Thursday, 24th October 2024

Amaran Movie: ಮೇಜರ್ ಮುಕುಂದ್ ವರದರಾಜನ್ ಜೀವನಗಾಥೆಯಲ್ಲಿ ಶಿವ ಕಾರ್ತಿಕೇಯನ್; ʼಅಮರನ್ʼ ಚಿತ್ರದ ಟ್ರೈಲರ್‌ ಔಟ್‌

Amaran Movie

ಚೆನ್ನೈ: ಕಾಲಿವುಡ್ ನಟ ಶಿವ ಕಾರ್ತಿಕೇಯನ್ (Sivakarthikeyan) ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಅಮರನ್’ (Amaran Movie). ಇದು ಭಯೋತ್ಪಾದಕ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮೇಜರ್ ಮುಕುಂದ್ ವರದರಾಜನ್ (Major Mukund Varadarajan) ಜೀವನ ಚರಿತ್ರೆಯಾಗಿದ್ದು, ಟ್ರೈಲರ್‌ ಬಿಡುಗಡೆಯಾಗಿದೆ. ಕನ್ನಡದಲ್ಲಿಯೂ ಟ್ರೈಲರ್‌ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ಎಮೋಷನ್ ಜತೆಗೆ ಆ್ಯಕ್ಷನ್‌ ಅಂಶಗಳನ್ನು ಟ್ರೈಲರ್‌ನಲ್ಲಿ ಬ್ಲೆಂಡ್ ಮಾಡಲಾಗಿದೆ.

ರಜೆಯಲ್ಲಿ ಮನೆಗೆ ಬಂದಿರುವ ಯೋಧ ತನ್ನ ಮಗಳೊಂದಿಗೆ ಇರುವ ಕ್ಷಣ, ಮಗಳಿಗೆ ಒಂದು ಪ್ರೀತಿಯ ಅಪ್ಪುಗೆ ಕೊಟ್ಟು ಮತ್ತೆ ದೇಶ ಸೇವೆಗೆ ಹೋಗುವ ದೃಶ್ಯ , ನಮ್ಮನ್ನು ಬಿಟ್ಟು ನೀನು ದೂರ ಆಗಿದ್ದರೂ ಪರವಾಗಿಲ್ಲ, ಸೇಫ್‌ ಆಗಿರು ಎನ್ನುವ ಪತ್ನಿ ಡೈಲಾಗ್ ನೋಡುಗರನ್ನು ಕಾಡುತ್ತದೆ. ಶಿವಕಾರ್ತಿಕೇಯನ್ ಮೇಜರ್ ಮುಕುಂದ್ ವರದರಾಜನ್ ಪಾತ್ರದಲ್ಲಿ ಜೀವಿಸಿದ್ದಾರೆ. ಸಾಯಿ ಪಲ್ಲವಿ ಅವರ ಪತ್ನಿ ಇಂದೂ ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರವನ್ನು ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ. ಭುವನ್ ಅರೋರಾ, ರಾಹುಲ್ ಬೋಸ್, ಲಲ್ಲು, ಶ್ರೀಕುಮಾರ್‌, ಶ್ಯಾಮ್‌ ಮೋಹನ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್ʼ ಕೃತಿಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಅವರು ಈ ಕೃತಿಯಲ್ಲಿ ಮೇಜರ್ ವರದರಾಜನ್ ಅವರ ಬಗ್ಗೆ ಸಾಕಷ್ಟು ಬರೆದಿದ್ದು ಅದರಲ್ಲಿನ ಅಂಶಗಳನ್ನು ತೆಗೆದುಕೊಂಡು ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಕಥೆ ಬರೆದು, ನಿರ್ದೇಶಿಸಿದ್ದಾರೆ.

ಜಿ.ವಿ.ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಸಿ.ಎಚ್.ಸಾಯಿ ಅವರ ಛಾಯಾಗ್ರಹಣ ಮತ್ತು ಆರ್. ಕಲೈವನನ್ ಅವರ ಸಂಕಲನವಿರುವ ಸಿನಿಮಾವನ್ನು ಕಮಲ್‌ ಹಾಸನ್‌ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌, ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್‌ 31ರಂದು ಕನ್ನಡ, ತಮಿಳು, ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ʼಅಮರನ್ʼ ಸಿನಿಮಾ ತೆರೆಕಾಣಲಿದೆ.

ಮೊದಲ ಬಾರಿ ಶಿವ ಕಾರ್ತಿಕೇಯನ್‌-ಸಾಯಿ ಪಲ್ಲವಿ ಜೋಡಿ

ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಶಿವ ಕಾರ್ತಿಕೇಯನ್‌ ಮತ್ತು ಸಾಯಿ ಪಲ್ಲವಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಚಿತ್ರ ಸೆಟ್ಟೇರಿದಾಗಿನಿಂದಲೇ ಸಿನಿ ರಸಿಕರ ಗಮನ ಸೆಳೆದಿದೆ. ಜತೆಗೆ ಇದೀಗ ಬಿಡುಗಡೆಯಾದ ಮೈನವಿರೇಳಿಸುವ ಟ್ರೈಲರ್‌ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಈ ಚಿತ್ರದ ಜತೆಗೆ ಶಿವ ಕಾರ್ತಿಕೇಯನ್‌ ಅವರು ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಎ.ಆರ್‌.ಮುರುಗದಾಸ್‌ ಅವರ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸಾಯಿ ಪಲ್ಲವಿ ಬಹು ನಿರೀಕ್ಷಿತ ಬಾಲಿವುಡ್‌ನ ʼರಾಮಾಯಣʼ ಚಿತ್ರದಲ್ಲಿ ಸೀತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿತೇಶ್‌ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಾವಣನಾಗಿ ಯಶ್‌ ಮತ್ತು ರಾಮನಾಗಿ ರಣಬೀರ್‌ ಕಪೂರ್‌ ಅಭಿನಯಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Actor Yash: ʼರಾಮಾಯಣʼದಲ್ಲಿ ಅಭಿನಯಿಸುತ್ತಿದ್ದಾರಾ ಯಶ್?‌ ಕೊನೆಗೂ ಮೌನ ಮುರಿದ ರಾಕಿಂಗ್‌ ಸ್ಟಾರ್‌ ಹೇಳಿದ್ದೇನು?