Tuesday, 22nd October 2024

Junior NTR: ಕೃಷ್ಣನೂರಿನಲ್ಲಿ ಜೂ.ಎನ್‌ಟಿಆರ್‌ ಭರ್ಜರಿ ಟೆಂಪಲ್‌ ರನ್‌; ರಿಶಭ್‌ ಜತೆ ಇಂದು ಕೊಲ್ಲೂರಿಗೆ ಭೇಟಿ

Jr NTR

ಉಡುಪಿ: ಕುಟುಂಬದ ಜತೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಟೆಂಪಲ್‌ ರನ್‌ ನಡೆಸುತ್ತಿರುವ ಟಾಲಿವುಡ್‌ನ ಖ್ಯಾತ ನಟ ಜ್ಯೂನಿಯರ್‌ ಎನ್‌ಟಿಆರ್‌ (Junior NTR) ಅವರು ಇಂದು ಸುಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇಂದು ಕೂಡ ಜೂ.ಎನ್‌ಟಿಆರ್‌ಗೆ  ಡಿವೈನ್‌ ಸ್ಟಾರ್‌ ರಿಶಭ್‌ ಶೆಟ್ಟಿ(Rishab shetty) ಸಾಥ್‌ ಕೊಟ್ಟಿದ್ದು, ಇಬ್ಬರೂ  ದೇವಿಗೆ ಪ್ರಾರ್ಥನೆ ಸಲ್ಲಿಸಿದರು. ಇನ್ನು ಇಬ್ಬರು ಸ್ಟಾರ್‌ ನಟ ಟೆಂಪಲ್‌ ರನ್‌ ವಿಡಿಯೋ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ.

ತಮ್ಮ ಕುಟುಂಬಸ್ಥರ ಜೊತೆ ದೇಗುಲಕ್ಕೆ ಆಗಮಿಸಿದ ನಟರು ಒಂದೇ ರೀತಿಯ ವೇಸ್ಟಿ ತೊಟ್ಟು ಕೈಯಲ್ಲಿ ಪೂಜಾ ತಟ್ಟೆ ಹಿಡಿದು ನಿಂತಿರುವ ಫೊಟೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಭಾನುವಾರ ಮಧ್ಯಾಹ್ನ ಆಗಮಿಸಿ ಸ್ಟಾರ್‌ ನಟರನ್ನು ನೋಡಲು ಅಭಿಮಾನಿಗಳ ದಂಡೇ ದೇಗುಲದಲ್ಲಿ ನೆರೆದಿತ್ತು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಇಬ್ಬರು ಹಿಂದಿರುಗಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://x.com/NelloreNTRfc/status/1830178355028598916

ನಿನ್ನೆಯಷ್ಟೇ ಎನ್‌ಟಿಆರ್‌ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಶನಿವಾರ ಭೇಟಿ ನೀಡಿ ದರ್ಶನ ಪಡೆದರು. ಈ ಮೂಲಕ ತಾಯಿಯ ಬಹುದಿನಗಳ ಕನಸನ್ನು ಈಡೇರಿಸಿದ್ದಾರೆ. ಮಗನನ್ನು ಹುಟ್ಟೂರಾದ ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ದರ್ಶನ ಪಡೆಯಬೇಕೆಂದು ತಾಯಿ ಬಯಸಿದ್ದರಿಂದ, ನಟ ಜ್ಯೂನಿಯರ್‌ ಎನ್‌ಟಿಆರ್‌ ಅವರು ತಾಯಿ ಶಾಲಿನಿ ನಂದಮೂರಿ ಹಾಗೂ ಪತ್ನಿ ಲಕ್ಷ್ಮಿ ಪ್ರಣತಿ ಅವರೊಂದಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.

ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ ನಟ ತಾರಕ್ ಅವರನ್ನು ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ ಸ್ವಾಗತಿಸಿದರು. ಬಳಿಕ ಒಟ್ಟಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಅವರು ಭೇಟಿ ನೀಡಿದರು. ಎನ್‌ಟಿಆರ್‌ ಅವರ ತಾಯಿ ಶಾಲಿನಿ ನಂದಮೂರಿ ಅವರು ಕುಂದಾಪುರ ಮೂಲದವರಾಗಿದ್ದು, ಅವರ ಕುಟುಂಬ 40 ವರ್ಷಗಳ ಬಳಿಕ ಉಡುಪಿಗೆ ಭೇಟಿ ನೀಡಿದ್ದು ವಿಶೇಷವಾಗಿದೆ. ಉಡುಪಿ ಭೇಟಿ ವೇಳೆ ನಿರ್ಮಾಪಕ ವಿಜಯ್‌ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಉಪಸ್ಥಿತರಿದ್ದರು.

ಉಡುಪಿ ಕೃಷ್ಣ ಮಠ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಜ್ಯೂ.ಎನ್‌ಟಿಆರ್‌ ಅವರು, ನನ್ನನ್ನು ಹುಟ್ಟೂರಾದ ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ದರ್ಶನ ಪಡೆಯಬೇಕೆಂಬ ನನ್ನ ತಾಯಿಯ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಇದು ಸೆಪ್ಟೆಂಬರ್ 2ರ ನನ್ನ ತಾಯಿಯ ಜನ್ಮದಿನಕ್ಕೆ ನಾನು ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ. ನಿರ್ಮಾಪಕ ವಿಜಯ್‌ ಕಿರಗಂದೂರು, ನನ್ನ ಆತ್ಮೀಯ ಸ್ನೇಹಿತ, ನಿರ್ದೇಶಕ ಪ್ರಶಾಂತ್ ನೀಲ್ ಇದನ್ನು ಸಾಧ್ಯವಾಗಿಸಿದ್ದಾರೆ. ಇನ್ನು ರಿಷಬ್‌ ಶೆಟ್ಟಿ ಅವರ ಉಪಸ್ಥಿತಿ ಈ ಕ್ಷಣವನ್ನು ಮತ್ತಷ್ಟು ವಿಶೇಷವಾಗಿಸಿದೆ ಎಂದು ತಿಳಿಸಿದ್ದಾರೆ.

ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೆ ನಟ ಜ್ಯೂ. ಎನ್‌ಟಿಆರ್‌ ಸದ್ಯ ʼದೇವರʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ದೇವರ ಚಿತ್ರದ ಪಾರ್ಟ್-1‌, ಸೆ.27ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜುಗೊಳ್ಳುತ್ತಿದೆ. ಇದರ ಜತೆಗೆ ಬಾಲಿವುಡ್‌ನ ವಾರ್-2‌ ಚಿತ್ರದಲ್ಲೂ ಜ್ಯೂ. ಎನ್‌ಟಿಆರ್‌ ನಟಿಸುತ್ತಿದ್ದಾರೆ. ಇನ್ನು ಪ್ರಶಾಂತ್‌ ನೀಲ್‌ ಜತೆಗಿನ ಎನ್‌ಟಿಆರ್‌31 ಚಿತ್ರದ ಶೂಟಿಂಗ್‌ ಆರಂಭಕ್ಕೆ ಇತ್ತೀಚೆಗೆ ಪೂಜೆ ನೆರವೇರಿದೆ.