Sunday, 8th September 2024

ಅಮೆರಿಕಾದಲ್ಲಿ ಮೋದಿಗೆ ಕೊಟ್ಟ ಭವ್ಯ ಸ್ವಾಗತದ ಮೆಲುಕು !

ನೆನಪು
ಬೆಂಕಿ ಬಸಣ್ಣ, ನ್ಯೂಯಾರ್ಕ್

ಅಂದು ಸಪ್ಟೆೆಂಬರ್ 28, 2014. ಭಾನುವಾರ ಮುಂಜಾನೆ 4ರ ಸಮಯ. ಅಷ್ಟು ಮುಂಜಾನೆ ಆರು ವರ್ಷದ ಮಗಳು ಜೀವಿಕಾ, ಹತ್ತು ವರ್ಷದ ಮಗ ಅವನೀಶ್, ನನ್ನ ಹೆಂಡತಿ ಮತ್ತು ನಾನು ಎದ್ದು, ಎಲ್ಲರೂ ಬೇಗ ಬೇಗನೆ ರೆಡಿಯಾಗಿ ಬೆಳಿಗ್ಗೆೆ 5.30 ಅನ್ನು ವಷ್ಟರಲ್ಲಿ ಲ್ಯಾಥಮ್ ಸರ್ಕಲ್‌ನ ಪಾರ್ಕಿಂಗ್ ಲಾಟ್‌ಗೆ ಬಂದೆವು.

ಮುಂದಿನ ಅರ್ಧ ಗಂಟೆಯಲ್ಲಿ ಜನರು ಒಬ್ಬೊಬ್ಬರಾಗಿ ಬಂದು ಬಸ್ಸಿನ ತುಂಬಾ ಆರು ವರ್ಷದಿಂದ ಹಿಡಿದು ಎಂಬತ್ತು ವರ್ಷ ದವರೆಗಿನ ಭಾರತೀಯರು ತುಂಬಿದರು. ಸರಿಯಾಗಿ 6 ಗಂಟೆಗೆ ನಾವೇ ಆಯೋಜಿಸಿದ್ದ ಚಾರ್ಟರ್ ಬಸ್ಸು ಅಲ್ಬನಿಯಿಂದ
ಮೂರು ತಾಸು ದೂರ ಇರುವ ನ್ಯೂಯಾರ್ಕ್ ಸಿಟಿಗೆ ಪ್ರಯಾಣ ಪ್ರಾರಂಭಿಸಿತು.

*ನಾವೆಲ್ಲ ಹೊರಟಿದ್ದೆಲ್ಲಿಗೆ ಗೊತ್ತೇ?
ಗುಜರಾತಿ ಮುಖ್ಯಮಂತ್ರಿಯಾಗಿದ್ದಾಗ ವೀಸಾ ಕೊಡಲು ನಿರಾಕರಿಸಿದ ಅಮೆರಿಕ ದೇಶವು, ಅದೇ ವ್ಯಕ್ತಿಗೆ ಅಮೆರಿಕದ ಇತಿಹಾಸ ದಲ್ಲಿ ಹಿಂದೆಂದೂ ಕಂಡರಿಯದಂಥ ಭಾರಿ ಸ್ವಾಗತವನ್ನು ಹೊರದೇಶದ ನಾಯಕನೊಬ್ಬನಿಗೆ ಕೊಡಲು ಸಿದ್ಧವಾಗಿತ್ತು. ಹೌದು. ಭಾರತದ ಪ್ರಧಾನಿ ಮೋದಿಯವರ 70ನೇ ವರ್ಷದ ಹುಟ್ಟುಹಬ್ಬದ ಶುಭ ದಿನದಲ್ಲಿ, ನನ್ನ ಮನಸ್ಸು ಸರಿಯಾಗಿ ಆರು ವರ್ಷಗಳ ಹಿಂದೆ ಓಡಿಹೋಯಿತು. ಅಂದು ನಡೆದ ಘಟನೆಗಳ ಪ್ರತಿಕ್ಷಣಗಳು ಇಂದು ನೆನಪಾಗಿ ನನ್ನ ಮೈ ರೋಮಾಂಚನಗೊಂಡಿತು. ಸುಮಾರು 127 ವರ್ಷಗಳ (1893) ಹಿಂದೆ ಒಬ್ಬ ನರೇಂದ್ರ ( ಸ್ವಾಮಿ ವಿವೇಕಾನಂದ) ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮಗಳ ಸಮ್ಮೇಳನದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದರು. ಈಗ ಇನ್ನೊಬ್ಬ ನರೇಂದ್ರ ವಿಶ್ವ ನಾಯಕನಾಗಿ ಅಮೆರಿಕದ ನೆಲದಲ್ಲಿ ಮತ್ತೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದರು.

