Saturday, 27th July 2024

ಸರಕಾರಿ ಶಾಲೆಗಳ ಕಡೆಗಣನೆಗೆ ಕಾರಣವಾದರೂ ಏನು ?

ಚರ್ಚಾಕೂಟ

ಸುರೇಂದ್ರ ಪೈ

ಅಮೆರಿಕದಂತಹ ದೇಶಗಳಲ್ಲಿ ಶೇ.೯೦ರಷ್ಟು ಸರ ಕಾರಿ ಶಾಲೆಗಳು ಹಾಗೂ ಕೇವಲ ಶೇ.೧೦ರಷ್ಟು ಖಾಸಗಿ ಶಾಲೆಗಳಿವೆ. ಅಲ್ಲಿನ ನಾಗರಿಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ತಮ್ಮ ವಾಸಸ್ಥಾನದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಬೇಕೆಂಬ ನಿಯಮವಿದೆ.

ಪ್ರತಿ ಬಾರಿ ಚುನಾವಣೆ ಸಮಯದಲ್ಲಿ ಮತದಾನ ಮಾಡಲು ನಮ್ಮೆಲ್ಲರಿಗೂ ಸಹ ವಿದ್ಯಾ ನೀಡಿ, ಭವಿಷ್ಯ ರೂಪಿಸಿ ನಮ್ಮನ್ನು ಈ ದೇಶದ ಜವಬ್ದಾರಿಯುತ ಪ್ರಜೆಯನ್ನಾಗಿ ರೂಪುಗೊಳಿಸಿದ ಸರಕಾರಿ ಶಾಲೆಗೆ ಭೇಟಿ ನೀಡುತ್ತೇವೆ. ಈ ಬಾರಿ ಮತ್ತೊಮ್ಮೆ ಆ ಸುಯೋಗ ನಮ್ಮ ಪಾಲಿಗೆ ಒದಗಿ ಬಂದಿತು. ನಾವು ಕಲಿತ ಸರಕಾರಿ ಶಾಲೆ ಎಂದರೆ ಅದೇನೋ ಸಂತಸ. ಬಾಲ್ಯದ ತುಂಟಾಟಗಳು, ಅಂದಿನ ಶಿಕ್ಷಣ ವ್ಯವಸ್ಥೆ, ಶಿಕ್ಷಕರ ಮಾರ್ಗದರ್ಶನ, ಶಿಸ್ತು ಹೀಗೆ ಎಲ್ಲವೂ ನೆನಪಾಗ ತೊಡಗುತ್ತದೆ. ಆ ನೆನಪುಗಳನ್ನು ಮೆಲುಕು ಹಾಕುವಾಗ ಒಮ್ಮೆ ಇಂದಿನ ಸರಕಾರಿ ಶಾಲೆಗಳ ಚಿತ್ರಣವು ಕಣ್ಮುಂದೆ ಹಾದುಹೋಗುತ್ತದೆ.

ಬಹಳ ಹಿಂದೆ ಸರಕಾರಿ ಶಾಲೆಗೆ ಹೋಗಬೇಕೆಂದರೆ ದಿನನಿತ್ಯ ಹತ್ತಾರು ಕಿಲೋಮೀಟರ ನಡೆದು ಹೋಗುತ್ತಿದ್ದರು. ಈಗ ಪ್ರತಿ ಕಿ.ಲೋ ಮೀಟರ್‌ಗೆ ಒಂದು ಸರಕಾರಿ ಪ್ರಾಥಮಿಕ ಅಥವಾ ಹಿರಿಯ ಪ್ರಾಥಮಿಕ ಶಾಲೆಯಿದೆ. ಆದರೆ ಇಂದು ಭಾರತದಲ್ಲಿ ಸರಕಾರಿ ಸವಲತ್ತು ಬೇಕು ಎನ್ನುವವರು ಸರಕಾರಿ ಶಾಲೆ
ಎಂದರೆ ಮೂಗು ಮುರಿಯುತ್ತಾರೆ. ಸರಕಾರಿ ಶಾಲೆ ಎಂದರೆ ತಾತ್ಸಾರ ಮನೋಭಾವ ಎಲ್ಲರಲ್ಲಿಯೂ ಮನೆಮಾಡಿದೆ. ಹೆಚ್ಚು ಹೆಚ್ಚು ಡೊನೇಷನ್ ಕೊಟ್ಟು
ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಹೆಚ್ಚು ಜ್ಞಾನ ಸಂಪಾದಿಸಲು ಸಾಧ್ಯ ಎಂಬ ಪೂರ್ವಾಗ್ರಹಕ್ಕೆ ಪಾಲಕರು ಒಳಗಾಗಿದ್ದಾರೆ.

