Thursday, 19th September 2024

ಪೊಲೀಸರನ್ನೇ ಕಳ್ಳರಂತೆ ಕಾಯುವಂತಾಯಿತೇ ?!

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಇನ್ನು ಮುಂದೆ ಪೋಲೀಸ್ ಪೇದೆಯೊಬ್ಬರು ಯಾವುದಾದರು ಕಾಂಪೌಂಡ್ ಒರಗಿ ನಿಂತು ಮೊಬೈಲ್ ನೋಡುತ್ತಿದ್ದರೂ, ಆ ಕಾಂಪೌಂಡ್ ಮೇಲೆ ಏನನ್ನು ಅಂಟಿಸಿದ್ದಾರೆಂದು ಕಂಟ್ರೋಲ್ ರೂಂನಲ್ಲಿ ಕುಳಿತು ಲೈವ್ ಮಾನಿಟರ್ ಮಾಡುವ ಮೇಲಾಧಿ ಕಾರಿಗಳು ಅಚ್ಚುಕಟ್ಟಾಗಿ ನೋಡಬಹುದು !.

ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ರು ಅವರ ವಕ್ರ ತುಂಡೊಕ್ತಿಯೊಂದು ಹೀಗಿತ್ತು ‘ಹೆಂಡತಿ ಕಳೆದು ಹೋದರೆ ಸಿಗುತ್ತಾಳೆ, ಮೊಬೈಲ್ ಕಳೆದು ಹೋದರೆ ಸಿಗವುದಿಲ್ಲ’ ಎಂದು. ಸಾರ್ವಜನಿಕರು ಕಳೆದುಕೊಂಡ ಅಥವಾ ಕಳ್ಳರಿಂದ ಅಪಹರಿಸಲ್ಪಟ್ಟ ವಸ್ತುಗಳನ್ನು ಹುಡುಕಿ ಕೊಡುವುದೇ ನಮ್ಮ ಪೊಲೀಸರ ಪರಮ ಕರ್ತವ್ಯ. ಆದರೆ ಹೆಂಡತಿ ಹೋದರೆ ಇನ್ನೊಬ್ಬಳು ಸಿಗುತ್ತಾಳೆ, ತಾಯಿ ಹೋದರೆ ಸಿಗುತ್ತಾಳಾ? ಎಂಬ ಭಾವಾರ್ಥದಲ್ಲಿ ಮೇಲಿನಂತೆ ವಕ್ರತುಂಡೋಕ್ತಿ ಹುಟ್ಟಿ ಕೊಂಡಿದೆಯೆಂದರೆ ಅದಕ್ಕೆ ನಮ್ಮ ಪೊಲೀಸ್ ವ್ಯವಸ್ಥೆಯ ವೈಫಲ್ಯತೆ, ನಿಷ್ಪ್ರಯೋಜಕವೇ ಕಾರಣ !.

ನಮ್ಮ ಪೊಲೀಸರು ಬೇರೆ ಏನೂ ಸಾಹಸ ಮಾಡಬೇಕಿಲ್ಲ. ಕಳೆದು ಹೋದ ಮೊಬೈಲ್ ಫೋನನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ಜತೆಗೆ ಅದನ್ನು ಅಪಹರಿಸಿದ ಕಳ್ಳನನ್ನೂ ಹಿಡಿಯುವುದು ಸಿಬಿಐನವರು ಮಾಡುವಂಥ ತನಿಖೆಯೇನಲ್ಲ. ಮೊಬೈಲ್ ಕಂಪನಿಯವರೇ ಐಎಂಇಐ ನಂಬರ್ ತಂತ್ರಜ್ಞಾನವನ್ನು ಪ್ರತಿಯೊಂದು ಮೊಬೈಲ್‌ನಲ್ಲೂ ಅಳವಡಿಸಿರುತ್ತಾರೆ. ದೂರು ಪಡೆದ ಪೋಲೀಸರು ಈಗಿನ ತಂತ್ರಜ್ಞಾನದಲ್ಲಿ ಮೊಬೈಲ್ ನಂಬರ್, ಐಎಂಇಐ ನಂಬರ್, ಸಿಮ್ ಕಾರ್ಡ್ ನಂಬರ್, ಮೊಬೈಲ್ ಟವರ್ ಹೀಗೆ ಇವೆಲ್ಲದರ ಜಾಡು ಹಿಡಿದು ಗಂಟೆಯೊಳಗೆ ಅದನ್ನು ಪತ್ತೆಹಚ್ಚಬಹು ದಾದ ವ್ಯವಸ್ಥೆ ಪೊಲೀಸ್ ಠಾಣೆಯೊಳಗೇ
ಇರುತ್ತದೆ.

