Thursday, 19th September 2024

ಹತ್ತೊಂಬತ್ತು ವರ್ಷಗಳ ಹಿಂದಿನ ಒಂದು ಅದ್ಭುತ ಕ್ರಿಕೆಟ್ ಪಂದ್ಯದ ಕುರಿತು…

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

ಇದು ನಾನು ಎಂದೂ ಮರೆಯದ ಟೆಸ್ಟ್ ಕ್ರಿಕೆಟ್ ಪಂದ್ಯ. ಹತ್ತೊಂಬತ್ತು ವರ್ಷಗಳ ಹಿಂದಿನ ಈ ಪಂದ್ಯವನ್ನು ನೇರ ಪ್ರಸಾರದಲ್ಲಿ ನಾನು ಆಗ ನೋಡಿದ್ದೆ. ಇತ್ತೀಚೆಗೆ ಮತ್ತೊಮ್ಮೆ ನೋಡಿದೆ. ಅತಿಯಾಗಿ ಕಾಡಿದ ಹಳೆಯ ಸಿನಿಮಾವನ್ನು ನೋಡಿದಂತೆನಿಸಿತು.

ಕೊಲ್ಕೊತಾ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಟೆಸ್ಟ್ ಪಂದ್ಯ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಪಂದ್ಯ ಗೆದ್ದಿತ್ತು. ಅಲ್ಲದೇ ಆಸ್ಟ್ರೇಲಿಯಾ ಸತತ ಹದಿನಾರು ಟೆಸ್ಟ್ ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಮಹಾನ್ ಆಟಗಾರ ಸ್ಟೀವ್ ವಾ ನಾಯಕತ್ವದ ತಂಡದಲ್ಲಿ ಮಾರ್ಕ್ ವಾ, ಮೈಕೆಲ್ ಸ್ಲೇಟರ್, ಮ್ಯಾಥ್ಯೂ ಹೇಡನ್, ರಿಕಿ ಪಾಂಟಿಂಗ್ ಅವರಂಥ ಖ್ಯಾತ ಬ್ಯಾಟ್ಸಮನ್‌ಗಳು ಮತ್ತು ಗ್ಲೇನ್ ಮೆಕ್ ಗ್ರಾಥ್, ಶೇನ್ ವಾರ್ನ್‌ಯಂಥ ಪ್ರಸಿದ್ಧ ಬೌಲರ್ ಗಳಿದ್ದರು.

ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗನ್ನು ಆಯ್ದುಕೊಂಡಿತು. ಮ್ಯಾಥ್ಯೂ ಹೇಡನ್ ಮತ್ತು ಸ್ಲೇಟರ್ ಉತ್ತಮ ಆರಂಭಿಕ ಬುನಾದಿ
ಹಾಕಿದರು. ಮೊದಲ ದಿನದ ಭೋಜನ ವಿರಾಮಕ್ಕೆ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ ೮೮ರನ್ ಮಾಡಿತು. ಸ್ಲೇಟರರ್ 42  ರನ್ ‌ಗೆ ಔಟ್ ಆದಾಗ ಜಸ್ಟಿನ್ ಲ್ಯಾಂಗರ್ ಬಂದ. ಚಹ ವಿರಾಮದ ವೇಳೆಗೆ ಆಸ್ಟ್ರೇಲಿಯಾದ ಸ್ಕೋರ್ ಒಂದು ವಿಕೆಟ್ ನಷ್ಟಕ್ಕೆ 193 ರನ್. ಇದ್ದಕ್ಕಿದ್ದಂತೆ ಭಾರತ ಮೇಲುಗೈ ಸಾಽಸಿತು. ಹರಭಜನ್ ಸಿಂಗ್‌ಗೆ ಹೇಡನ್ ಮೊದಲ ಆಹುತಿಯಾದ. ಜಹೀರ್ ಖಾನ್‌ಗೆ
ಲ್ಯಾಂಗರ್ ಬಲಿಯಾದ. ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿದ್ದ ಮಾರ್ಕ್ ವಾ ಕೇವಲ 22ಕ್ಕೆ ಔಟ್ ಆದ. ಆಗ ಹರಭಜನ್ ಸಿಂಗ್‌ಗೆ ಇಪ್ಪತ್ತು ವರ್ಷ. ಒಂದೇ ಓವರ್‌ನಲ್ಲಿ ಹರಭಜನ್ ರಿಕಿ ಪಾಂಟಿಂಗ್, ಮತ್ತು ಆಡಮ್ ಗಿಲ್ಕ್ರಿಸ್ಟ್ ಔಟ್ ಮಾಡಿ ಹ್ಯಾಟ್ರಿಕ್ ವಿಕೆಟ್ ಪಡೆದ. ಮೊದಲ ದಿನದ ಆಟ ಮುಗಿಯುವಾಗ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 291ರನ್ ಹೊಡೆದಿತ್ತು.

