Monday, 13th May 2024

ಹೆಚ್ಚು ಸುದ್ದಿ ಮಾಡುತ್ತಿರುವ ಪಾವತಿಸಿದ ಸುದ್ದಿ

ಚರ್ಚಾ ವೇದಿಕೆ

ಡಾ.ಅ‌ಮ್ಮಸಂದ್ರ ಸುರೇಶ್

ಇತ್ತೀಚೆಗೆ, ಭಾರತದ ಮಾಧ್ಯಮಗಳಲ್ಲಿ ‘ಪಾವತಿಸಿದ ಸುದ್ದಿ’ (ಪೇಯ್ಡ್ ನ್ಯೂಸ್) ಹೆಚ್ಚು ಸದ್ದು ಮಾಡುತ್ತಿದೆ. ಇಂಥ ಸುದ್ದಿಯು ಮಾಧ್ಯಮಗಳ ಪಾಲಿಗೆ ಲಾಭದಾಯಕವಾಗಿದ್ದರೂ, ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಋಣಾತ್ಮಕ ಪ್ರಕ್ರಿಯೆಗಳನ್ನು ಉಂಟುಮಾಡುತ್ತದೆ. ಜತೆಗೆ ಇದು ಪತ್ರಿಕಾ ನೀತಿಸಂಹಿತೆಗೆ ವಿರುದ್ಧವಾದ ಚಟುವಟಿಕೆಯಾಗಿದೆ.

ಚುನಾವಣೆಗಳು ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದರೆ ಮಾಧ್ಯಮಗಳು ಅತ್ಯಗತ್ಯ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಎಂದರೆ, ಸರಿಯಾದ ಪರಿಸ್ಥಿತಿಯಲ್ಲಿ ಮತ ಚಲಾಯಿಸುವುದು. ಮಾತ್ರವಲ್ಲದೆ, ರಾಜಕೀಯ ಪಕ್ಷಗಳ ನೀತಿಗಳು, ಅಭ್ಯರ್ಥಿಗಳು ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ನಿಷ್ಪಕ್ಷ ಪಾತ ಮಾಹಿತಿಯನ್ನು ಜನರು ತಿಳಿದುಕೊಳ್ಳಬೇಕಾಗುತ್ತದೆ ಹಾಗೂ ಸಾರ್ವಜನಿಕರಿಗೆ ಈ ಮಾಹಿತಿಗಳನ್ನು ಒದಗಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವನ್ನು ವಹಿಸಬೇಕಾಗುತ್ತದೆ.

ಇದರಿಂದಾಗಿ ಮತದಾರರಲ್ಲಿ ಜಾಗೃತಿ ಉಂಟಾಗಿ, ವಿವೇಚನಾಯುಕ್ತ ಆಯ್ಕೆಯನ್ನು ಮಾಡಲು ಅವರಿಗೆ ಅನುಕೂಲವಾದಂತಾಗುತ್ತದೆ. ಆದರೆ ಮಾಧ್ಯಮದ ಬಹುತ್ವ ಮತ್ತು ವಿಭಿನ್ನ ವೃತ್ತಿಪರ ಮಾನದಂಡಗಳು ಚುನಾವಣೆಗಳಲ್ಲಿ ಮಾಧ್ಯಮದ ಪ್ರಸಾರದ ಸ್ವರೂಪ ಹಾಗೂ ಗುಣಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಇಂದಿಗೂ ಚರ್ಚಾಸ್ಪದ ವಿಷಯವಾಗಿಯೇ ಉಳಿದಿದೆ. ಮಾಧ್ಯಮಗಳು ಚುನಾವಣಾ ಪ್ರಚಾರದ ಬೆಳವಣಿಗೆಯ
ಬಗ್ಗೆ ವರದಿ ಮಾಡುವ ಮೂಲಕ ಮತದಾರರಿಗೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹೇಗೆ ಚಲಾಯಿಸಬೇಕು ಎಂಬುದನ್ನು ಮನವರಿಕೆ ಮಾಡಿಕೊಡ ಬೇಕು. ತಮ್ಮ ಸಂದೇಶವನ್ನು ಮತದಾರರಿಗೆ ತಿಳಿಸಲು ರಾಜಕೀಯ ಪಕ್ಷಗಳಿಗೆ ವೇದಿಕೆಯನ್ನು ಒದಗಿಸುವ ಮೂಲಕ, ಅವುಗಳ ನಡುವಿನ ಪರಸ್ಪರ ಚರ್ಚೆಗೆ ಅವಕಾಶ ನೀಡಬೇಕು. ಇದು ಮಾಧ್ಯಮಗಳ ಕರ್ತವ್ಯ ಕೂಡ ಆಗಿದೆ.