ಆದರೆ ಮೊಬೈಲ್ ಕಳೆದುಕೊಂಡವನು ಮಾತ್ರ ಪೊಲೀಸರ ನೆಂಟರು ಸಂಬಂಧಿಗಳಾಗಿರಬೇಕು, ಪ್ರಭಾವಿಗಳಾಗಿರಬೇಕು ಅಥವಾ ಪೊಲೀಸರಿಗೆ ಬಹಳ ‘ಕ್ಲೋಸ್’ ಆಗಿರಬೇಕಷ್ಟೆ ಎಂಬಂತ್ತಾಗಿದೆ. ಕಷ್ಟಪಟ್ಟು ದುಡಿದು ಖರೀದಿಸಿದವರು ಅಥವಾ
ಹೆತ್ತವರು ತಮ್ಮ ಮಕ್ಕಳಿಗೆ ಕೊಡಿಸಲಾದ ಇಪ್ಪತ್ತು ಸಾವಿರದಷ್ಟು ಬೆಲೆಬಾಳುವ ಮೊಬೈಲ್ ಫೋನನ್ನು ಕಿರಾತಕರು ಕಿತ್ತು ಕೊಂಡು ಹೋದ ಬಳಿಕ ಶೇ.೯೦ರಷ್ಟು ಮಂದಿ ಪೊಲೀಸ್ ಠಾಣೆಗೆ ದೂರು ಕೊಡುವುದೇ ಇಲ್ಲ.

ಕಾರಣ ದೂರು ಕೊಟ್ಟರೂ ಪ್ರಯೋಜನವಿಲ್ಲವೆಂಬ ದೃಢವಾದ ನಂಬಿಕೆ. ಹೀಗಾಗಿ ಮೊಬೈಲ್ ಅಪಹರಣವಾದರೆ ಸ್ಮಶಾನಕ್ಕೆ
ಹೆಣ ಹೋದಂತೆ ಎಂದು ನಿರ್ಧರಿಸಿ ಶಪಿಸಿ ಸುಮ್ಮನಾಗುವುದೇ ಹೆಚ್ಚು. ದೂರು ಕೊಡಲು ಹೋದರೆ ಮೊದಲ ಪ್ರಶ್ನೆ ‘ಎಷ್ಟು ರುಪಾಯಿದು ಮೊಬೈಲ್, ರೋಡಲ್ಲಿ ಮೊಬೈಲ್ ಇಡ್ಕೊಂಡು ಹೋದ್ರೆ ಇನ್ನೇನಾಗುತ್ತೇ?’, ಕಳ್ಳನನ್ ಮಕ್ಳು ಬಿಡ್ತಾರಾ ? ಕಿತ್ಕೊಂಡು ಹೋಗ್ತಾರೆ ! ಮೊದಲು ಮೊಬೈಲ್‌ನ ಪರ್ಸನ ಜೇಬ ಭದ್ರವಾಗಿಟ್ಟುಕೊಂಡು ಹೋಗಿ ಎಂದು ಸಲಹೆ ನೀಡುತ್ತಾರೆ.

ಲಕ್ಷಾಂತರ ಬೆಲೆ ಬಾಳುವ ಐಫೋನ್ ಆಗಿದ್ದರೆ ‘ಒಂದತ್ತು ಸಾವಿರ ಖರ್ಚು’ ಮಾಡಿ ವಾಪಸ್ಸು ಪಡೆಯಬಹುದು. ಹೀಗೆ ಅಪ್ಪಿ ತಪ್ಪಿ ಕಳೆದು ಹೋದ ಮೊಬೈಲನ್ನು ಪೊಲೀಸರು ಹುಡುಕಿ ಕೊಟ್ಟರೆ ಅದು ದಕ್ಕಿಸಿಕೊಂಡವನ ಪೂರ್ವಜನ್ಮದ ಪುಣ್ಯ. ಇಲ್ಲದಿದ್ದರೆ ಅಂಥ ಪಿಗಳು ಕೆಟ್ಟ ಕನಸಿನಂತೆ ಮೊಬೈಲನ್ನು ಮರೆತುಬಿಡಬೇಕು. ಆಗಲೇ ಮೇಲಿನ ವಕ್ರತುಂಡೋಕ್ತಿಯ ಸಾಕ್ಷಾತ್ಕಾರವಾಗುತ್ತದೆ.

