Tuesday, 22nd October 2024

Ravi Hunz Column: ಯಾರೂ ತಾವು ʼಕಾಳಾಮುಖʼ ರೆಂದು ಹೇಳಿಕೊಂಡಿಲ್ಲ

ಬಸವ ಮಂಟಪ

ರವಿ ಹಂಜ್

(ಭಾಗ- 2)

ವೀರಶೈವ, ಪೂರ್ವಕಾಲೀನ/ಹಿರಿಯಕಾಲೀನ ವಚನಕಾರರು ಮತ್ತು ಬಸವಕಾಲೀನ ವಚನಕಾರರು ಹೆಚ್ಚಿನ ಪ್ರವರ್ಧಮಾನಕ್ಕೆ ಬಂದದ್ದು ಭಕ್ತಿಪಂಥದ ಕ್ರಾಂತಿಯ ಅಲೆಯಲ್ಲಿ! ಜೈನರ ಪ್ರಾಬಲ್ಯದ ವಿರುದ್ಧ ಹೋರಾಡಿ ಶೈವಪಂಥವನ್ನು ಹೇರಿದ್ದು ಈ ಎಲ್ಲಾ ವಚನಕಾರರ ಸಮಾನ ಸಿದ್ಧಾಂತ. ಭಕ್ತಿಪಂಥದ ಭಾಗವಾಗಿ ವೀರಶೈವರ ರೇಣುಕರು ಉದ್ಭವವಾದರು ಎನ್ನುವ ಕೊಲ್ಲಿ ಪಾಕಿ (ಇಂದಿನ ಕೊಳನುಪಾಕ) ಜೈನರ ಒಂದು ಪ್ರಮುಖ ಸ್ಥಳ.

ಅಂದಿನ ವೀರಶೈವರು ಜೈನರೊಟ್ಟಿಗೆ ಹೋರಾಡಿ ಕೊಲ್ಲಿಪಾಕಿಯನ್ನು ತಮ್ಮ ಕೈವಶಮಾಡಿಕೊಂಡಿದ್ದರು. ಈ
ರೇಣುಕರ ಸಮಕಾಲೀನರೆನ್ನಬಹುದಾದ ಪೂರ್ವಕಾಲೀನ ಶರಣರಾದ ಓಹಿಲ, ಉದ್ಭಟ, ಕೆಂಭಾವಿ ಭೋಗಯ್ಯ,
ಕೊಂಡಗುಳಿ ಕೇಶಿರಾಜ, ಡೋಹರ ಕಕ್ಕಯ್ಯರನ್ನು ಜೇಡರ ದಾಸಿಮಯ್ಯ (ಕ್ರಿ.ಶ 980-ಕ್ರಿ.ಶ. 1040) ತನ್ನ ವಚನಗಳಲ್ಲಿ ಕೊಂಡಾಡಿದ್ದಾನೆ. ಇದರಲ್ಲಿ ಓಹಿಲ ಮತ್ತು ಉದ್ಭಟರಿಬ್ಬರೂ ಸೌರಾಷ್ಟ್ರದವರೆನ್ನಲಾಗಿದೆ. ಈ ಸೌರಾಷ್ಟ್ರ ಮೂಲದ ಕೆಲ ಶೈವರು ಮುಂದೆ ವೀರಶೈವತ್ವದ ಕೆಲ ನವಸಂಪ್ರದಾಯಗಳನ್ನು ಪ್ರಮುಖವಾಗಿ ಸಸ್ಯಾಹಾರವನ್ನು ಒಪ್ಪದೇ ತಮ್ಮದೇ ಒಂದು ಭಾಗವಾಗಿ ಈಗಲೂ ತಮಿಳುನಾಡಿನ ಹಲವೆಡೆ ಸೌರಾಷ್ಟ್ರ ಪಾಶುಪತರಾಗಿ ಕಾಣಸಿಗುತ್ತಾರೆ.

ಹಾಗಾಗಿಯೇ ಬಸವಣ್ಣನು ಮಾಂಸಾಹಾರಿ ಪಾಶುಪತರನ್ನು ಕಾಪಾಲಿಕರನ್ನು ಒಳಗೊಳ್ಳುವ ಈ ವಚನವನ್ನು ರಚಿಸಿzನೆ ಎನಿಸುತ್ತದೆ: ‘ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು ಅವರ ಲಿಂಗನೆಂಬೆ, ಸಂಗನೆಂಬೆ, ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು’. ಕೊಲ್ಲಿ ಪಾಕಿಯ ರೇಣುಕರ ಉದ್ಭವದ ಹಿನ್ನೆಲೆಯಲ್ಲಿ ರಸ್ತಾಪುರ ಭೀಮಕವಿಯ ‘ಹಾಲುಮತೋತ್ತೇಜಕ ಪುರಾಣ’ದ ಎರಡನೇ ಸಂಽಯಲ್ಲಿ ರೇವಣಸಿದ್ದೇಶ್ವರ ಚರಿತ್ರೆಯ ಕುರಿತ ಮಾಹಿತಿ ಹೀಗಿದೆ: “ಕೊಲ್ಲಿಪಾಕಿಯ ಸೋಮಲಿಂಗ
ದಿಂದ ಉದಯಿಸಿದ ರೇವಣಸಿದ್ಧರು ಭಕ್ತರನ್ನು ಉದ್ಧರಿಸಲು ಶಾಂತಮುತ್ತಯ್ಯ ಎಂಬುವವರಿಗೆ ಲಿಂಗದೀಕ್ಷೆಯನ್ನು
ಕೊಡುತ್ತಾರೆ. ಇಲ್ಲಿ ರೇವಣಸಿದ್ಧರು ಲೀಲೆಗಳನ್ನು ತೋರುತ್ತಾ ಸರೂರು ಗ್ರಾಮಕ್ಕೆ ಬಂದು ಕುರುಬರ ಮನೆತನದಲ್ಲಿ ಜನಿಸಿದ ಶಾಂತಮುತ್ತಯ್ಯನಿಗೆ ‘ಸಿದ್ಧಿಸಲಿ ನೀನಂದ ನುಡಿಗಳು ಭೂಮಿಯಲ್ಲಿ’ ಎಂದು ಆರ್ಶೀವಾದ ಮಾಡಿ ಲಿಂಗದೀಕ್ಷೆಯನ್ನು ನೀಡಿ ಹಾಲುಮತಕ್ಕೆ ಅಧ್ಯಕ್ಷನನ್ನಾಗಿಸುವನು”.