ಹಾಗೆ ನೋಡಿದರೆ, ಮಾಧ್ಯಮಗಳು ಮತದಾರರಿಗೆ ಮಾಹಿತಿಯನ್ನು ಒದಗಿಸುವ ಏಕೈಕ ಮೂಲವಲ್ಲ; ಆದರೆ ಸಮೂಹ ಸಂವಹನಗಳಿಂದ ಪ್ರಾಬಲ್ಯ ಹೊಂದಿರುವ ಭಾರತದಂಥ ದೇಶದಲ್ಲಿ ಮಾಧ್ಯಮಗಳು ರಾಜಕೀಯ ಕಾರ್ಯಸೂಚಿಯನ್ನು ನಿರ್ಧರಿಸುತ್ತವೆ. ಉದಾಹರಣೆಗೆ, ಚುನಾವಣೆಗಳು ನ್ಯಾಯಯುತವಾಗಿ ನಡೆಯುತ್ತವೆಯೇ? ಎಂದು ನಿರ್ಣಯಿಸುವ ಮಾನದಂಡವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸುತ್ತವೆ. ಪ್ರಜಾಪ್ರಭುತ್ವದಲ್ಲಿ ಸಮೂಹ ಮಾಧ್ಯಮಗಳು, ಚರ್ಚಾವಿಷಯಗಳ ಮತ್ತು ಅಭ್ಯರ್ಥಿಗಳ ಬಗೆಗಿನ ಮಾಹಿತಿಯನ್ನು ಮತದಾರರಿಗೆ ನೀಡುವುದಲ್ಲದೆ, ಹೇಗೆ ಮತ ಚಲಾಯಿಸ ಬೇಕು ಎಂಬುದನ್ನು ಮತ್ತು ಮತದಾನಕ್ಕಿರುವ ಮಹತ್ವದ ಕುರಿತು ಮೂಲಭೂತ ಮಾಹಿತಿಯನ್ನು ನೀಡುವ ಮೂಲಕ ಚುನಾವಣೆಗಳಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.

ಆಧುನಿಕ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಉದಯಕ್ಕೂ ಮೊದಲು ಜನರು ರಾಜಕೀಯ ಮಾಹಿತಿಯನ್ನು ಮುದ್ರಣ ಮಾಧ್ಯಮ ಅಥವಾ ನೇರ/ವೈಯಕ್ತಿಕ ಸಂಪರ್ಕದ ಎರಡು ವಿಧಾನಗಳ ಮೂಲಕ ತಿಳಿದುಕೊಳ್ಳುತ್ತಿದ್ದರು. ಮುದ್ರಣ ಮಾಧ್ಯಮವು ಮಾಲೀಕತ್ವ ಹಾಗೂ ವಿಷಯ ಎರಡ ರಲ್ಲೂ ಉಳಿದೆಲ್ಲ ಮಾಧ್ಯಮಗಳಿಗಿಂತ ಹೆಚ್ಚಿನ ವೈವಿಧ್ಯವನ್ನು ಒಳಗೊಂಡಿದೆ. ದಿನಪತ್ರಿಕೆಗಳಿಂದ ಹಿಡಿದು ವಾರಪತ್ರಿಕೆಗಳಂಥ ನಿಯತಕಾಲಿಕ ಗಳವರೆಗೆ ಮತ್ತು ವಿಶೇಷ ಆಸಕ್ತಿಯ ಪ್ರಕಟಣೆಗಳವರೆಗೆ ಈ ವೈವಿಧ್ಯವು ಆವರಿಸಿಕೊಂಡಿರುವುದನ್ನು ನಾವು ಗಮನಿಸಬಹುದು. ಮುದ್ರಣ ಮಾಧ್ಯಮ, ಇಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಎಲ್ಲಾ ಮಾಧ್ಯಮಗಳೂ ಇಂದು ಸಾಮಾನ್ಯವಾಗಿ ಖಾಸಗಿಯವರ ಕೈಯಲ್ಲಿವೆ.

