Friday, 18th October 2024

BBK 11: ಜಗದೀಶ್-ರಂಜಿತ್ ಹೊಡೆದಾಡಿಕೊಳ್ಳಲು ಏನು ಕಾರಣ?, ಬಿಗ್ ಬಾಸ್ ಮನೆಯಲ್ಲಿ ಏನಾಯಿತು?

Ranjith-Jagadish Fight

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಮೂರನೇ ವಾರ ಸಾಗುತ್ತಿದೆ. ಈವರೆಗೆ ಮನೆ ನಗು-ಅಳುವಿಗಿಂತಲೂ ಜಾಸ್ತಿ ಕಂಡಿದ್ದು ಬರೀ ಜಗಳಗಳನ್ನೆ. ಇದರಲ್ಲಿ ಲಾಯರ್ ಜಗದೀಶ್ ಅವರದ್ದು ಸಿಂಹ ಪಾಲು. ಮನೆಯಲ್ಲಿ ಯಾವುದೇ ಜಗಳ ನಡೆದರೂ ಅದರಲ್ಲಿ ಇವರದ್ದೊಂದು ಪಾಲು ಇರುತ್ತಿತ್ತು. ಆದರೀಗ ಈ ಜಗಳ ಹೊಡೆದಾಟದ ಮಟ್ಟಕ್ಕೆ ತಲುಪಿದೆ ಎನ್ನಲಾಗಿದೆ. ದೊಡ್ಮನೆಯಲ್ಲಿ ರಂಜಿತ್ ಮತ್ತು ಜಗದೀಶ್ ನಡುವೆ ಸಣ್ಣ ಮಟ್ಟದ ಹೊಡೆದಾಟ ನಡೆದಿದೆ ಎಂಬ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಹೊಡೆದಾಟಕ್ಕೆ ಏನು ಕಾರಣ?:

ಜಗದೀಶ್‌ ಆರಂಭದಿಂದ ಕೇವಲ ಮನೆಯ ಸ್ಪರ್ಧಿಗಳ ವಿರುದ್ಧ ಮಾತ್ರವಲ್ಲದೆ ಬಿಗ್‌ಬಾಸ್‌ ಕಾರ್ಯಕ್ರಮದ ಬಗ್ಗೆ ಕೂಡ ಹಗುರವಾಗಿ ಮಾತನಾಡಿದ್ದರು. ಅದರಲ್ಲೂ ನಿನ್ನೆ ಬಿಗ್ ಬಾಸ್ ಶೋ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ. ಇದಕ್ಕೆ ಇಡೀ ಮನೆಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಮನೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು.

ಬಿಗ್ ಬಾಸ್ ಶೋ ಬಗ್ಗೆ ಜಗದೀಶ್‌ ಅವಹೇಳನ ಮಾಡಿದ್ದಕ್ಕೆ ಉಗ್ರಂ ಮಂಜು ಸಿಟ್ಟಾಗಿದ್ದಾರೆ. ಸಿಟ್ಟಿನಲ್ಲಿ ಮಂಜು ಚಪ್ಪಲಿ ಎಸೆದಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಜಗದೀಶ್‌ ಗಲಾಟೆ ಮಾಡಿದ್ದಾರೆ. ಈ ಸಮಯದಲ್ಲಿ ರಂಜಿತ್-ಜಗದೀಶ್‌ ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ. ಕೆಲವು ಪ್ರಾಥಮಿಕ ಮಾಹಿತಿ ಪ್ರಕಾರ ಮತ್ತೊಬ್ಬ ಸ್ಪರ್ಧಿ ಮಾನಸಾ ಅವರ ವಿಚಾರಕ್ಕೆ ಜಗಳ ಆಗಿದೆ ಎನ್ನಲಾಗಿದೆ.

ಮಾನಸ ಆಡಿದ ಮಾತಿನಿಂದಲೇ ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ ನಡೆದಿದೆ ಎಂಬ ಸುದ್ದಿ ಕೂಡ ಇದೆ. ನಾಮಿನೇಷನ್ ವೇಳೆ ಜಗದೀಶ್ ಎಲ್ಲರ ವಿಚಾರಕ್ಕೂ ಮೂಗು ತೂರಿಸಿದ್ದರಂತೆ. ಇದನ್ನು ಮಾನಸ ಪ್ರಶ್ನೆ ಮಾಡಿದ್ದಾರೆ. ನೀನ್ ಏನ್ನಯ್ಯಾ ಎಲ್ಲರ ವಿಚಾರಕ್ಕೂ ತಲೆ ಹಾಕ್ತೀಯಾ, ಬೇರೆಯವರ ವಿಚಾರದಲ್ಲೂ ಮಧ್ಯೆ ಪ್ರವೇಶಿಸೋದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಿಟ್ಟಾದ ಜಗದೀಶ್​ ಕೇಳೋಕೆ ನೀನ್ ಯಾರು ಎಂದು ತಿರುಗಿಬಿದ್ದಿದ್ದಾರೆ. ಇದೇ ವಿಚಾರಕ್ಕೆ ಸ್ಪರ್ಧಿಗಳೆಲ್ಲಾ ಜಗದೀಶ್ ವಿರುದ್ಧ ನಿಂತಾಗ ರಂಜಿತ್ ಹಾಗೂ ಮಂಜು ಜೊತೆ ಜೋರಾಗಿ ಜಗಳವಾಡಿದ್ದು, ಅವಾಚ್ಯ ಶಬ್ಧಗಳಿಂದ ಬೈಯ್ದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಹೊಡೆದಾಟ?: ಜಗದೀಶ್-ರಂಜಿತ್​ರನ್ನು ಮನೆಯಿಂದ ಹೊರ ಹಾಕಿದ ಬಿಗ್ ಬಾಸ್