ಇದು ಈ ಪುರಾಣದಲ್ಲಿರುವ ಅಂಶ. ಮೌಖಿಕ ಕಥಾನಕದ ಆಧಾರವಾಗಿ ಈ ಪುರಾಣವನ್ನು ಬರೆಯಲಾಗಿದೆ ಎಂದು
ತಿಳಿದುಬಂದಿದೆ (ಎಫ್.ಟಿ. ಹಳ್ಳಿಕೇರಿ (ಸಂ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಕನ್ನಡ
ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, 2008). ಈ ಪುರಾಣದ ಪ್ರಕಾರ ಕೊಲ್ಲಿಪಾಕಿಯಲ್ಲಿ ಸೋಮನಾಥ ಲಿಂಗದಿಂದ ಉದ್ಭವಗೊಂಡ ಅವತಾರ ಪುರುಷ ರೇವಣಸಿದ್ದೇಶ್ವರರು ಪಶುಪಾಲಕ ಹಾಲುಮತ (ಕುರುಬ) ಹಿನ್ನೆಲೆಯವರು. ಪೌರಾಣಿಕ ಕಥನದಲ್ಲಿ ಉದ್ಭವಿಸಿದವರು ಇಂಥ ಕುಲದವರೇ ಎನ್ನುವುದು ಮತ್ತು ಪ್ರಶ್ನಿಸುವುದು ತಾರ್ಕಿಕವಲ್ಲ. ಹಾಗೆಯೇ ಇದರಲ್ಲಿನ ಕಾಲಮಾನಗಳು ಮತ್ತು ಪವಾಡದ ಕತೆಗಳನ್ನು ಐತಿಹಾಸಿಕ ದಾಖಲೆಯನ್ನಾಗಿ ಪರಿಗಣಿಸು‌ ವುದೂ ಅಲ್ಲ. ಈ ಪುರಾಣಕ್ಕೆ ಪೂರಕವಾದ ಐತಿಹಾಸಿಕ ಪುರಾವೆಗಳಿದ್ದರೆ ಆಗ ತಾಳೆಹಾಕಿ ವಿಶ್ಲೇಷಿಸಿ ಪವಾಡವಲ್ಲದ ಮಾಹಿತಿಯನ್ನು ಪರಿಗಣಿಸಬಹುದು. ಹಾಗಾಗಿ ಈ ಪೌರಾಣಿಕ ಕತೆಯಿಂದ ಗ್ರಹಿಸಬೇಕಾದ ಏಕಾಂಶವೆಂದರೆ ಪಶುಪಾಲಕರು (ಕುರುಬರು) ಸಹ ವೀರಶೈವ ಪಂಥದ ಕ್ರಾಂತಿಯ ಪ್ರಮುಖ ಭಾಗವಾಗಿದ್ದಲ್ಲದೆ ಮಹತ್ವದ ಗುರುಸ್ಥಾನವನ್ನು ಪಡೆದಿದ್ದರು ಎಂಬುದು!