ಇದರಲ್ಲಿ ಎಲ್ಲವೂ ಪಾಲಕರ ತಪ್ಪು ಎಂದು ಹೇಳಲಾಗದು. ಏಕೆಂದರೆ ಪ್ರತಿಯೊಬ್ಬ ಪಾಲಕರಿಗೂ ತಮ್ಮ ಮಕ್ಕಳ ಭವಿಷ್ಯದ ಕುರಿತಾಗಿ ಇಂದಿನ ಸ್ಪರ್ಧಾ ತ್ಮಕ ಯುಗಕ್ಕೆ ತಕ್ಕಂತೆ ಶಿಕ್ಷಣ ನೀಡಬೇಕೆಂಬ ತುಡಿತ ಇದ್ದೇ ಇರುತ್ತದೆ. ಕಳೆದ ಕೆಲ ವರ್ಷಗಳಿಂದ ಸರಕಾರಿ ಶಾಲೆಗಳು ತಮ್ಮ ವೈಭವವನ್ನು ಕಳೆದು ಕೊಂಡು, ಅವುಗಳ ಬದಲಿಗೆ ಖಾಸಗಿ ಶಾಲೆಗಳು ವಿಜೃಂಭಿಸಲು ಪ್ರಾರಂಭಿಸಿದವು. ನೋಡ ನೋಡುತ್ತಲೇ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಅಣಬೆಯಂತೆ ಹುಟ್ಟುತ್ತಾ, ಇಂದು ಬ್ರಹೃತ ವೃಕ್ಷದಂತೆ ಎದ್ದು ನಿಂತಿದೆ. ಇದಕ್ಕೆ ಯಾರು ಕಾರಣ? ಏಕೆ ಸರ್ಕಾರಿ ಶಾಲೆಗಳು ತಮ್ಮ ಅಸ್ತಿತ್ವ ಕಳೆದುಕೊಂಡಿತು? ಎಂಬ ಪ್ರಶ್ನೆಗೆ ಸರಳ ಉತ್ತರ ನಾವು-ನಮ್ಮ ಯೋಚನೆ.

ಪ್ರತಿಬಾರಿ ಚುನಾವಣೆ ಬಂದಾಗಲು ಸಹ ನಾವು ನಮ್ಮ ಮಕ್ಕಳ ಭವಿಷ್ಯಕ್ಕೆ ಯಾವುದು ಅವಶಕ್ಯವೋ ಅದನ್ನು ಕೇಳದೆ, ಪ್ರಶ್ನಿಸದೆ, ಧರ್ಮ, ಜಾತಿ, ಮತ,
ವಿವಿಧ ಆಸೆ ಆಮಿಷಗಳಿಗೆ ಬಲಿಯಾಗಿ ನಮ್ಮ ತನ(ಮತ)ವನ್ನು ಮಾರಿಕೊಳ್ಳುತ್ತಿದ್ದೇವೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಏನು ಪ್ರಣಾಳಿಕೆ ಸಿದ್ಧಪಡಿಸಿದ್ದಿರಾ? ಎಂದು ಯಾರೊಬ್ಬರೂ ಸಹ ಕೇಳುವ ಸಾಹಸ ಮಾಡುವುದಿಲ್ಲ. ಈ ಹಂತದಲ್ಲಿಯೇ ನಾವು ಎಡವುತ್ತೇವೆ. ದೇಶದ ಅಭಿವೃದ್ಧಿಗೆ ಶಿಕ್ಷಣ,
ಆರೋಗ್ಯದಂತಹ ಮೂಲಭೂತ ಅಂಶಗಳಿಗೆ ಹೆಚ್ಚಿನ ಗಮನ ನೀಡಬೇಕು, ಆದರೆ ನಾವು ಅವುಗಳಿಗೆ ಕೊನೆಯಲ್ಲಿ ಆದ್ಯತೆ ನೀಡುತ್ತೇವೆ.