ಸರಗಳ್ಳರನ್ನು ಹಿಡಿಯುವುದು ತುಸು ಸವಾಲಾದರೂ ಪೊಲೀಸರು ಮನಸ್ಸು ಮಾಡಿದರೆ ಅಪಹರಿಸಲ್ಪಟ್ಟ ಪ್ರತಿಯೊಂದು ಮೊಬೈಲನ್ನು ಟ್ರೇಸ್ ಮಾಡಬಹುದು. ಈ ಒಂದು ಕರ್ತವ್ಯವನ್ನು ಪೊಲೀಸರು ಪ್ರಾಮಾಣಿಕವಾಗಿ ಮಾಡಿಬಿಟ್ಟರೆ ಸಮಾಜದಲ್ಲಿ ಅವರಿಗಿಂತ ‘ದೇವರಂತ’ ಮನುಷ್ಯ ಮತ್ತೊಬ್ಬರಿಲ್ಲ. ಅಷ್ಟರ ಮಟ್ಟಿಗೆ ಸಾರ್ವಜನಿಕರಿಂದ ಭರಪೂರ ಮೆಚ್ಚುಗೆ ಗಳಿಸಿಕೊಳ್ಳ ಬಹುದು. ಇಂದು ಆಟೋ ಚಾಲಕರೂ ಸಹ ತಮ್ಮ ಪ್ರಯಾಣಿಕರು ಬಿಟ್ಟುಹೋದ ವಸ್ತುಗಳನ್ನು ಪೊಲೀಸರಿಗೆ ಒಪ್ಪಿಸಿ
ಹೀರೋ ಆಗುತ್ತಿದ್ದಾರೆ.

ಆದರೆ ಕೈಲಿರುವ ತಂತ್ರಜ್ಞಾನವನ್ನು ಬಳಸಿ ಅತಿ ವೇಗವಾಗಿ ಮೊಬೈಲ್ ಫೋನ್ ಪತ್ತೆಹಚ್ಚುವುದು ಹೀರೋ ಮಾಡುವ
ಸಾಹಸವೇನಲ್ಲ. ಇಲ್ಲಿ ಮೊಬೈಲ್ ಫೋನ್ ಒಂದು ಉದಾಹರಣೆಯಷ್ಟೆ. ಸಮಾಜದಲ್ಲಿ ಸಾರ್ವಜನಿಕರಿಗೆ ಆಗುವ ಅದೆಷ್ಟೋ ರೀತಿಯ ಅನ್ಯಾಯ ಮೋಸ ಕೆಡುಕನ್ನು ತಪ್ಪಿಸಿ ಅಂಥವರ ಪಾಲಿಗೆ ದೇವರಂತೆ ಕಂಗೊಳಿಸಬಹುದಾದ ತಾಕತ್ತು ಪೊಲೀಸ ರಿಗಿದೆ.

ಆಪತ್ಕಾಲದಲ್ಲಿ ಕೂಡಲೇ ಯಾವ ರಾಜಕಾರಣಿಗಳೂ, ನ್ಯಾಯಾಧೀಶರೂ, ಅಧಿಕಾರಿಗಳೂ ಬರುವುದಿಲ್ಲ. ಸಿಗುವುದು ಪೊಲೀಸರು ಮಾತ್ರ. ಫೋನ್ ಮಾಡಿದ ಕೂಡಲೇ ಬರುವುದು ಆಂಬ್ಯುಲೆ, ಅಗ್ನಿಶಾಮಕ ಮತ್ತು ಪೊಲೀಸರು. ಅರಾಜಕತೆ ಇರಲಿ, ರಾಜಕಾರಣವಿರಲಿ, ರಾಷ್ಟ್ರಪತಿ ಆಡಳಿತವಿರಲಿ ಸಮಾಜವನ್ನು ಕಾಯುವವರು ಪೊಲೀಸರೇ ಹೊರತು ‘ನನಗೆ ಮತ ನೀಡಿ ಮುಖ್ಯಮಂತ್ರಿ ಮಾಡದಿದ್ದರೆ ನೆಗೆದು ಬಿದ್ದು ಸಾಯುತ್ತೇನೆ’ ಎನ್ನುವ ರಾಜಕಾರಣಿಗಳಲ್ಲ.

