Saturday, 26th October 2024

BBK 11: ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿ ರೊಚ್ಚಿಗೆದ್ದ ಧರ್ಮ: ತಬ್ಬಿಬ್ಬಾದ ಧನು

Dharma Keerthi Raj and Dhanraj Achar

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಧರ್ಮ ಕೀರ್ತಿರಾಜ್ ತಮ್ಮ ನಡವಳಿಕೆಯಿಂದಲೇ ಇಷ್ಟವಾಗುತ್ತಿದ್ದಾರೆ. ಹೆಚ್ಚು ಮಾತಿಲ್ಲ, ಎಲ್ಲಿ ಬೇಕೊ ಅಲ್ಲಿ-ಎಷ್ಟು ಬೇಕೋ ಅಷ್ಟೇ ಮಾತು, ಆಟ ಎಂದು ಬಂದಾಗ ತನ್ನ ಕೈಲಾದಷ್ಟು ಕೊಡುಗೆ ನೀಡುತ್ತಾ ಎಲ್ಲ ಸ್ಪರ್ಧಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದು ಇವರಿಗೆ ಪ್ಲಸ್ ಜೊತೆಗೆ ಮೈನಸ್ ಕೂಡ ಆಗಿದೆ. ಸೈಲೆಂಟ್ ಆಗಿರುವ ಧರ್ಮ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತುಕೂಡ ಕೇಳಿಬಂದಿವೆ. ಹೀಗಿರುವಾಗ ಇದೀಗ ಮೊದಲ ಬಾರಿಗೆ ದೊಡ್ಮನೆಯಲ್ಲಿ ಧರ್ಮ ರೊಚ್ಚಿಗೆದ್ದಿದ್ದಾರೆ.

ದೊಡ್ಮನೆಯಲ್ಲಿ ರಾಜಕೀಯ ಟಾಸ್ಕ್ ನಡೆದ ವಿಚಾರ ಎಲ್ಲರಿಗೂ ಗೊತ್ತು. ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸೇನಾಪಕ್ಷ ಎಂಬ ಎರಡು ರಾಜಕೀಯ ಪಕ್ಷಗಳ ನಡುವೆ ಜಗಳ ಕೂಡ ಜೋರಾಗಿದೆ. ಎರಡೂ ಪಕ್ಷಗಳಿಗೆ ಪ್ರಶ್ನೆಗಳ ಛೂಬಾಣ ಬಿಡಲು ನ್ಯೂಸ್ ಆಂಕರ್ ರಾಧಾ ಹಿರೇಗೌಡರ್ ಬಂದಿದ್ದರು. ಈ ವೇಳೆ ಧರ್ಮ ಕೀರ್ತಿರಾಜ್ ಹಾಗೂ ಧನರಾಜ್ ಆಚಾರ್ ಮಧ್ಯೆ ವಾಕ್ಸಮರ ನಡೆದಿದೆ.

ಎರಡೂ ಪಕ್ಷಗಳಿಗೆ ಪ್ರಶ್ನೆ ಹಾಕುವಾಗ, ಈ ಮನೆಯ ಹೇಡಿ ಯಾರು? ಎಂದು ರಾಧಾ ಹಿರೇಗೌಡರ್ ಕೇಳಿದ್ದಾರೆ. ಆಗ ಧನರಾಜ್ ಆಚಾರ್ ಅವರು, ಈ ಮನೆಯ ಹೇಡಿ ಧರ್ಮ ಅವರು. ಯಾಕಂದ್ರೆ, ಇಲ್ಲಿಯವರೆಗೂ ಯಾವುದಕ್ಕೂ ಧ್ವನಿ ಎತ್ತಿಲ್ಲ ಉತ್ತರಿಸುತ್ತಾರೆ. ಈ ವೇಳೆ, ತಮ್ಮ ಪರವಾಗಿ ತಾವೇ ಧ್ವನಿ ಎತ್ತದ ಅತ್ಯಂತ ದಯನೀಯ ಸ್ಥಿತಿಯಲ್ಲಿ ಇದ್ದಾರಾ? ಎಂದು ರಾಧಾ ಕೇಳುತ್ತಾರೆ.

ಈ ವಿಚಾರಕ್ಕೆ ಕೋಪಗೊಂಡ ಧರ್ಮ ಇವರ ತರ ನಾನು ಹೆದರಿಕೊಂಡಿಲ್ಲ. ನಾಮಿನೇಟ್ ಆಗ್ಬಿಟ್ಟೆ ಅಂತ ಓಡಿ ಹೋಗಿ ಅಳುತ್ತಾ ಕೂರಲಿಲ್ಲ. ಒಬ್ಬರು ಮಾನಸ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿದಾಗ ಮೊದಲು ಧ್ವನಿ ಎತ್ತಿದ್ದು ನಾನು, ನೀವು ಏನ್ ಮಾಡ್ತಿದ್ರಿ ಆಗ. ಹೋಗಿ ಹಿಂದೆ ಬಚ್ಚಿಟ್ಟುಕೊಂಡ್ರಿ ಎಂದು ಧನರಾಜ್​ಗೆ ಧರ್ಮಕೀರ್ತಿ ರಾಜ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ಧರ್ಮ ಕೀರ್ತಿರಾಜ್ ಕೊಟ್ಟ ಉತ್ತರಕ್ಕೆ ಐಶ್ವರ್ಯಾ ನೇತೃತ್ವದ ಪಕ್ಷದವರು ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ. ಅತ್ತ ಧನರಾಜ್‌ ಆಚಾರ್‌ ಮುಖದಲ್ಲಿ ಟೆನ್ಶನ್ ಕಂಡುಬಂದಿದ್ದು, ತಬ್ಬಿಬ್ಬಾಗೋದರು.

BBK 11: ಬಿಗ್ ಬಾಸ್ ಮನೆಯಲ್ಲಿ ಹರಿಯಿತು ನೆತ್ತರು: ಮಂಜು-ತ್ರಿವಿಕ್ರಮ್ ನಡುವೆ ಬಿಗ್ ಫೈಟ್