೨೦೧೮ರಲ್ಲಿ ವಿಧಾನಸಭಾ ಚುನಾವಣೆ ವೇಳೆ ಸರಕಾರಿ ಶಾಲೆಗಳ ಉಳಿವಿಗಾಗಿ ರಾಜಕೀಯ ಪಕ್ಷಗಳ ಗಮನ ಸೆಳೆಯಲು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ
ಮತ್ತು ಮೇಲುಸ್ತುವಾರಿ ಸಮಿತಿಗಳ(ಎಸ್‌ಡಿಎಂಸಿ) ಸಮನ್ವಯ ವೇದಿಕೆ ನಮ್ಮ ವೋಟು ಸಮಾನ ಶಾಲಾ ಶಿಕ್ಷಣಕ್ಕೆ’, ನಮ್ಮ ಓಟು- ನಮ್ಮ ನಿರ್ಧಾರ’ ಎಂಬ ಚುನಾವಣಾ ಆಂದೋಲನ ಆರಂಭಿಸಿತ್ತು. ರಾಜ್ಯದಲ್ಲಿರುವ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ ನೆರೆಹೊರೆಯ ಸಮಾನ ಶಾಲೆಗಳನ್ನಾಗಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಸರಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಜಾರಿಗೊಳಿಸುವಿಕೆ ಮತ್ತು ಇದನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸುವ ಅಭ್ಯರ್ಥಿಗಳಿಗೆ ಮತ ನೀಡುವಂತೆ ಜನರನ್ನು ಪ್ರೇರೇಪಿಸುವುದು ಆಂದೋಲನದ ಮುಖ್ಯ
ಗುರಿಯಾಗಿತ್ತು.

ಶಿಕ್ಷಣ ಆಯೋಗದ ಐತಿಹಾಸಿಕ ಶಿಫಾರಸ್ಸು ಬಂದು ೫೦ ವರ್ಷಗಳು (೧೯೬೬-೨೦೧೭)ಸಂದಿದೆ. ಆದರೆ, ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ವಿಚಾರ
ಬಂದರೆ ಹಿಂಜರಿಯುತ್ತಾರೆ. ಮಕ್ಕಳ ದಾಖಲೆ ನೋಡುವುದಾದರೆ, ೨೦೧೦-೧೧ ನೇ ಶೈಕ್ಷಣಿಕ ಅವಧಿಯಲ್ಲಿ, ಸರಕಾರಿ ಶಾಲೆಗಳಲ್ಲಿ ೧ರಿಂದ ೧೦ನೇ
ತರಗತಿಯಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ ೫೪.೫೪ ಲಕ್ಷ. ಇದು ೨೦೨೩-೨೪ ನೇ ಸಾಲಿನಲ್ಲಿ ೪೨.೯ ಲಕ್ಷಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ೨೮.೭೬ ಲಕ್ಷದಿಂದ ೩೬.೫೧ ಲಕ್ಷಕ್ಕೆ ಏರಿದೆ.