ಎರಡನೆಯ ದಿನದಲ್ಲಿ ಸ್ಟೀವ್ ವಾ ಭರ್ಜರಿ 110 ರನ್ ಹೊಡೆದು ತನ್ನ ಇಪ್ಪತ್ತೈದನೇ ಸೆಂಚುರಿ ಪೂರ್ಣಗೊಳಿಸಿದ. ಒಂಬತ್ತನೇ ವಿಕೆಟ್‌ಗೆ ವಾ ಮತ್ತು ಗಿಲ್ಲಿಪ್ಸಿ 113 ರನ್ ಸೇರಿಸಿ ಆಸ್ಟ್ರೇಲಿಯಾ 445 ರನ್ ತಲುಪಲು ಕಾರಣನಾದರು. ಭಾರತದ ಪರ ಹರಭ ಜನ್ ಸಿಂಗ್ ಏಳು ವಿಕೆಟ್ ಪಡೆದ. ನಂತರ ಭಾರತದ ಬ್ಯಾಟಿಂಗ್. ಸಡಗೋಪನ್ ರಮೇಶ್ ಮತ್ತು ಶಿವ ಸುಂದರ ದಾಸ್ ಆಟ ಆರಂಭಿಸಿ ದರು. ರಮೇಶ್ ಸೊನ್ನೆ ಸುತ್ತಿದ. ನಂತರ ಬಂದ ಸಚಿನ್ ತೆಂಡೂಲ್ಕರ್ (10), ರಾಹುಲ್ ದ್ರಾವಿಡ್ (25) ಮತ್ತು ಸೌರವ್ ಗಂಗೂಲಿ (23) ಹೆಚ್ಚು ಹೊತ್ತು ನಿಲ್ಲಲಿಲ್ಲ. 88 ರನ್ ಗಳಿಸುವ ಹೊತ್ತಿಗೆ ಭಾರತ 5 ವಿಕೆಟ್ ಕಳೆದುಕೊಂಡಿತ್ತು.

ಎರಡನೆಯ ದಿನದ ಕೊನೆಯಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿ ದಾರುಣ ಸ್ಥಿತಿಯಲ್ಲಿತ್ತು. ಆಸ್ಟ್ರೇಲಿಯಾ ಗೆಲುವಿನ ನಗೆಯನ್ನು ಬೀರಲಾರಂಭಿಸಿತ್ತು. ಮೂರನೇ ದಿನ. ಭಾರತದ ಪರ ವಂಗೀಪುರಪ್ಪು ವೆಂಕಟ ಸಾಯಿ (ವಿವಿಎಸ್) ಲಕ್ಷ್ಮಣ್ ಮಾತ್ರ 59 ರನ್ ಹೊಡೆದದ್ದರಿಂದ 171 ತಲುಪಿತು. ಆಸ್ಟ್ರೇಲಿಯಾ ಭಾರತಕ್ಕೆ ಫಾಲೋ ಆನ್ ನೀಡಿತು.

ಮತ್ತೆ ಭಾರತದ ಬ್ಯಾಟಿಂಗ್. ಆರಂಭಿಕ ಆಟಗಾರಾದ ರಮೇಶ್ ಮತ್ತು ದಾಸ್ ಉತ್ತಮ ಬುನಾದಿ ಹಾಕುವ ಆಸೆಯನ್ನು ಮಣ್ಣು ಪಾಲು ಮಾಡಿದರು. ರಮೇಶ್ 30ಕ್ಕೆ ಔಟ್ ಆದ. ದಾಸ್ 39ಕ್ಕೆ ನಿರ್ಗಮಿಸಿದ. ಇಡೀ ದೇಶ ತೆಂಡೂಲ್ಕರ್‌ನನ್ನು ಭರವಸೆಯ
ಕಂಗಳಿಂದ ನೋಡುತ್ತಿತ್ತು. ಆದರೆ ತೆಂಡೂಲ್ಕರ್ ಕೇವಲ ಹತ್ತು ರನ್‌ಗೆ ನಿರ್ಗಮಿಸಿದಾಗ ಪಂದ್ಯದ ಫಲಿತಾಂಶ ಗೋಡೆ ಮೇಲಿನ
ಬರಹದಷ್ಟು ಸ್ಪಷ್ಟವಾಗಿತ್ತು. ದಿನದ ಕೊನೆಯಲ್ಲಿ ಲಕ್ಷ್ಮಣ್ 109 ಮತ್ತು ದ್ರಾವಿಡ್ 7 ರನ್ ಮಾಡಿ, ಐದನೇ ವಿಕೆಟ್ ಜತೆಯಾಟ
ದಲ್ಲಿ 22 ರನ್ ಪೇರಿಸಿದ್ದರು.

ನಾಲ್ಕನೇ ದಿನ. ಆ ಇಡೀ ದಿನ ಲಕ್ಷ್ಮಣ್ ಮತ್ತು ದ್ರಾವಿಡ್ ಆಡಿ, ಆಸ್ಟ್ರೇಲಿಯಾದ ಬೌಲರುಗಳನ್ನು ಹಣ್ಣುಗಾಯಿ – ನೀರುಗಾಯಿ ಮಾಡಿದರು. ಇವರಿಬ್ಬರೂ ಆ ದಿನ 337 ರನ್ ಸೇರಿಸಿದರು. ಲಕ್ಷ್ಮಣ್ 281 ಮತ್ತು ದ್ರಾವಿಡ್ 180 ರನ್ ಹೊಡೆದರು. ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದ ವೈಯಕ್ತಿಕ ಅತಿ ಹೆಚ್ಚು ರನ್ (236) ದಾಖಲೆಯನ್ನು ಲಕ್ಷ್ಮಣ್ ಮುರಿದ. ಅಂದು ಲಕ್ಷ್ಮಣ್ ಆಟ ಅದ್ಭುತವಾಗಿತ್ತು. ಆತ ಹೊಡೆಯದ ಸ್ಟ್ರೋಕ್ ಇರಲಿಲ್ಲ. ಆತನಿಗೆ ಸಾಥ್ ನೀಡಿದ್ದು ಡ್ರಾವಿಡ್. ಆರನೇ ವಿಕೆಟ್‌ಗೆ ಇವರಿಬ್ಬರು 376 ರನ್ ಸೇರಿಸಿ, ಇಡೀ ಪಂದ್ಯದ ಗತಿಯನ್ನು ಬದಲಿಸಿದರು. ಐದನೇ ದಿನ ಭಾರತ ಅರ್ಧ ಗಂಟೆ ಆಟವಾಡಿ, 657/7 ಕ್ಕೆ ಡಿಕ್ಲೇರ್ ಮಾಡಿಕೊಂಡಿತು.

