Monday, 28th October 2024

R T Vittalmurthy Column: ಬೈ-ಎಲೆಕ್ಷನ್‌ ಸುತ್ತ ಪೈಪೋಟಿಯ ಸುತ್ತ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಮೊನ್ನೆ ಒಂದು ಮಹತ್ವದ ವರದಿ ರವಾನೆಯಾಗಿದೆ. ಈ ವರದಿಯನ್ನು ರವಾನಿಸಿದವರು ಕರ್ನಾಟಕದ ಬಿಜೆಪಿ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ. ವಸ್ತುಸ್ಥಿತಿ ಎಂದರೆ ಇಂಥದೊಂದು ವರದಿಯನ್ನು ರವಾನಿಸಲು ಸ್ವತಃ ನಡ್ಡಾ ಅವರೇ ರಾಧಾಮೋಹನದಾಸ್ ಅಗರ್ವಾಲ್ ಅವರಿಗೆ ಸೂಚಿಸಿದ್ದರಂತೆ.

“ರಾಜ್ಯ ಬಿಜೆಪಿಯ ಹಲವು ನಾಯಕರು ದಿಲ್ಲಿಗೆ ಬಂದು ‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬೈ-ಎಲೆಕ್ಷನ್ ಟಿಕೆಟ್ಟ ನ್ನು ನಮ್ಮ ಪಕ್ಷದವರಿಗೇ ಕೊಡಬೇಕು. ಯಾಕೆಂದರೆ ಅಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಗೆಲ್ಲುವ ಚಾನ್ಸಿರುವುದು ನಮಗೆ ಮಾತ್ರ’ ಎಂದಿದ್ದಾರೆ. ಅವರ ಪ್ರಕಾರ, ಈ ಕ್ಷೇತ್ರದ ಟಿಕೆಟ್ ಬಿಜೆಪಿಗೆ ದಕ್ಕದಿದ್ದರೆ ಹಳೆ ಮೈಸೂರಿನ ಜಿಲ್ಲೆಗಳಲ್ಲಿ ಜೆಡಿಎಸ್‌ನದ್ದೇ ಏಕಸ್ವಾಮ್ಯವಾಗಿ ಬಿಜೆಪಿಯ ಶಕ್ತಿ ಕುಸಿದು ಹೋಗುತ್ತದೆ. ಇದನ್ನು ತಡೆಯುವ ಸಲುವಾಗಿಯಾದರೂ ಚನ್ನಪಟ್ಟಣದ ಟಿಕೆಟ್ಟನ್ನು ಬಿಜೆಪಿ ಅಭ್ಯರ್ಥಿಗೆ ಕೊಡಬೇಕು.

ಅಂದ ಹಾಗೆ, ಬಿಜೆಪಿಗೆ ಟಿಕೆಟ್ ದಕ್ಕಿದರೆ ಜೆಡಿಎಸ್ ಕಳೆದುಕೊಳ್ಳುವುದೇನೂ ಇಲ್ಲ. ಇನ್ ಫ್ಯಾಕ್ಟ್‌, ಚನ್ನಪಟ್ಟಣದಲ್ಲಿ
ಈ ಸಲ ಮೈತ್ರಿಕೂಟದ ಟಿಕೆಟ್ ಜೆಡಿಎಸ್‌ಗೆ ದಕ್ಕಿದರೆ ಅದರ ಕ್ಯಾಂಡಿಡೇಟ್ ಗೆಲ್ಲುವುದಿಲ್ಲ. ಹಾಗೇನಾದರೂ ಆದರೆ ಅದು ಕುಮಾರಸ್ವಾಮಿ ಅವರಿಗೆ ಡ್ರಾಬ್ಯಾಕು. ಈ ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಗೆ ಟಿಕೆಟ್ ಸಿಗದಿದ್ದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಒಡಕುಂಟಾಗುವುದು ಗ್ಯಾರಂಟಿ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ರಾಜ್ಯ ಬಿಜೆಪಿಯ ಹಲವು ನಾಯಕರ ಆತಂಕ.

