Sunday, 22nd September 2024

Rakshit Shetty: ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಪ್ರೇಕ್ಷಕರು ಫಿದಾ; ಬಾಕ್ಸ್‌ ಆಫೀಸ್‌ನಲ್ಲಿ ಮುಂದುವರಿದ ಗೆಲುವಿನ ಓಟ

Rakshit Shetty

ಬೆಂಗಳೂರು: ತನ್ನ ಶೀರ್ಷಿಕೆಯಿಂದಲೇ ಚಂದನವನದ ಗಮನ ಸೆಳದ ಚಿತ್ರ ‘ಇಬ್ಬನಿ ತಬ್ಬಿದ ಇಳೆಯಲಿ’ (Ibbani Tabbida Ileyali). ಕಂಗ್ಲಿಷ್‌, ಇಂಗ್ಲಿಷ್‌ ಸಿನಿಮಾ ಹೆಸರುಗಳ ಅಬ್ಬರದ ನಡುವೆ ಈ ಅಪ್ಪಟ ಕನ್ನಡದ ಶೀರ್ಷಿಕೆ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಹೆಸರಿಗೆ ತಕ್ಕಂತೆ ಸಿನಿಮಾವೂ ಹಿತವಾದ ಅನುಭವ ನೀಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ತನ್ನ ಓಟವನ್ನು ಮುಂದುವರಿಸಿದೆ. ಈ ಚಿತ್ರವನ್ನು ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್. ಗುಪ್ತ ಹಾಗೂ ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಿಸಿದ್ದು, ಮೊದಲ ಬಾರಿಗೆ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸಿದ್ದಾರೆ.

ವಿಹಾನ್, ಅಂಕಿತಾ ಅಮರ್, ಮಯೂರಿ ನಟರಾಜ್ ಅಭಿನಯದ ಸುಮಧುರ ಪ್ರೇಮಕಾವ್ಯ ʼಇಬ್ಬನಿ ತಬ್ಬಿದ ಇಳೆಯಲಿʼ ಚಿತ್ರ ಸೆಪ್ಟೆಂಬರ್ 5ರಂದು ಬಿಡುಗಡೆಯಾಗಿತ್ತು. ಆರಂಭದಿಂದಲೂ ಟೀಸರ್, ಟ್ರೈಲರ್‌ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದ್ದ ಈ ಚಿತ್ರ ಬಿಡುಗಡೆಯಾದ ಮೇಲೂ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಆರಂಭದಲ್ಲಿ ಕಡಿಮೆ ಸ್ಕ್ರೀನ್‌ಗಳಲ್ಲಿ ಈ ಚಿತ್ರ ತೆರೆ ಕಂಡಿತ್ತು. ಅನಂತರ ಜನರೇ ಈ ಚಿತ್ರವನ್ನು ಹಾಡಿ ಹೊಗಳಿ ಹೆಚ್ಚು ಪ್ರಚಾರ ಮಾಡಲು ಆರಂಭಿಸಿದರು. ಅದರ ಪರಿಣಾಮ ಪ್ರೇಕ್ಷಕರು ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬರಲು ಆರಂಭಿಸಿದರು. ವಾರದ ಕೊನೆಯಲ್ಲಂತೂ ಚಿತ್ರಮಂದಿರಗಳು ಕೌಟುಂಬಿಕ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ವಿಹಾನ್, ಅಂಕಿತ, ಮಯೂರಿ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮೊದಲ ವಾರ ಐವತ್ತರ ಆಸುಪಾಸಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಮೂರನೇ ವಾರದಲ್ಲಿ ಕರ್ನಾಟಕದಾದ್ಯಂತ ಇನ್ನೂರು ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾಗುತ್ತಿದೆ‌‌‌. ಜನರು ʼಇಬ್ಬನಿಯನ್ನು ತಬ್ಬುತ್ತಿರುವʼ ಪ್ರೀತಿಗೆ ಇದೊಂದು ಉತ್ತಮ ನಿದರ್ಶನ ಎನ್ನುತ್ತಿದೆ ಚಿತ್ರತಂಡ.