ಈ ಪಂದ್ಯ ಗೆಲ್ಲಲು ಆಸ್ಟ್ರೇಲಿಯಾ ಒಂದು ದಿನದಲ್ಲಿ 384 ರನ್ ಮಾಡಬೇಕಿತ್ತು. ಇಲ್ಲವೇ ಪಂದ್ಯವನ್ನು ಡ್ರಾ ಮಾಡಿಕೊಳ್ಳ ಬೇಕಿತ್ತು. ಮೊದಲನೆಯ ಸಾಧ್ಯತೆ ಕಷ್ಟವಾಗಿತ್ತು. ಎರಡನೆಯದು ಸುಲಭವಾಗಿರಲಿಲ್ಲ. ಸರಿ, ಆ ದಿನ ಏನಾಯಿತು ನೋಡೋಣ.
ಹೇಡನ್ ಮತ್ತು ಸ್ಲೇಟರ್ ಬ್ಯಾಟಿಂಗ್ ಆರಂಭಿಸಿದರು. ಇವರಿಬ್ಬರೂ ಉತ್ತಮ ಆರಂಭವನ್ನು ನೀಡಿದರು. ಹೇಡನ್ ಮನಸೋ ಇಚ್ಛೆ ಬಾರಿಸಲಾರಂಭಿಸಿದ. ಗೆಲ್ಲಲು ಬೇಕಾದ ಮೊತ್ತವನ್ನು ಬೆನ್ನಟ್ಟಲು ಬಂದವನಂತೆ ಆಟವಾಡಲಾರಂಭಿಸಿದ.
ಆದರೆ ಸ್ಲೇಟರ್ 43ಕ್ಕೆ ಔಟ್ ಆದ. ಜಸ್ಟಿನ್ ಲ್ಯಾಂಗರ್ ಕೂಡ ಬೇಗನೆ (28) ಔಟ್ ಆದ. ನಂತರ ಬಂದವನು ಮಾರ್ಕ್ ವಾ.
ಇಡೀ ಪಂದ್ಯ ಹೇಡನ್ ಮತ್ತು ವಾ ಮೇಲೆ ನಿಂತಿತ್ತು. ಹತ್ತು ಬಾಲ್ ಆಡಿದರೂ ತೀವ್ರ ಒತ್ತಡಕ್ಕೆ ಒಳಗಾಗಿದ್ದ ವಾ ಸೊನ್ನೆಗೆ ಎದ್ದುಬಿಟ್ಟ.

ರಿಕಿ ಪಾಂಟಿಂಗ್ ಕೂಡ ಡಕ್ ! ಆಗ ಬಂದ ಸ್ಟೀವ್ ವಾ ಪಂದ್ಯ ಡ್ರಾ ಮಾಡಿಕೊಳ್ಳುವಂತೆ ಹೇಡನ್ ಗೆ ಸೂಚಿಸಿದ. ಇಬ್ಬರ ಆಟದ
ವೈಖರಿಯೇ ಬದಲಾಗಿ ಹೋಯಿತು. ಆದರೆ ಸ್ಟೀವ್ ವಾ ಹರಭಜನ್ ಬಾಲ್ ಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ. ಚಹಾ ವಿರಾಮ. ಆಗ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತ್ತು. ಹೇಡನ್ ಬಿಟ್ಟರೆ ಬ್ಯಾಟ್ಸಮನ್‌ಗಳು ಇರಲಿಲ್ಲ. ಆದರೆ ಹರಭಜನ್ ಕೈಚಳಕದ ಮುಂದೆ ಆಸ್ಟ್ರೇಲಿಯಾ ಆಟಗಾರರ ಆಟ ನಡೆಯುವುದು ದುಸ್ತರವಾಗಿತ್ತು. ನಂತರ ಆಡಲು ಬಂದ ಗಿಲ್ಕ್ರಿಸ್ಟ್ ಮತ್ತು ವಾರ್ನ್ ಜೀರೋಕ್ಕೆ ಔಟ್ ಆಗಿಬಿಟ್ಟರು. ಆಸ್ಟ್ರೇಲಿಯಾ ಕೇವಲ 212 ರನ್‌ಗೆ ಆಲೌಟ್ ಆಗಿಬಿಟ್ಟಿತು.

