ಪುನಃ ಅಟಲ್‌ಜೀ ಆರಿಸಿ ಬಂದರು. ಈ ಕ್ಷೇತ್ರದಲ್ಲಿ ನಾನಾಜೀ ದೇಶಮುಖ್ ಸಹ (೧೯೭೭ರಲ್ಲಿ) ಜನತಾಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಆಗ ವಾಜಪೇಯಿ ಅವರೇ ಪ್ರಮುಖ ಪ್ರಚಾರ ರೂವಾರಿ!

ನಿಮ್ಮನ್ನು ಗಮನಿಸುವವರು ಇದ್ದಾರೆ!

ಅದೊಂದು ರಾತ್ರಿ ಅಮೆರಿಕದ ಫಿಲಿಡೆಲಿಯಾ ನಗರದಲ್ಲಿ ನಡೆದ ಪುಟ್ಟ ಘಟನೆಯಿದು. ಸುಮಾರು ಅರವತ್ತೈದು-ಎಪ್ಪತ್ತು ವರ್ಷದ ವೃದ್ಧ ತನ್ನ ಹೆಂಡತಿ ಯೊಂದಿಗೆ ಹೋಟೆಲ್‌ಗೆ ಬಂದ. ‘ನಾನು ಈ ರಾತ್ರಿ ಈ ಹೋಟೆಲ್‌ನಲ್ಲಿ ತಂಗಬೇಕೆಂದಿದ್ದೇನೆ, ರೂಮ್ ಇದೆಯಾ?’ ಎಂದು ಕೇಳಿದ. ರಿಸೆಪ್ಷನ್‌ನಲ್ಲಿ ಇದ್ದವ, ‘ಇಲ್ಲ, ಎಲ್ಲ ರೂಮುಗಳು ಭರ್ತಿಯಾಗಿವೆ. ನಗರದಲ್ಲಿ ಮೂರು ಸಮಾವೇಶಗಳು ನಡೆಯುತ್ತಿವೆ. ಯಾವ ಹೋಟೆಲ್‌ಗಳಲ್ಲೂ ರೂಮುಗಳಿರುವ ಸಾಧ್ಯತೆ ಯಿಲ್ಲ’ ಎಂದ.

ಅಷ್ಟೊತ್ತಿಗೆ ಮಧ್ಯರಾತ್ರಿ ಹನ್ನೆರಡೂವರೆ. ಆ ವೃದ್ಧ ದಂಪತಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಅಲ್ಲಿಗೆ ಬರುವ ಮುನ್ನ ಏಳೆಂಟು ಹೋಟೆಲ್‌ ಗಳಿಗೆ ಹೋಗಿಬಂದಿದ್ದರು. ಕೊನೆ ಪ್ರಯತ್ನವಾಗಿ ಆ ಹೋಟೆಲ್‌ಗೆ ಬಂದಿದ್ದರು. ಬೇರೆ ದಾರಿ ಕಾಣದೇ ಆ ದಂಪತಿ ಆ ಹೋಟೆಲ್‌ನಿಂದ ಖಿನ್ನಮನಸ್ಕರಾಗಿ ಹೊರಡುವ ಮುನ್ನ, ರಿಸೆಪ್ಷನ್‌ನಲ್ಲಿ ಇದ್ದವ, ‘ಸರ್, ನೀವು ತಪ್ಪು ಭಾವಿಸುವುದಿಲ್ಲ ಅಂದ್ರೆ ಒಂದು ಮಾತನ್ನು ಹೇಳ್ತೇನೆ. ಈ ನಡುರಾತ್ರಿಯಲ್ಲಿ ನೀವು ಎಲ್ಲಿಗೆ ಹೋಗುತ್ತೀರಾ? ದಯವಿಟ್ಟು ಹೋಟೆಲ್ ಬೇಸ್‌ಮೆಂಟ್‌ನಲ್ಲಿ ನನ್ನ ಪುಟ್ಟ ರೂಮಿದೆ. ಅಲ್ಲಿ ನೀವಿಬ್ಬರೂ ಮಲಗಬಹುದು’ ಎಂದ. ಬೇರೆ ದಾರಿಯಿರಲಿಲ್ಲ. ಆ ದಂಪತಿ ಅವನ ಕೋಣೆಯಲ್ಲೇ ಮಲಗಿದರು.