ಪೊಲೀಸರು ಸಂವಿಧಾನದ ಗಾಲಿಗಳು. ಸಂವಿಧಾನದ ಆಶಯ ಅನುಷ್ಠಾನವಾಗಬೇಕಾದರೆ ಸಮಾಜ ಸುವ್ಯವಸ್ಥೆಯಲ್ಲಿರ ಬೇಕಾದರೆ ಪೊಲೀಸರ ಪಾತ್ರ ಬಹುದೊಡ್ಡದು. ಮಧ್ಯರಾತ್ರಿ ನಾವುಗಳು ಸುರಕ್ಷಿತವಾಗಿ ಮನೆ ಸೇರುತ್ತೇವೆಂದು ಹೊರಡು ತ್ತೇವೆ, ಅದಕ್ಕಿರುವ ಧೈರ್ಯವೆಂದರೆ ‘ಏನೇ ಆದರೂ ಪೊಲೀಸರು ಇರುತ್ತಾರ’ ಎಂಬ ವಿಶ್ವಾಸ ನಂಬಿಕೆ. ಹಾಗೆಯೇ ಕಳ್ಳರು ರೌಡಿಗಳು ದುಷ್ಕೃತ್ಯಕ್ಕೆ ಹೆದರುತ್ತಾರೆಂದರೆ ಅದಕ್ಕೆ ಕಾರಣ ಪೊಲೀಸರ ಅಸ್ತಿತ್ವ.

ಇಂಥ ಪೊಲೀಸರಿಗೂ ಇಂದು ಅಗ್ನಿಪರೀಕ್ಷೆ ಒಂದು ಎದುರಾಗಿದೆ. ಬಿಸಿಲು ಮಳೆ ಗಾಳಿ ಧೂಳು ಮಾಲಿನ್ಯದಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಪೊಲೀಸರು ಸಾಕಪ್ಪ ಸಾಕು, ಹೆಂಡತಿ ಮಕ್ಕಳಿಗೆ ಒಂದು ಫೋನ್ ಮಾಡೋಣ ಎಂದು ಒಂದು ಕಡೆ ಕುಳಿತು ಕೊಂಡು ವಿಶ್ರಮಿಸುತ್ತಿದ್ದರು. ಆದರೆ ಇನ್ನು ಮುಂದೆ ಪೇದೆಯೊಬ್ಬರು ಯಾವುದಾದರೂ ಕಾಂಪೌಂಡ್ ಒರಗಿ ನಿಂತುಕೊಂಡಿ ದ್ದರೂ ಆ ಕಾಂಪೌಂಡ್ ಮೇಲೆ ಏನನ್ನು ಅಂಟಿಸಿದ್ದಾರೆಂದು ಕಂಟ್ರೋಲ್ ರೂಂನಲ್ಲಿ ಕುಳಿತು ಲೈವ್ ಮಾನಿಟರ್
ಮಾಡುವ ಮೇಲಧಿಕಾರಿಗಳು ಅಚ್ಚುಕಟ್ಟಾಗಿ ನೋಡಬಹುದು.

ಅಷ್ಟೇ ಅ, ಆ ಪೊಲೀಸ್ ಪೇದೆಯ ಮುಂದೆ ಏನಿದೆ, ಈತ ಯಾವ ಸ್ಥಳದಲ್ಲಿದ್ದಾನೆ, ಈತನ ಜತೆ ಯಾರು ಮಾತನಾಡುತ್ತಿದ್ದಾರೆ,
ಪೇದೆ ಏನು ಮಾತನಾಡುತ್ತಿದ್ದಾನೆ ಇವೆಲ್ಲವನ್ನೂ ಮೇಲಾಧಿಕಾರಿಗಳು ನೋಡಬಹುದು. ಸರಳವಾಗಿ ಹೇಳಬೇಕೆಂದರೆ ಪ್ರತಿಯೊಬ್ಬ ಪೇದೆಯೂ ಒಂದು ಸಿಸಿ ಕ್ಯಾಮೆರಾ ಮತ್ತು ಮೈಕ್‌ನಂತೆ ಬಳಕೆಯಾಗುತ್ತಾನೆ. ಆ ಪೊಲೀಸ್ ಪೇದೆಯ ದೇಹವೇ ಒಂದು ಕ್ಯಾಮೆರಾದಂತೆ ಕೆಲಸಮಾಡುತ್ತದೆ. ಇಂಥ ತಂತ್ರಜ್ಞಾನವೇ ‘ಬಾಡಿವೋರ್ನ್’ (ಆಟbqs ಡಿಟ್ಟ್ಞ ಇZಞಛ್ಟಿZ) ಎಂಬ ಎದೆ ಕ್ಯಾಮೆರಾ.

