Sunday, 8th September 2024

ದೌಲಿಗಂಗಾ ನದಿಯಲ್ಲಿ ಹಿಮಪ್ರವಾಹ: 150ಕ್ಕೂ ಹೆಚ್ಚು ಮಂದಿ ನಾಪತ್ತೆ

ಚಮೋಲಿ: ಉತ್ತರಾಖಂಡ್‍ನ ದೌಲಿಗಂಗಾ ನದಿಯಲ್ಲಿ ಭಾರೀ ಹಿಮಪ್ರವಾಹ ಉಂಟಾಗಿ ಸುಮಾರು 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು ಭಾರೀ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.

ಏಕಾಏಕಿ ಹಿಮಪಾತದಿಂದಾಗಿ ತಪೋವನ್ ಪ್ರದೇಶದಲ್ಲಿರುವ ರಿಷಿಗಂಗಾ ವಿದ್ಯುತ್ ಘಟಕ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಎರಡು ಸೇತುವೆಗಳು ಸಹ ಕುಸಿದುಬಿದ್ದಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ಚಮೋಲಿ, ರುದ್ರಪ್ರಯಾಗ್, ಅಲಕಾನಂದ, ಋಷಿಕೇಶ್, ರುದ್ರಪ್ರಯಾಗ್ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಭಾರೀ ಹಿಮದಿಂದಾಗಿ ಕೂಲಿ ಕಾರ್ಮಿಕರು, ಸ್ಥಳೀಯರು ಸೇರಿದಂತೆ 150ಕ್ಕೂ ಹೆಚ್ಚು ಜನ ಕೊಚ್ಚಿ ಹೋಗಿದ್ದಾರೆ ಎಂದು ಶಂಕಿಸಿದ್ದಾರೆ. ಹಿಮಪಾತದಿಂದಾಗಿ ಮನೆಗಳು, ಕಟ್ಟಡಗಳು ಕುಸಿದು ಹೋಗಿದ್ದು, ಸದ್ಯ ಜನರು ಮನೆಯಿಂದ ಬರಬಾರದೆಂದು ಉತ್ತರಾಖಂಡ್‍ನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಟ್ವೀಟ್ ಮಾಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಕ್ಕೆ ಆಗಮಿಸಿರುವ ಎಸ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯಕ್ಕೆ ಸಜ್ಜಗೊಂಡಿದೆ. ನದಿಪಾತ್ರ ಹಾಗೂ ಅಕ್ಕಪಕ್ಕದ ಜನರನ್ನು ಜಿಲ್ಲಾಡಳಿತ ಬಲವಂತವಾಗಿ ಸ್ಥಳಾಂತರ ಮಾಡಲಾಗಿದೆ. ಇದೀಗ ಗ್ರಾಮಗಳೇ ಮುಳುಗುವ ಭೀತಿಯೂ ಎದುರಾಗಿದೆ.

 

Leave a Reply

Your email address will not be published. Required fields are marked *

error: Content is protected !!