ಮರುದಿನ ಆ ಹೋಟೆಲ್‌ನಿಂದ ಹೊರಡುವ ಮುನ್ನ, ಆ ವೃದ್ಧ ಹೇಳಿದ- ‘ನನ್ನ ಜೀವನದಲ್ಲಿ ನಾನು ಅವೆಷ್ಟೋ ಹೋಟೆಲ್‌ಗಳಿಗೆ ಹೋಗಿದ್ದೇನೆ. ಆದರೆ ಯಾರೂ ನಿನ್ನ ಹಾಗೆ ಅತಿಥಿ ಸತ್ಕಾರ ಮಾಡಿದ್ದನ್ನು ನೋಡಿಲ್ಲ. ನನ್ನ ಹೋಟೆಲ್‌ಗೆ ನಿನ್ನಂಥ ಮ್ಯಾನೇಜರ್ ನೇ ಬೇಕು. ನೋಡೋಣ, ಮುಂದೊಂದು ದಿನ ನಾನೇನಾದರೂ ಪಂಚತಾರಾ ಹೋಟೆಲ್ ಅನ್ನು ಕಟ್ಟಿದರೆ, ನಿನ್ನನ್ನೇ ಮ್ಯಾನೇಜರ್ ನನ್ನಾಗಿ ನೇಮಿಸುತ್ತೇನೆ’.

ರಿಸೆಪ್ಷನ್‌ನಲ್ಲಿದ್ದ ವ್ಯಕ್ತಿ ವೃದ್ಧ ದಂಪತಿಯನ್ನು ಪಾದದಿಂದ ನೆತ್ತಿಯವರೆಗೊಮ್ಮೆ ನೋಡಿ ಸುಮ್ಮನೆ ನಕ್ಕ. ಈ ಘಟನೆ ನಡೆದು ಎರಡು-ಮೂರು ವರ್ಷ ಗಳಾಗಿರಬಹುದು. ರಿಸೆಪ್ಷನ್‌ನಲ್ಲಿದ್ದ ವ್ಯಕ್ತಿ ಇದನ್ನು ಸಂಪೂರ್ಣ ಮರೆತುಬಿಟ್ಟಿದ್ದ. ಒಂದು ದಿನ ಅವನಿಗೊಂದು ಪತ್ರ ಬಂತು. ಅದು ಆ ವೃದ್ಧ ಬರೆದುದಾಗಿತ್ತು. ನಡುರಾತ್ರಿ ನಡೆದ ಘಟನೆಯನ್ನು ಪ್ರಸ್ತಾಪಿಸಿದ್ದ. ಜತೆಯಲ್ಲಿ ನ್ಯೂಯಾರ್ಕ್‌ಗೆ ರೌಂಡ್‌ಟ್ರಿಪ್ ವಿಮಾನ ಟಿಕೆಟ್ ಅನ್ನು ಇರಿಸಿದ್ದ.
ನ್ಯೂಯಾರ್ಕಿಗೊಮ್ಮೆ ಬರುವಂತೆ ವಿನಂತಿಸಿಕೊಂಡಿದ್ದ. ವೃದ್ಧನ ಕೋರಿಕೆಯಂತೆ ಈತ ನ್ಯೂಯಾರ್ಕ್‌ಗೆ ಹೋದ.

