Friday, 25th October 2024

Terror attack : 15 ದಿನಗಳಲ್ಲಿ19 ಸಾವು: ಜಮ್ಮು, ಕಾಶ್ಮೀರ ಚುನಾವಣೆ ನಂತರ ಭಯೋತ್ಪಾದಕ ದಾಳಿ ಹೆಚ್ಚಳ

Terror attack

ಶ್ರೀನಗರ: ಕಳೆದ ಎರಡು ವಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ನಿರಂತವಾಗಿ ಭಯೋತ್ಪಾದಕ ದಾಳಿ (Terror attack ) ನಡೆಯುತ್ತಿದೆ. ಸರಣಿ ದಾಳಿಗಳಲ್ಲಿ ಈ ವರೆಗೆ 19 ಜನ ಮೃತಪಟ್ಟಿದ್ದಾರೆ. ಬಾರಾಮುಲ್ಲಾ( Baramulla district) ಜಿಲ್ಲೆಯ ಗುಲ್ಮಾರ್ಗ್ (Gulmarg) ಬಳಿ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಅಕ್ಟೋಬರ್ 24 ರಂದು ದಾಳಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು (Military Officers) ಮತ್ತು ಇಬ್ಬರು ನಾಗರಿಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ದಾಳಿಯ ಬಳಿಕ ಎಚ್ಚೆತ್ತ ಭದ್ರತಾ ಪಡೆಗಳು ತಕ್ಷಣವೇ ಗುಲ್ಮಾರ್ಗ್ ಬಳಿಯ ಗಡಿ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಶೋಧ ಕಾರ್ಯಾಚರಣೆ ಪ್ರಾರಂಭಿಸಿವೆ.

ಗುಲ್ಮಾರ್ಗ್ ದಾಳಿಯ ಕೆಲವು ಗಂಟೆಗಳ ಮೊದಲು, ಪುಲ್ವಾಮಾ (Pulwama)ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಉತ್ತರ ಪ್ರದೇಶದ ಕಾರ್ಮಿಕನಿಗೆ ಗುಂಡೇಟು ತಗುಲಿ ಗಾಯವಾಗಿತ್ತು. ಈ ದಾಳಿಯು ನಾಗರಿಕರು ಮತ್ತು ಹೊರ ರಾಜ್ಯದ ಕಾರ್ಮಿಕರನ್ನು ಗುರಿಯಾಗಿಸಿ ಮಾಡಿರುವ ದಾಳಿಯಾಗಿದೆ . ಅಕ್ಟೋಬರ್ 20ರಂದು ಕಾಶ್ಮೀರದ‌ ಗಂದರ್‌ಬಾಲ್ ಜಿಲ್ಲೆಯ ಜೊ-ಮೊರ್ (Z-Morh) ಸುರಂಗ ನಿರ್ಮಾಣ ಸ್ಥಳದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಆರು ಮಂದಿ ಹೊರ ರಾಜ್ಯದ ಕಾರ್ಮಿಕರು ಮತ್ತು ಸ್ಥಳೀಯ ವೈದ್ಯ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದರು. ಕೇವಲ ನಾಲ್ಕು ದಿನಗಳ ನಂತರ ಮತ್ತೆ ದಾಳಿ ಮಾಡಲಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ, ಇಲ್ಲಿಯವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಏಳು ಭಯೋತ್ಪಾದಕ ದಾಳಿಗಳು ನಡೆದಿವೆ.

ಅಕ್ಟೋಬರ್ 18 ರಂದು ಶೋಪಿಯಾನ್ ಜಿಲ್ಲೆಯಲ್ಲಿ ಬಿಹಾರದ ಕಾರ್ಮಿಕನೊಬ್ಬನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಆ ವ್ಯಕ್ತಿಗೆ ಸುಮಾರು ಹನ್ನೆರಡು ಬಾರಿ ಗುಂಡು ಹಾರಿಸಲಾಗಿದ್ದು, ಆತನ ದೇಹ ಜೈನಪೋರಾದ ವಾಚಿ ಪ್ರದೇಶದಲ್ಲಿ ಜಮೀನಿನಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಅಕ್ಟೋಬರ್ 9ರಂದು ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಪ್ರಾದೇಶಿಕ ಸೇನಾ ಯೋಧನ ಶವ ಪತ್ತೆಯಾಗಿದೆ. ಮೃತ ಯೋಧನ್ನು ಹಿಲಾಲ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: DMK NRI Wing: ಜಮ್ಮು& ಕಾಶ್ಮೀರದ ಭಾಗಗಳು ಪಾಕಿಸ್ತಾನಕ್ಕೆ ಸೇರಿದ್ದು ಎಂದು ಬಿಂಬಿಸುವ ನಕ್ಷೆ ಪೋಸ್ಟ್‌ ಮಾಡಿದ ಡಿಎಂಕೆ ಎನ್‌ಆರ್‌ಐ ಘಟಕ

ಈ ವರ್ಷದ ಆರಂಭದಲ್ಲಿ, ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ರಜೌರಿ ಗ್ರಾಮಾಭಿವೃದ್ಧಿ ಸಮಿತಿಯ (ವಿಡಿಸಿ) ಮನೆಯ ಮೇಲೆ ದಾಳಿ ನಡೆಸಿದ್ದರು. ಗುಂಡಿನ ಚಕಮಕಿಯಲ್ಲಿ ಒಬ್ಬ ಭಯೋತ್ಪಾದಕ ಹತನಾಗಿದ್ದ. ಜುಲೈನಲ್ಲಿ ಕಥುವಾ ಜಿಲ್ಲೆಯಲ್ಲಿ ಭಯೋತ್ಪಾದಕರು ಎರಡು ಸೇನಾ ವಾಹನಗಳ ಮೇಲೆ ಗ್ರೆನೇಡ್ ಎಸೆದು ಗುಂಡಿನ ದಾಳಿ ನಡೆಸಿದ ನಡೆಸಿದ ಪರಿಣಾಮ ಐವರು ಸೈನಿಕರು ಮೃತಪಟ್ಟಿದ್ದರು. ಮಚೇಡಿ-ಕಿಂಡ್ಲಿ-ಮಲ್ಹಾರ್ ಪರ್ವತ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ದಾಳಿ ನಡೆಸಿದ ಭಯೋತ್ಪಾದಕರ ಮೇಲೆ ಭಾರತೀಯ ಸೇನೆ 5000 ಸುತ್ತು ಗುಂಡು ಹಾರಿಸುವ ಮೂಲಕ ಪ್ರತಿದಾಳಿ ನಡೆಸಿದೆ.