ಸಂಶೋಧನೆ ಹಿನ್ನೆಲೆಯಲ್ಲಿ ಪಾಶುಪತದ ಆಚರಣೆಯ ಪಶುಪಾಲಕ ಹಾಲುಮತಸ್ಥರಿಗೆ ವೀರಶೈವ ಪಂಥ ಸ್ವಾಭಾವಿಕವಾಗಿ ಬೇರೆಯದೆಂದು ಎನಿಸಿರಲೇ ಇಲ್ಲ. ಮುಂದೆ ಯಾವಾಗ ವೃತ್ತಿಗಳೇ ಜಾತಿಗಳಾದವೋ ಆಗ ಇವರು ಜಾತೀಯವಾಗಿ ಕುರುಬರೆನ್ನಿಸಿಕೊಂಡು ಗುರುತಿಸಿಕೊಂಡಿರಬಹುದು. ಅದೇ ರೀತಿ ‘ಹುಟ್ಟಿನಿಂದ ಜಾತಿ’ ನೀತಿಯ ಕಾರಣ ಶಾಶ್ವತವಾಗಿ ಕುರುಬರೆಂಬ ಜಾತಿಗೆ ಸೀಮಿತಗೊಂಡು ವೀರಶೈವದಿಂದ ಹೊರಗುಳಿದಿರಬಹು
ದೆಂದು ಊಹಿಸಬಹುದು. ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಕುರುಬರು ಈಗಲೂ ಸಸ್ಯಾಹಾರಿಗಳು ಎಂಬುದು
ಇಲ್ಲಿ ಗಮನಿಸಬೇಕಾದ ಪೂರಕ ಅಂಶ. ಅಂತೆಯೇ ತಮ್ಮ ಸನಾತನ ಶೈವ ಪರಂಪರೆಯ ಕುರುಹಾಗಿ ಒಡೆಯರ್ ಎಂಬ ಹಾಲುಮತ ಜಂಗಮರು ಇಂದಿಗೂ ಕರಡಿಗೆ ಧರಿಸಿ ಶಿವ ಪೂಜಾ ನಿರತರಾಗಿದ್ದಾರೆ.

ದಾವಣಗೆರೆಯ ಸಂಸದರಾಗಿದ್ದ ದಿವಂಗತ ಚೆನ್ನಯ್ಯ ಒಡೆಯರ್ ಅಂಥ ಹಾಲುಮತ ಜಂಗಮ ಪರಂಪರೆ ಯವರಾಗಿದ್ದರು. ‘ಹುಟ್ಟಿನಿಂದ ಜಾತಿ’ ನೀತಿಯ ಕಾರಣವಾಗಿಯೇ ಕುಶಲಕರ್ಮಿ ಪಂಚಾಳರು ಕುರುಬ ರಂತೆಯೇ ವಿಶ್ವಕರ್ಮಿಗಳಾಗಿ ವೀರಶೈವದ ಹೊರಗುಳಿದರೆ ಕೃಷಿಕ ಪಂಚಮಸಾಲಿಗಳು ವೀರಶೈವದ ಒಳಗುಳಿದರು. ಈ ಬಗ್ಗೆ ಖ್ಯಾತ ಸಾಗರದಾಳದ ಉತ್ಖನನಜ್ಞರು ಮತ್ತು ಶಿಲ್ಪಕಲಾ ತಜ್ಞರೂ ಆದ ಗುಡಿಗಾರ್ ಪುಟ್ಟಸ್ವಾಮಿಯವರು ಚರ್ಚೆ ಯೊಂದರಲ್ಲಿ ಬೆಳಕು ಚೆಲ್ಲಿದ್ದರು. ‘ಹಾಲುಮತೋತ್ತೇಜಕ ಪುರಾಣ’ದ ಪೌರಾಣಿಕ ಕತೆಯಲ್ಲದೆ ಕಪಟರಾಳ ಕೃಷ್ಣರಾಯರ ‘ಕರ್ನಾಟಕ ಲಾಕುಳಶೈವ ಇತಿಹಾಸ’ದ ಪುಟ 85ರಲ್ಲಿ ಲೇಖಕರು “ಮಾಧವಾ ಚಾರ್ಯನ ಸರ್ವದರ್ಶನ ಸಂಗ್ರಹದಲ್ಲಿ ಮಾಹೇಶ್ವರ ದರ್ಶನಗಳಂದಾದ ಶೈವಮತವನ್ನು ಹೇಳಿದೆ. ಅದರಲ್ಲಿ ಪಶುಗಳಲ್ಲಿ ಮೂರು ಭೇದಗಳು, 1. ವಿಜ್ಞಾನಕಲ, 2. ಪ್ರಯಾಯಕಲ, 3. ಸಕಲ. ವಿಜ್ಞಾನಕಲರು ಮಲಯುಕ್ತರು, ಪ್ರಯಾ ಯಕಲರು ಮಲಕರ್ಮಯುಕ್ತರು ಮತ್ತು ಸಕಲರು ಮಲಮಾಯ ಕರ್ಮಯುಕ್ತರು.

