Saturday, 7th September 2024

ಎಷ್ಟು ತೊಳೆದರೂ ಖಾಲಿಯೇ ಆಗದ ಸಿಂಕ್- ಅಕ್ಷಯ ’ಪಾತ್ರೆ’

ತುಂಟರಗಾಳಿ

ಸಿನಿಗನ್ನಡ

ಸಿನಿಮಾರಂಗ ಮತ್ತು ರಾಜಕೀಯ ರಂಗ ಮೊದಲಿನಿಂದಲೂ ದೂರ ದೂರ ಇರುವಂಥವೇನಲ್ಲ. ಸಿನಿಮಾ ರಂಗದಲ್ಲಿ ಹೆಸರು ಮಾಡಿ, ತಮ್ಮ ಕಾಲ ಮುಗಿಯುತ್ತಾ ಬಂದಂತೆ, ತಮ್ಮ ಡಿಮ್ಯಾಂಡ್ ಕಮ್ಮಿ ಆಗುತ್ತಾ ಬಂದಂತೆ ಹಲವು ಸಿನಿಮಾ ಮಂದಿ ಮೆಲ್ಲಗೆ ರಾಜಕೀಯ ಮಾತಾಡೋಕೆ ಶುರು ಮಾಡೋದು ಸಹಜ.

ಆದರೆ ಇತ್ತೀಚೆಗೆ ಈಗಿನ್ನೂ ಅಂಬೆಗಾಲಿಡುತ್ತಿರುವ ನಟ ನಟಿಯರೂ ಕೂಡ ರಾಜಕೀಯದ ಬಗ್ಗೆ ಮಾತಾಡೋಕೆ ಶುರು ಮಾಡ್ತಾ ಇರೋದು ಹೊಸ ಟ್ರೆಂಡು. ಕನ್ನಡದಲ್ಲಿ ಅನಂತ್ ನಾಗ್, ಅಂಬರೀಷ್ ಅವರಂಥ ಹಿರಿಯರ ನಂತರ ಈಗಿನ ಸಿನಿಮಾ ಹೀರೋಗಳು ರಾಜಕೀಯದ ವರಸೆ ಶುರು ಮಾಡಿದ್ದಾರೆ. ಉಪೇಂದ್ರ ಅವರಂಥ ಕೆಲವರು ರಾಜಕೀಯದಲ್ಲಿ ಭವಿಷ್ಯಕಂಡುಕೊಳ್ಳುವ ಪ್ರಯತ್ನಕ್ಕೆ ಈಗಲೇ ಮುನ್ನುಡಿ ಬರೆಯುತ್ತಿದ್ದಾರೆ. ಇನ್ನು ಚೇತನ್ ಅವರಂಥ ನಟ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರೂ ರಾಜಕೀಯದ ಬಗ್ಗೆ ಮಾತನಾಡುತ್ತಿರುತ್ತಾರೆ.

ಆದರೆ ಇವರ ಹೊರತಾಗಿ ಒಂದೆರಡು ಸಿನಿಮಾ ಮಾಡಿದ ನಟ ನಟಿಯರೂ ಈಗ ರಾಜಕೀಯ ಪ್ರಿಯ ರಾಗಿದ್ದಾರೆ. ರಿಶಭ್ ಶೆಟ್ಟಿಯಂಥವರು ರಾಜಕೀಯವಾಗಿ ಸಕ್ರಿಯರಾಗಿಲ್ಲವಾದರೂ ಮುಂದೊಂದು ದಿನ ಕೆಲಸಕ್ಕೆ ಬರುತ್ತೆ ಎಂಬ ದಾರಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಇದೇ ಹಾದಿಯಲ್ಲಿ ಕೆಲಸಕ್ಕೆ ಬಾರದ ನಾಲ್ಕು ಸಿನಿಮಾ ಮಾಡಿ ಒಂದೂ ಗೆಲುವು ನೋಡಿಲ್ಲದವರೂ ಕೆಲಸಕ್ಕೆ ಬಾರದ ಮಾತಾಡುತ್ತಿರೋದು ಮಾತ್ರ ಎಡೆ ಚರ್ಚೆಗೆ ಕಾರಣವಾಗುತ್ತಿದೆ. ನಮ್ಮ ಸಿನಿಮಾನೇ ಜನ ನೋಡಿಲ್ಲ, ಇನ್ನು ನಮ್ಮ ಮಾತು ಯಾರು ಕೇಳ್ತಾರೆ ಎಂಬ ಪರಿಜ್ಞಾನವೂ ಇಂಥವರಿಗೆ ಇರಲ್ಲ.