ವಿದೇಶಗಳಲ್ಲಿ ಇಂಥ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಈಗ ಆರಂಭಗೊಂಡಿದೆ. ಪೊಲೀಸರ ಕಾರ್ಯವೈಖರಿ, ಅವರ ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ ಇವುಗಳನ್ನು ಗಸ್ತು ಮಾಡುವ ಉಪಕರಣವೇ ಬಾಡಿವೋರ್ನ್. ವಾಕಿಟಾಕಿಯಷ್ಟು ಗಾತ್ರವಿರುವ ಈ ಕ್ಯಾಮೆರವನ್ನು ಪೊಲೀಸರು ತಮ್ಮ ಸಮವಸ್ತ್ರದ ಎದೆಯ ಭಾಗದಲ್ಲಿ ಸಿಕ್ಕಿಸಿಕೊಳ್ಳಬೇಕು. ಇದು ಚಾಲನೆಗೊಂಡರೆ ಆತನೇ ಒಂದು ‘ಲೈವ್ ಕ್ಯಾಮೆರಾ’ ಆಗುತ್ತಾನೆ. ಆತ ಸೀನಿದರೂ ಕೆಮ್ಮಿ
ದರೂ ಅದರ ಶಬ್ಧ ಮೇಲಾಧಿಕಾರಿಗಳಿಗೆ ತಲುಪುತ್ತದೆ.

ಆತ ಸಾರ್ವಜನಿಕರೊಂದಿಗೆ ವರ್ತಿಸುವ ರೀತಿ, ಅಪರಾಧ ಸ್ಥಳಕ್ಕೆ ಆತ ತಲುಪಿದ ಸಮಯ, ಸ್ಥಳದಲ್ಲಿ ಆತ ತೋರಿದ ಕರ್ತವ್ಯ ಪ್ರಜ್ಞೆ ಇವೆಲ್ಲವನ್ನೂ ಈಗ ಠಾಣೆಯಲ್ಲಿ ಕೂತ ಅಧಿಕಾರಿಗಳು ಲೈವ್ ಮಾನಿಟರ್ ಮಾಡಬಹುದಾದ ವ್ಯವಸ್ಥೆ ಇದಾಗಿದೆ. ಇಂಥದನ್ನು ಜಾರಿಗೆ ತರಲು ಆದೇಶಿಸಿದ್ದು ಹೈಕೋರ್ಟ್. ಮೇಲ್ನೊಟಕ್ಕೆ ಇದು ಪೊಲೀಸರ ಮುಂದಿನ ವಾಸ್ತವ ಸತ್ಯ
ಸನ್ನಿವೇಶವನ್ನು ದಾಖಲಿಸಿಕೊಳ್ಳಲು ಹೆಚ್ಚು ಸಹಾಯಕಾರಿ ಎಂದೂ, ಸಾರ್ವಜನಿಕರು ಪೊಲೀಸರನ್ನೇ ಎದುರಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಪೊಲೀಸರ ಮೇಲೆ ಹಲ್ಲೆ ಮಾಡಲೆತ್ನಿಸುವುದು ಇಂಥದನ್ನು ಸೆರೆಹಿಡಿಯಲು ಬಾಡಿವೋರ್ನ್ ಎಂದು ಹೇಳಲಾಗುತ್ತಿದೆಯಾದರೂ ಅಸಲಿಗೆ ಇದನ್ನು ಕಳ್ಳರನ್ನು ಅನುಮಾನಿಸುವಂತೆ, ಕಳ್ಳರನ್ನು ಗಮನಿಸುವಂತೆ ಪೊಲೀಸ ರನ್ನೂ ಕಾಯುವುದಕ್ಕಾಗಿ ಬಳಸುವಂತ್ತಾಗಿದೆ.

