Thursday, 19th September 2024

ವಾಯುಪ್ರದೇಶ ಮುಚ್ಚಿದ್ದರಿಂದ ದೆಹಲಿಗೆ ಮರಳಿದ ಏರ್ ಇಂಡಿಯಾ ವಿಮಾನ

ನವದೆಹಲಿ: ರಷ್ಯಾ-ಉಕ್ರೇನ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಭಾರತೀಯರನ್ನು ಮರಳಿ ಕರೆತರಲು ಗುರುವಾರ ಬೆಳಗ್ಗೆ ಉಕ್ರೇನ್‌ನ ಕೈವ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ರಷ್ಯಾದ ಮಿಲಿಟರಿ ದಾಳಿಯ ಮಧ್ಯೆ ಉಕ್ರೇನ್ ನಲ್ಲಿ ವಾಯುಪ್ರದೇಶ ಮುಚ್ಚಿದ್ದರಿಂದ ದೆಹಲಿಗೆ ಮರಳಿದೆ.

ಬೆಳಗ್ಗೆ ದೆಹಲಿಯಿಂದ ಉಕ್ರೇನ್ ಗೆ ಏರ್ ಇಂಡಿಯಾ ವಿಮಾನ ಹೊರಟಿತ್ತು. ಈ ಸಮಯದಲ್ಲಿ ಉಕ್ರೇನ್ ನ ಅಧಿಕಾರಿಗಳು ವಾಯುಯಾನ ಅಧಿಕಾರಿಗಳು, ಸಿಬ್ಬಂದಿಗೆ ನೊಟೀಸ್ ಹೊರಡಿಸಿದ್ದು, ಅದರಲ್ಲಿ ಉಕ್ರೇನ್ ಒಳಗೆ ನಾಗರಿಕ ವಿಮಾನಯಾನಕ್ಕೆ ಸಂಭವನೀಯ ಅಪಾಯದ ಕಾರಣದಿಂದಾಗಿ ನಿರ್ಬಂಧಿಸ ಲಾಗಿದೆ ಎಂದು ತಿಳಿಸಲಾಗಿದೆ.

ಏರ್ ಇಂಡಿಯಾ ಸಂಸ್ಥೆ ಮತ್ತು ಕೇಂದ್ರ ಸರ್ಕಾರ ದೆಹಲಿಯಿಂದ ಹೊರಟಿದ್ದ ವಿಮಾನವನ್ನು ವಾಪಾಸ್ ಕರೆಸಿಕೊಳ್ಳಲು ನಿರ್ಧರಿಸಿತು. ಸೂಚನೆ ಬಂದ ಹಿನ್ನೆಲೆಯಲ್ಲಿ ಇಟಲಿಯಿಂದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್ಸಾಗಿದೆ. ಏರ್ ಇಂಡಿಯಾ ವಿಮಾನ ಸಂಖ್ಯೆ 1947 ಕೈವ್ ನಲ್ಲಿ NOTAM ಹೊರಡಿಸಿರುವುದರಿಂದ ದೆಹಲಿಗೆ ವಾಪಸ್ಸಾಗುತ್ತಿದೆ.

ಕೈವ್ ನಿಂದ ಉಕ್ರೇನ್ ಅಂತಾರಾಷ್ಟ್ರೀಯ ವಿಮಾನ ದೆಹಲಿಗೆ ಬಂದಿಳಿದಿದ್ದು ಸುಮಾರು 182 ಮಂದಿ ಪ್ರಯಾಣಿಕರು ವಾಪಸ್ಸಾಗಿದ್ದಾರೆ.  ಇಂದಿನ ಏರ್ ಇಂಡಿಯಾ ವಿಮಾನ ದಲ್ಲಿ ಪೂರ್ವ ಯುರೋಪ್ ದೇಶದಿಂದ ಸುಮಾರು 240 ಪ್ರಯಾಣಿಕರು ಬಂದಿಳಿಯಬೇಕಾಗಿತ್ತು.

ಮೊದಲ ವಿಮಾನ ಫೆ.22ರಂದು ಪ್ರಯಾಣ ಬೆಳೆಸಿತ್ತು. ಫೆಬ್ರವರಿ 22, 24 ಮತ್ತು 26ರಂದು ಮೂರು ವಿಮಾನಗಳನ್ನು ಭಾರತ ಮತ್ತು ಉಕ್ರೇನ್ ಮಧ್ಯೆ ಹಾರಾಟ ನಡೆಸುವುದಾಗಿ ಏರ್ ಇಂಡಿಯಾ ತಿಳಿಸಿತ್ತು.