ನ್ಯೂಯಾರ್ಕ್ ಸಿಟಿಯ ಹೃದಯ ಭಾಗದಲ್ಲಿರುವ ಮ್ಯಾನ್ ಹಟ್ಟನ್‌ನಲ್ಲಿರುವ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಸ್ಟೇಡಿಯಂನಲ್ಲಿ
ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಸುಮಾರು 20 ಸಾವಿರ ಜನರು ನೆರೆದಿದ್ದರು. ಮೋದಿಯವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ವಂತ 282 ಸೀಟು ಗಳೊಂದಿಗೆ ಭರ್ಜರಿಯಾಗಿ ಗೆಲ್ಲಿಸಿ ಯಾವುದೇ ಪಕ್ಷಗಳ ಬೆಂಬಲದ ಅವಶ್ಯಕತೆಯಿಲ್ಲದೆಯೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾ ದರು. ಇದು ವಿಶ್ವದಾದ್ಯಂತ ಇರುವ ಅನಿವಾಸಿ ಭಾರತೀಯರಲ್ಲಿ ರೋಮಾಂಚನ ಸೃಷ್ಟಿಸಿತು.

ಅಮೆರಿಕದಲ್ಲಿರುವ ಸುಮಾರು 400 ಭಾರತೀಯ ಸಂಘಗಳು ಕೈಜೋಡಿಸಿ ಮೂರು ವಾರಗಳಲ್ಲಿಯೇ ಭಾರಿ ಸ್ವಾಗತ ಸಮಾರಂಭ ವನ್ನು ಮೋದಿಯವರಿಗೆ ಆಯೋಜಿಸಿದ್ದವು. ನಮ್ಮ ಸ್ಥಳೀಯ ಟ್ರೈಸೈಟಿ ಇಂಡಿಯಾ ಅಸೋಸಿಯೇಷನ್‌ಗೆ ಸೆಕ್ರೆಟರಿಯಾಗಿ ಸೇವೆ ಸಲ್ಲಿಸುತ್ತಿದ್ದ ನನಗೆ ಒಂದು ಬಸ್ಸಿನಷ್ಟು ಜನರನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಬಿದ್ದಿತು. ನಮ್ಮ ಊರಿನಿಂದ ಎರಡು ನೂರು ಜನರು ಪ್ರವೇಕ್ಕಾಗಿ ಆಸಕ್ತಿ ತೋರಿಸಿದ್ದರು. ಆದರೆ ನಮಗೆ ಸಿಕ್ಕಿದ್ದು ಐವತ್ತು ಟಿಕೆಟ್‌ಗಳು ಮಾತ್ರ. ಕಾರಣ 20,000 ಆಸನಗಳು ಇರುವ ಸ್ಟೇಡಿಯಂಗೆ ಸುಮಾರು 60,000 ಜನರು ಪ್ರವೇಶ ಕೋರಿ ಅರ್ಜಿ ಹಾಕಿದ್ದರು. ಸ್ಟೇಡಿಯಂ ಒಳಗೆ ಬರುವ ಪ್ರತಿಯೊಬ್ಬರಿಗೂ ಮೋದಿಯವರ ಭಾವಚಿತ್ರವಿರುವ, ಜತೆಗೆ PROGRESS, ModiinAmerica  ಅಕ್ಷರಗಳು ಇರುವ ಟೀ ಶರ್ಟ್‌ಗಳನ್ನು ಉಚಿತವಾಗಿ ಕೊಡಲಾಯಿತು.

