Thursday, 19th September 2024

ಉಕ್ರೇನ್‌ನಿಂದ ಭಾರತಕ್ಕೆ ಬಂದಿಳಿದ 241 ಭಾರತೀಯರು

ನವದೆಹಲಿ: ಉಕ್ರೇನ್‌ನಿಂದ ಭಾರತಕ್ಕೆ ವಿದ್ಯಾರ್ಥಿಗಳು ಸೇರಿದಂತೆ 241 ಭಾರತೀಯರನ್ನು ಹೊತ್ತ ಏರ್​ ಇಂಡಿಯಾ ವಿಶೇಷ ವಿಮಾನ ದೆಹಲಿಗೆ ಬಂದಿಳಿದಿದೆ.

ವೈದ್ಯಕೀಯ ವಿದ್ಯಾರ್ಥಿ ಅನಿಲ್​ ರಪ್ರಿಯಾ ಮಾತನಾಡಿ, ಉಕ್ರೇನ್​ನಲ್ಲಿ ಸದ್ಯಕ್ಕೆ ಗಂಭೀರ ಪರಿಸ್ಥಿತಿ ಇಲ್ಲ. ಯುದ್ಧ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಯಿಂದಾಗಿ ಭಾರತೀಯ ರಾಯಭಾರಿ ಕಚೇರಿಯ ನಿರ್ದೇಶನದ ಮೇರೆಗೆ ನಾವು ಭಾರತಕ್ಕೆ ವಾಪಸ್​ ಬಂದಿದ್ದೇವೆ ಎಂದರು. ಉಕ್ರೇನ್​ನಲ್ಲಿ ಸಾಮಾನ್ಯ ಸ್ಥಿತಿ ಇದ್ದರೂ ನಾವು ಅಲ್ಲಿರುವುದು ಉತ್ತಮವಲ್ಲ ಎಂದು ನಮ್ಮ ಪೋಷಕರು ತಿಳಿಸಿದ್ದರು. ಹೀಗಾಗಿ ಭಾರತಕ್ಕೆ ವಾಪಸ್​ ಆಗಿದ್ದೇವೆ ಎಂದು ದೆಹಲಿಯ ವಿದ್ಯಾರ್ಥಿಯೊಬ್ಬರು ತಿಳಿಸಿದರು.

ಭಾರತೀಯ ಪ್ರಜೆಗಳನ್ನು ಕರೆತರಲು ಕೇಂದ್ರ ಸರ್ಕಾರ ಏರ್​ ಇಂಡಿಯಾದ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಉಕ್ರೇನ್​ನಲ್ಲಿ ಅಸಾಧಾರಣ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ದೇಶ ತೊರೆಯು ವಂತೆ ಭಾರತೀಯ ರಾಯಭಾರಿ ಕಚೇರಿ ಭಾರತೀಯರನ್ನು ಕೇಳಿಕೊಂಡಿತ್ತು. ಅದರಂತೆ ವಿದ್ಯಾರ್ಥಿ ಗಳು ಸೇರಿದಂತೆ ಹಲವಾರು ನಾಗರಿಕರು ಭಾರತಕ್ಕೆ ಬಂದಿಳಿದಿದ್ದಾರೆ. ಉಕ್ರೇನ್​-ರಷ್ಯಾ ಗಡಿಯಲ್ಲಿ ದಿನೇದಿನೆ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಭಾರತ ಇಂದು ತೀವ್ರ ಆತಂಕ ವ್ಯಕ್ತಪಡಿಸಿದೆ.

ಪೂರ್ವ ಉಕ್ರೇನ್​​ನಲ್ಲಿ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್‌ ಪ್ರದೇಶಗಳ ಸ್ವಾತಂತ್ರ್ಯವನ್ನು ರಷ್ಯಾ ಮಾನ್ಯ ಮಾಡುವು ದಾಗಿ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಬಹಿರಂಗವಾಗಿ ಘೋಷಿಸಿದ ಬಳಿಕ, ಉಕ್ರೇನ್​, ಯುಎಸ್​ ಮತ್ತು ಯುಕೆ ಜತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಅಧಿವೇಶನ ನಡೆಸಿತು.

ಉಕ್ರೇನ್​​ನಲ್ಲಿರುವ ಭಾರತೀಯರನ್ನು ವಾಪಸ್​ ದೇಶಕ್ಕೆ ಕರೆತರಲು ವಿಮಾನ ಹೊರಡಲಿದ್ದು, ಮತ್ತೊಂದು ವಿಮಾನ ಗುರುವಾರ ಹಾಗೂ ಮೂರನೇ ವಿಮಾನ ಶನಿವಾರ ಹೊರಡಲಿದೆ ಎಂದು ಹೇಳಲಾಗಿದೆ.