ಅಲ್ಲಿನ ೩೪ನೇ ಸ್ಟ್ರೀಟ್‌ನಲ್ಲಿರುವ ಫಿ- ಅವೆನ್ಯೂನ ಒಂದು ಮೂಲೆಯಲ್ಲಿ ವಿಸ್ತರಿಸಿಕೊಂಡ ಹೊಸ, ಭವ್ಯ ಪಂಚತಾರಾ ಹೋಟೆಲ್‌ನತ್ತ ಅವನನ್ನು ವೃದ್ಧ ಕರೆದುಕೊಂಡ ಹೋದ. ‘ಇದು ನಾನು ಕಟ್ಟಿಸಿರುವ ಹೋಟೆಲ್. ಈ ಹೋಟೆಲ್‌ನ ಮ್ಯಾನೇಜರ್ ನೀನೇ ಆಗಬೇಕೆಂಬ ಕಾರಣಕ್ಕೆ ಇದನ್ನು ನಿರ್ಮಿಸಿದ್ದೇನೆ’ ಎಂದ ಆ ವೃದ್ಧ. ಈತನಿಗೆ ನಂಬಲು ಸಾಧ್ಯವಾಗಲೇ ಇಲ್ಲ. ಅದು ನಿಜವೆಂದು ಅರಿವಾಗುವ ಹೊತ್ತಿಗೆ ಬಹಳ ಸಮಯ ಹಿಡಿದಿತ್ತು. ಆ ಹೋಟೆಲ್ ಅನ್ನು ನಿರ್ಮಿಸಿದ ಆ ವೃದ್ಧನ ಹೆಸರು ವಿಲಿಯಮ್ ವಾಲ್ಡಾ- ಎಸ್ಟೋರ್. ಹೋಟೆಲ್ ಹೆಸರು ವಾಲ್ಡಾ- ಎಸ್ಟೋರಿಯ ಹಾಗೂ ಆ ಹೋಟೆಲ್‌ನ ಮ್ಯಾನೇಜರ್ ಹೆಸರು ಜಾರ್ಜ್ ಸಿ.ಬೋಲ್ಟ್. ನಮ್ಮ ನಡತೆ, ಹಾವಭಾವ, ಮಾತುಗಳನ್ನು ಒಬ್ಬರಲ್ಲ ಒಬ್ಬರು ಗಮನಿಸುತ್ತಲೇ ಇರುತ್ತಾರೆಂಬುದಕ್ಕೆ ಇದೇ ನಿದರ್ಶನ.

ಅರ್ಥವಾಗದ ಸಂಗತಿಗಳು
ಇತ್ತೀಚೆಗೆ ಸ್ಕೂಲ್‌ನಲ್ಲಿ ಟೀಚರ್ ‘ನನಗೆ ಅರ್ಥವಾಗದ ಸಂಗತಿಗಳು’ ಎಂಬ ವಿಷಯದ ಮೇಲೆ ಕಿರು ಪ್ರಬಂಧ ಬರೆಯಲು ಹೇಳಿದರಂತೆ. ಹತ್ತು ವರ್ಷದ ಬಾಲಕಿಯೊಬ್ಬಳು ಬರೆದ ಕಿರು ಪ್ರಬಂಧ ಹೀಗಿದೆ: ‘ಟೀಚರ್, ನೀವು ನಮಗೆ ಹೇಳಿಕೊಟ್ಟಿದ್ದೀರಿ, ಬೇರೆಯವರನ್ನು ನೋಯಿಸಬಾರದೆಂದು. ಆದರೆ ಈ ಮಾತು ಪ್ರಾಣಿಗಳಿಗೇಕೆ ಅನ್ವಯಿಸುವುದಿಲ್ಲ? ಮನುಷ್ಯನೇಕೆ ಪ್ರಾಣಿಗಳಿಗೆ ಹಿಂಸೆ ಕೊಡುತ್ತಾನೆ?’. ‘ಟೀಚರ್, ನೀವು ಹೇಳಿಕೊಟ್ಟಿದ್ದೀರಿ ಮರ್ಡರ್ ಮಾಡು
ವುದು ಪಾಪ ಎಂದು, ಆದರೆ ಆ ನಿಯಮ ಮನುಷ್ಯರಿಗೆ ಮಾತ್ರ ಅನ್ವಯಿಸುವುದಿಲ್ಲ, ಏಕೆ?’. ‘ಟೀಚರ್, ನೀವು ಹೇಳಿಕೊಟ್ಟಿದ್ದೀರಿ ಸೀರಿಯಲ್ ಕಿಲ್ಲರ‍್ಸ್ ಇದ್ದಾರಲ್ಲ, ಅವರು ಕೆಟ್ಟವರು ಎಂದು. ಆದರೆ ಪ್ರಾಣಿಗಳನ್ನೇಕೆ ಅದೇ ರೀತಿ ಬೇಟೆಯಾಡಿ (ಏಠಿಜ್ಞಿಜ) ಕೊಲ್ಲುತ್ತಾರೆ?’. ‘ಟೀಚರ್, ನೀವು ಹೇಳಿಕೊಟ್ಟಿದ್ದೀರಿ ಮನುಷ್ಯ ರನ್ನು ಜೈಲಿನಲ್ಲಿ ಇಟ್ಟರೆ ಅದು ಶಿಕ್ಷೆ ಅಂತ. ಆದರೆ ಮೈಸೂರಿನ ಮೃಗಾಲಯ (ಟಟ)ದಲ್ಲಿ ಪ್ರಾಣಿಗಳನ್ನಿಟ್ಟು ಮನುಷ್ಯನೇಕೆ ಆನಂದಿಸು ವುದು?’ ನನಗೆ ಅರ್ಥವಾಗದ ಸಂಗತಿಗಳೆಂದರೆ ಇವು.