ಇಂಥ ಪರಿಸ್ಥಿತಿಯಲ್ಲಿ ಜನರಿಗೆ ನಿಷ್ಪಕ್ಷಪಾತವಾದ ಮಾಹಿತಿಯನ್ನು ನೀಡಬೇಕಾದರೆ, ಪತ್ರಿಕೋದ್ಯಮದ ತತ್ವಗಳನ್ನು ಎಲ್ಲಾ ಮಾಧ್ಯಮಗಳು ಅಳವಡಿಸಿಕೊಳ್ಳಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ. ತತ್ವಗಳ ಜತೆಗೆ ಸ್ವಯಂನಿಯಂತ್ರಣವನ್ನು ಕೂಡ ಮಾಧ್ಯಮಗಳು ಹೇರಿಕೊಳ್ಳ ಬೇಕಾಗುತ್ತದೆ. ಉಳಿದ ಮಾಧ್ಯಮಗಳಿಗೆ ಹೋಲಿಸಿದರೆ ಭಾರತದಲ್ಲಿ ಪತ್ರಿಕಾ ಮಾಧ್ಯಮವು ಸ್ವಯಂ ನಿಯಂತ್ರಣವನ್ನು ಅಳವಡಿಸಿಕೊಂಡಿದೆ
ಎಂದು ಹೇಳಬಹುದು. ಹೀಗೆ ಅಳವಡಿಸಿಕೊಳ್ಳದಿದ್ದರೆ ಪತ್ರಿಕಾ ಧರ್ಮವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಿಲ್ಲ. ನಾವು ಇದುವರೆಗೂ ಕರೆಯುತ್ತಿದ್ದ ಪತ್ರಿಕಾ ಧರ್ಮವೇ ಎಲ್ಲಾ ಮಾಧ್ಯಮಗಳಿಗೂ ಅನ್ವಯವಾಗುತ್ತದೆ, ಅದುವೇ ಮಾಧ್ಯಮಧರ್ಮ ಕೂಡ ಹೌದು.

ಮಾಧ್ಯಮಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾವಲುನಾಯಿಯ ಕಾರ್ಯವನ್ನು ನಿರ್ವಹಿಸುತ್ತವೆ. ಆದರೆ ಚುನಾವಣೆಗಳ ಸಂದರ್ಭದಲ್ಲಿ ಚುನಾವಣಾ ಆಯೋಗವು ಮಾಧ್ಯಮಗಳ ಮೇಲೆ ಹದ್ದಿನಕಣ್ಣು ಇರಿಸುತ್ತದೆ. ಅಂತರ್ಜಾಲ ತಂತ್ರಜ್ಞಾನದಲ್ಲಾದ ಪ್ರಗತಿ, ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ದೊರೆಯುತ್ತಿರುವ ಡಾಟಾ ಸೌಲಭ್ಯ ದಿಂದಾಗಿ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಾಂತಿ ಉಂಟಾಗಿದೆ. ಚುನಾವಣೆಗಳ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಅಥವಾ ಮಾಹಿತಿಯನ್ನು ಹಂಚಿಕೊಳ್ಳುವವರು ಹೊಣೆಗಾರಿಕೆಯಿಂದ ವರ್ತಿಸಬೇಕಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಸಾಮಾಜಿಕ ಮಾಧ್ಯಮಗಳ ಮೂಲಕ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಪರವಾಗಿ ಪರೋಕ್ಷವಾಗಿ ಪ್ರಚಾರ ಮಾಡುವುದರ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ.

ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ವಿಷಯಗಳು ಮತ್ತು ಚಟುವಟಿಕೆಗಳ ಮೇಲ್ವಿಚಾರಣೆ ಮಾಡುವುದು, ನಿಯಂತ್ರಿಸುವುದು ಸಂಕೀರ್ಣ ಮತ್ತು ಸವಾಲಿನ ಕೆಲಸವಾಗಿದೆ. ಏಕೆಂದರೆ, ಸಂಪೂರ್ಣ ಪ್ರಮಾಣದ ವಿಷಯ, ನಿಜವಾದ ಅಭಿಪ್ರಾಯಗಳು ಮತ್ತು ‘ಪಾವತಿಸಿದ ಪ್ರಚಾರದ’ ವಿಷಯಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸುವುದು ಕಷ್ಟಸಾಧ್ಯವಾದ ಕೆಲಸವೇ ಸರಿ. ಮಾದರಿ ನೀತಿಸಂಹಿತೆಯ ನಿಬಂಧನೆಗಳು ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡುವ ಪ್ರಚಾರಕ್ಕೂ ಅನ್ವಯಿಸುತ್ತವೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿರುವ ಜತೆಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೭೧ರ ಅಡಿಯಲ್ಲಿ ಕ್ರಮವನ್ನು ಜರುಗಿಸಲಾಗುವುದು ಎಂದೂ ತಿಳಿಸಿದೆ.

ಕಳೆದ ದಶಕದಿಂದೀಚೆಗೆ ಭಾರತದ ಮಾಧ್ಯಮಗಳಲ್ಲಿ ‘ಪಾವತಿಸಿದ ಸುದ್ದಿ’ (ಪೇಯ್ಡ್ ನ್ಯೂಸ್) ಹೆಚ್ಚು ಸದ್ದು ಮಾಡುತ್ತಿದೆ. ಸದರಿ ‘ಪಾವತಿಸಿದ ಸುದ್ದಿ’ಯು ಮಾಧ್ಯಮಗಳ ಪಾಲಿಗೆ ಲಾಭದಾಯಕವಾಗಿದ್ದರೂ, ಭಾರತದಂಥ ಪ್ರಜಾ ಪ್ರಭುತ್ವ ರಾಷ್ಟ್ರಗಳಲ್ಲಿ ಋಣಾತ್ಮಕ ಪ್ರಕ್ರಿಯೆಗಳನ್ನು ಉಂಟುಮಾಡುತ್ತದೆ.  ಎಲ್ಲಕ್ಕಿಂತ ಹೆಚ್ಚಾಗಿ ಇದು ಪತ್ರಿಕಾ ನೀತಿ ಸಂಹಿತೆಗೆ ವಿರುದ್ಧವಾದ ಚಟುವಟಿಕೆಯಾಗಿದೆ. ‘ಪಾವತಿಸಿದ ಸುದ್ದಿ’ಯು, ಚುನಾವಣಾ ಸಮಯದಲ್ಲಿ ಅಭ್ಯರ್ಥಿಯ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಲು ನಿರ್ಧರಿಸಿದ ಓದುಗರಿಗೆ/ವೀಕ್ಷಕರಿಗೆ, ಅಭ್ಯರ್ಥಿಯ ವ್ಯಕ್ತಿತ್ವ ಅಥವಾ ಕಾರ್ಯಕ್ಷಮ ತೆಯ ಕುರಿತಾದ ಸರಿಯಾದ ಚಿತ್ರಣ ವನ್ನು ನೀಡುವುದಿಲ್ಲ. ಇದು ಪ್ರಜಾಪ್ರಭುತ್ವದ ಸತ್ವವನ್ನೇ ನಾಶಪಡಿಸುತ್ತದೆ. ಅಭ್ಯರ್ಥಿಗಳು ಬಹುಶಃ ಚುನಾವಣಾ ವೆಚ್ಚದ ಖಾತೆಯಲ್ಲಿ, ‘ಪಾವತಿಸಿದ ಸುದ್ದಿ’ಗಾಗಿ ಖರ್ಚುಮಾಡಿದ ಹಣದ ವಿವರಗಳನ್ನು ತೋರಿಸದೆ ೧೯೬೧ರ ಚುನಾವಣಾ ನೀತಿ-ನಿಯಮಗಳನ್ನು ಉಲ್ಲಂಘಿಸಿರುವುದನ್ನು ಕೂಡ ಚುನಾವಣಾ ಆಯೋಗ ಗಮನಿಸಿದೆ.

