Wednesday, 23rd October 2024

BBK 11: ಜಗದೀಶ್​ಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ಆಯ್ತು: ಕಿಚ್ಚನ ಎಪಿಸೋಡ್ ಬಗ್ಗೆ ಚೈತ್ರಾ ಅಸಮಾಧಾನ

Chaithra Kundapura and Kiccha Sudeep (2)

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಮೂರನೇ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಮನೆ ಮಂದಿಯ ಬೆಂಡೆತ್ತಿದರು. ಜಗದೀಶ್ ಅವರನ್ನು ಮನೆಯಿಂದ ಹೊರಗಡೆ ಕಳುಹಿಸಿ ಆಗಿದೆ, ಆದರೆ ನೀವು ಮಾಡಿದ್ದು ಎಷ್ಟು ಸರಿ ಎಂಬ ವಿಷಯವನ್ನು ಹಿಡಿದುಕೊಂಡು ಸುದೀಪ್ ವಾರದ ಕತೆಯಲ್ಲಿ ಎಲ್ಲ ಸ್ಪರ್ಧಿಗಳ ಮೈಚಳಿ ಬಿಡಿಸಿದ್ದಾರೆ. ಅದರಲ್ಲೂ ಚೈತ್ರಾ ಕುಂದಾಪುರ ಆಡಿದ ಮಾತಿಗೆ ಕೆಂಡಾಮಂಡಲರಾದ ಕಿಚ್ಚ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದರು.

ಜಗದೀಶ್ ಅವರಿಗೆ ಚೈತ್ರಾ ಅವರು ಕೆಟ್ಟ ಮಾತುಗಳಲ್ಲಿ ನಿಂದಿಸಿದ್ದರು. ‘ಒಬ್ಬ ಅಪ್ಪನಿಗೆ ಹುಟ್ಟಿದರೆ..’ ಎಂದು ಚೈತ್ರಾ ಹೇಳಿದ್ದರು. ಹೆಣ್ಮಕ್ಕಳ ಬಗ್ಗೆ ಗೌರವ ಕೊಡಬೇಕು ಎಂದು ಕೂಗಾಡುವ ಚೈತ್ರಾ ಅವರು ಇಂಥ ವಾಕ್ಯ ಬಳಕೆ ಮಾಡಿದ್ದು ಸರಿಯಲ್ಲ ಎಂದು ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಪಂಚಾಯಿತಿ ಮುಗಿದಮೇಲೆ ಚೈತ್ರಾ ಅವರು ಸುದೀಪ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಜಗದೀಶ್ ಪರವಾಗಿ ಮಾತನಾಡಿದ್ದಾರೆ ಎಂಬ ಅರ್ಥದಲ್ಲಿ ಹೇಳಿದ್ದಾರೆ.

ಚೈತ್ರಾ ಕುಂದಾಪುರ ಅವರಿಗೆ ಇಡೀ ವೀಕೆಂಡ್ ಸಂಚಿಕೆ ಬೇಸರ ತರಿಸಿದೆ. ಅಲ್ಲಿ ಜಗದೀಶ್ ಅವರಿಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ಆಯ್ತು ಎಂದು ಸುದೀಪ್ ಅವರ ಮೇಲೆ ಪರೋಕ್ಷವಾಗಿ ಆರೋಪ ಮಾಡಿದ್ದಾರೆ. “ಇಷ್ಟು ವರ್ಷದ ನೈತಿಕತೆಯನ್ನು ಒಂದು ದಿನದಲ್ಲಿ ಕಳೆದುಕೊಂಡುಬಿಟ್ಟೆ. ಒಂದು ಗಂಟೆಯಲ್ಲಿ ಕಳೆದುಕೊಂಡೆ. ಸೀರಿಯಸ್ ಆಗಿ ಹೇಳ್ಲಾ, ಇದು ನನಗೆ ಹೆಂಗೆ ಕಾಣಿಸ್ತು ಎಂದರೆ, ಜಗದೀಶ್ ಅವರಿಗೆ ಕ್ಲೀನ್ ಚಿಟ್ ಕೊಡೋ ಥರ ಕಾಣಿಸ್ತು. ನಾನು ನೇರವಾಗಿಯೇ ಹೇಳ್ತಾ ಇದ್ದೇನೆ. ಮುಂಚಿನಿಂದ ಆ ಮನುಷ್ಯ ಮಾತನಾಡಿರೋದು ಗೊತ್ತಿದೆ. ನಾವೆಲ್ಲಾ ಬಾಯಿ ಕಟ್ಟುಕೊಂಡು ಕೂತಿದ್ದೇವೆ ಅಲ್ವಾ” ಎಂದು ಅನುಷಾ ಬಳಿ ಚೈತ್ರಾ ಹೇಳಿಕೊಂಡಿದ್ದಾರೆ.

‘ನೀನು ನನಗೆ ಕೆಸರು ಎರಚಿದರೆ ನಾನು ಕೂಡ ಅದೇ ಕೆಸರನ್ನು ಎರಚುತ್ತೇನೆ. ನಿನ್ನ ಮೇಲೆ ಗುಲಾಬಿ ಹೂವನ್ನು ಎಸೆಯೋಕೆ ಆಗಲ್ಲ. ಆ ಮನುಷ್ಯನ (ಜಗದೀಶ್) ಬಗ್ಗೆ ಅಷ್ಟು ಸ್ಪಷ್ಟನೆ ಕೊಡುತ್ತಾರೋ ಗೊತ್ತಿಲ್ಲ,’ ಎಂದು ಚೈತ್ರಾ ಹೇಳಿದ್ದಾರೆ. ಸದ್ಯ ಚೈತ್ರಾ ಆಡಿರುವ ಮಾತು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬರುವ ವೀಕೆಂಡ್​ನಲ್ಲಿ ಸುದೀಪ್ ಪುನಃ ಈ ವಿಚಾರ ಎತ್ತುತ್ತಾರ ಎಂಬುದು ನೋಡಬೇಕಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಧನರಾಜ್-ಹನುಮಂತ ಭರ್ಜರಿ ಕಾಮಿಡಿ: ಏನೆಲ್ಲ ಮಾಡಿದ್ರು ನೋಡಿ