ಇವುಗಳಲ್ಲಿ ಮೊದಲನೇ ವರ್ಗದ ವಿಜ್ಞಾನಕಲದಲ್ಲಿ ಪುನಃ ಎರಡು ಬಗೆ – ಸಮಾಪ್ತ ಕಲುಷರು ಮತ್ತು ಅಸಮಾಪ್ತ ಕಲುಷರು. ಸಮಾಪ್ತಕಲುಷರೇ ಪರಮೇಶ್ವರನ ಕೃಪೆಯಿಂದ ವಿದ್ಯೇಶ್ವರ ಪದವಿಗೆ ಬರುವರು. ಅಸಮಾಪ್ತಕಲುಷರು ಮಂತ್ರಗಳಾಗುವರು. ಈ ಮಂತ್ರಗಳು ಏಳು ಕೋಟಿಗಳು. ಮಂತ್ರೇಶ್ವರರು ಏಳು ಕೋಟಿ ಕೋಟಿಗಳು. ಅಂತೆಯೇ ಈ ಮತಕ್ಕೆ ಎಕ್ಕೋಟಿಸಮಯವೆಂದು ಹೆಸರು. ಇಂದಿಗೂ ಕರ್ನಾಟಕದಲ್ಲಿ ಮೈಲಾರನ ಒಕ್ಕಲಿನವರು ‘ಏಳು ಕೋಟಿ ಏಳು ಕೋಟಿ ಉಘೇ ಚಾಂಗು ಭಲೇ’ ಎಂದು ಶಿವನ ಜಯಘೋಷ ಮಾಡುತ್ತಾರೆ. ಇದುವೇ ಪೂರ್ವದ ಲಾಕುಳ ಸಿದ್ಧಾಂತವಿದ್ದಂತೆ ತೋರುವುದು. ಶಾಸನಗಳಲ್ಲಿ ಇದನ್ನು ಎಕ್ಕೋಟಿ ಸಮಯವೆಂದು ಕರೆಯಲಾಗಿದೆ. ಸರ್ವದರ್ಶ ನಕಾರನ ಮಾಹೇಶ್ವರರಲ್ಲಿಯ ಶೈವಸಿದ್ಧಾಂತವೂ ಇದೇ. ಈ ಸಿದ್ಧಾಂತವೇ ಮುಂದೆ ಶ್ರೀಕಂಠ ಶಿವಾಚಾರ್ಯನಿಂದ ನಿರೂಪಿಸಲ್ಪಟ್ಟ ಶಕ್ತಿವಿಶಿಷ್ಟಾದ್ವೈತದಲ್ಲಿ ಪರಿಣಾಮವಾಯಿತೆಂದು ಡಾ. ಭಂಡಾರ್ಕರರು ಅಭಿಪ್ರಾಯಪಟ್ಟಿದ್ದಾರೆ” ಎನ್ನುತ್ತಾರೆ.

ಕಾಳಾಮುಖ-ವೀರಶೈವರನ್ನು ಬೆಸೆಯುವ ವೀರ ಮಾಹೇಶ್ವರ, ಜಂಗಮ, ವೀರಬಣಂಜು, ವೀರಪಂಚಾಳ ಪದಗಳ ಜತೆಜತೆಗೆ ವೀರಶೈವ, ಲಿಂಗಿ, ಲಿಂಗಾಯತ ಮೊದಲಾದ ಹೆಸರುಗಳಿಂದ ಈ ಮತದವರನ್ನು ವ್ಯಾಸನ ಕಾಲ ದಿಂದಲೂ ಕರೆಯುತ್ತಿದ್ದರು. ವೀರಶೈವ, ವೀರಮಾಹೇಶ್ವರ, ಮಾಹೇಶ್ವರ, ವೀರಬಣಂಜು, ವೀರಪಂಚಾಳ ಎಂಬ ಹೆಸರುಗಳು ಬಹುಮಟ್ಟಿಗೆ ಗ್ರಂಥಗಳಲ್ಲಿ ಉಪಯೋಗಿಸಲ್ಪಟ್ಟರೆ ಜಂಗಮ, ಲಿಂಗಿ, ಲಿಂಗಿ ಬ್ರಾಹ್ಮಣ, ಲಿಂಗವಂತ, ಲಿಂಗಾಯತವೆಂಬ ಪದಗಳು ಜನಸಾಮಾನ್ಯರಿಂದ ಉಪಯೋಗಿಸಲ್ಪಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠವು ‘ಪಟ್ಟಣಗಳಲ್ಲಿ ವೀರಶೈವ ಎನ್ನುತ್ತಾರೆ, ಹಳ್ಳಿಗಳಲ್ಲಿ ಲಿಂಗಾಯತ ಎನ್ನುತ್ತಾರೆ. ಎರಡೂ ಒಂದೇ’ ಎಂಬುದಾಗಿ, ಕೆಲವು ವರ್ಷಗಳ ಹಿಂದೆ ‘ವೀರಶೈವ ಬೇರೆ ಲಿಂಗಾಯತ ಬೇರೆ’ ಎಂಬ ಅಭಿಪ್ರಾಯ ಭುಗಿಲೆದ್ದಾಗ ಹೇಳಿಕೆ ನೀಡಿದ್ದನ್ನು ಇಲ್ಲಿ ಸಾಂದರ್ಭಿಕವಾಗಿ ನೆನಪಿಸಿಕೊಳ್ಳಬಹುದು.