ಹೀಗಾಗಿ ಈ ಕುರಿತ ವಸ್ತುಸ್ಥಿತಿಯ ವಿವರವನ್ನು ಹೈಕಮಾಂಡ್ ನಿಮ್ಮಿಂದ ಬಯಸುತ್ತದೆ” ಅಂತ ನಡ್ಡಾ ಅವರು ರಾಧಾಮೋಹನದಾಸ್ ಅಗರ್ವಾಲ್ ಅವರಿಗೆ ಸೂಚಿಸಿದ್ದರಂತೆ. ಯಾವಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈ ಸೂಚನೆ ನೀಡಿದರೋ, ರಾಧಾಮೋಹನದಾಸ್ ಅಗರ್ವಾಲ್ ವಿವರವಾದ ವರದಿಯೊಂದನ್ನು ಮೊನ್ನೆ ದಿಲ್ಲಿಗೆ ರವಾನಿಸಿದ್ದಾರೆ. ಮೂಲಗಳ ಪ್ರಕಾರ ಈ ವರದಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿರುವ ಅಗರ್ವಾಲ, ಚನ್ನಪಟ್ಟಣದ ಟಿಕೆಟ್ ಜೆಡಿಎಸ್‌ಗೆ ಹೋದರೆ ಮೈತ್ರಿಕೂಟಕ್ಕೇನೂ ಹಾನಿಯಿಲ್ಲ.

ಆದರೆ ಅದು ಜೆಡಿಎಸ್ ಪಕ್ಷದ ಕೈ ತಪ್ಪಿದರೆ ಮೈತ್ರಿಕೂಟಕ್ಕೆ ಘಾಸಿಯಾಗುವುದು ನಿಶ್ಚಿತ ಎಂದಿದ್ದಾರೆ. ಕಾರಣ? ಕರ್ನಾಟಕದ ನೆಲೆಯಲ್ಲಿ ದಿನದಿಂದ ದಿನಕ್ಕೆ ಜೆಡಿಎಸ್ ಜತೆಗಿನ ಮೈತ್ರಿ ಬಿಜೆಪಿಗೇ ಹೆಚ್ಚು ಅನಿವಾರ್ಯವಾಗುತ್ತಿದೆ. ಯಾಕೆಂದರೆ ಇತ್ತೀಚಿನ ಬೆಳವಣಿಗೆಗಳು ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿಯನ್ನು ಕುಗ್ಗಿಸುತ್ತಿವೆಯೇ ವಿನಾ ಜೆಡಿಎಸ್‌ನ ಶಕ್ತಿಯನ್ನಲ್ಲ. ಇವತ್ತಿನ ಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ನೇತೃತ್ವದ ಕಾಂಗ್ರೆಸ್ ಅನ್ನು ಬಿಜೆಪಿಯ ಫ್ರಂಟ್‌ಲೈನ್ ಲೀಡರುಗಳಿಗಿಂತ ಪರಿಣಾಮಕಾರಿಯಾಗಿ ಎದುರಿಸುತ್ತಿರುವವರು ಎಚ್.ಡಿ.ಕುಮಾರ ಸ್ವಾಮಿ ಮಾತ್ರ. ಒಂದು ಕಡೆಯಿಂದ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರಯೋಗಿಸುತ್ತಿರುವ ಅಸ್ತ್ರಗಳಿಂದ ಬಿಜೆಪಿಯ ಬಹುತೇಕ ನಾಯಕರು ಅಸಹಾಯಕರಾಗಿದ್ದಾರೆ.

ಆದರೆ ಕಾಂಗ್ರೆಸ್ ಅದೆಷ್ಟೇ ದಾಳಿ ಮಾಡಿದರೂ ಕುಮಾರಸ್ವಾಮಿ ಮಾತ್ರ ಜಗ್ಗುತ್ತಿಲ್ಲ. ಅರ್ಥಾತ್ ಮೈತ್ರಿಕೂಟದ ಮುಂಚೂಣಿಯಲ್ಲಿ ನಿಂತು ಕಾಂಗ್ರೆಸ್ ವಿರುದ್ಧ ಹೋರಾಡುವ ವಿಷಯದಲ್ಲಿ ಕುಮಾರಸ್ವಾಮಿ ಅವರೇ ಪವರ್ ಫುಲ್
ಲೀಡರು. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಮೈತ್ರಿಕೂಟವನ್ನು ಮುನ್ನಡೆಸಲು ಕುಮಾರಸ್ವಾಮಿ ಅವರ ಶಕ್ತಿ ಅನಿವಾರ್ಯ. ಹೀಗಿರುವಾಗ ಚನ್ನಪಟ್ಟಣ ಕ್ಷೇತ್ರದ ಬೈ-ಎಲೆಕ್ಷನ್ ಟಿಕೆಟ್ಟು ಬಿಜೆಪಿಯ ಕೈ ತಪ್ಪಿದರೆ ಮೈತ್ರಿಕೂಟದಲ್ಲಿ ಬಿರುಕುಂಟಾಗುತ್ತದೆ ಎಂಬುದು ಸುಳ್ಳು.

