Friday, 18th October 2024

BBK 11: ಶೋ ಬಗ್ಗೆ ಮತ್ತೊಮ್ಮೆ ಕೆಟ್ಟ ಮಾತು: ಜಗದೀಶ್​ಗೆ ಹೊಡೆಯಲು ಮುಂದಾದ ಉಗ್ರಂ ಮಂಜು-ರಂಜಿತ್, ಬಿಗ್ ಬಾಸ್ ಮನೆ ಧಗ ಧಗ

Jagadish vs Ugramm Manju

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಲಾಯರ್ ಜಗದೀಶ್ (Lawyer Jagadish) ಅವರ ಜಗಳ, ಮಾತು, ನಡೆ ಇತರೆ ಸ್ಪರ್ಧಿಗಳ ನಿದ್ದೆಗೆಡಿಸಿದೆ. ಕಳೆದ ಎರಡು ವಾರಗಳಿಂದ ಜಗದೀಶ್ ಒಂದಲ್ಲ ಒಂದು ವಿಚಾರಕ್ಕೆ ಜಗಳ ತೆಗೆಯುತ್ತಿದ್ದಾರೆ. ಇದರ ನಡುವೆ ಬಿಗ್ ಬಾಸ್​ಗೂ ವಾರ್ನಿಂಗ್ ನೀಡಿದ್ದ ಜಗದೀಶ್ ಬಿಗ್ ಬಾಸ್ ಕಾರ್ಯಕ್ರಮವನ್ನು ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ ಎಂದು ಹೇಳಿದ್ದರು. ಬಳಿಕ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಬಂದು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈಗ ಬಿಗ್ ಬಾಸ್ ಬಗ್ಗೆ ಮತ್ತೆ ವರಸೆ ತೆಗೆದಿದ್ದಾರೆ.

ಈ ಬಾರಿ ಜಗದೀಶ್ ಬಿಗ್ ಬಾಸ್ ಶೋ ಬಗ್ಗೆಯೇ ಕೆಟ್ಟದಾಗಿ ಮಾತಾಡಿದ್ದಾರೆ. ಆದರೆ, ಅವರು ಆಡಿರುವ ಎಲ್ಲ ಮಾತುಗಳು ಏನು ಎಂಬುದು ತಿಳಿದುಬಂದಿಲ್ಲ, ಕೆಲವೊಂದು ಮಾತು ಟೆಲಿಕಾಸ್ಟ್ ಆಗಿದ್ದರೂ ಅದಕ್ಕೆ ಬೀಪ್ ಸೌಂಡ್ ಹಾಕಲಾಗಿದೆ. ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ನಿನ್ನ ಪ್ರೋಗ್ರಾಂ ನೀನೇ ಮಾಡಿಕೋ. ನಾನು ಹೋಗ್ತೀನಿ. ಇಮೇಜ್​ಗೆ ಡ್ಯಾಮೇಜ್ ಮಾಡಿಕೊಂಡು ಇಲ್ಲಿ ಇರಲ್ಲ. ಕಿರಿಕ್ ಮಾಡಿಕೊಂಡು ಮಜಾ ತೆಗೆದುಕೊಳ್ಳುವವರಿಗೆ ಬೆಲೆ ಜಾಸ್ತಿ. ಈಗಲೇ ಬಾಗಿಲು ತೆಗಿಬೇಕು ಎಂದೆಲ್ಲಾ ಹೇಳಿದ್ದಾರೆ.

ಜಗದೀಶ್ ಅವರ ಮಾತು ಮನೆಯ ಸ್ಪರ್ಧಿಗಳಿಗೆ ನೋವು ಮತ್ತು ಕೋಪ ತರಿಸಿದೆ. ಇದರಿಂದ ಇಡೀ ಬಿಗ್ ಬಾಸ್ ಮನೆಯ ಸದಸ್ಯರು ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದರಲ್ಲೂ ಉಗ್ರಂ ಮಂಜು ಅವರು ಜಗದೀಶ್​ಗೆ ಏಕವಚನದಲ್ಲೇ ಜಡಿದಿದ್ದಾರೆ. ಒಂದು ಹಂತದಲ್ಲಿ ಮಂಜು-ರಂಜಿತ್ ಹೊಡೆಯೋಕೆ ಸಜ್ಜಾಗಿದ್ದರು. ಚೈತ್ರಾ ಕುಂದಾಪುರ ಕಣ್ಣಿನಿಂದಲೇ ಕೆಕ್ಕರಿಸಿದ್ದಾರೆ. ಮನೆಯಲ್ಲಿ ದೊಡ್ಡ ಜಗಳವೇ ನಡೆದಿದೆ. ಇವನು ಹೊರಗೆ ಹೋಗಿ ಹೀರೋ ಆಗೋಕೆ ನಾವು ಯಾರಾದರು ಹೊಡಿಬೇಕು ಅಂತಾನೆ ಹೀಗೆ ಮಾಡೋದು ಎಂದು ಚೈತ್ರಾ ಹೇಳಿದ್ದಾರೆ.

ಇದನ್ನೆಲ್ಲ ವೀಕ್ಷಿಸಿದ ಬಿಗ್ ಬಾಸ್ ಕ್ಯಾಪ್ಟನ್ ಶಿಶಿರ್ ಅವರನ್ನು ಕರೆದು, ‘ಇದು ತುಂಬಾ ಸೂಕ್ಷ್ಮ ವಿಚಾರವಾಗಿದೆ. ಈ ವಿಷಯದ ಬಗ್ಗೆ ಬಿಗ್ ಬಾಸ್ ನೋಡಿಕೊಳ್ಳುತ್ತಾರೆ. ಎಲ್ಲರೂ ತಾಳ್ಮೆಯಿಂದ ಇರಬೇಕು. ಇಂತಹ ಸಮಯದಲ್ಲಿ ಸಹನೆ ಕಾಪಾಡಿಕೊಂಡಿದ್ದೀರಿ. ನಿಜಕ್ಕೂ ಖುಷಿ ಆಗಿದೆ. ಇಡೀ ಮನೆಯ ಸದಸ್ಯರು ಸಹನೆ ಕಳೆದುಕೊಳ್ಳದೆ ಇರುವಂತೆ ಹೇಳಿ’ ಎಂದು ಬಿಗ್ ಬಾಸ್ ಹೇಳಿದ್ದಾರೆ.

BBK 11: ಎಲ್ಲರೊಂದಿಗೆ ಜಗಳ: ಬಿಗ್ ಬಾಸ್ ಮನೆಯಲ್ಲಿ ಏಕಾಂಗಿಯಾದ ಜಗದೀಶ್