ಕೊನೆಯಲ್ಲಿ ಕೇವಲ 32 ಬಾಲ್ ಗಳಲ್ಲಿ ಎಂಟು ರನ್ ಗಳಿಸಿ, ಐದು ವಿಕೆಟ್ ಗಳನ್ನು ಕಳೆದುಕೊಂಡಿತು. ಭಾರತ 171 ರನ್ ಗಳ ಭರ್ಜರಿ ವಿಜಯ ಸಾಧಿಸಿತು. ಲಕ್ಷ್ಮಣ್ ಪಂದ್ಯ ಶ್ರೇಷ್ಠನಾದ. ಎರಡೂ ಇನ್ನಿಂಗ್ಸ್‌ನಿಂದ ಹರಭಜನ್ ಹದಿಮೂರು ವಿಕೆಟ್ ಪಡೆದ. ಭಾರತ ಫಾಲೋ ಆನ್ ಆಗಿ ಟೆಸ್ಟ್ ಪಂದ್ಯ ಗೆದ್ದಿದ್ದು ಅದೇ ಮೊದಲು. ಟೆಸ್ಟ್ ಇತಿಹಾಸದಲ್ಲಿ ಫಾಲೋ ಆನ್ ಆಗಿ ಗೆದ್ದ ಇನ್ನೊಂದು ತಂಡವೆಂದರೆ ಇಂಗ್ಲೆಂಡ್.

ಅದು ಆಸ್ಟ್ರೇಲಿಯಾ ವಿರುದ್ಧ 1894ರಲ್ಲಿ ಮತ್ತು 1981ರಲ್ಲಿ ಫಾಲೋ ಆನ್ ಆಗಿ, ಕೊನೆಯಲ್ಲಿ ಗೆದ್ದಿತ್ತು. ಅಲ್ಲಿಯ ತನಕ
ಹದಿನಾರು ಟೆಸ್ಟ್ ಪಂದ್ಯಗಳನ್ನು ಸತತವಾಗಿ ಗೆದ್ದಿದ್ದ ಆಸ್ಟ್ರೇಲಿಯಾದ ಗೆಲುವಿನ ನಾಗಾಲೋಟಕ್ಕೆ ಭಾರತ ಬ್ರೇಕ್ ಹಾಕಿತು. ಮೂರನೆಯ ಮತ್ತು ಕೊನೆಯ ಟೆಸ್ಟ್ ಪಂದ್ಯವನ್ನೂ ಭಾರತ ಗೆದ್ದು, ಸರಣಿ (2-1) ಬಾಚಿಕೊಂಡಿದ್ದು ಬೇರೆ ಕತೆ. ಸೋಲಿನ ದವಡೆ ಯಲ್ಲಿದ್ದ ಭಾರತ ಪಾರಾಗಿ, ತನ್ನನ್ನು ನುಂಗಲು ಬಂದವರನ್ನೇ ನುಂಗಿ ಹಾಕಿದ್ದು ಕ್ರಿಕೆಟ್ ಲೋಕದ ಅಚ್ಚರಿಗಳಂದು.

ಈಗಲೂ ಈ ಪಂದ್ಯ ನೋಡುತ್ತಿದ್ದರೆ ರೋಮಾಂಚನ. ಟೆಸ್ಟ್ ಕ್ರಿಕೆಟ್ ರೋಚಕ ಅಧ್ಯಾಯಗಳಲ್ಲಿ ಈ ಪಂದ್ಯ ಎದ್ದು ನಿಲ್ಲುತ್ತದೆ. ಈ ಟೆಸ್ಟ್‌ನಲ್ಲಿ ಲಕ್ಷ್ಮಣ್ ಸಾಧನೆ ಅಭೂತಪೂರ್ವವಾದುದು. ಅದು ಅವನ ಸಾರ್ವಕಾಲಿಕ ಮನಮೋಹಕ ಆಟ. ಅದಕ್ಕಾಗಿಯೇ ಆತ ತನ್ನ ಆತ್ಮಕಥೆಗೆ ‘”281 and Beyond ಎಂದು ಕರೆದಿದ್ದು. ಬಾಯಲ್ಲಿ ನೀರೂರಿಸುವ ಟಿವಿ ಪ್ರೋಗ್ರಾಂ ಮುಕ್ಬಂಗ್ !

ಇತ್ತೀಚಿನ ಟಿವಿ ಕಾರ್ಯಕ್ರಮಗಳಿಂದ ಹುಟ್ಟಿಕೊಂಡ ಹೊಸ ಪದವಿದು. ದಕ್ಷಿಣ ಕೊರಿಯಾದ ಒಂದು ಟಿವಿ ಚಾನೆಲ, ಏಳೆಂಟು
ವರ್ಷಗಳ ಹಿಂದೆ, ಒಂದು ಹೊಸ ಕಾರ್ಯಕ್ರಮ ಆರಂಭಿಸಿತು. ಅದು ಹಠಾತ್ ಜನಪ್ರಿಯವಾಯಿತು. ಈ ಕಾರ್ಯಕ್ರಮದಲ್ಲಿ,
ಅದನ್ನು ನಡೆಸಿಕೊಡುವ ವ್ಯಕ್ತಿ (host) ವೀಕ್ಷಕರ ಎದುರಿನಲ್ಲಿ ಬಗೆ ಬಗೆ ಭಕ್ಷ ತಿನ್ನುತ್ತಾ ಮಾತಾಡುತ್ತಾನೆ. ಕೊನೆ ಕೊನೆಗೆ ಆತ
ಮಾತಾಡುತ್ತಾನಾ ಅಥವಾ ಆಹಾರ ಸೇವಿಸುತ್ತಾನಾ ಎಂಬುದು ಗೊತ್ತಾಗುವುದಿಲ್ಲ. ಆ ರೀತಿ ತಿನ್ನುತ್ತಾನೆ, ಆ ರೀತಿ ತಾಡುತ್ತಾನೆ.
ಆತ ಬರಗಾಲ ದೇಶದಿಂದ ಬಂದವರಂತೆ ತಿನ್ನುವುದನ್ನು ನೋಡುವುದೇ ಪ್ರೇಕ್ಷಕರಿಗೆ ಆನಂದ. ಕಾರ್ಯಕ್ರಮ ನಡೆಸಿ ಕೊಡುವ ವ್ಯಕ್ತಿ ಬರ್ಗರ್, ಪಾಸ್ತಾ, ಪಿಜ್ಜಾ, ನೂಡಲ್ಸ, ಐಸ್ಕ್ರೀಮ್ .. ಹೀಗೆ ಎ ಬಗೆಯ ಆಹಾರಗಳನ್ನೂ ಸೇವಿಸುತ್ತಾನೆ.