ಶಿವಜ್ಞಾನಿ ವಿದ್ಯಾಪಾರಾಂಗತರಾದ ವೀರಶೈವಿಗರನ್ನು ಜನಸಾಮಾನ್ಯರು ಇವರೂ ಬ್ರಹ್ಮಜ್ಞಾನಿ ವಿದ್ಯಾ ಪಾರಾಂಗತರಾದ ಬ್ರಾಹ್ಮಣರೇ ಆಗಿದ್ದಾರೆ ಎಂದು ವರ್ಣಾಶ್ರಮದ ಪ್ರಕಾರ ಸಮೀಕರಿಸಿ ವೀರಶೈವರನ್ನು ‘ಲಿಂಗಿ ಬ್ರಾಹ್ಮಣರು’ ಎನ್ನುತ್ತಿದ್ದರು. ಇಂಥ ವರ್ಣಾಶ್ರಮ ಸಮೀಕರಣದಲ್ಲಿ ಬೌದ್ಧ ಸನ್ಯಾಸಿಗಳನ್ನೂ ಬ್ರಾಹ್ಮಣ ರೆಂದೇ ಸಾಮಾನ್ಯರು ಪರಿಗಣಿಸಿದ್ದರು. ಈ ಲಿಂಗಿ ಬ್ರಾಹ್ಮಣ ಎನ್ನುವುದೇ ‘ಲಿಂಗಿಯತಿ’ಯಾಗಿ, ಲಿಂಗಾಯತಿ/ ಲಿಂಗಾಯತ ವಾಯಿತು. ದೇಶದ ತುಂಬೆ ನಾಮಪದಗಳು ಹೇಗೆ ನಿಷ್ಪತ್ತಿಗೊಂಡವೋ (ಅಪಭ್ರಂಶಗೊಂಡೋ ಆಡುಮಾತಿಗೆ ಸಿಲುಕಿಯೋ) ಹಾಗೆಯೇ ‘ಲಿಂಗಾಯತ’ ಪದದ ವ್ಯುತ್ಪತ್ತಿ ‘ಲಿಂಗಿ ಬ್ರಾಹ್ಮಣ’ ಪದದಿಂದಲೇ ಆಯಿತು ಎನ್ನಬಹುದು. ಆದರೆ ಇಂಥ ಸಾಮಾನ್ಯ ಭಾಷಾ ಬೆಳವಣಿಗೆಯ ಪದೋತ್ಪತ್ತಿಯನ್ನು ಕನ್ನಡದಲ್ಲಿ ಸ್ನಾತಕೋತ್ತರ, ಪಿಎಚ್‌ಡಿ, ಪೋ ಡಾಕ್ಟೋರಲ್ ಪದವಿ ಪಡೆದು ಸಂಶೋಧನೆ ಮಾಡಿರುವ ಪಂಡಿತರೇ ಪ್ರಭೃತಿ ಕಾಮಾಲೆಗೊಳಗಾಗಿ ‘ಕಲ್ಬುರ್ಗಿ ನಾಥ ಪ್ರಮೇಯ’ದನ್ವಯ ಲಿಂಗಿ ಬ್ರಾಹ್ಮಣ ಎಂದರೆ ಇಂದಿನ ವರ್ತಮಾನದ ಬ್ರಾಹ್ಮಣ ಜಾತಿಗೆ ಸಮೀಕರಿಸಿ ‘ಷರಾ’ ಬರೆದು ಜನಸಾಮಾನ್ಯರನ್ನು ವಿಸ್ಮೃತಿಗೆ ನೂಕಿದ್ದಾರೆ. ವಿಪರ್ಯಾಸವೆಂದರೆ ಇವರ ಅಂತರಂಗವೇ ಅವಧೂತ ಸದೃಶವಾಗಿ ಇವರ ಒಂದು ಕೃತಿಯ ಹೆಸರನ್ನು ‘ಸಂಸ್ಕೃತಿ ವಿಕೃತಿ’ ಎಂದಾಗಿಸಿದೆ.

ಈ ‘ಲಿಂಗಾಯತ’ ಪದವನ್ನು ಪಂಡಿತರು ನಾನಾ ರೀತಿಯಲ್ಲಿ ನಿರ್ವಚಿಸುತ್ತಾರೆ. ಬಾಗಾಯತ, ಪಂಚಾಯತ
ಮೊದಲಾದ ಪದಗಳಂತೆ ಇದೂ ಒಂದು ಪದ ಎನ್ನುತ್ತಾರೆ. ಆದರೆ ಆಯತ, ಸ್ವಾಯತ, ಸನ್ನಿಹಿತವೆಂಬ ಪದಗಳು
ವಚನಕಾರರಲ್ಲಿ ವಿಶೇಷಾರ್ಥದಲ್ಲಿ ಉಪಯೋಗಿಸಲ್ಪಟ್ಟಿವೆ. ವ್ಯಾಸನ ಸ್ಕಂದಪುರಾಣದಲ್ಲಿ ತಿಳಿಸಿದ ವೀರಶೈವ ಇಷ್ಟಲಿಂಗಾರ್ಚನೆಯ ಕ್ರಮಕ್ಕನುಗುಣವಾಗಿ ಶಿಷ್ಯನ ಚಿತ್ಕಲೆಯನ್ನು ಲಿಂಗದಲ್ಲಿ ವಿಧ್ಯುಕ್ತ ಕ್ರಮದಿಂದ ಆಹ್ವಾನಿಸಿ ಗುರುವು ಶಿಷ್ಯನಿಗೆ ಆ ಲಿಂಗದ ಸಂಬಂಧವನ್ನುಂಟುಮಾಡಿದಾಗ ಆತನು ಲಿಂಗಾಯತನಾಗುವನು; ಇದು ಆಯತ. ಅವನು ಪ್ರಾಣಲಿಂಗಾನುಸಂಧಾನವನ್ನು ಮಾಡಬಲ್ಲವನಾಗಲು ಲಿಂಗವು ಸ್ವಾಯತವಾಗುವುದು; ಅವನು
ಭಾವಲಿಂಗಾನುಸಂಧಾನವನ್ನು ಮಾಡಲು ಬಲ್ಲವನಾಗಲು ಲಿಂಗವು ಸನ್ನಿಹಿತವಾಗುವುದು.