೨೦೨೧ರ ನವೆಂಬರ್ ತಿಂಗಳಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ದೇಶಾದ್ಯಂತ National Achievement Survey (NAS)  ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು. ರಾಜ್ಯದ ಸರಕಾರಿ ಶಾಲೆಗಳ ೩,೫ ಮತ್ತು ೮ನೇ ತರಗತಿಯ ಮಕ್ಕಳಿಗಾಗಿ ಇದನ್ನು ರೂಪಿಸಲಾಗಿತ್ತು. ಇದು ವಿದ್ಯಾರ್ಥಿಗಳ ಕಲಿಕೆ ಹಾಗೂ ಶಾಲಾ ನಿರ್ವಹಣೆ, ಸೌಲಭ್ಯದ ಕುರಿತಂತೆ ಮಾಹಿತಿಯನ್ನು ಸಂಗ್ರಹಿಸಿತ್ತು. ಇಲ್ಲಿ ಸರಕಾರಿ ಶಾಲೆಯ ಸೌಲಭ್ಯದ ಬಗ್ಗೆ ನೋಡುವುದಾದರೆ ಸರಕಾರಿ ಶಾಲೆಯ ಹಲವು ಕಟ್ಟಡಗಳು ಸುರಕ್ಷಿತವಲ್ಲ. ಮೂಲಸೌಕರ್ಯಗಳ ಕೊರತೆಯೂ ಶಾಲೆಗಳನ್ನು ಕಾಡುತ್ತಿದೆ. ಹಲವೆಡೆ ಶಾಲಾ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ, ಚಾವಣಿಗಳ ದುರಸ್ತಿ, ಹಲವಾರು ಶಾಲೆಗಳಲ್ಲಿ ಬೆಂಚು, ಮೇಜುಗಳಿಲ್ಲ. ಶುದ್ಧ ಕುಡಿಯುವ ನೀರು ಲಭ್ಯವಿಲ್ಲದ ಶಾಲೆಗಳ ಸಂಖ್ಯೆಯೂ ಬಹಳ ದೊಡ್ಡದಿದೆ. ಶೌಚಾಲಯದ ಸೌಲಭ್ಯ ಇಲ್ಲದ ಶಾಲೆಗಳು ಅನೇಕವಿದೆ. ಶೌಚಾಲಯದ ಸ್ವಚ್ಛತೆ ಮತ್ತು ಇತರ ನಿರ್ವಹಣೆಗೆ ಯಾವುದೇ ವ್ಯವಸ್ಥೆ ಇಲ್ಲ.

ಗ್ರಾಮೀಣ ಪ್ರದೇಶ ಮತ್ತು ಹಿಂದುಳಿದ ಪ್ರದೇಶ ಗಳಲ್ಲಿನ ಶಾಲೆಗಳಲ್ಲಿಯೇ ಈ ಸಮಸ್ಯೆಗಳು ಹೆಚ್ಚು ಎಂಬುದು ವರದಿ ಪ್ರಕಟವಾಗಿತ್ತು. ಶಿಕ್ಷಕರ ಲಭ್ಯತೆ ವಿಚಾರಕ್ಕೆ ಬಂದರೆ, ೨೦೧೦-೧೧ರ ಎಲಿಮೆಂಟರಿ ಶಾಲೆಗಳಲ್ಲಿ ಒಟ್ಟು ಮುಂಜೂರಾದ ಮತ್ತು ಕಾರ್ಯನಿರ್ವಸುತ್ತಿದ್ದ ಶಿಕ್ಷಕರ ಸಂಖ್ಯೆ ೨,೦೨,೪೮೩ ಮತ್ತು ೧,೮೯,೪೫೧. ಇದು ೨೦೧೫-೧೬ ನೇ ಸಾಲಿನಲ್ಲಿ ಕ್ರಮವಾಗಿ ೨,೦೩,೬೫೮ ಮತ್ತು ೧,೬೬,೦೮೩. ೨೦೨೩-೨೪ ನೇ ಸಾಲಿಗೆ ೪೦,೦೦೦ ಶಿಕ್ಷಕರ ಕೊರತೆಯಿದೆ. ಮುಂಜೂರಾದ ಹುzಗಳ ಪೈಕಿ ಖಾಲಿ ಇರುವ ಶಿಕ್ಷಕರ ಹುzಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನಿಸಿದರೆ, ಸರಕಾರಿ ಶಾಲೆಗಳು ಗುಣಾತ್ಮಕ ಶಿಕ್ಷಣ
ನೀಡಲು ಅಸಾಧ್ಯವಾಗದಿರುವುದು ಏಕೆ, ಸರಕಾರಿ ಶಾಲೆಗಳು ಶೋಚನೀಯ ಸ್ಥಿತಿ ತಲುಪಲು ನಿಜವಾದ ಕಾರಣವೇನೆಂಬುದು ತಿಳಿಯುತ್ತದೆ.