ಆತನ ಲಕ್ಷ್ಯವೆಲ್ಲಾ ಮಾತಿನ ಮೇಲಿದ್ದರೂ, ತಿನ್ನುವುದನ್ನು ಮಾತ್ರ ಬಿಡುವುದಿಲ್ಲ. ಕೊರಿಯಾದ ಜನ ತಿಂಡಿಪೋತರು. ಅವರದು
ಬಗೆಬಗೆಯ ಆಹಾರ. ತಮ್ಮ ಆಹಾರ ಸಂಸ್ಕೃತಿಯನ್ನು ಈ ರೀತಿಯಲ್ಲಿ ಜನಪ್ರಿಯಗೊಳಿಸಲು ಅವರು ನೆಚ್ಚಿಕೊಂಡ ಹೊಸ
ಮಾರ್ಗವಿದು. ಬೇರೆಯವರು ಬಕಾಸುರರಂತೆ ತಿನ್ನುವುದು ಕೆಲವರಿಗೆ ತಮಾಷೆಯಾಗಿ ಕಂಡರೆ, ಇನ್ನು ಕೆಲವರಿಗೆ ವಾಕರಿಕೆ ಹುಟ್ಟಿಸುತ್ತದೆ.

ಇನ್ನು ಕೆಲವರಿಗೆ ತಿನ್ನಬೇಕೆಂಬ ಚಪಲ ಉಂಟಾಗುತ್ತದೆ. ಟಿವಿ ನಿರೂಪಕ ಆಹಾರ ಸೇವಿಸುವುದನ್ನು ತೀರಾ ಹತ್ತಿರದಿಂದ (close
up shot) ತೋರಿಸುವುದರಿಂದ, ಪ್ರೇಕ್ಷಕರ ರುಚಿಗ್ರಂಥಿಗಳನ್ನು ಕೆಣಕಿದಂತಾಗುತ್ತದೆ. ಈ ಕಾರ್ಯಕ್ರಮ ನೋಡುತ್ತಾ ನೋಡುತ್ತಾ,
ಅನೇಕರು ಬಗೆಬಗೆಯ ಆಹಾರಗಳನ್ನು ನೋಡುವುದರಲ್ಲಿಯೇ ಮಗ್ನರಾಗುತ್ತಾರೆ. ಈ ಕಾರ್ಯಕ್ರಮದ ಹೆಸರು ‘ಮುಕ್ಬಂಗ್.’
ಮುಕ್ಬಂಗ್ ಅಂದರೆ ‘ಬೇರೆಯವರಿಗೆ ತೋರಿಸುತ್ತಾ ತಿನ್ನು’ ಎಂದರ್ಥ.

ಈಗ ಈ ಪದ ಕಾಲಿನ್ಸ್ ಡಿಕ್ಷನರಿಯನ್ನು ಸಹ ಸೇರಿದೆ. ಈ ಕಾರ್ಯಕ್ರಮ ಆಹಾರಪ್ರಿಯರಲ್ಲದವರನ್ನೂ ತಿಂಡಿಪೋತರನ್ನಾಗಿ ಮಾಡುತ್ತಿದೆ. ಮಿತ ಆಹಾರ ಸೇವಿಸುವವರು ಕೂಡ ಈ ಕಾರ್ಯಕ್ರಮ ನೋಡಿ ತಾವು ತಿಂಡಿಪೋತರಾಗಿರುವುದಾಗಿ ಹೇಳಿದ್ದಾರೆ. ಸಿಹಿಕಹಿ ಚಂದ್ರು ಅವರು ಕನ್ನಡದಲ್ಲಿ ಈ ಕಾರ್ಯಕ್ರಮವನ್ನು ಚೆಂದವಾಗಿ ನಡೆಸಿಕೊಡಬಹುದು.

