Sunday, 6th October 2024

BBK 11: ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಮನೆಯಿಂದ ಹೊರ ಹೋಗಲು 10 ಮಂದಿ ನಾಮಿನೇಟ್: ಯಾರೆಲ್ಲ?

BBK 11 Nomination

ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada) ಎರಡೂ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮೊದಲ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 10 ಮಂದಿ ನಾಮಿನೇಟ್ ಆಗಿದ್ದಾರೆ. ಈ ಬಾರಿಯ ಸೀಸನ್​ ಸ್ವರ್ಗ-ನರಕ ಎಂಬ ಕಾನ್​ಸೆಪ್ಟ್ ಮೇಲೆ ಸಾಗುತ್ತಿದ್ದು, 10 ಜನ ಸ್ವರ್ಗದಲ್ಲಿ ಹಾಗೂ 7 ಜನರು ನರಕದಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ 6 ಮಂದಿ ಸ್ವರ್ಗದಿಂದ ಮತ್ತು ನಾಲ್ಕು ಮಂದಿ ನರಕದಿಂದ ನಾಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಕೂಡಲೆ ಲಾಯರ್ ಜಗದೀಶ್ ಮತ್ತು ಚೈತ್ರಾ ಕುಂದಾಪುರ ಮೊದಲ ವಾರವೇ ನಾಮಿನೇಟ್ ಆಗುತ್ತಾರೆ ಎಂದು ನೆಟ್ಟಗರು ಮಾತನಾಡಿಕೊಳ್ಳುತ್ತಿದ್ದರು. ಅದರಂತೆ ಇವರಿಬ್ಬರೂ ನಾಮಿನೇಟ್ ಆಗಿದ್ದಾರೆ. ಚೈತ್ರಾ ಅವರನ್ನು ಮೊದಲ ದಿನವೇ ಸ್ವರ್ಗ ವಾಸಿಗಳು ಮನೆಯಿಂದ ಹೋಗಲು ನೇರವಾಗಿ ಆಯ್ಕೆ ಮಾಡಿದ್ದರು.

ಎರಡನೇ ದಿನ 9 ಮಂದಿ ನಾಮಿನೇಟ್ ಆಗಿದ್ದಾರೆ. ಸ್ವರ್ಗದಲ್ಲಿ ಇರುವವರ ಪೈಕಿ ಜಗದೀಶ್, ಯಮುನ, ಉಗ್ರಂ ಮಂಜು, ಗೌತಮಿ, ಹಂಸ ಹಾಗೂ ಭವ್ಯ ಮತ್ತು ನರಕ ವಾಸಿಗಳಾದ ಶಿಶಿರ್, ಮೋಕ್ಷಿತಾ ಮತ್ತು ಮಾನಸ ಈ ವಾರ ನೇರವಾಗಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

ನಾಮಿನೇಷನ್ ಬಳಿಕ ಜಗಳ:

ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಸ್ವರ್ಗ ಮತ್ತು ನರಕದಲ್ಲಿರುವವರ ಮಧ್ಯೆ ಜಗಳ ನಡೆದಿದೆ. ಯಮುನಾ ಹಾಗೂ ಶಿಶಿರ್ ನಡುವೆ ದೊಡ್ಡ ವಾಗ್ವಾದ ನಡೆದಿದೆ. ಯಮುನಾ ಅವರು ಗೌತಮಿ ಅವರನ್ನು ನಾಮಿನೇಟ್ ಮಾಡಲು ನೀಡಿದ ಕಾರಣ ಇದಕ್ಕೆ ಕಾರಣ. ಯಮುನಾ ಅವರು ‘ಗೌತಮಿ ನರಕ ವಾಸಿಗಳ ಜೊತೆ ಹೆಚ್ಚು ಮಾತನಾಡುತ್ತಾರೆ, ಸ್ವರ್ಗದಲ್ಲಿರುವ ನಮ್ಮವರಿಗಿಂತ ಜಾಸ್ತಿ ಅವರ ಜೊತೆ ಕನೆಕ್ಟ್ ಆಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಲವ್ ಸ್ಟೋರಿ: ನರಕ ವಾಸಿಗೆ ಸ್ವರ್ಗದ ದೇವತೆ ಮೇಲೆ ಕಣ್ಣು

ಈ ಕಾರಣ ನರಕದಲ್ಲಿರುವ ಶಿಶಿರ್ ಅವರನ್ನು ಕೆರಳಿಸಿದೆ. ಗೌತಮಿ ಅವರು ನಮ್ಮ ಜೊತೆ ಮಾತನಾಡಲು ಬಂದರೆ ಏನು ತಪ್ಪು? ಎಂದು ಶಿಶಿರ್ ಅವರು ಯಮುನಾ ಅವರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆಲ್ಲ ಉತ್ತರ ಕೊಡುವ ಹಾಗಿಲ್ಲ ನಾನು, ಇದನ್ನೆಲ್ಲ ಕೇಳಲು ನೀವು ಯಾರು? ಎಂದು ಯಮುನಾ ಅವರು ಮರು ಪ್ರಶ್ನಿಸಿದ್ದಾರೆ.

ಮೊದಲ ವಾರ ನಾಮಿನೇಟ್ ಆದ ಸದಸ್ಯರು:

ಸ್ವರ್ಗ: ಜಗದೀಶ್, ಯಮುನ, ಉಗ್ರಂ ಮಂಜು, ಗೌತಮಿ, ಹಂಸ, ಭವ್ಯ.

ನರಕ: ಶಿಶಿರ್, ಮೋಕ್ಷಿತಾ, ಮಾನಸ, ಚೈತ್ರಾ ಕುಂದಾಪುರ.