ಸರಕಾರಿ ಶಾಲೆಗಳ ಪೈಕಿ ಒಟ್ಟು ೨೮೭ ಶಾಲೆಗಳು ಈ ಸಾಲಿನಲ್ಲಿ ಶೂನ್ಯ ದಾಖಲಾತಿಯನ್ನು ಹೊಂದಿದ್ದರೆ, ಹತ್ತರವರೆಗೆ ಮಕ್ಕಳಿರುವ ಶಾಲೆಗಳ ಸಂಖ್ಯೆ ೩,೫೪೬. ಈ ಶಾಲೆಗಳ ಪರಿಸ್ಥಿತಿ ಸುಧಾರಿಸದೇ ಇದ್ದರೆ, ಮುಂದಿನ ವರ್ಷಗಳಲ್ಲಿ ಶೂನ್ಯ ದಾಖಲಾತಿ ಶಾಲೆಗಳ ಪಟ್ಟಿಗೆ ಈ ಶಾಲೆಗಳೂ ಸೇರಬಹುದು. ಮಕ್ಕಳ ದಾಖಲಾತಿ ಹೆಚ್ಚಿಸಲು ವಿದ್ಯಾರ್ಥಿಗಳನ್ನು ಆಕರ್ಷಿಸುವ ಮಧ್ಯಾಹ್ನದ ಬಿಸಿಯೂಟ, ಶಾಲಾ ದತ್ತು ಯೋಜನೆ, ಬೈಸಿಕಲ್ ವಿತರಣೆ, ಮೊಟ್ಟೆ, ಹಾಲು, ಹಣ್ಣು ವಿತರಣೆ ಇತ್ಯಾದಿ ತಂತ್ರಗಳನ್ಮು ಬಳಸಿದರು, ದಾಖಲಾತಿ ಏರಿಕೆಯಾಗುತ್ತಿಲ್ಲ.

ಕೇಂದ್ರ ಸರ್ಕಾರದ District Information System for Education (DISE)- ೨೦೧೫-೧೬ ರ ಅಂಕಿ ಅಂಶಗಳ ಪ್ರಕಾರ) ಭಾರತ ದಾದ್ಯಂತ ಸುಮಾರು ಒಂದು ಲಕ್ಷ ಸರಕಾರಿ ಶಾಲೆಗಳಲ್ಲಿ, ೨೦ಕ್ಕೂ ಕಡಿಮೆ ಮಕ್ಕಳು ಇzರೆ. ಅಂದರೆ ಒಂದು ತರಗತಿಯಲ್ಲಿ ೫ ಅಥವಾ ಅದಕ್ಕಿಂತ ಕಡಿಮೆ ಮಕ್ಕಳ ಹಾಜರಾತಿಗೆ ಸಮ. ಸರ್ವ ಶಿಕ್ಷಣ ಅಭಿಯಾನ ಬಂದಾಗಿನಿಂದ ಶಿಕ್ಷಕರು ಪಾಠ ಪ್ರವಚನಗಳಲ್ಲಿ ತೊಡಗುವುದಕ್ಕಿಂತ ಅನುದಾನಗಳ ನಿರ್ವಹಣೆ ಮತ್ತು ವಿವಿಧ ಇಲಾಖೆಯ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವಲ್ಲಿ ಹೆಚ್ಚು ಶ್ರಮ ವಹಿಸುತ್ತಿzರೆ. ಇದರ ಮಧ್ಯೆ ಪಾಠ ಹೇಗೆ ಮಾಡುವುದು ಎಂದು ಸ್ವತಃ ಶಿಕ್ಷಕರೇ ಅಳಲು ತೊಡಿಕೊಳ್ಳುತ್ತಾರೆ. ಆದರೂ ಇದರ ಬಗ್ಗೆ ಯಾವುದೇ ಶಿಕ್ಷಕರ ಸಂಘದಿಂದಾಗಲೀ ಪ್ರತಿಭಟನೆ ಇಲ್ಲ. ಅದರ ಬದಲಾಗಿ ಪಿಂಚಣಿ ಬಗ್ಗೆ , ರಜೆ ವಿಚಾರ, ಉತ್ರರ ಪತ್ರಿಕೆ ಮೌಲ್ಯಮಾಪನ ವಿಚಾರ ಬಂದಾಗ ಮಾತ್ರ ಥಟ್ಟನೇ ಸಂಘಟನೆಗಳಿಗೆ ಎರಡರಷ್ಟು ಹೋರಾಟ ಮಾಡುವ, ತರಗತಿ ಬಹಿಷ್ಕಾರ ಮಾಡುವ ಶಕ್ತಿ ಬರುತ್ತದೆ.