ಈ ಮಹಾ ಸ್ವಾಗತ ಸಭೆಯ ನಿರೂಪಕರಾಗಿ, ಭಾರತೀಯ ಮೂಲದ ಮೊಟ್ಟಮೊದಲ ಮಿಸ್ ಅಮೆರಿಕಾ – 2014 ಆಗಿದ್ದ ನೀನಾ ದಾವುಲೂರಿ ಮತ್ತು ಜನಪ್ರಿಯ ಹರಿ ಶ್ರೀನಿವಾಸನ್ ಒಳ್ಳೆಯ ಕೆಲಸ ಮಾಡಿದರು. ಈ ಸಮಾರಂಭದಲ್ಲಿ ಭಾರತೀಯ ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ಹಾಗೂ ಅಮೆರಿಕದ ಮೂವತ್ತಕ್ಕೂ ಹೆಚ್ಚು ಸೆನೆಟರ್‌ಗಳು, ಮೇಯರ್ಸ್, ಗವರ್ನರ್ ಮುಂತಾದ ಗಣ್ಯ
ವ್ಯಕ್ತಿಗಳು ಭಾಗವಹಿಸಿದ್ದರು. ಮೋದಿ ಭಾಷಣ ಹೇಗಿತ್ತು? ದಸರಾ ಪ್ರಯುಕ್ತ ಒಂಬತ್ತು ದಿವಸಗಳ ಉಪವಾಸ ಮಾಡುತ್ತಿದ್ದ
ಮೋದಿಜಿ ನಿರರ್ಗಳವಾಗಿ ಒಂದು ಗಂಟೆಗೂ ಹೆಚ್ಚು ಹೊತ್ತು ಭಾಷಣ ಮಾಡಿದರು. ಅಮೋಘ ಭಾಷಣ ಮಾಡಿದ ಪ್ರಧಾನಿ ಮೋದಿ, ಅನಿವಾಸಿ ಭಾರತೀಯರ ಪ್ರೀತಿಯನ್ನು ನಾನೆಂದೂ ಮರೆಯುವುದಿಲ್ಲ.

ಇಷ್ಟೊಂದು ಪ್ರೀತಿಯನ್ನು ಯಾವ ಭಾರತೀಯ ನಾಯಕನಿಗೂ ನೀಡಿಲ್ಲ. ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ನಿಮ್ಮ ಕನಸುಗಳ ಭಾರತವನ್ನು ಕಟ್ಟಲು ನಾನು ಹಗಲಿರುಳು ಶ್ರಮಿಸಿ ಈ ಸಾಲವನ್ನು ಮರು ಪಾವತಿಸುತ್ತೇನೆ. ಇನ್ನು ಮುಂದೆ ಭಾರತದಲ್ಲಿ ಹೂಡಿಕೆ ಮಾಡಲು ಕೈಗಾರಿಕೆ ತೆರೆಯಲು ರೆಡ್ -ಟೇಪ್ ಇರುವುದಿಲ್ಲ. ಏನಿದ್ದರೂ ಬರೀ ರೆಡ್ – ಕಾರ್ಪೆಟ್ ಸ್ವಾಗತ. ಭಾರತದಲ್ಲಿ ಕ್ಯಾನ್ಸರಿನಂತೆ ಹರಡಿರುವ ಭ್ರಷ್ಟಾಚಾರವನ್ನು ಕಿತ್ತುಹಾಕಲು ದೃಢಸಂಕಲ್ಪ ಮಾಡಿರುವುದಾಗಿ ಹೇಳಿದರು. ನಮ್ಮ ಭಾರತದ ಜೀವ ನದಿಯಾದ ಗಂಗಾ ನದಿಯನ್ನು ಸ್ವಚ್ಛಗೊಳಿಸುವ, ಶುದ್ಧಗೊಳಿಸುವ, ಮಹಾನ್ ಯೋಜನೆಯನ್ನು ಹಂಚಿಕೊಂಡರು. ಭಾಷಣದ ಕೊನೆಯಲ್ಲಿ ಮೋದಿಯವರ ಜತೆಗೂಡಿ 20 ಸಾವಿರ ಜನರು ಒಟ್ಟಾಗಿ ಕೂಗಿದ ಭಾರತ್ ಮಾತಾ ಕಿ ಜೈ ಘೋಷಣೆ ಆಕಾಶವನ್ನು ಮುಟ್ಟುವಷ್ಟು ಜೋರಾಗಿತ್ತು.