ಇದೇ ರೀತಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ ಬಾರಿ ಗೆದ್ದಿರುವುದು ಜೆಡಿಎಸ್. ಹೀಗಾಗಿ ಅದು ಜೆಡಿಎಸ್‌ನ ಕ್ಷೇತ್ರ. ನಮ್ಮ ಪವರ್ ಬೆಳೆಸಿಕೊಳ್ಳಲು ಆ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ ಎಂದು ಹೇಳುವುದು ಮೈತ್ರಿಧರ್ಮಕ್ಕೆ ವಿರುದ್ಧ ವಾದುದು.

ವಸ್ತುಸ್ಥಿತಿ ಎಂದರೆ ಬಿಜೆಪಿ ಜತೆಗಿನ ಹೊಂದಾಣಿಕೆಯ ನಂತರ ಜೆಡಿಎಸ್ ಪಕ್ಷ ಮೈತ್ರಿಧರ್ಮವನ್ನು ಉಲ್ಲಂಘಿಸಿಲ್ಲ. ಲೋಕಸಭಾ ಚುನಾವಣೆಯಲ್ಲಿ ಅದು ಮೈತ್ರಿಧರ್ಮವನ್ನು ಉಲ್ಲಂಘಿಸಿದ್ದರೆ ಮೈತ್ರಿಕೂಟಕ್ಕೆ 19 ಸೀಟು ದಕ್ಕಲು ಸಾಧ್ಯವೇ ಇರಲಿಲ್ಲ. ನಮ್ಮ ಶಕ್ತಿ ಹೆಚ್ಚಿರುವ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ನಾವು ಕಳೆದುಕೊಂಡಿದ್ದೇ ಹೆಚ್ಚು. ಆದರೆ ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವ ಹಳೆ ಮೈಸೂರಿನ ಕ್ಷೇತ್ರಗಳಲ್ಲಿ ನಾವು ಪಡೆದುಕೊಂಡಿದ್ದು ಹೆಚ್ಚು. ಹೀಗಾಗಿ ಚನ್ನಪಟ್ಟಣದ ಟಿಕೆಟನ್ನು ನಿಮ್ಮಿಚ್ಛೆ ಬಂದವರಿಗೆ ಕೊಡಿ ಅಂತ ಜೆಡಿಎಸ್‌ಗೆ ಹೇಳುವುದೇ ಮೈತ್ರಿಧರ್ಮ ಅಂತ ರಾಧಾಮೋಹನದಾಸ್ ಅಗರ್ವಾಲ್ ಅವರು ನಡ್ಡಾ ಅವರಿಗೆ ವಿವರಿಸಿದ್ದಾರೆ.

ಇ.ಡಿ ಮಾಡುವ ಪವಾಡ ಏನು?