೨೦೦೯ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ‘ಪೇಯ್ಡ್ ನ್ಯೂಸ್’ ಅನ್ನು ವಿಶೇಷವಾಗಿ ಗಮನಿಸಲಾಯಿತು. ‘ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ’ ೨೦೦೯ರಲ್ಲಿ ಪ್ರಕಟಿಸಿದ, ಪೇಯ್ಡ್ ನ್ಯೂಸ್ ಕುರಿತಾದ ತನ್ನ ವರದಿಯಲ್ಲಿ, ‘ಹಣಕ್ಕಾಗಿ ಮುದ್ರಣ ಅಥವಾ ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ಯಾವುದೇ ಸುದ್ದಿ ಅಥವಾ ವಿಶ್ಲೇಷಣೆ’ ಎಂದು ಪೇಯ್ಡ್ ನ್ಯೂಸ್ ಕುರಿತು ವ್ಯಾಖ್ಯಾನಿಸಿದೆ. ಜನರ ಮತ್ತು ಪ್ರಜಾಪ್ರಭುತ್ವದ ಇತರ ಸ್ತಂಭಗಳ ನಡುವಿನ ಸೇತುವೆಯಾಗಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತವೆ. ಅಂದರೆ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ತೆಗೆದುಕೊಳ್ಳುವ ಕ್ರಮಗಳು ಹಾಗೂ ನಿಷ್ಕ್ರಿಯತೆಗಳಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಇದು ಸಹಾಯಮಾಡುತ್ತದೆ.