ದೀರ್ಘಾವಧಿ ರಾಜ್ಯಪಾಲರು
ಟಿ-೨೦ ಫೈನಲ್ ಪಂದ್ಯದಲ್ಲಿ ಅಂಪೈರ್ ಆಗುವುದು ಹಾಗೂ ರಾಜ್ಯಪಾಲರಾಗುವುದು ಎರಡೂ ಒಂದೇ. ಜನರಿಂದ ಬೈಯಿಸಿಕೊಳ್ಳದೇ ಡ್ಯೂಟಿ ಮಾಡಲು ಆಗುವುದಿಲ್ಲ. ಅದರಲ್ಲೂ ರಾಜ್ಯಪಾಲರ ಹುದ್ದೆಯಿದೆಯಲ್ಲ, ಅಲ್ಲಿ ಯಾರೇ ಬಂದರೂ ವಿವಾದವಿಲ್ಲದೇ ಹೋಗುವುದಿಲ್ಲ. ರಾಜ್ಯಪಾಲರು ಸಂವಿಧಾನ
ಬಿಟ್ಟು ಬೇರೆ ಯಾರಿಗೂ ಉತ್ತರದಾಯಿಗಳಲ್ಲ. ರಾಜಭವನವೇ ಅವರ ಆಡುಂಬೊಲ. ವಿಶಾಲ ಅರ್ಥದಲ್ಲಿ, ಎಷ್ಟೇ ಆದರೂ ಅವರು ಕೇಂದ್ರ ಸರಕಾರದ ಏಜೆಂಟ್.

ರಾಜ್ಯಪಾಲರಾದವರು ಐದು ವರ್ಷಗಳ ಒಂದು ಅವಧಿ ಮುಗಿಸುವುದೆಂದರೆ ದೊಡ್ಡ ಮಾತೇ. ಯಾರನ್ನೂ ಎರಡನೇ ಅವಧಿಗೆ ಮುಂದುವರಿಸುವುದು ವಿರಳಾತಿವಿರಳ. ಪಂಜಾಬಿನ ಮುಖ್ಯಮಂತ್ರಿಯಾಗಿದ್ದ ಸುರ್ಜಿತ್ ಸಿಂಗ್ ಬರ್ನಾಲ ಅವರು ನಂತರ ಉತ್ತರಖಂಡ, ಆಂಧ್ರಪ್ರದೇಶ, ತಮಿಳುನಾಡಿನ ರಾಜ್ಯ
ಪಾಲರಾಗಿದ್ದರು. ಮೂರು ಸಲ ತಮಿಳುನಾಡಿನ ರಾಜ್ಯಪಾಲ ರಾಗಿದ್ದ ಅಗ್ಗಳಿಕೆ ಅವರದು. ಅಖ್ಲಕರ್ ರೆಹಮಾನ್ ಕಿದ್ವಾಯಿ ೧೯೭೯ರಿಂದ ೨೦೦೯ರವರೆಗೆ ಒಂದಿಲ್ಲೊಂದು ರಾಜ್ಯದ ರಾಜ್ಯಪಾಲರಾಗಿದ್ದರು. ರಾಜ್ಯಪಾಲರಾಗಿಲ್ಲದ ಅವಽಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಬಿಹಾರ, ಪಶ್ಚಿಮ ಬಂಗಾಳ,  ರಾಜಸ್ಥಾನ, ಹರಿಯಾಣ ರಾಜ್ಯಪಾಲರಾಗಿದ್ದರು.

Leave a Reply

Your email address will not be published. Required fields are marked *

error: Content is protected !!