ಈ ಮಧ್ಯೆ, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಆರಂಭವಾಗಿದ್ದರೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಾಯಕರು ಜಾರಿ ನಿರ್ದೇಶನಾಲಯ (ಇ.ಡಿ) ಬಂದು ಪವಾಡ ಮಾಡಲಿದೆ ಎಂದು ನಿರೀಕ್ಷಿಸುತ್ತಿzರೆ.
ಸದ್ಯದ ಸ್ಥಿತಿಯಲ್ಲಿ ಲೋಕಾಯುಕ್ತ ತನಿಖೆಯ ಪ್ರೊಸೀಜರ್ರು ಸಿಎಂ ಸಿದ್ದರಾಮಯ್ಯ ಅವರನ್ನು ಮುಜುಗರಕ್ಕೆ
ಸಿಲುಕಿಸುವುದು ಅನುಮಾನ. ಹೀಗಾಗಿ ಈ ಪ್ರಕರಣದಲ್ಲಿ ಇ.ಡಿ ಮಾತ್ರ ಈಟಿ ಪ್ರಯೋಗಿಸಬಹುದು ಎಂಬುದು
ಮೈತ್ರಿಕೂಟದ ಹಲವು ನಾಯಕರ ಲೆಕ್ಕಾಚಾರ. ಆದರೆ ಇ.ಡಿ ಬಂದು ಮಾಡುವುದೇನು? ಎಂಬ ವಿಷಯದಲ್ಲಿ ಯಾರಿಗೂ ಸ್ಪಷ್ಟತೆ ಇಲ್ಲ. ಒಂದು ವೇಳೆ, ಮುಡಾದಿಂದ ಪಡೆದ 14 ನಿವೇಶನಗಳನ್ನು ಸಿದ್ದರಾಮಯ್ಯ ಅವರ ಪತ್ನಿ ಹಿಂದಿರುಗಿಸದೆ ಇದ್ದಿದ್ದರೆ, ಪ್ರಕರಣಕ್ಕೆ ಎಂಟ್ರಿ ಪಡೆದಿರುವ ಇ.ಡಿ ನಿಶ್ಚಿತವಾಗಿ ಆ ನಿವೇಶನಗಳನ್ನು ಸೀಝ್ ಮಾಡಿ ಕೊಳ್ಳುತ್ತಿತ್ತು.

ಹೀಗೆ ಇ.ಡಿ ಇಂಥ ಕೆಲಸ ಮಾಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಜುಗರಕ್ಕೆ ಸಿಲುಕುತ್ತಿದ್ದರು. ಇಲ್ಲ, ತಮ್ಮ ಪತ್ನಿಯ ಹೆಸರಿನಲ್ಲಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಕಾರಣಕ್ಕಾಗಿ ಮುಡಾ ಈ ನಿವೇಶನಗಳನ್ನು ನೀಡಿದೆ. ಅದೂ ಬಿಜೆಪಿ ಸರಕಾರ ಇದ್ದ ಅವಧಿಯಲ್ಲಿ ನೀಡಿದೆ ಅಂತ ಸಿದ್ದರಾಮಯ್ಯ ಹೇಳಿಕೊಂಡರೂ ಜಾರಿ ನಿರ್ದೇಶನಾಲಯದ ಕ್ರಮ ಅವರನ್ನು ಮುಜುಗರಕ್ಕೆ ಸಿಲುಕಿಸುತ್ತಿತ್ತು.

ಹೀಗಾಗಿಯೇ ಈ ಅಂಶವನ್ನು ಬೊಟ್ಟು ಮಾಡಿ ತೋರಿಸಿದ್ದ ಖ್ಯಾತ ನ್ಯಾಯವಾದಿ ಕಪಿಲ್ ಸಿಬಲ್ ಅವರು, ‘ನ್ಯಾಯ
ಸಿಎಂ ಪತ್ನಿಯ ಪರವಾಗಿದೆ ಎಂಬುದು ಬೇರೆ ಮಾತು. ಅದೇ ರೀತಿ ಮುಂದಿನ ದಿನಗಳಲ್ಲಿ ಮುಡಾದಿಂದ ಪರಿಹಾರ ಕೋರಿ ಸಿದ್ದರಾಮಯ್ಯ ಅವರ ಪತ್ನಿ ನ್ಯಾಯಾಲಯದ ಮೊರೆಹೋಗಬಹುದು. ಆದರೆ ಈಗ ತಕ್ಷಣದ ದೃಷ್ಟಿಯಿಂದ, ಇ.ಡಿ ಹೆಚ್ಚಿನದನ್ನೇನೂ ಮಾಡಬಾರದು ಎಂಬ ಕಾರಣಕ್ಕಾಗಿ ನಿವೇಶನಗಳನ್ನು ಮುಡಾಗೆ ಹಿಂದಿರುಗಿಸುವುದು ಒಳ್ಳೆಯದು. ಆ ಮೂಲಕ ಸಿದ್ದರಾಮಯ್ಯ ಅವರನ್ನು ಮುಜುಗರದಿಂದ ಪಾರು ಮಾಡಬಹುದು’ ಎಂಬ ಸಂದೇಶ ರವಾನಿಸಿದ್ದರಂತೆ.