ಹೀಗೆ ಎಲ್ಲಾ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಸಾಕ್ಷ್ಯಗಳು ಆಕರ ಗ್ರಂಥಗಳು ಪಾಶುಪತ-ಲಾಕುಳ- ಕಾಳಾಮುಖ-ವೀರಶೈವ-ಲಿಂಗಾಯತಗಳು ಒಂದೇ ಎಂದು ಪುರಾವೆ ಕೊಡುತ್ತಾ ಸಾಗಿಬಂದಿವೆ. ಪಶುಪತಿ
ಅಂದರೆ ನಾನು ಪಶು (ಭಕ್ತ), ನನ್ನ ಪತಿ (ಒಡೆಯ) ಆ ಶಿವ ಎಂಬ ಪಾಶುಪತಾರ್ಥವೇ ವೀರಶೈವ ಶರಣ ಲಿಂಗಾಯತರ ‘ಶರಣಸತಿ-ಲಿಂಗಪತಿ’ಯಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕ್ರಿಸ್ತಪೂರ್ವದ ಮೊಹೆಂಜೋದಾರೋ ಕಾಲದಿಂದಲೂ ಶೈವಪಥ ಆಚರಣೆಯಲ್ಲಿದ್ದು ಮತ್ತು ಇತಿಹಾಸದುದ್ದಕ್ಕೂ ತಾನು ಸಾಗಿಬಂದ ಪಥದ ಗುರುತನ್ನು ಢಾಳಾಗಿ ತೋರುತ್ತ ಸಂಶೋಧನೆಗಳಿಗೆ ಸಾಕ್ಷ್ಯವನ್ನು ಕೊಟ್ಟಿದೆ. ಹಾಗಾಗಿ ರೇಣುಕರಾಗಲಿ ಬಸವಣ್ಣನಾಗಲಿ ಈ ಪಥದಲ್ಲಿ ಸಾಗಿದ ಸಹಸ್ರಾರು ಶಿವಪಥಿಗಳಂತೆ ಪಂಥ ಪರಿಚಾರಕರೇ ಹೊರತು ಸಂತ ಸಂಸ್ಥಾಪಕರಲ್ಲ!

ಕಾಳಾಮುಖಿ ಏಕಾಂತರಾಮಯ್ಯನನ್ನು, ಶಕ್ತಿವಿಶಿಷ್ಟಾದ್ವೈತಕ್ಕೆ ಭಾಷ್ಯ ಬರೆದ ಶ್ರೀಪತಿ ಪಂಡಿತಾರಾಧ್ಯರನ್ನು, ರೇಣುಕರನ್ನು, ರೇವಣಸಿದ್ಧರನ್ನಲ್ಲದೆ ಸಮಗ್ರವಾಗಿ ಕಾಳಾಮುಖ -ವೀರಶೈವ-ಲಿಂಗಾಯತದ ಎಲ್ಲಾ ಮಹಾ ಪುರುಷರನ್ನು ಒಕ್ಕೂಡಿಸಿಕೊಂಡು ಬರೆದ ಕೆಳಗಿನ ಈ ವಚನಗಳು ಈ ನಿಟ್ಟಿನಲ್ಲಿ ಇವೆಲ್ಲವೂ ಒಂದೇ ಒಂದೇ ಒಂದೇ ಎಂದು ಸಾರಿ ಸಾರಿ ಎತ್ತಿ ಹಿಡಿಯುತ್ತವೆ:

‘ಬಸವಣ್ಣನೆನ್ನ ಅಂಗ, ಮಡಿವಾಳನೆನ್ನ ಮನ, ಪ್ರಭುವೆನ್ನ ಪ್ರಾಣ, ಚನ್ನಬಸವನೆನ್ನ ಕರಸ್ಥಲದ ಲಿಂಗ, ಘಟ್ಟಿವಾಳನೆನ್ನ ಭಾವ, ಸೊಡ್ಡಳಬಾಚರಸರೆನ್ನ ಅರಿವು, ಮಹಾದೇವಿಯಕ್ಕನೆನ್ನ ಜ್ಞಾನ, ಮುಕ್ತಾಯಕ್ಕನೆನ್ನ ಅಕ್ಕರು, ಸತ್ಯಕ್ಕನೆನ್ನ ಯುಕ್ತಿ, ನಿಂಬಿಯಕ್ಕನೆನ್ನ ನಿಶ್ಚಯ, ಅಳಿಯಕ್ಕನೆನ್ನ ಸಮತೆ, ಅನುಮಿಷನೆನ್ನ ನಿಶ್ಚಲ, ನಿಜಗುಣನೆನ್ನ ಕ್ಷಮೆ, ರೇವಣಸಿದ್ಧಯ್ಯದೇವರೆನ್ನ ನೇತ್ರ, ಸಿದ್ಧರಾಮತಂದೆಗಳೆನ್ನ ನೇತ್ರದ ದೃಕ್ಕು, ಮರುಳುಸಿದ್ಧಯ್ಯ ದೇವರೆನ್ನ ಶ್ರೋತೃ, ಪಂಡಿತಾರಾಧ್ಯರೆನ್ನ ಜಿಹ್ವೆ, ಏಕೋರಾಮಯ್ಯಗಳೆನ್ನ ನಾಸಿಕ, ಅಸಂಖ್ಯಾತರೆನ್ನ ಅವಯ ವಂಗಳು, ಪುರಾತರೆನ್ನ ಪುಣ್ಯದ ಪುಂಜ, ಏಳುನೂರೆಪ್ಪತ್ತು ಅಮರಗಣಂಗಳೆನ್ನ ಗತಿಮತಿ ಚೈತನ್ಯ, ಸೌರಾಷ್ಟ್ರ ಸೋಮೇಶ್ವರಾ, ಆ ನಿಮ್ಮ ಶರಣರ ಪಡಿದೊತ್ತಯ್ಯಾ’. (ಸಮಗ್ರ ವಚನ ಸಂಪುಟ: 6 ವಚನದ ಸಂಖ್ಯೆ: 1034)