ವಿಚಿತ್ರ ಹೆಸರಿನ ಪತ್ರಿಕೆಗಳು ಕೆಲವು ವರ್ಷಗಳ ಹಿಂದೆ, ಪತ್ರಿಕೆಯೊಂದರ ಸಂಪಾದಕರು ಭೇಟಿಯಾಗಿದ್ದರು. ಅವರ ಪತ್ರಿಕೆ ಹೆಸರು ಕೇಳಿ ನಾನು ಆಶ್ಚರ್ಯಚಕಿತನಾಗಿದ್ದೆ. ಪತ್ರಿಕೆಗೆ ಹೀಗೆ ಹೆಸರಿಡಬಹುದಾ ಎಂದು ಊಹಿಸಿರಲೂ ಇಲ್ಲ. ಅಂದ ಹಾಗೆ ಆ ಪತ್ರಿಕೆಯ ಹೆಸರು ‘ಎದುರು ಶನಿ’. ಆ ಪತ್ರಿಕೆಯ ಸಂಪಾದಕರು ಎದುರು ಬಂದರೆ, ಬಂತಲ್ಲಪ್ಪಾ ‘ಎದುರು ಶನಿ’ ಎಂದಿದ್ದು ಕೇಳಿದರೂ ಅವರು ಏನೂ ಅನ್ನಲಿಕ್ಕಿಲ್ಲ. ಕಾರಣ ಪತ್ರಿಕೆಯ ಹೆಸರಿನಿಂದ ತಮ್ಮನ್ನು ಹಾಗೆ ಕರೆದಿರಬಹುದು ಎಂದು ಅವರು ಸಹಜವಾಗಿ ಭಾವಿಸಬಹುದು.

ಕನ್ನಡದಲ್ಲಿ ‘ಸುದ್ದಿ ಗಿಡುಗ’ ಎಂಬ ಹೆಸರಿನ ಪತ್ರಿಕೆಯಿದೆ. ಮಂಜುನಾಥ ಎಂಬುವವರು ಈ ಪತ್ರಿಕೆಯ ಸಂಪಾದಕರು. ಕೆಲವರಿಗೆ ಈ ಹೆಸರಿನ ಪತ್ರಿಕೆ ಸೋಜಿಗವನ್ನುಂಟು ಮಾಡಬಹುದು. ಇದೆಂಥ ಹೆಸರಿನ ಪತ್ರಿಕೆಯಪ್ಪಾ ಎಂದು ಹುಬ್ಬೇರಿಸಬಹುದು. ಆದರೆ ಅಮೆರಿಕದಲ್ಲಿ ‘ಕ್ಯಾಲಿಫೋರ್ನಿಯಾ ಈಗಲ್‌’, ‘ದಿ ವಿಚಿತಾ ಈಗಲ್‌’, ‘ವೆಸ್ಟ್ ಸೈಡ್ ಈಗಲ್‌’ ಎಂಬ ಹೆಸರಿನ ಪತ್ರಿಕೆಯಿದೆ.

ಕನ್ನಡದಲ್ಲಿ ಅದನ್ನು ‘ಕ್ಯಾಲಿಫೋರ್ನಿಯಾ ಗಿಡುಗ’ ಎಂದು ಹೇಳಬಹುದು. ಕ್ಯಾಲಿಫೋರ್ನಿಯಾ ಈಗಲ್ ಅಂದರೆ ಏನೂ
ಅನಿಸುವುದಿಲ್ಲ. ಆದರೆ ‘ಸುದ್ದಿ ಗಿಡುಗ’ ಅಂದರೆ ಅಚ್ಚರಿ. ಅಮೆರಿಕದ ಅರಿಝೋನಾದಲ್ಲಿ ಟೂಂಬ್ ಸ್ಟೋನ್ (ಸಮಾಧಿ ಶಿಲೆ) ಎಂಬ ಹೆಸರಿನ ನಗರವಿದೆ. ಆ ನಗರದಲ್ಲಿ ಒಂದು ವಿಶಿಷ್ಟ ಹೆಸರಿನ ಪತ್ರಿಕೆಯಿದೆ. ಅದರ ಹೆಸರು – The Tombstone
Epitaph. ಎಪಿಟಾ- ಅಂದರೆ ಸಮಾಧಿಯ ಶಿಲೆಯ ಮೇಲಿನ ಬರಹ ಎಂದರ್ಥ. ಆ ಊರಿನ ಹೆಸರೇ ಟೂಂಬ್ ಸ್ಟೋನ್ ಆದರೆ,
ಆ ಹೆಸರಿನ ಪತ್ರಿಕೆಯ ಹೆಸರು ಎಪಿಟಾಫ್ ಆಗಲೇಬೇಕು. ಹೀಗಾಗಿ ಅದನ್ನು ಆರಂಭಿಸಿದವರು ಬಹಳ ಯೋಚಿಸಿ ಆ ಹೆಸರನ್ನು
ಇಟ್ಟಿರಬೇಕು.

ಕೆಲವು ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ತಾವು ನೆಲೆಸಿದ್ದ ಅಮೆರಿಕದ ಕೊಲೊರಾಡೋದಿಂದ ಒಂದು ಪತ್ರಿಕೆಯನ್ನು
ತಂದುಕೊಟ್ಟಿದ್ದರು. ಅದರ ಹೆಸರು ‘ಬೌಲ್ಡರ್ ಡೈಲಿ ಕ್ಯಾಮೆರಾ.’ ಹಿಂದಿನ ವರ್ಷ ಅಮೆರಿಕದ ಓಹಿಯೋದಲ್ಲಿರುವ ನನ್ನ
ಸ್ನೇಹಿತರಾದ ಗಣೇಶ್ ಭಟ್, ನನಗೆ ಎರಡು ಪತ್ರಿಕೆಗಳನ್ನು ಕಳುಹಿಸಿಕೊಟ್ಟಿದ್ದರು. ಇಂಥ ಹೆಸರನ್ನು ಪತ್ರಿಕೆಗೆ ಇಡಬಹುದಾ
ಎಂದು ನಾನು ಊಹಿಸಿರಲಿಲ್ಲ. ಅದು ಹೆಸರಿಗೆ ತಕ್ಕ ಪತ್ರಿಕೆಯೋ ಅಥವಾ ಪತ್ರಿಕೆಯ ಹೆಸರಿಗಿಂತ ಭಿನ್ನವಾದ ಪತ್ರಿಕೆಯೋ ಗೊತ್ತಿಲ್ಲ.