ಕಳೆದ ವರ್ಷವೇ ಇಂಥ ೫೦ ಬಾಡಿವೋರ್ನ್ ಉಪಕರಣವನ್ನು ಖರೀದಿಸಿದ್ದ ಪೊಲೀಸ್ ಇಲಾಖೆ ಅದನ್ನು ಬಳಸಿದರೆ ‘ದೊಣ್ಣೆ ಕೊಟ್ಟು ಹೊಡೆಸಿಕೊಂಡಂತೆ’ ಎಂಬಂತೆಯೋ ಏನೋ ಬಳಸದೇ ಇಡಲಾಗಿತ್ತು. ಇದನ್ನು ತಿಳಿದ ಸಮಾಜಮುಖಿ ವಕೀಲೆ ಯೊಬ್ಬರು ಇಂಥ ಉಪಕರಣದಿಂದ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆಂದು ಕೋರಿ ಹೈಕೋರ್ಟ್ ಮೊರೆಹೋದಾಗ ನ್ಯಾಯಾಧೀಶರು ಇಲಾಖೆಗೆ ಎಚ್ಚರಿಸಿ, ಕೂಡಲೇ ಇಂಥ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಆದೇಶಿತ್ತು.

ಆದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಕುಲಗೆಟ್ಟಿದೆಯೆಂದರೆ ಕಳ್ಳರು, ದರೋಡೆಕೋರರು, ದುಷ್ಟರನ್ನು ಗಮನಿಸಲಿಕ್ಕೆ ಮತ್ತು ಪೊಲೀಸರ ಸುರಕ್ಷತೆ ಹಿತದೃಷ್ಟಿಗಾಗಿ ಆವಿಷ್ಕರಿಸಲಾದ ಈ ಉಪಕರಣವನ್ನು ಪೊಲೀಸರ ಮೇಲೆಯೇ ಒಂದು ಕಣ್ಣಿಡಲು
ಉಪಯೋಗಿಸುವಂತ್ತಾಗಿದೆ. ಇತ್ತೀಚಿನ ದಿನಗಳಲ್ಲಿ ನಗರದ ಪೊಲೀಸರವಿರುದ್ಧ ಸುಲಿಗೆ, ಅನುಚಿತ ವರ್ತನೆ ಇತ್ಯಾದಿ ಆರೋಪಗಳು ಮೇಲಿಂದ ಮೇಲೆ ಬರಲು ಆರಂಭವಾಗಿದ್ದವು.

ಅಮಾಯಕರನ್ನು ಸುಲಿಗೆ ಮಾಡುವ ಪೊಲೀಸರಿಗೆ ಕಡಿವಾಣ ಹಾಕಲು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಅವರು ಬಾಡಿವೋರ್ನ್ ಬಳಸಲು ಮುಂದಾದ ಮೊದಲಿಗರೆನಿಸಿಕೊಂಡಿದ್ದಾರೆ. ಕಳೆದ ಡಿಸೆಂಬರ್‌ಲ್ಲಿ ಸಂಪಿಗೆಹಳ್ಳಿ ಹೊಯ್ಸಳ ಸಿಬ್ಬಂದಿಗಳು ದಂಪತಿ ಯಿಂದ ಹಣ ವಸೂಲಿ ಮಾಡಿದ ಆರೋಪದಡಿ ಅಮಾನತ್ತಾಗಿ ದ್ದರು. ಇಂಥ ಆರೋಪಗಳು ಪದೇ ಪದೆ ರಾತ್ರಿ ಗಸ್ತಿನ ಸಿಬ್ಬಂದಿಗಳ ಮೇಲೆ ಕೇಳಿಬಂದಾಗ ಇಂಥ ಭ್ರಷ್ಟಾಚಾರ ತಪ್ಪಿಸಲು ಹೊಯ್ಸಳ ಮತ್ತು ಬೀಟ್ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾ ಅಳವಡಿಸಲು ಇಲಾಖೆಯ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.

