Friday, 18th October 2024

BBK 11: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್​ಗಳೇ ಕಾಣುತ್ತಿಲ್ಲ: ಬರೀ ಜಗಳ… ಜಗಳ… ಜಗಳ…

BBK 11 Fights

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾದಾಗಿನಿಂದ ಬರೀ ಜಗಳಗಳೇ ನಡೆಯುತ್ತಿದೆ. ಈ ಹಿಂದಿನ ಸೀಸನ್​ಗಳಂತೆ ಒಂದೊಳ್ಳೆ ಕಾಮಿಡಿ, ಮುದ್ದಾದ ಟಾಕ್, ಸ್ಪರ್ಧಿಗಳ ಅನುಭವ ಹಂಚಿಕೆ ಈ ರೀತಿಯ ಯಾವುದೇ ಘಟನೆ ಸಂಭವಿಸಿಲ್ಲ. ಬದಲಾಗಿ ಕಳೆದ ಮೂರು ವಾರಗಳಿಂದ ಮನೆಯೊಳಗೆ ನಡೆಯುತ್ತಿರುವುದು ಕೇವಲ ಜಗಳ. ಇದರಿಂದ ವೀಕ್ಷಕರು ಬೇಸತ್ತು ಹೋಗಿದ್ದಾರೆ. ದೊಡ್ಮನೆಯಲ್ಲಿ ಟಾಸ್ಕ್​ಗಳು ಕೂಡ ಕಾಣಿಸುತ್ತಿಲ್ಲ.

ಹೌದು, ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಂದೇ ಒಂದು ಗೇಮ್ ನಡೆದಿಲ್ಲ. ಕಳೆದ ವಾರವಾದರೆ ನಾಮಿನೇಷನ್​ನಿಂದ ಪಾರಾಗಲೆಂದು ಟಾಸ್ಕ್ ನೀಡಲಾಗಿತ್ತು. ಆದರೆ, ಈ ವಾರದ ಮೊದಲ ಮೂರು ದಿನ ಮನೆಯೊಳಗೆ ಬರೀ ಜಗಳಗಳೇ ನಡೆದಿವೆ. ಅದರಲ್ಲೂ ಇಂದಿನ ಎಪಿಸೋಡ್​ನಲ್ಲಿ ಜಗಳ ಮುಂದಿನ ಹಂತಕ್ಕೋಗಿ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಇದರ ಸಣ್ಣ ಝಲಕ್ ಕೂಡ ಬಿಗ್ ಬಾಸ್ ಕೊಟ್ಟಿದ್ದಾರೆ.

ಜಗದೀಶ್-ರಂಜಿತ್ ಹೊಡೆದಾಟ?:

ರಂಜಿತ್ ಮತ್ತು ಜಗದೀಶ್ ನಡುವೆ ಸಣ್ಣ ಮಟ್ಟದ ಹೊಡೆದಾಟ ನಡೆದಿದೆ ಎಂಬ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಮ್ಯಾನ್ ಹ್ಯಾಂಡ್ಲಿಂಗ್ ಆಗಿರುವ ಕಾರಣ ಇವರಿಬ್ಬರನ್ನು ಮನೆಯಿಂದ ಹೊರಹಾಕಲಾಗಿದೆಯಂತೆ. ಜಗದೀಶ್‌ ಆರಂಭದಿಂದ ಕೇವಲ ಮನೆಯ ಸ್ಪರ್ಧಿಗಳ ವಿರುದ್ಧ ಮಾತ್ರವಲ್ಲದೆ ಬಿಗ್‌ಬಾಸ್‌ ಕಾರ್ಯಕ್ರಮದ ಬಗ್ಗೆ ಕೂಡ ಹಗುರವಾಗಿ ಮಾತನಾಡಿದ್ದರು. ಇದಕ್ಕೆ ಇಡೀ ಮನೆಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಮನೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು.

ಇಲ್ಲಿಂದ ಜಗದೀಶ್ ಮತ್ತು ಮನೆಯ ಹೆಚ್ಚಿನ ಸದಸ್ಯರ ನಡುವೆ ಜಗಳ ಶುರುವಾಗಿದೆ. ಕೆಲವು ಪ್ರಾಥಮಿಕ ಮಾಹಿತಿ ಪ್ರಕಾರ ಮತ್ತೊಬ್ಬ ಸ್ಪರ್ಧಿ ಮಾನಸಾ ಅವರ ವಿಚಾರಕ್ಕೆ ಜಗಳ ಆಗಿದೆ ಎನ್ನಲಾಗಿದೆ. ಈ ಸಮಯದಲ್ಲಿ ರಂಜಿತ್-ಜಗದೀಶ್‌ ಕೈ ಕೈ ಮಿಲಾಯಿಸಿದ್ದಾರಂತೆ. ಸ್ಪರ್ಧಿಗಳೆಲ್ಲಾ ಜಗದೀಶ್ ವಿರುದ್ಧ ನಿಂತಾಗ ರಂಜಿತ್ ಹಾಗೂ ಮಂಜು ಜೊತೆ ಜೋರಾಗಿ ಜಗಳವಾಡಿದ್ದು, ಅವಾಚ್ಯ ಶಬ್ಧಗಳಿಂದ ಬೈಯ್ದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಎಕ್ಕಡ ಸದ್ದು:

ಜಗದೀಶ್ ಅವರ ಮೇಲೆ ಎಲ್ಲರು ತಿರುಗಿ ಬೀಳಲು ಕಾರಣವಾಗಿದ್ದು ಮಾನಸ ಅವರು ಬಳಸಿದ ಒಂದು ಮಾತು. ನೀನು ಬಿಗ್ ಬಾಸ್ ಎಕ್ಕಡ ತಿಂದು ಅವರಿಗೆ ದ್ರೋಹ ಮಾಡ್ತಿಯಾ ಎಂದು ಮಾನಸ ಅವರು ಜಗದೀಶ್ ಮೇಲೆ ಆರೋಪಿಸಿದ್ದಾರೆ. ಮಾನಸಾ ಮಾತಿಗೆ ಕೆರಳಿದ ಜಗದೀಶ್ ಏಕವಚನದಲ್ಲಿ ಮಾತನಾಡಿದ್ದಾರೆ. ಆಗ ಉಗ್ರಂ ಮಂಜು, ರಂಜಿತ್ ಅವರು ಜಗದೀಶ್ ವಿರುದ್ಧ ಮುಖಾಮುಖಿಯಾಗುತ್ತಾರೆ. ಇಲ್ಲಿಂದ ಜಗಳ ಮತ್ತಷ್ಟು ತಾರಕಕ್ಕೇರಿದೆ.

BBK 11: ಜಗಳಗಳಿಂದಲೇ ಕೂಡಿದ್ದ ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಮಗುವಿನ ಅಳುವ ಸದ್ದು