ಅಂದ ಹಾಗೆ ಆ ಪತ್ರಿಕೆಗಳ ಹೆಸರು – Cleveland Plain Dealer ಮತ್ತು The Toledo Blade. ‘ಡೀಲರ್’ ಮತ್ತು ‘ಬ್ಲೇಡ್’ ಎಂಬ ಪದಗಳಿಗೆ ಕನ್ನಡದಲ್ಲಿ ಬೇರೆಯದೇ ಅರ್ಥಗಳಿವೆ. ಈ ಹೆಸರುಗಳನ್ನೂ ಪತ್ರಿಕೆಗಳಿಗೆ ಇಡಬಹುದು ಎಂದು ಕನ್ನಡದ ಸಂದರ್ಭ ದಲ್ಲಿ ಊಹಿಸಲೂ ಆಗುವುದಿಲ್ಲ. ಅಮೆರಿಕದ ಮ್ಯಾಸಚೂಸೆಟ್ಸ್‌ನ ಕಾರ್ಲಿಸ್ಲ್ ಎಂಬ ಊರಿನಲ್ಲಿ ಒಂದು ಪತ್ರಿಕೆಯಿದೆಯೆಂದು ಕೇಳಿದ್ದೇನೆ. ಅದರ ಹೆಸರು – Carlisle Mosquito. ಅಂದರೆ ಅಕ್ಷರಶಃ ‘ಕಾರ್ಲಿಸ್ಲ್ ಸೊಳ್ಳೆ’ ಎಂದರ್ಥ. ಇದು ಕಚ್ಚುವ ಅಥವಾ ರಕ್ತ ಹೀರುವ (ಟ್ಯಾಬ್ಲಾಯ್ಡ) ಪತ್ರಿಕೆಯೇ ಇರಬಹುದು.

ಲಂಡನ್‌ನ ಕೊರ್ನೆಲ್ ಪ್ರಾಂತದಲ್ಲಿ ಒಂದು ಸ್ಥಳೀಯ ಪತ್ರಿಕೆಯಿದೆ. ಅದರ ಹೆಸರು The Falmouth Packet. ಪ್ರಾಯಶಃ ಪ್ಯಾಕೆಟ್ ಎಂಬ ಹೆಸರನ್ನಿಟ್ಟುಕೊಂಡ ಪತ್ರಿಕೆ ಇದೊಂದೇ ಇರಬಹುದು. ತಪ್ಪು ಮಾಡದವರು ಯಾರವ್ರೇ ?! ನಡೆಯುವವರು ಎಡವುತ್ತಾರೆ ಮತ್ತು ಬರೆಯುವವರು ತಪ್ಪು ಮಾಡುತ್ತಾರೆ ಮತ್ತು ಕಾಗುಣಿತ ತಪ್ಪುಗಳನ್ನು ಮಾಡಿಯೇ ಮಾಡುತ್ತಾರೆ. ‘ಇಲ್ಲ, ನಾನು ಹಾಗೆ ಮಾಡೊಲ್ಲ’ ಎಂದು ಹೇಳಿದವರು ಯಾರೂ ಇಲ್ಲವಂತೆ. ಇಂಗ್ಲಿಷ್ ಭಾಷೆಯ ತಪ್ಪು, ಸರಿ, ವೈಶಿಷ್ಟ್ಯ, ಸೊಬಗು, ವಿಚಿತ್ರ, ವಿನೋದ, ಬಳಕೆ… ಹೀಗೆ ಆ ಭಾಷೆಗೆ ಸಂಬಂಧಿಸಿದ ಕುತೂಹಲ ಸಂಗತಿಗಳನ್ನೊಳಗೊಂಡ Eats, Shites Leaves ಪುಸ್ತಕದ ಲೇಖಕ ಕೂಡ All spelling and grammatical errors in this book are intentional; otherwise, they were put there by the editor ಎಂಬ ನಿರಾಕರಣೆ (Disclaimer)ಯನ್ನು ಆರಂಭದಲ್ಲಿಯೇ ಬರೆದುಕೊಳ್ಳುತ್ತಿರಲಿಲ್ಲ.