ಸುದ್ದಿ ಅಥವಾ ಮಾಹಿತಿಯು ವಸ್ತುನಿಷ್ಠವಾಗಿರಬೇಕು, ನ್ಯಾಯೋಚಿತವಾಗಿರಬೇಕು ಮತ್ತು ತಟಸ್ಥವಾಗಿರಬೇಕು ಹಾಗೂ ಯಾವುದೇ ಚರ್ಚಾವಿಷಯದ
ಬಗ್ಗೆ ಜನರು ಅಭಿಪ್ರಾಯಗಳನ್ನು ರೂಪಿಸಲು ಅದು ಸಾಕಷ್ಟು ಅವಕಾಶವನ್ನು ಮಾಡಿಕೊಡಬೇಕು. ಹೀಗಾಗಿ, ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ. ಆದಾಗ್ಯೂ, ರಾಜಕೀಯ ಕ್ಷೇತ್ರದಲ್ಲಿ ‘ಪೇಯ್ಡ್ ನ್ಯೂಸ್’ ಘಟನೆಗಳು ಹೆಚ್ಚಾಗುವುದರ ಮೂಲಕ ಪತ್ರಿಕಾ ಸ್ವಾತಂತ್ರ್ಯ ಇಂದು ಅಪಾಯದಲ್ಲಿದೆ. ಇದು ವೈಯಕ್ತಿಕ ನೆಲೆಯಲ್ಲಿ ಪತ್ರಕರ್ತರು ಮತ್ತು ಮಾಧ್ಯಮ ಕಂಪನಿಗಳನ್ನು ಮೀರಿ ಸಾಗುತ್ತಿದೆ ಹಾಗೂ ಸಂಘಟಿತ
ರೂಪವಾಗಿ ಅವತರಿಸುತ್ತಿದೆ. ಪತ್ರಿಕೆಗಳು ಮತ್ತು ಇತರೆ ಮಾಧ್ಯಮಗಳಲ್ಲಿ ತಮ್ಮ ಪ್ರಚಾರವನ್ನು ಬೆಂಬಲಿಸಲು, ಸಾಮಾನ್ಯವಾಗಿ ಸುಳ್ಳು ಸುದ್ದಿಗಳನ್ನು
ಪ್ರಕಟಿಸಲು ಅಥವಾ ಪ್ರಸಾರ ಮಾಡಲು ರಾಜಕೀಯ ಪಕ್ಷಗಳು (ಅಥವಾ ವೈಯಕ್ತಿಕ ನೆಲೆಯಲ್ಲಿ) ನೀಡುವ ಹಣ ಪಡೆದು ಅಂಥ ‘ವಸ್ತು-ವಿಷಯ’ವನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದೇ ‘ಪೇಯ್ಡ್ ನ್ಯೂಸ್’ ಎನಿಸಿಕೊಳ್ಳುತ್ತದೆ. ಇದು ಓದುಗರನ್ನು ಅಥವಾ ವೀಕ್ಷಕರನ್ನು ನಕಾರಾತ್ಮಕವಾಗಿ ಓಲೈಸುವ ಜತೆಗೆ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುತ್ತದೆ.

ಭಾರತೀಯ ಸಂವಿಧಾನದ ೧೯ನೇ ವಿಽಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಮಾಧ್ಯಮಗಳಿಗೆ ಪ್ರತ್ಯೇಕ ಅಭಿವ್ಯಕ್ತಿ ಸ್ವಾತಂತ್ರ್ಯವೇನೂ ಇಲ್ಲ; ಎಲ್ಲ ಭಾರ ತೀಯರಿಗೆ ಇರುವಂತೆಯೇ ಪತ್ರಿಕೆಗಳಿಗೂ ಈ ವಿಽಯು ವಾಕ್ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ವಾಣಿಜ್ಯ ಭಾಷಣವೂ ಇದರ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಪಾವತಿಸಿದ ಸುದ್ದಿಗಳು ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಆಶ್ರಯವನ್ನು ಪಡೆಯಬಹುದು. ಆದರೆ ಪತ್ರಿಕಾ
ಸ್ವಾತಂತ್ರ್ಯದ ಹಕ್ಕಿನ ಜತೆಗೆ, ಜನರ ಮಾಹಿತಿಯನ್ನು ಸ್ವೀಕರಿಸುವ ಹಕ್ಕನ್ನೂ ಗಮನಿಸಬೇಕು. ಆದ್ದರಿಂದ, ಮಾಧ್ಯಮಗಳಲ್ಲಿ ಪ್ರಕಟವಾಗುವ ಅಥವಾ ಪ್ರಸಾರವಾಗುವ ಮಾಹಿತಿಯು ಸತ್ಯವಾಗಿರಬೇಕಾದ್ದು ಮತ್ತು ನಿಷ್ಪಕ್ಷಪಾತದಿಂದ ಕೂಡಿರಬೇಕಾದ್ದು ಅತ್ಯವಶ್ಯಕ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ರೂಪಿಸಲು ನ್ಯಾಯಯುತ ಮಾಹಿತಿಯನ್ನು ಪಡೆಯುವುದು ಸಾರ್ವಜನಿಕರ ಹಕ್ಕು ಎಂಬುದನ್ನು ಮಾಧ್ಯಮ ಗಳು ಸದಾ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

(ಲೇಖಕರು ಸಾಮಾಜಿಕ ತಜ್ಞರು)

Leave a Reply

Your email address will not be published. Required fields are marked *

error: Content is protected !!