ಅಥವಾ ಬಾಲಿವುಡ್‌ನಲ್ಲಿ ರಾಜಕೀಯ ಮಾತನಾಡಿ ಲೈಮ್ ಲೈಟಿಗೆ ಬಂದಿರೋ ಕೆಲವು ಉದಾಹರಣೆಗಳನ್ನು ನೋಡಿ, ಇವರೂ ಅದನ್ನೇ ಕಾಪಿ ಮಾಡ್ತಾ ಇದ್ದರೂ
ಇರಬಹುದು. ಬಾಲಿವುಡ್ ನಲ್ಲಿ ಸ್ಮೃತಿ ಇರಾನಿ, ಕಂಗನಾ ರನಾವತ್, ಸ್ವರಾ ಭಾಸ್ಕರ್, ಮನೋಜ್ ವಾಜಪೇಯಿ ಅವರೆಲ್ಲ ಮಾತಾಡುವಾಗ ನಾನೂ ಮಾತಾ  ಡಿದ್ರೆ ನಾನೂ ಅವರಂತೆ ಆಗಬಹುದು ಅಂತ ಕನಸು ಕಾಣೋದ್ರಲ್ಲಿ ತಪ್ಪಿಲ್ಲ ಬಿಡಿ. ಆದರೆ ಇಂಥ ಕೆಲವರು, ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ, ದೇಶದ ಹಿರಿಯ ನಾಯಕರ ಬಗ್ಗೆ, ಮಹಾತ್ಮರ ಬಗ್ಗೆ ಹಗುರವಾಗಿ ಮಾತಾಡುವ ಮೂಲಕ ತಮ್ಮ ಆತುರ ಮತ್ತು ಅಜ್ಞಾನವನ್ನ ತೋರಿಸಿಕೊಂಡು ನಗೆಪಾಟಲಿಗೆ ಈಡಾಗಿರೋ ದಂತೂ ನಿಜ.

ಲೂಸ್ ಟಾಕ್
ಬಸನಗೌಡ ಪಾಟೀಲ್ ಯತ್ನಾಳ್ (ಕಾಲ್ಪನಿಕ ಸಂದರ್ಶನ)
ಅಲ್ರೀ, ಯತ್ನಾಳ್ ಅವ್ರೇ, ಏನು ಮಂತ್ರಿಗಿರಿ ಬ್ಯಾಡ್ ಅಂದ್ಬಿಟ್ರಂತಲ್ಲ?
-ಮತ್ತೆ, ಸರಕಾರ ಇನ್ನೊಂದ್ ವರ್ಷ ಇರುವಾಗ ಮಂತ್ರಿಗಿರಿ ಕೊಡ್ತೀನಿ ಅಂದ್ರೆ ಇನ್ನೇನ್ರೀ ಮಾಡೋದು. ಕಳ್ಳನ ಕೈಗೆ, ಕನ್ನ ಹಾಕಿ ಪೂರ್ತಿ ದೋಚಿರೋ ಮನೆ ಕೀ ಕೊಟ್ಟು ಮಜಾ ಮಾಡು ಅಂದ್ರೆ ಇನ್ನೇನ್ ಮಾಡ್ತಾನೆ.

ಆದ್ರೂ, ಇ ಓಪನ್ನಾಗಿ ಹೇಳೋದ್ ಸರಿನಾ?
-ನೋಡಪ್ಪಾ ಅನಿಸಿದ್ದನ್ನ ಪ್ರಾಮಾಣಿಕವಾಗಿ ಹೇಳಿದ್ದೀನಿ. ಅದನ್ನ ಕೇಳಿ, ಲಂಚ ತಿನ್ನೋ ಬಾಯಲ್ಲಿ ಎಂಥಾ ಮಾತಾಡಿಬಿಟ್ರಿ ಅಂದ್ರೆ ನಾನೇನೂ ಮಾಡಕಾಗಲ್ಲ.