*ರಾಜದೀಪ್ ಸರ್ದೇಸಾಯಿಗೆ ಕಪಾಳಮೋಕ್ಷ: ಸ್ಟೇಡಿಯಂ ಹೊರಗಡೆ ಭಾರತದ ಹತ್ತಾರು ನ್ಯಾಷನಲ್ ಟಿವಿ ಚಾನಲ್‌ಗಳು ಜನರನ್ನು ಸಂದರ್ಶನ ಮಾಡುತ್ತಿದ್ದರು. ಇಂತಹ ಸಂಭ್ರಮದಲ್ಲಿ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಮೋದಿ ವಿರುದ್ಧ ಆರೋಪ ಮಾಡುತ್ತಾ, ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿದಾಗ ಜನರು ಕೋಪಗೊಂಡು ಸಿಡಿದೆದ್ದರು.

ನಿಮ್ಮ ಹತ್ತಿರ ದುಡ್ಡು ಇದೆ, ಕ್ಲಾಸ್ ಇಲ್ಲ ಎಂದು ಹೇಳುತ್ತಾ ರಾಜದೀಪ್ ಸರ್ದೇಸಾಯಿ ಜನರ ಮೇಲೆ ಹರಿಹಾಯ್ದು ಬಂದಾಗ, ಮಹೇಂದ್ರ ರೆಡ್ಡಿ ಎಂಬ ವ್ಯಕ್ತಿಯು ರಾಜದೀಪ್‌ಗೆ ಜೋರಾಗಿ ಕಪಾಳ ಮೋಕ್ಷ ಮಾಡಿ ಸರಿಯಾದ ಪಾಠ ಕಲಿಸಿದನು. ಈ ಘಟನೆ ಕೆಲ
ವಾರಗಳ ಸಮಯ ದೊಡ್ಡ ವಿವಾದವನ್ನೇ ಹುಟ್ಟಿಹಾಕಿತ್ತು.

*OFBJPಗೆ ನಕಾರ: ಮೋದಿ ಸ್ವಾಗತ ಸಮಾರಂಭವನ್ನು ಇಂಡಿಯನ್ ಅಮೇರಿಕನ್ ಕಮ್ಯೂನಿಟಿ ಫೌಂಡೇಶನ್ ಮತ್ತು OFBJP (Overseas Friends of BJP) ಒಟ್ಟಿಗೆ ಸೇರಿ ಆಯೋಜಿಸಿದ್ದವು. ಈ ಸಮ್ಮೇಳನ ಮುಗಿದ ನಂತರ OFBJP  ಪ್ರಮುಖ ಮುಖಂಡರು ನನ್ನನ್ನು ಸಂಪರ್ಕಿಸಿ ನಮ್ಮ ಊರು ಆಲ್ಬನಿಯಲ್ಲಿ OFBJP ಚಾಪ್ಟರ್ (ಬ್ರಾಂಚ್ ) ಪ್ರಾರಂಭಿಸಲು ಮತ್ತು ಅದರಲ್ಲಿ ನಾನು ಫೌಂಡಿಂಗ್ -ಮೆಂಬರ್ ಆಗಲು ವಿನಂತಿಸಿಕೊಂಡರು.

ನಾನು ಅವರ ಆಹ್ವಾನವನ್ನು ನಮ್ರತೆಯಿಂದ ತಿರಸ್ಕರಿಸಿ, ನನ್ನ ಸೇವೆ ಏನಿದ್ದರೂ ಭಾರತ ದೇಶಕ್ಕೆ, ಬಿಜೆಪಿ ಪಕ್ಷಕ್ಕೆ ಅಲ್ಲ ಎಂದು
ಹೇಳಿದನು. ಇದು ನಡೆದು 6 ವರ್ಷವಾದರೂ ನಮ್ಮೂರಿನಲ್ಲಿ ಇಂದಿಗೂ ಸಹ OFBJP ಬ್ರಾಂಚ್ ಆರಂಭವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!