ಹೀಗಾಗಿ ಸಿದ್ದರಾಮಯ್ಯ ಅವರ ಪತ್ನಿ ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದರು ಎಂಬುದು ಕೈ ಪಾಳಯದ
ಮಾತು. ಅಷ್ಟೇ ಅಲ್ಲ, ಈಗ ಮುಡಾ ಪ್ರಕರಣದಲ್ಲಿ ಇ.ಡಿ ಬಂದು ಮಾಡುವುದೇನು?ಎಂಬುದು ಅದರ ಪ್ರಶ್ನೆ. ಅದರ
ಪ್ರಕಾರ, ಮುಡಾ ಪ್ರಕರಣದ ಕಾವು ಕಡಿಮೆಯಾಗಿದೆಯಷ್ಟೇ ಅಲ್ಲ, ಸಿದ್ದರಾಮಯ್ಯ ಅವರ ಕುರ್ಚಿಯೂ ಗಟ್ಟಿ ಯಾಗಿದೆ.

ಕೈ ಪಾಳಯಕ್ಕೆ ಬಿಜೆಪಿ ಸಂದೇಶ?

ಇನ್ನು ದಿಲ್ಲಿಯ ಬಿಜೆಪಿ ನಾಯಕರೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ಫೋನು ಮಾಡಿದ್ದರಂತೆ.
ಸಿದ್ದರಾಮಯ್ಯ ಅವರ ವಿರುದ್ಧ ಮೈತ್ರಿಕೂಟ ನಡೆಸಿದ ದಾಳಿಯಿಂದ ಕೆಂಡಾಮಂಡಲಗೊಂಡ ಕೈ ಪಡೆಯು ಬಿಜೆಪಿ
ಕಾಲದ ಹಗರಣಗಳನ್ನು ಕೆದಕುತ್ತಿದೆಯಲ್ಲ? ಇದರ ಭಾಗವಾಗಿ ಕೊರೋನಾ ಕಾಲಘಟ್ಟದ ವ್ಯವಹಾರಗಳ ಬಗ್ಗೆ
ತನಿಖೆ ನಡೆಸಲು ಎಸ್.ಐ.ಟಿ.ಯನ್ನು ರಚಿಸಲಾಗಿದೆ. ಇದೇ ರೀತಿ ಇನ್ನೂ ಹಲವು ಪ್ರಕರಣಗಳನ್ನು ಕೆದಕುತ್ತಿರುವ ಅದು ಒಬ್ಬೊಬ್ಬರಾಗಿ ಬಿಜೆಪಿಯ ಹಲವು ನಾಯಕರ ಸುತ್ತ ಚಕ್ರವ್ಯೂಹ ರಚಿಸುತ್ತಿದೆ. ಹೀಗಾಗಿ ಸರಕಾರವನ್ನು ಟೀಕಿಸುವ ವಿಷಯದಲ್ಲಿ ಬಿಜೆಪಿ ನಾಯಕರಿಗೆ ಒಂದು ತಿಂಗಳ ಹಿಂದಿದ್ದ ಖದರ್ ಈಗ ಉಳಿದಿಲ್ಲ.

ಸಾಲದು ಎಂಬಂತೆ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಕೆದಕಲು ಎಲ್ಲ ಬಗೆಯ ಮಾರ್ಗ ಗಳನ್ನು ಓಪನ್ ಮಾಡಿಕೊಳ್ಳುತ್ತಿರುವ ಸಿದ್ದು-ಡಿಕೆಶಿ, ಇನ್ನು ಸ್ವಲ್ಪ ದಿನಗಳಲ್ಲಿ ರಾಜ್ಯ ಬಿಜೆಪಿಯನ್ನು ಅಸಹಾಯಕ ಗೊಳಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯ ಮೊನ್ನೆ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನು ಮಾಡಿದ ದಿಲ್ಲಿ ಬಿಜೆಪಿಯ ಟಾಪ್ ಲೀಡರ್ ಒಬ್ಬರು, ‘ನೀವೇನೇ ಮಾಡಿ. ಆದರೆ ನಮ್ಮ ಸೀನಿಯರ್ ಲೀಡರ್ ವಿಷಯದಲ್ಲಿ ಟಫ್ ಆಗಬೇಡಿ. ಯಾಕೆಂದರೆ ಅವರಿಗಾದರೂ ನಿಮ್ಮ ವಿರುದ್ಧ ಹೋರಾಡುವ ಆಸಕ್ತಿ ಇಲ್ಲ.ಹೀಗಾಗಿ ಅವರಿಗೇ ಆಗಲಿ, ನಮಗೇ ಆಗಲಿ‌ ಮುಜುಗರ ಮಾಡಬೇಡಿ’ ಎಂದಿದ್ದಾರಂತೆ.