ಅಲ್ಲ ಸಾರ್, ನಿಮ್ ಮಾತನ್ನ ಕೇಳಿದ್ರೆ ಜನ ರಾಜಕಾರಣಿಗಳನ್ನು ನಂಬೋಕಾಗುತ್ತಾ ?
-ಯಾರ್ರ‍ೀ ಹೇಳಿದ್ದು ನಂಬ್ರಿ ಅಂತ. ನೋಡ್ರೀ, ನಾವ್ ಎಲೆಕ್ಷನ್ನಿಗೆ ನಿಂತ್ಕೊಳ್ಳೋದೇ, ಗೆದ್ ಮೇಲೆ ಕೂತ್ಕಂಡ್ ತಿನ್ನುವಷ್ಟು ಆಸ್ತಿ ಮಾಡ್ಬೇಕು ಅಂತ.

ಅದ್ ಸರಿ ಬಿಡಿ, ಅಂದಂಗೆ, ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯೋರು ಸರಕಾರಿ ಶಾಲೆಯಲ್ಲಿ ಫ್ರೀಯಾಗಿ ಹೈ ಸ್ಟ್ಯಾಂಡರ್ಡ್ ಎಜ್ಯುಕೇಶನ್ ಕೊಡ್ತಾ ಇದ್ದಾರೆ. ನಮ್ಮಲ್ಯಾಕೆ ಆಗ್ತಾ ಇಲ್ಲ.?
-ಅಯ್ಯೋ, ಫ್ರೀಯಾಗಿ ಓದಿದ್ರೆ ವಿದ್ಯೆ ತಲೆಗೆ ಹತ್ತಲ್ಲ ಕಣ್ರೀ. ಬೇಕಿದ್ರೆ ನಮ್ ಮಕ್ಕಳ ಪೋಷಕರನ್ನೇ ಕೇಳಿ. ಜಾಸ್ತಿ ದುಡ್ ಕೊಟ್ರೇನೇ ಅವರಿಗೆ ಸಮಾಧಾನ. ಅವರಿಗೆ ಯಾಕೆ ಬೇಜಾರ್ ಮಾಡಿಸ್ಬೇಕು.

ಎಜ್ಯುಕೇಶನ್ ಸರಿ, ಅದರ ಜತೆ ದೆಹಲಿಯಲ್ಲಿ ಒಳ್ಳೊಳ್ಳೆ ಆಸ್ಪತ್ರೆ, ವೈದ್ಯರು ಕೂಡಾ ಇದ್ದಾರೆ. ಇಲ್ಲಿ ನೀವೇನ್ ಮಾಡ್ತಾ ಇದ್ದೀರಿ ?
-ಅಯ್ಯೋ, ಆಸ್ಪತ್ರೆ ವಿಷ್ಯದಲ್ಲಿ ನಮಗಿಂತ ಜಾಸ್ತಿ ಯಾರ್ ತಲೆ ಕೆಡಿಸ್ಕೊಂಡಿzರೆ. ನಾವೂ ಆಪರೇಶನ್ ಕಮಲ ಚೆನ್ನಾಗೇ ಮಾಡ್ತೀವಲ್ರೀ.

