Sunday, 22nd September 2024

Sandalwood News: ಅಫ್ಜಲ್ ಚೊಚ್ಚಲ ನಿರ್ದೇಶನದ ʼಹೊಸತರʼ ಸಿನಿಮಾದ ಶೂಟಿಂಗ್‌ ಮುಕ್ತಾಯ

Sandalwood News

ಬೆಂಗಳೂರು: ಪತ್ರಕರ್ತನಾಗಿ, ನಟನಾಗಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ (ಸೂಪರ್ ಸ್ಟಾರ್ಸ್) ಇದೀಗ ʼಹೊಸತರʼ (Hosatara) ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು (Sandalwood News).

ʼʼಹೊಸತರʼ ನನ್ನ ನಿರ್ದೇಶನದ ಮೊದಲ ಚಿತ್ರ. ಆರ್.ಜಿ.ವಿ. ಎಂಬ ಪ್ರಮುಖಪಾತ್ರದ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ. ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಮುಂತಾದ ಎಲ್ಲ ಅಂಶಗಳು ಚಿತ್ರದಲ್ಲಿದೆ. ಜೈ ವಿಜಯ್ ಪ್ರೊಡಕ್ಷನ್ ಲಾಂಛನದಲ್ಲಿ ಕಲಬುರ್ಗಿ ಮೂಲದ ಶ್ರೀವಿಜಯ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ ಹಾಗೂ ಚಿತ್ರಕಥೆ ಸ್ವಲ್ಪ ವಿಭಿನ್ನವಾಗಿರುವುದರಿಂದ ಚಿತ್ರಕ್ಕೆ “ಹೊಸತರ” ಎಂದು ಹೆಸರಿಡಲಾಗಿದೆʼʼ ಎಂದು ಅಫ್ಜಲ್ ತಿಳಿಸಿದರು.

ʼʼರಾಜೀವ್ ಗನೇಸನ್ ಛಾಯಾಗ್ರಹಣ, ರಾಜು ಎಮ್ಮಿಗಾನೂರು ಸಂಗೀತ ನಿರ್ದೇಶನ, ಆಂಥೋನಿ ಪಯಾನೋ(ಕೆನಡಾ) ಹಿನ್ನೆಲೆ ಸಂಗೀತ ಹಾಗೂ ಬಾಬು ಶಿವಪುರ ಅವರ ಸಂಕಲನವಿರುವ ಈ ಚಿತ್ರಕ್ಕೆ ಅಮೆರಿಕದ ಜೆ.ಎಚ್.ಜೆ. ಸ್ಟುಡಿಯೋ ವಿಎಫ್‌ಎಕ್ಸ್ ಮಾಡಲಿದೆ. ಉತ್ತಮ ಗುಣಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. ʼಸಾರಿʼ ಸಿನಿಮಾದ ನಿರ್ದೇಶಕ ಬ್ರಹ್ಮ, ಖುಷಿ ಕೊಠಾರಿ, ನವ್ಯಾ, ರಣವೀರ್, ನಾಗರಾಜ ಗುಬ್ಬಚ್ಚಿ, ಸೆವೆನ್ ರಾಜ್, ಸ್ವರ್ಣಚಂದ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾನು ಕೂಡ ಮುಖ್ಯಪಾತ್ರದಲ್ಲಿ ನಟಿಸಿದ್ದೇನೆ. ಡಿಸೆಂಬರ್ ವೇಳೆಗೆ ʼಹೊಸತರʼ ನಿಮ್ಮ ಮುಂದೆ ಬರಲಿದೆʼʼ ಎಂದು ಅಫ್ಜಲ್ ಹೇಳಿದರು.

ʼʼಸಿನಿಮಾ ಆಸೆಗಾಗಿ ಹಳ್ಳಿಯಿಂದ ಸಿಟಿಗೆ ಬಂದ ಮುಗ್ಧ ಹುಡುಗನ ಪಾತ್ರ ನನ್ನದು‌. ಆರ್. ಜಿ.ವಿ. ನನ್ನ ಪಾತ್ರದ ಹೆಸರುʼʼ ಎಂದು ನಟ ಬ್ರಹ್ಮ ತಿಳಿಸಿದರು. ʼʼನಾನು ಈ ಚಿತ್ರದಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ನೇತ್ರ ನನ್ನ ಪಾತ್ರದ ಹೆಸರುʼʼ ಎಂದು ನಾಯಕಿ ಖುಷಿ ಕೊಠಾರಿ ಅಭಿಪ್ರಾಯಪಟ್ಟರು.

ಚಿತ್ರದಲ್ಲಿ ಅಭಿನಯಿಸಿರುವ ನಾಗರಾಜ ಗುಬ್ಬಚ್ಚಿ, ರಣವೀರ್ ಹಾಗೂ ಛಾಯಾಗ್ರಾಹಕ ರಾಜೀವ್ ಗಣೇಸನ್ ʼಹೊಸತರʼ ಚಿತ್ರದ ಬಗ್ಗೆ ಮಾತನಾಡಿದರು.

ಈ ಸುದ್ದಿಯನ್ನೂ ಓದಿ: Rakshit Shetty: ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಪ್ರೇಕ್ಷಕರು ಫಿದಾ; ಬಾಕ್ಸ್‌ ಆಫೀಸ್‌ನಲ್ಲಿ ಮುಂದುವರಿದ ಗೆಲುವಿನ ಓಟ