ಚೌಟ-ಕಟೀಲ್ ಕದನ

ಅಂದ ಹಾಗೆ, ‘ಹಿಂದುತ್ವದ ಪ್ರಯೋಗಶಾಲೆ’ ಅನ್ನಿಸಿಕೊಂಡ ಮಂಗಳೂರಿನಲ್ಲಿ ಹಾಲಿ ಸಂಸದ ಬ್ರಿಜೇಶ್ ಚೌಟ ಮತ್ತು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಡುವಣ ಶೀತಲ ಸಮರಕ್ಕೆ ಸಂಘ ಪರಿವಾರ ಸುಸ್ತಾಗಿದೆ. ಹಿಂದೆಲ್ಲ ಸ್ಥಳೀಯ ನಾಯಕರನ್ನು ನಿಯಂತ್ರಿಸುತ್ತಿದ್ದ ಜಿಲ್ಲೆಯ ಆರೆಸ್ಸೆಸ್ ಘಟಕ ಈಗ ಎರಡು ಬಣಗಳಾಗಿ ನಿಂತಿದೆ. ಈ ಪೈಕಿ ಒಂದು ಬಣ ಬ್ರಿಜೇಶ್ ಚೌಟಾ ಜತೆಗಿದ್ದರೆ, ಮತ್ತೊಂದು ಬಣ ನಳೀನ್ ಕುಮಾರ್ ಕಟೀಲ್ ಬೆನ್ನಿಗಿದೆ.

ಮೂಲಗಳ ಪ್ರಕಾರ, ನಳೀನ್ ಕುಮಾರ್ ಕಟೀಲ್ ಸಂಸದರಾಗಿದ್ದಾಗ ಜಿಲ್ಲೆಯ ಬಿಜೆಪಿ ಕಾರ್ಯಚಟುವಟಿಕೆಗಳಲ್ಲಿ ಚೌಟ ಅವರನ್ನು ನಿರ್ಲಕ್ಷಿಸಿದ್ದರು. ಆ ನೋವನ್ನು ಮನಸ್ಸಿನಲ್ಲಿಟ್ಟುಕೊಂಡಿರುವ ಬ್ರಿಜೇಶ್ ಚೌಟ-ಈಗ ನಳೀನ್ ಕುಮಾರ್ ಕಟೀಲ್ ಅವರನ್ನು ಪಕ್ಷದ ಚಟುವಟಿಕೆಗಳಿಂದ ದೂರವಿಡುತ್ತಿzರೆ. ಇಷ್ಟಾದರೂ ಸಂಘ ಪರಿವಾರದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ.ಸಂತೋಷ್ ಅವರ ಕಟಾಕ್ಷವಿರುವ ಕಾರಣಕ್ಕಾಗಿ ಸ್ಥಳೀಯ ಆರೆಸ್ಸೆಸ್‌ನ ಒಂದು ಬಣ ಕಟೀಲರ ಹಿಂದೆ ನಿಂತಿದೆ. ಉಳಿದಂತೆ ವಿಜಯೇಂದ್ರ ಪ್ಲಸ್ ಕಲ್ಲಡ್ಕ ಪ್ರಭಾಕರ ಭಟ್ಟರ ಕಟಾಕ್ಷ ಇರುವ ಕಾರಣಕ್ಕಾಗಿ ಚೌಟ ಅವರ ಬೆನ್ನಿಗೆ ಪಕ್ಷ ಮತ್ತು ಸಂಘ ಪರಿವಾರದ ಒಂದು ಬಣ ನಿಂತಿದೆ.