ನೆಟ್ ಪಿಕ್ಸ್
ಖೇಮು ಹೆಂಡ್ತಿ ಖೇಮುಶ್ರೀ ಬರ್ತಾ ಬರ್ತಾ ತುಂಬಾ ದಪ್ಪ ಆಗ್ತಾ ಇದ್ಳು. ಆದ್ರೂ ಅವಳಿಗೆ ತೂಕ ಜಾಸ್ತಿ ಆಗ್ತಾ ಇರೋದ್ರ ಬಗ್ಗೆ ಕೇರ್ ಇರಲಿಲ್ಲ. ಅವಳು ಅದಕ್ಕೆ ತಲೆಕೆಡಿಸಿಕೊಳ್ತಾ ಇರಲಿಲ್ಲ. ಆದ್ರೆ ಖೇಮುಗೆ ಮಾತ್ರ ಹೆಂಡ್ತಿ ಅಷ್ಟು ದಪ್ಪ ಆಗ್ತಾ ಇರೋದು ನೋಡೋಕೆ ಆಗ್ತಾ ಇರಲಿಲ್ಲ. ಅಲ್ಲದೆ ಅವನ ಗೆಳೆಯರ ಹೆಂಡತಿಯರೆ ತುಂಬಾ ಸ್ಲಿಮ್ ಆಗಿದ್ರು. ಸೋ, ಖೇಮುಗೆ ನನ್ನ ಹೆಂಡತಿನೂ ಹಂಗೇ ಇರಬೇಕು ಅಂತ ಆಸೆ. ಖೇಮುಶ್ರೀಗೆ ಡೈಲಿ ವಾಕಿಂಗ್ ಮಾಡು ಅಂತ ಹೇಳಿ ಹೇಳಿ ಸಾಕಾ ಗಿತ್ತು. ಅವಳು ಮಾಡ್ತಾನೇ ಇರಲಿಲ್ಲ. ಒಂದು ದಿನ ಖೇಮು ಖಡಕ್ಕಾಗಿ ಹೇಳಿಬಿಟ್ಟ, ನೀನು ಇವತ್ತಿಂದ ಡೈಲಿ ೧೦ ಸಾವಿರ ಸ್ಟೆ ವಾಕ್ ಮಾಡಬೇಕು. ನೀನು ಸೋಮಾರಿ ಅಂತ ಗೊತ್ತು.

ಅದಕ್ಕೇ ಈ ಸ್ಮಾರ್ಟ್ ವಾಚ್ ತಂದಿದ್ದೀನಿ. ಇನ್ಮೇಲೆ ನೀನು ತಪ್ಪಿಸಿಕೊಳ್ಳೋಕಾಗಲ್ಲ ಅಂತ. ಸರಿ ಅಂದಿನಿಂದ ಪ್ರತಿದಿನ ಆಫೀಸಿಂದ ಬಂದಮೇಲೆ ಖೇಮು
ಹೆಂಡತಿಯ ಸ್ಮಾರ್ಟ್ ವಾಚ್ ಟೆ ಮಾಡ್ತಾ ಇದ್ದ. ಅದು ೧೦ ಸಾವಿರಕ್ಕಿಂತ ಜಾಸ್ತಿನೇ ತೋರಿಸ್ತಾ ಇತ್ತು. ಖೇಮು ಖುಷಿಯಾಗ್ತಾ ಇದ್ದ. ಆದ್ರೆ ಎಷ್ಟೇ ದಿನ ಆದ್ರೂ ಖೇಮುಶ್ರೀ ಮಾತ್ರ ಸಣ್ಣ ಆಗ್ಲಿಲ್ಲ. ಖೇಮು ಕೇಳಿದ್ರೆ, ನಾನೇನ್ ಮಾಡ್ಲಿ, ದಿನಾ ನೀವು ಆಫೀಸಿಗೆ ಹೋದಾಗ ವಾಕಿಂಗ್ ಮಾಡ್ತೀನಿ. ೧೦ ಸಾವಿರ ಸ್ಟೆಗಿಂತ ಜಾಸ್ತಿ. ಆದ್ರೂ ಸಣ್ಣ ಆಗ್ತಿಲ್ಲ ಅಂದ್ಳು. ಖೇಮುಗೆ ಅನುಮಾನ ಬಂದು ಒಂದ್ ದಿನ ಆಫೀಸಿನಿಂದ ಸ್ವಲ್ಪ ಮುಂಚೆನೇ ಮನೆಗೆ ಹೊರಟ.

ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ. ಯಾರು ಬಂದಿರಬಹುದು ಅಂತ ಖೇಮುಶ್ರೀ ಅನುಮಾನದ ಹೊರಗೆ ಬಂದಳು. ಅಷ್ಟೊತ್ತಿಗೆ, ಅದೆಲ್ಲಿತ್ತೋ ಅವರ
ಮನೆಯ ನಾಯಿ ರಾಬರ್ಟ್, ಓಡಿ ಬಂದು ಖೇಮು ಮುಂದೆ ಬಾಲ ಅಡಿಸ್ತಾ ನಿಂತ್ಕೊಂತು. ಅದರ ಕುತ್ತಿಗೆಯಲ್ಲಿದ್ದ ಸ್ಮಾರ್ಟ್ ವಾಚ್ ನಲ್ಲಿ ೧೧ ಸಾವಿರ ಸ್ಟೆ ರೀಡಿಂಗ್ ತೋರಿಸ್ತಾ ಇತ್ತು.

