Saturday, 21st September 2024

’ಕೈ’ ತೊರೆದು ’ಕಮಲ’ ಹಿಡಿದ ನಟಿ ವಿಜಯಶಾಂತಿ

ನವದೆಹಲಿ: ಗೃಹ ಸಚಿವ ಅಮಿತ್​ ಶಾರನ್ನ ಭೇಟಿಯಾದ ಕೇವಲ ಒಂದು ದಿನದ ಬಳಿಕ ವಾರಾಂತ್ಯದಲ್ಲಿ ಕಾಂಗ್ರೆಸ್​ ಪಕ್ಷವನ್ನ ತೊರೆದಿದ್ದ ನಟಿ, ರಾಜಕಾರಣಿ ವಿಜಯಶಾಂತಿ ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

54 ವರ್ಷದ ವಿಜಯಶಾಂತಿ 1997ರಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ತಾರೆಯಾಗಿದ್ದ ಸಂದರ್ಭದಲ್ಲೇ ಬಿಜೆಪಿಯಿಂದ ರಾಜಕೀಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಪ್ರತ್ಯೇಕ ತೆಲಂಗಾಣ ಹೋರಾಟದ ಸಂದರ್ಭದಲ್ಲಿ ವಿಜಯಶಾಂತಿ ಬಿಜೆಪಿ ತೊರೆದು ಟಿಆರ್​ಎಸ್​ ಸೇರ್ಪಡೆಯಾದರು. 2009ರಲ್ಲಿ ಲೋಕಸಭೆಗೆ ಆಯ್ಕೆಯಾದರು.

ಆಂಧ್ರಪ್ರದೇಶದಿಂದ ಬೇರ್ಪಟ್ಟು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಘೋಷಣೆಯಾಗುವ ಮುನ್ನವೇ ಅಂದರೆ 2014ರಲ್ಲಿ ವಿಜಯ ಶಾಂತಿ ಕಾಂಗ್ರೆಸ್​ ಸೇರಿದ್ದರು. 2023ರ ಚುನಾವಣೆಗೆ ತೆಲಂಗಾಣದಲ್ಲಿ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೆ ವಿಜಯ ಶಾಂತಿ ಬಿಜೆಪಿಗೆ ಮರಳಿ ಬಂದಿದ್ದಾರೆ.

ತಮಿಳುನಾಡಿನಲ್ಲಿ ಖುಷ್ಬೂ ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಇದೀಗ ಮತ್ತೊಬ್ಬ ಹಿರಿಯ ನಟಿ ವಿಜಯ ಶಾಂತಿ ಕೂಡ ಖುಷ್ಬೂ ದಾರಿಯನ್ನೇ ತುಳಿದಿದ್ದಾರೆ.