ಹೀಗೆ ಚೌಟ ಮತ್ತು ಕಟೀಲರ ನಡುವೆ ಪ್ರಾರಂಭವಾಗಿರುವ ಶೀತಲ ಸಮರದಲ್ಲಿ ಕಟೀಲ್ ಒಂದಷ್ಟು ಪ್ರತಿರೋಧ
ತೋರುತ್ತಿದ್ದಾರಾದರೂ ಅದು ಎಷ್ಟು ದಿನ ನಡೆಯುತ್ತದೋ ಗೊತ್ತಿಲ್ಲ. ಕಾರಣ? ಸಂತೋಷ್ ಇವತ್ತು ರಾಷ್ಟ್ರ ಮಟ್ಟದಲ್ಲಿ ಪ್ರಬಲರಾಗಿರುವುದರಿಂದ ಕಟೀಲ್ ಅವರಿಗೆ ಸ್ವಲ್ಪ ಶಕ್ತಿ ಇದೆ.

ಆದರೆ ಸಂತೋಷ್ ಅವರ ಪವರ್ ಕಡಿಮೆಯಾದರೆ ನೋ ಡೌಟ್, ಹಾಲಿ ಸಂಸದ ಬ್ರಿಜೇಶ್ ಚೌಟ ಪವರ್
ಹೆಚ್ಚಾಗುತ್ತದೆ. ಹಾಗೇನಾದರೂ ಆದರೆ ಕಟೀಲರು ಅಜ್ಞಾತವಾಸಕ್ಕೆ ತೆರಳಬಹುದು ಎಂಬುದು ಲೋಕಲ್
ಬಿಜೆಪಿಗರ ಮಾತು. ಮುಂದೇನಾಗುತ್ತದೋ?

ಲಾಸ್ಟ್ ಸಿಪ್: ಇಂಟರೆಸ್ಟಿಂಗ್ ಸಂಗತಿ ಎಂದರೆ ಮಂಗಳೂರಿನ‌ ರಾಜಕಾರಣ ಬಿಜೆಪಿಯನ್ನು ಹೋಳು ಮಾಡಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಆಡಳಿತಾರೂಢ ಕಾಂಗ್ರೆಸ್‌ನ ಕತೆಯೂ ಹಾಗೇ ಆಗಿದೆ. ಅರ್ಥಾತ್, ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದ ಬಣ ಒಂದು ಕಡೆ ಇದ್ದರೆ, ಮಿಥುನ್ ರೈ, ರಮಾನಾಥ ರೈ, ಮಂಜು ನಾಥ ಭಂಡಾರಿ ಸೇರಿದಂತೆ ಹಲವು ಪ್ರಮುಖರ ಬಣ ಮತ್ತೊಂದು ಕಡೆ ನಿಂತಿದೆ. ಈ ಎರಡು ಬಣಗಳ ನಡುವಣ ಹಾಲಿ ಕಾದಾಟಕ್ಕೆ ಮುಖ್ಯ ಕಾರಣ ಸರಕಾರಿ ನೌಕರರ ವರ್ಗಾವಣೆ ಮತ್ತು ಆಡಳಿತಾತ್ಮಕ ವಿಷಯ. ಈ ವಿಷಯದಲ್ಲಿ ಯು.ಟಿ.ಖಾದರ್ ಮೇಲುಗೈ ಸಾಧಿಸಿರುವುದು ಸಹಜವಾಗಿಯೇ ಮತ್ತೊಂದು ಬಣದವರನ್ನು ಕೆರಳಿಸಿದೆ. ಹೀಗಾಗಿ ಜಿಲ್ಲೆಯ ರಾಜಕಾರಣದಲ್ಲಿ ಶುರುವಾಗಿರುವ ಉಭಯ ಬಣಗಳ ಕಚ್ಚಾಟ ಸದ್ಯದ ಕೈ ಪಾಳಯಕ್ಕೆ ತಲೆನೋ
ವಾಗುವುದು ನಿಶ್ಚಿತವಾಗಿದೆ.

ಇದನ್ನೂ ಓದಿ: R T Vittalmurthy Column: ಸಿದ್ದು ಅಲ್ಲಾಡ್ತಿಲ್ಲ, ಗವರ್ನರ್‌ ಬಿಡ್ತಿಲ್ಲ