ಇವರು ಎಂದಿಗೂ ಸಹ ಶಾಲೆಗಳ ಮೂಲಭೂತ ಸೌಲಭ್ಯಗಳ ಬಗ್ಗೆ, ಅನುದಾನದ ಬಗ್ಗೆ, ಪಾಠದ ಹೊರತಾಗಿಯೂ ಹೊರೆಯನ್ನು ಕಡಿಮೆ ಮಾಡುವ ಬಗ್ಗೆ ರಾಜ್ಯವ್ಯಾಪಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಬೇಕೆಂಬ ಹುಮಸ್ಸು ಇವರಲಿಲ್ಲ. ಏಕೆಂದರೆ ಶೇ ೯೮ ರಷ್ಟು ಸರ್ಕಾರಿ ಶಿಕ್ಷಕರ ಮಕ್ಕಳು ಕಲಿಯುತ್ತಿರುವುದು ಖಾಸಗಿ ಶಾಲೆಯಲ್ಲಿ ಎಂಬ ನಿರಾತಂಕ ಭಾವ. ನಮ್ಮ ರಾಜ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆಯನ್ನು ಮುನ್ನಡೆಸಲು ಒಬ್ಬ ಶಿಕ್ಷಣ ಸಚಿವರು, ಆಯುಕ್ತರು, ಅಪರ ಆಯುಕ್ತರು, ಜಂಟಿ ನಿರ್ದೇಶಕರು, ನಿರ್ದೇಶಕರು, ಉಪ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಪಿ , ಸಿಆರ್‌ಪಿ, ಶಿಕ್ಷಕರು ಹೀಗೆ ಹೇಳಲು ಹೋದರೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.

ಪ್ರತಿ ಹಂತದಲ್ಲಿಯೂ ಇಷ್ಟೆ ಮೇಲ್ವಿಚಾರಣೆ ಮಾಡುವ ಸಿಬ್ಬಂದಿಯಿದ್ದರೂ ಸಹ ವರ್ಷದಿಂದ ವರ್ಷಕ್ಕೆ ದಾಖಲಾತಿ ಮಟ್ಟ ಮಾತ್ರ ಏರಿಕೆ ಕಂಡಿಲ್ಲ ಏಕೆ ಎಂಬ ಪ್ರಶ್ನೆ ದೊಡ್ಡದು. ಒಮ್ಮೆ ಕೇಂದ್ರ ಪಠ್ಯಕ್ರಮ ಮುನ್ನಡೆಸುತ್ತಿರುವ ಇಲಾಖೆಗಳ ಆಡಳಿತ ವೈಖರಿಯನ್ನು ಸ್ವಲ್ಪ ಅಧ್ಯಯನ ಮಾಡುವುದು ಸೂಕ್ತ. ಅಲ್ಲಿ ಈ ಮೇಲಿನ ಯಾವುದೇ ಮೇಲ್ವಿಚಾರಣೆ ನಡೆಸುವ ಅಽಕಾರಗಳ ದಂಡು ಕಾಣುವುದಿಲ್ಲ. ಆದರೂ ಸಹ ಅವರು ನಡೆಸುವ ವಾರ್ಷಿಕ ಪರೀಕ್ಷೆಯ ವಿಧಾನವಾಗಲಿ, ಶೈಕ್ಷಣಿಕ ಚಟುವಟಿಕೆಗಳಾಗಲಿ ಅಚ್ಚುಕಟ್ಟಾಗಿರುತ್ತದೆ.