‘ಬಸವಣ್ಣನ ಭಕ್ತಿಸ್ಥಲ, ಮಡಿವಾಳ ಮಾಚಣ್ಣನ ಮಾಹೇಶ್ವರಸ್ಥಲ, ಘಟ್ಟಿವಾಳ ಮುದ್ದಣ್ಣನ ಪ್ರಸಾದಿಸ್ಥಲ, ಚನ್ನಬಸವಣ್ಣನ ಪ್ರಾಣಲಿಂಗಿಸ್ಥಲ, ಪ್ರಭುವಿನ ಶರಣಸ್ಥಲ, ಸೊಡ್ಡಳ ಬಾಚರಸರ ಐಕ್ಯಸ್ಥಲ, ಅಜಗಣ್ಣನ ಆರೂಢ, ನಿಜಗುಣನ ಬೆರಗು, ಅನುಮಿಷನ ನಿಶ್ಚಲ, ಮಹದೇವಿಯಕ್ಕನ ಜ್ಞಾನ, ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರು, ಸತ್ಯಕ್ಕನ ಯುಕ್ತಿ, ಅಳಿಯಕ್ಕನ ಸಮತೆ, ರೇವಣಸಿದ್ಧಯ್ಯ ದೇವರ ನಿಷ್ಠೆ, ಸಿದ್ಧರಾಮತಂದೆಗಳ ಮಹಿಮೆ, ಮರುಳಸಿದ್ಧಯ್ಯದೇವರ ಅದೃಷ್ಟ ಪ್ರಸಾದನಿಷ್ಠೆ, ಏಕೋರಾಮಯ್ಯಗಳ ಆಚಾರನಿಷ್ಠೆ, ಪಂಡಿತಾರಾಧ್ಯರ ಸ್ವಯಂಪಾಕ, ಮುಗ್ಧಸಂಗಯ್ಯ, ಮೈದುನ ರಾಮಣ್ಣ, ಬೇಡರ ಕಣ್ಣಪ್ಪ, ಕೋಳೂರ ಕೊಡಗೂಸು, ತಿರುನೀಲಕ್ಕರು, ರುದ್ರಪಶು ಪತಿಗಳು, ದೀಪದ ಕಲಿಯಾರ ಮುಗ್ಧಭಕ್ತಿ ನಿಮ್ಮೊಳೆನಗೆಂದಪ್ಪುದೊ ಸೌರಾಷ್ಟ್ರ ಸೋಮೇಶ್ವರಾ’. (ಸಮಗ್ರ
ವಚನ ಸಂಪುಟ: 6 ವಚನದ ಸಂಖ್ಯೆ: 1033)

‘ನಂದೀಶ್ವರ, ಭೃಂಗೀಶ್ವರ, ವೀರಭದ್ರ, ದಾರುಕ, ರೇಣುಕ, ಶಂಖುಕರ್ಣ, ಗೋಕರ್ಣ, ಏಕಾಕ್ಷರ, ತ್ರಯಕ್ಷರ, ಪಂಚಾಕ್ಷರ, ಷಡಕ್ಷರ, ಸದಾಶಿವ, ಈಶ್ವರ, ಮಹೇಶ್ವರ, ರುದ್ರ, ಘಂಟಾಕರ್ಣ, ಗಜಕರ್ಣ, ಏಕಮುಖ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖ, ಷಣ್ಮುಖ, ಶತಮುಖ, ಸಹಸ್ರಮುಖ ಮೊದಲಾದ ಗಣಾಧೀಶ್ವರರು ಇವರು, ನಿತ್ಯ ಪರಿಪೂರ್ಣವಹಂಥ ಪರಶಿವತತ್ವದಲ್ಲಿ ಜ್ಯೋತಿಯಿಂದ ಜ್ಯೋತಿ ಉದಿಸಿದಂತೆ ಉದಯಿಸಿದ ಶುದ್ಧ ಚಿದ್ರೂಪರಪ್ಪ ಪ್ರಮಥರು. ಅನಾದಿಮುಕ್ತರಲ್ಲ, ಅವಾಂತರ ಮುಕ್ತರೆಂಬ ನಾಯ ನಾಲಗೆಯ ಹದಿನೆಂಟು ಜಾತಿಯ
ಕೆರಹಿನಟ್ಟಿಗೆ ಸರಿಯೆಂಬೆ. ಆ ಶ್ವಾನeನಿಗಳಪ್ಪವರ ಶೈವಪಶು ಮತವಂತಿರಲಿ, ಅವರಾಗಮವಂತಿರಲಿ.