ಹಳೆ ಒಡಂಬಡಿಕೆ (Old Testament) ಮತ್ತು ಹೀಬ್ರೂ ಬೈಬಲ್ ಅಥವಾ ಕಿಂಗ್ ಜೇಮ್ಸ ಬೈಬಲ್ ನಲ್ಲಿ ಹತ್ತು ಅನುಶಾಸನ
(Commandments)ಗಳಿವೆ. ಅವುಗಳಂದು Thoushalt not commit adultery (ವ್ಯಭಿಚಾರ ಮಾಡಕೂಡದು). ಆದರೆ 1631ರಲ್ಲಿ ಪ್ರಕಟವಾದ ಹಳೆ ಒಡಂಬಡಿಕೆಯಲ್ಲಿ, not ಪದ ಇಲ್ಲದೇ Thou shalt commit adultery ಎಂದು ಪ್ರಕಟವಾಗಿ ದೊಡ್ಡ
ರಾದ್ಧಾಂತವೇ ಆಗಿ ಹೋಯಿತು. ಅದನ್ನು ಪ್ರಕಟಿಸಿದ ಮುದ್ರಕನನ್ನು ಜನ ಥಳಿಸಿದರು.

ಅವನ ರಕ್ಷಣೆಗೆ ಧಾವಿಸಿದ ಮಗನ ಕೈಕತ್ತರಿಸಿ ಹಾಕಿದರು. ಮುದ್ರಿತವಾದ ಪ್ರತಿಗಳನ್ನು ವಾಪಸ್ ಪಡೆಯುವುದರೊಳಗೆ, ಅದು ಆಗಲೇ ವಿತರಣೆಯಾಗಿ ನಗೆಪಾಟಲಿಗೀಡಾಯಿತು. ಈ ಪುಸ್ತಕವನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿಬಂತು. ಇನ್ನು ಕೆಲವು ಕಿಡಿ ಗೇಡಿಗಳು Thou shalt commit adultery ಎಂದು ಬರೆದಿರುವುದು ಸರಿಯಾಗಿದೆ, ಮನುಷ್ಯನಾದವನು ವ್ಯಭಿಚಾರ ಮಾಡ ಬೇಕು ಎಂದು ವಾದಿಸಿದರು. ವಾಕ್ಯದಲ್ಲಿ not ಪದ ಹಾರಿ ಹೋಗಿದ್ದರಿಂದ ಅದು ಇನ್ನಿಲ್ಲದ ವಿವಾದಕ್ಕೆ ಕಾರಣವಾಯಿತು.

ಸ್ವತಃ ಧರ್ಮಗುರುಗಳು ಹೇಳಿಕೆ ನೀಡಿದರೂ ವಿವಾದ ನಿಲ್ಲಲಿಲ್ಲ. ತಮಾಷೆಯೆಂದರೆ, ಅಂದು ಮಾಡಿದ ತಪ್ಪಿನಿಂದಾದ ಹುಟ್ಟಿದ
ವಿವಾದ ಮತ್ತು ಚರ್ಚೆ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಈಗಲೂ ಕೆಲವರು, ‘ಹಳೆ ಒಡಂಬಡಿಕೆಯಲ್ಲಿಯೇ
ವ್ಯಭಿಚಾರ ಮಾಡಬೇಕು ಎಂದು ಬರೆದಿದೆಯಲ್ಲ’ ಎಂದು ವಾದಿಸುತ್ತಾರೆ. ‘ಅದು ಆಕಸ್ಮಿಕವಾಗಿ ಆದ ಪ್ರೂಫ್‌ (ಕರಡು)
ದೋಷವಲ್ಲ, ಉದ್ದೇಶಪೂರ್ವಕವಾಗಿಯೇ ಬರೆದಿದ್ದು’ ಎಂದು ಪ್ರತಿಪಾದಿಸುವವರೂ ಇದ್ದಾರೆ.

ಖ್ಯಾತ ಐರಿಷ್ ಕಾದಂಬರಿಕಾರಿ, ಕತೆಗಾರ ಜೇಮ್ಸ ಜಾಯ್ಸ್ ಬರೆದ ‘ಯೂಲಿಸಿಸ್’ ಬಹಳ ಜನಪ್ರಿಯ ಕೃತಿ. 1922ರಲ್ಲಿ ಈ ಕೃತಿ ಬಿಡುಗಡೆಯಾದಾಗ, ಅದರಲ್ಲಿ ಐದು ಸಾವಿರ ಕಾಗುಣಿತ ದೋಷಗಳು ಇದ್ದುವಂತೆ. ಕೃತಿ ಮತ್ತು ಕೃತಿಕಾರರ ಹೆಸರನ್ನು ಹೊರತು ಪಡಿಸಿದರೆ, ಇಡೀ ಪುಸ್ತಕದಲ್ಲ ತಪ್ಪುಗಳೇ ತುಂಬಿದ್ದು ವಂತೆ. ಕೊನೆಗೆ ಸ್ವತಃ ಜಾಯ್ಸ, ತಾನೇ ಇಡೀ ಕೃತಿಯನ್ನು ಮೂರು ಸಲ ಓದಿ, ಕರಡು ತಿದ್ದಿದನಂತೆ. ಆನಂತರ ಪುಸ್ತಕ ಅಚ್ಚಾಗಿ ಬಂದಾಗ, ನಲವತ್ತು ಕಾಗುಣಿತ ದೋಷಗಳು ಇದ್ದುವಂತೆ.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ (ವಿಶ್ವವಾಣಿ ಅಲ್ಲ) ‘ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾವು ಸೌಲಭ್ಯ’ (ಸಾಲ ಸೌಲಭ್ಯ ಎಂದಾಗಬೇಕಿತ್ತು) ಎಂಬ ಶೀರ್ಷಿಕೆ ನೋಡಿ ಇವೆ ನೆನಪಾಯಿತು.