Sunday, 6th October 2024

Bigg Boss Kannada 11: ಬಿಗ್ ಬಾಸ್‌ನಲ್ಲಿ ಎರಡನೇ ದಿನವೂ ದೊಡ್ಡ ಜಗಳ: ಇಂದು ಯಾರ-ಯಾರ ನಡುವೆ?

Bigg Boss Kannada 11

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಜಗಳದೊಂದಿಗೆ ಪ್ರಾರಂಭವಾಗಿದೆ. ಮೊದಲ ದಿನ ಸ್ವರ್ಗ ವಾಸಿಯ ಸ್ಪರ್ಧಿ ನರಕದಲ್ಲಿರುವವರಿಗೆ ಬಿಸಿ ನೀರು ಕೊಟ್ಟಿದ್ದಕ್ಕೆ, ಚೈತ್ರಾ ಕುಂದಾಪುರ (Chaithra Kundapura) ಸೇಬು ಹಣ್ಣು ತಿಂದಿದ್ದಕ್ಕೆ ಮತ್ತು ಲಾಯರ್ ಜಗದೀಶ್ (Lawyer Jagadish) ಅವರು ನಿಯಮ ಮೀರಿ ಮನೆ ಸ್ವಚ್ಚಗೊಳಿಸಿದ್ದಕ್ಕೆ ಜಗಳ ನಡೆಯಿತು.

ಇದರ ಜತೆಗೆ ಮೊದಲ ಹಂತದ ನಾಮಿನೇಷನ್ ಪ್ರಕ್ರಿಯೆ ವೇಳೆಯೂ ಕೆಲ ಸ್ಪರ್ಧಿಗಳ ನಡುವೆ ಸಣ್ಣದಾದ ಕಿಡಿ ಹತ್ತಿದೆ. ಸ್ವರ್ಗದಲ್ಲಿರುವವರ ಆಯ್ಕೆಯ ಮೇರೆಗೆ ನರಕದಲ್ಲಿರುವ ಚೈತ್ರಾ ಕುಂದಾಪುರ ಮೊದಲ ವಾರ ಮನೆಯಿಂದ ಹೊರಹೋಗಲು ನೇರವಾಗಿ ನಾಮಿನೇಟ್ ಆಗಿದ್ದಾರೆ. ಇಂದು ಎರಡನೇ ಹಂತದ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಬಿಗ್ ಬಾಸ್ ಟಾಸ್ಕ್ ಕೂಡ ನೀಡಿದ್ದಾರೆ. ಇದಾದ ಬಳಿಕ ಸ್ವರ್ಗ ಮತ್ತು ನರಕದಲ್ಲಿರುವವರ ಮಧ್ಯೆ ಇಂದುಕೂಡ ಜಗಳ ಮುಂದುವರೆದಿದೆ.

ಕಲರ್ಸ್ ಕನ್ನಡ ತನ್ನ ಸಾಮಾಜಿಕ ಖಾತೆಯಲ್ಲಿ ಎರಡನೇ ದಿನದ ಪ್ರೊಮೋ ಹೊರ ಬಿಟ್ಟಿದ್ದು, ಮೊದಲ ನಾಮಿನೇಷನ್​ನ ತಾಪ ಸ್ವರ್ಗಕ್ಕೂ ವ್ಯಾಪಿಸಿದ್ಯಾ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್‌ ಮಾಡಿದೆ. ಎರಡನೇ ಹಂತದ ನಾಮಿನೇಷನ್​ಗಾಗಿ ಬಿಗ್ ಬಾಸ್ ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದಾರೆ. ನಾಮಿನೇಟ್ ಮಾಡುವ ಸಂದರ್ಭ ಸ್ಪರ್ಧಿಗಳು ನೀಡಿದ ಕಾರಣಗಳು ಹಲವರನ್ನು ಕೆರಳಿಸಿದೆ. ಪ್ರೊಮೋದಲ್ಲಿರುವಂತೆ ಯಮುನಾ ಹಾಗೂ ಭವ್ಯಾ ಅವರು ಗೌತಮಿ ಅವರ ಹೆಸರು ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ನೀಡಿರುವ ಅವರು ”ನರಕ ನಿವಾಸಿಗಳ ಮೇಲೆ ಗೌತಮಿ ಅವರಿಗೆ ಸಾಫ್ಟ್ ಕಾರ್ನರ್ ಇದೆ. ನಮ್ಮವರ ಜತೆ ಇರುವ ಬದಲು ನರಕದಲ್ಲಿ ಇರುವವರ ಜತೆ ಹೆಚ್ಚು ಸಮಯ ಕಳೆಯುತ್ತಾರೆʼʼ ಎಂದು ಹೇಳಿದ್ದಾರೆ.

ಇದು ನರಕದಲ್ಲಿರುವ ಶಿಶಿರ್ ಅವರನ್ನು ಕೆರಳಿಸಿದೆ. ಯಮುನಾ ಹಾಗೂ ಶಿಶಿರ್ ನಡುವೆ ದೊಡ್ಡ ವಾಗ್ವಾದ ನಡೆದಿದೆ. ʼʼಗೌತಮಿ ಅವರು ನಮ್ಮ ಜತೆ ಮಾತನಾಡಲು ಬಂದರೆ ಏನು ತಪ್ಪು?ʼʼ ಎಂದು ಶಿಶಿರ್ ಅವರು ಯಮುನಾ ಅವರಿಗೆ ಪ್ರಶ್ನಿಸಿದ್ದಾರೆ. ʼʼಇದಕ್ಕೆಲ್ಲ ಉತ್ತರ ಕೊಡುವ ಹಾಗಿಲ್ಲ ನಾನು, ಇದನ್ನೆಲ್ಲ ಕೇಳಲು ನೀವು ಯಾರು?ʼʼ ಎಂದು ಯಮುನಾ ಅವರು ಮರು ಪ್ರಶ್ನಿಸಿದ್ದಾರೆ. ಹೀಗೆ ಇವರಿಬ್ಬರ ನಡುವೆ ಕಿರಿಕ್ ಆಗಿದ್ದು, ಎರಡನೇ ದಿನವೂ ಬಿಗ್ ಬಾಸ್ ಮನೆಯಲ್ಲಿ ಕೋಲಹಲ ಉಂಟಾಗಿದೆ.

ಈ ಸುದ್ದಿಯನ್ನೂ ಓದಿ: Bigg Boss Kannada 11 : ಮೊದಲ ದಿನವೇ ನಾಮಿನೇಷನ್ ಟ್ವಿಸ್ಟ್: 10 ಜನರಲ್ಲಿ 7 ಮಂದಿ ನಾಮಿನೇಟ್ ಮಾಡಿದ್ದು ಇವರೊಬ್ಬರನ್ನೇ!