ಶೈಕ್ಷಣಿಕ ವರ್ಷದ ಕ್ರೀಯಾಯೋಜನೆ, ನೀತಿಯ ಬಗ್ಗೆ ಸ್ಪಷ್ಟ ಚಿತ್ರಣವಿರುತ್ತದೆ. ಅದು ನಮ್ಮಕೆ ಸಾಧ್ಯವಾಗುತ್ತಿಲ್ಲ. ಅಮೆರಿಕದಂತಹ ದೇಶಗಳಲ್ಲಿ ಶೇ.೯೦ ರಷ್ಟು ಸರಕಾರಿ ಶಾಲೆಗಳು ಹಾಗೂ ಕೇವಲ ಶೇ.೧೦ರಷ್ಟು ಖಾಸಗಿ ಶಾಲೆಗಳಿವೆ. ಅಲ್ಲಿನ ನಾಗರಿಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ತಮ್ಮ ವಾಸ ಸ್ಥಾನದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಬೇಕೆಂಬ ನಿಯಮವಿದೆ. ಪ್ರತಿಯೊಂದು ಸರಕಾರಿ ಶಾಲೆಯು ಸಹ ಅತ್ಯಾಧು ನಿಕ ಸೌಲಭ್ಯಗಳನ್ನು ಹೊಂದಿದ್ದು, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರಣ ಅಲ್ಲಿ ಖಾಸಗಿ ಶಾಲೆಗಳಿಗೆ ಹೆಚ್ಚು ಆದ್ಯತೆಯಿಲ್ಲ.

ಆ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಕಟ್ಟುವ ತೆರಿಗೆ ಹಣದಲ್ಲಿ ಶಿಕ್ಷಣಕ್ಕಾಗಿ ಮೀಸಲಾಗಿಟ್ಟ ಹಣವನ್ನು ಕಡ್ಡಾಯವಾಗಿ ಶಿಕ್ಷಣಕ್ಕೆ ವಿನಿಯೋಗವಾಗುತ್ತಿದೆ. ಅದರಿಂದಲೇ ಸರಕಾರಿ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತದೆ. ಆದರೆ ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ವಾತಾವರಣ. ಇಂದು ಖಾಸಗೀಕರಣದ ಹೆಸರಿನಲ್ಲಿ ಖಾಸಗಿ ಶಾಲೆಯನ್ನು ಬೆಳೆಸುತ್ತಿರುವವರು ಯಾರು? ದಿನೇ ದಿನೇ ಹೆಚ್ಚುತ್ತಿರುವ ಖಾಸಗಿ ಶಾಲೆಗಳಲ್ಲಿ ಹೆಚ್ಚಿನವೂ ಪ್ರಭಾವಿ ವ್ಯಕ್ತಿಗಳದ್ದೇ ಆಗಿರುತ್ತದೆ. ಆದ್ದರಿಂದ ಸರಕಾರಿ ಶಾಲೆ ಉಳಿವಿಗಾಗಿ ಯಾರು ತಲೆಕೆಡಿಸಿಕೊಳ್ಳುವುದಿಲ್ಲ.

ಮುಂದಿನ ಶೈಕ್ಷಣಿಕ ವರ್ಷದಿಂದಾದರೂ ಸೂಕ್ತ ಕ್ರೀಯಾಯೋಜನೆ ಅಳವಡಿಸಿ ಮತ್ತೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಶಿಕ್ಷಣ ನಮ್ಮ
ಮೂಲಭೂತ ಹಕ್ಕು ಎಂಬುದನ್ನೇ ಅದೆಷ್ಟೋ ಜನ ಮರೆತು ಹೋದಂತಿದೆ. ಸಂವಿಧಾನದ ನಾಲ್ಕನೇ ಭಾಗದ ನಿರ್ದೇಶಕ ತತ್ವಗಳಲ್ಲಿದ್ದ ಶಿಕ್ಷಣದ ಅವಕಾ
ಶವನ್ನು, ಮೂರನೇ ಭಾಗದಲ್ಲಿ ಮೂಲಭೂತ ಹಕ್ಕಾಗಿ ಸೇರಿದರೂ ಪ್ರಭುತ್ವಗಳಿಗೆ ಅದು ಇನ್ನೂ ಮೂಲ ಭೂತವೆನಿಸದಿರುವುದು ದುರದೃಷ್ಟಕರ.

(ಲೇಖಕರು: ಶಿಕ್ಷಕರು, ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

error: Content is protected !!