ನೋಡಿ, ಎಂಥ ಗತಿ ಬಂದಿದೆ ನಮ್ಮ ಪೊಲೀಸರಿಗೆ. ಪೊಲೀಸರನ್ನು ಕಾಯುವುದಕ್ಕೇ ಇಷ್ಟೊಂದು ಸಾಹಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆಯೆಂದರೆ ಇನ್ನು ಕಳ್ಳರನ್ನು ಹಿಡಿಯುವುದು ಯಾವಾಗ?. ಪೊಲೀಸರಿಗೆ ಎದುರಾಗುವ ಕುಡುಕರು, ಎಣ್ಣೆ
ಗಾಂಜ ಡ್ರಗ್ಸ್ ಪೀಡಿತ ಕಿತ್ತುಹೋದ ಸೆಲಬ್ರೆಟಿಗಳು, ವೈಟ್ ಅಂಡ್ ವೈಟ್ ಧರಿಸಿ ನಾಯಿ ಬಾಲದಂಥ ಮೀಸೆಬಿಟ್ಟು ದುಬಾರಿ ಕಾರಿನ ಮುಂದೆ ಕನ್ನಡದ ಶಾಲು ಹಾಸಿಕೊಂಡು ಓಡಾಡುವ ‘ನಕಲಿ ಓರಾಟ’ ಗಾರರು, ‘ಮಾನವ ಹಕ್ಕು-ಭ್ರಷ್ಟಾಚಾರ ನಿರ್ಮೂಲನೆ‘, ರಾಜ್ಯಾಧ್ಯಕ್ಷರು, ಅಧ್ಯಕ್ಷರು ಎಂದೆ ಬೋರ್ಡು ಬರೆಸಿಕೊಳ್ಳುವ ಅಡ್ಡಕಸುಬಿಗಳು, ಪ್ರಭಾವಿ ವ್ಯಕ್ತಿಗಳ ಚೇಲಾ ಗಳೆಂದು ದುರಹಂಕಾರ ತೋರುವ ಕಂತ್ರಿಗಳು ನಮ್ಮ ಪೊಲೀಸರ ಮೇಲೆಯೇ ಎರಗುವುದನ್ನು ನಿಯಂತ್ರಿಸಲು ಇಂಥ ಬಾಡಿವೋರ್ನ್ ಖಂಡಿತಾ ಸಹಕಾರಿಯಾಗುತ್ತದೆ.

ಅಂತೆಯೇ ಪೊಲೀಸರು ಸಹ ಕನಿಷ್ಠ ಮೊಬೈಲ್, ಕಿತ್ತುಕೊಂಡ ಚಿನ್ನದ ಸರವನ್ನು ಕೂಡಲೇ ಪತ್ತೆಹಚ್ಚುವುದು, ರಾತ್ರಿಯಲ್ಲಿ ನಡೆ
ಯುವ ಅಪರಾಧಗಳನ್ನು ತಡೆಯುವುದು, ಅತಿ ವೇಗ, ವ್ಹೀಲಿಂಗ್, ಬೇಕಾಬಿಟ್ಟಿ ಚಾಲನೆ ನಿಯಂತ್ರಿಸುವುದು, ಎಲ್ಲಕ್ಕಿಂತ ಮಿಗಿಲಾಗಿ ಸಾರ್ವಜನಿಕರೊಂದಿಗೆ ಗೌರವದಿಂದ ವರ್ತಿಸುವುದನ್ನು ರೂಢಿಸಿಕೊಂಡರಷ್ಟೇ ಸಾಕು. ಅಂಥ ಪೊಲೀಸರನ್ನು
ಸಾರ್ವಜನಿಕರೇ ಕಾಯುತ್ತಾರೆ. ಅದುಬಿಟ್ಟು ಕಳ್ಳ- ಪೊಲೀಸರಿಬ್ಬರನ್ನೂ ಕಾಯಬೇಕಾದ ದುರ್ಗತಿ ಇಲಾಖೆಗೆ ಬಂದಿರುವುದು ದೌರ್ಭಾಗ್ಯ !. ಈ ನಿಟ್ಟಿನಲ್ಲಿ ಪೊಲೀಸರು ಬದಲಾಗಬೇಕು. ಸುತ್ತ ಸಿಸಿ ಕ್ಯಾಮೆರಾ, ಎದೆಯ ಮೇಲೆ ಬಾಡಿವೋರ್ನ್ ಕ್ಯಾಮೆರಾ ಇರುವುದಕ್ಕಿಂತ ಮೊದಲಾಗಿ ಅಂಥ ಕ್ಯಾಮೆರಾ ಎಲ್ಲರ ಮನಸ್ಸಿನೊಳಗೆ ಪ್ರತಿಷ್ಠಾಪನೆ ಯಾದರೆ ಸಮಾಜ-ದೇಶ ಉದ್ಧಾರ ವಾಗುತ್ತದೆ.
Read E-Paper click here