ಲೈನ್ ಮ್ಯಾನ್

ಎಷ್ಟು ಪಾತ್ರೆ ತೊಳೆದರೂ ಖಾಲಿಯೇ ಆಗದ ಸಿಂಕ್ ಅನ್ನು ಏನಂತಾರೆ?
-‘ಅಕ್ಷಯ ಪಾತ್ರೆ’
ಪೆಟ್ರೋಲ್ ೧೦೦ ? ಆಗಿದ್ದಕ್ಕೆ ಕೆಲವರು ವಿಷ್ಣು ’ಸಹಸ್ರ’ನಾಮ ಜಪ ಮಾಡ್ತಾ ಇದ್ದಾರಂತೆ.
-ಹಂಗೆಲ್ಲ ಮಾಡಿದ್ರೆ ೧೦೦೦? ಆಗ್ಬಿಡುತ್ತೆ, ಸುಮ್ನೆ ಇರ್ರ‍ೋ.

ಫೇಸ್ ಬುಕ್ಕಲ್ಲಿ ಅಪ್ಪಂದಿರ ದಿನದ ಪೋಗಳ ಬಗ್ಗೆ ಚಾಲೆಂಜ್
-ಅ ಅವರಪ್ಪನ ಬಗ್ಗೆ ಪೋ ಹಾಕಿದ್ದಾನೆ. ನಾನು ಅದರಪ್ಪನಂಥ ಪೋ ಹಾಕ್ಬೇಕು.

ಸ್ಮಶಾನದಲ್ಲಿ ಆಡೋ ಆಟ
-ಲ‘ಗೋರಿ’
ತಮಿಳು ನಾಡಿನಲ್ಲಿರುವ ಪರಿಸರ ಪ್ರೇಮಿ
-ಸಸಿ ಕುಮಾರ
ಬೇಬಿ ಸಿಟ್ಟರ್‌ನ ಕನ್ನಡದಲ್ಲಿ ಏನಂತಾರೆ?
-ಶಿಶು-ಪಾಲ
ಕುಡಿದು ಚಿತ್ತಾಗಿರೋ ಸೆಕ್ಯುರಿಟಿ ಗಾರ್ಡ್
-ಟೈಟ್ ವಾಚ್ ಮನ್
ರಾಜಕೀಯ ಸಮಾವೇಶಗಳಲ್ಲಿ ಜೈಕಾರ ಹಾಕೋಕೆ ಬರೋ ಜನಗಳಿಗೆ ಏನು ಕೊಡ್ತಾರೆ ?
-ಜೈವಿಕ ಆಹಾರ
ಇಬ್ಬರು ಸಮಾನ ದುಃಖಿಗಳು ಅನುಭವಿಸೋ ನೋವು
-ಜಾಯಿಂಟ್ ಪೆಯ್ನ್
ಸೋಮು- ‘”LPG ರೇಟ್ ಮತ್ತೆ ಜಾಸ್ತಿ ಆಗಿದೆಯಂತೆ’
ಖೇಮು- ‘ಹೋಗ್ಲಿ, ಬಿಡೋ.. ಅದು ಹುಡುಗೀರ್ ಪ್ರಾಬ್ಲಮ.
ನಾವ್ಯಾಕ್ ತಲೆ ಕೆಡಿಸ್ಕೊಬೇಕು?’
ಸೋಮು- ‘ಲೋ, ಗ್ಯಾಸ್ ರೇಟ್ ಬರೀ ಹುಡುಗೀರ್ ಪ್ರಾಬ್ಲಮ್
ಹೆಂಗೋ ಆಗುತ್ತೆ?’
ಖೇಮು- ‘ಓಹ್, ಗ್ಯಾಸ್ ರೇಟಾ? ನಾನೆ Ladies PG ಬಗ್ಗೆ ಹೇಳ್ತಿದೀಯಾ ಅಂದ್ಕೊಂಡೆ’

error: Content is protected !!