ಪ್ರೇಕ್ಷಕರಷ್ಟೇ ಅಲ್ಲದೆ ನಿರ್ದೇಶಕರಾದ ರಿಷಭ್ ಶೆಟ್ಟಿ, ಶಶಾಂಕ್, ಪವನ್ ಒಡೆಯರ್ ಮುಂತಾದ ಸ್ಯಾಂಡಲ್‌ವುಡ್ ಗಣ್ಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರಮಂದಿರಕ್ಕೆ ಜನರು ಬರುತ್ತಿಲ್ಲ ಎಂಬ ಮಾತನ್ನು ಗಣೇಶ್‌-ಮಾಳವಿಕಾ ನಾಯರ್‌ ಅಭಿನಯದ ʼಕೃಷ್ಣಂ ಪ್ರಣಯ ಸಖಿʼ ಹಾಗೂ ದುನಿಯಾ ವಿಜಯ್‌ ನಟನೆಯ ʼಭೀಮʼ ಚಿತ್ರಗಳು ದೂರ ಮಾಡಿದ್ದವು. ಈಗ ಆ ಸಾಲಿಗೆ ʼಇಬ್ಬನಿ ತಬ್ಬಿದ ಇಳೆಯಲಿʼ ಚಿತ್ರ ಸಹ ಸೇರ್ಪಡೆಯಾಗಿದೆ.

ಗಮನ ಸೆಳೆದ ಅಂಕಿತಾ ಅಮರ್‌

ʼಇಬ್ಬನಿ ತಬ್ಬಿದ ಇಳೆಯಲಿʼ ಸಿನಿಮಾದಲ್ಲಿನ ಪ್ರತಿಯೊಬ್ಬರ ನಟನೆಯೂ ಗಮನ ಸೆಳೆದಿದೆ. ಆ ಪೈಕಿ ಅಂಕಿತಾ ಅಮರ್‌ ನಿರ್ವಹಿಸಿದ ಅನಾಹಿತಾ ಪಾತ್ರಕ್ಕೆ ವಿಶೇಷ ಮೆಚ್ಚುಗೆ ಲಭ್ಯವಾಗುತ್ತದೆ. ಎರಡು ಶೇಡ್‌ಗಳಲ್ಲಿ ಅಂಕಿತಾ ಕಾಣಿಸಿಕೊಂಡಿದ್ದು, ಚಿತ್ರಪ್ರೇಮಿಗಳನ್ನು ಆ ಪಾತ್ರ ಕಾಡುತ್ತಿದೆ. ಅದರಲ್ಲಿಯೂ ಅವರು ಪಾತ್ರದಲ್ಲಿ ಜೀವಿಸಿದ್ದು ಪ್ರಶಸ್ತಿ ಪಕ್ಕಾ ಎನ್ನಲಾಗುತ್ತಿದೆ. ಉತ್ತರ ಭಾರತ ಮೂಲದ ಯುವತಿ ಪಾತ್ರದಲ್ಲಿ ಕಾನಿಸಿಕೊಂಡಿರುವ ಅವರು ಕಣ್ಣಿನಲ್ಲೇ ಭಾವನೆ ವ್ಯಕ್ತಪಡಿಸುವ ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ. ಕನ್ನಡ, ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದ ಅವರಿಗೆ ಇದು ಮೊದಲ ಸಿನಿಮಾ ಎನ್ನುವುದು ವಿಶೇಷ.

ಈ ಸುದ್ದಿಯನ್ನೂ ಓದಿ: Actor Parvin Dabas: ಬಾಲಿವುಡ್‌ ನಟ ಪರ್ವಿನ್‌ ದಾಬಸ್‌ ಸಂಚರಿಸುತ್ತಿದ್ದ ಕಾರು ಅಪಘಾತ; ಐಸಿಯುನಲ್ಲಿ ಚಿಕಿತ್ಸೆ