ನಿಮ್ಮ ಶರಣರಿಗೆ, ನಿಮಗೆ, ಬೇರೆ ಮಾಡಿ ಸಂಕಲ್ಪಿಸಿ ನುಡಿವ ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ’. (ಸಮಗ್ರ ವಚನ ಸಂಪುಟ: 11 ವಚನದ ಸಂಖ್ಯೆ: 55) ವೀರಶೈವ-ಲಿಂಗಾಯತ ಒಂದೇ ಎನ್ನುವ ಅಭಿಪ್ರಾಯದ ಇಂಥ ಎಲ್ಲಾ ವಚನಗಳು ಕಲಬುರ್ಗಿಯವರ ನಾಲಿಗೆಗೆ ರುಚಿಸದ ಕಾರಣ ಇವುಗಳನ್ನು ‘ಪ್ರಕ್ಷೇಪ’ ಎಂದು ಕರೆದಿದ್ದಾರೆ ಎನ್ನುವುದು ಇಲ್ಲಿ ಮತ್ತೊಂದು ತೌಲನಿಕ ಅಧ್ಯಯನದ ಸಂಶೋಧನಾರ್ಹ ಸಂಗತಿ.

ಇನ್ನು ಅಲ್ಲಮ ತನ್ನ ವಚನದಲ್ಲಿ ಕೈ, ಕೊರಳು, ತಲೆಯಲ್ಲಿ ಲಿಂಗ ಕಟ್ಟುವವರೆಲ್ಲ ತನ್ನ ಆದ್ಯರೇ ಎಂದಿದ್ದಾನೆ: ‘ಕೈಯಲ್ಲಿ ಕಟ್ಟುವರು ಕೊರಳಲ್ಲಿ ಕಟ್ಟುವರು, ಮೈಯಲ್ಲಿ ಕಟ್ಟುವರು ಮಂಡೆಯಲ್ಲಿ ಕಟ್ಟುವರು, ಮನದಲ್ಲಿ
ಲಿಂಗವ ಕಟ್ಟರಾಗಿ! ಆದ್ಯರು ಹೋದರೆಂದು ವಾಯಕ್ಕೆ ಸಾವರು. ಸಾವುದು ವಿಚಾರವೆ ಗುಹೇಶ್ವರಾ?’ (ಸಮಗ್ರ
ವಚನ ಸಂಪುಟ: 2 ವಚನದ ಸಂಖ್ಯೆ: 1140) ಇದಿಷ್ಟು ಕಾಳಾಮುಖ-ವೀರಶೈವ-ಲಿಂಗಾಯತದ ಶತಶತಮಾನಗಳ ಅನುಸಂಧಾನಿ ರೂಪಾಂತರ. ಹಾಗಾಗಿ ಯೇ ಈಗ ಬಿಡುಗಡೆಯಾಗಬೇಕಿರುವ ಸಿದ್ದರಾಮಯ್ಯನವರ ಜಾತಿ ಜನಗಣತಿಯಗಲಿ ಅಥವಾ ಹಿಂದಿನ ಯಾವುದೇ ಜನಗಣತಿಗಳಗಲಿ ಒಬ್ಬನೇ ಒಬ್ಬ ವ್ಯಕ್ತಿ ತಾನು ಕಾಳಾಮುಖನೆಂದು ನೋಂದಾಯಿಸಿಕೊಂಡಿಲ್ಲ. ಇದಕ್ಕಿಂತ ಬಹುದೊಡ್ಡ ಪುರಾವೆಯನ್ನು ಇನ್ಯಾವುದೇ ಸಂಶೋಧಕ, ಸಂಸ್ಕೃತಿ ಚಿಂತಕ, ಮಾಜಿ-ಹಾಲಿ ಸರಕಾರಿ ಸೇವಕ, ಆಡಳಿತ ನಿಯಂತ್ರಕ, ನ್ಯಾಯ ನಿರ್ಣಾಯಕ, ಚೊಕ್ಕ ಪತ್ರಕರ್ತ, ಸಮಾಜವಾದಿ ನಾಯಕರ ಭೋಜನಶಾಲೆಯ ವಿದೂಷಕ ಅಥವಾ ಆ ಸಾಕ್ಷಾತ್ ಲಿಂಗರೂಪಿ ಪರಶಿವನೇ ಅಂಗರೂಪವೆತ್ತಿ ಬಂದರೂ ಕೊಡಲಾರ!

ಇದು ಸವಾಲುವಾದದ ಕಾಳಾಮುಖದ ಪಾರಂಪರಿಕ ಸವಾಲು.

(ಲೇಖಕರು ಶಿಕಾಗೊ ನಿವಾಸಿ ಹಾಗೂ ಸಾಹಿತಿ)

ಇದನ್ನೂ ಓದಿ: Ravi Hunj Column: ಪಂಥ ಶ್ರೇಷ್ಠತೆಯ ಕಸರತ್ತಿನಲ್ಲಿ ಅಸ್ಮಿತೆಗಾಗಿ ನಡೆದ ಹೋರಾಟ