Thursday, 19th September 2024

Tirupati Laddoo : ತಿರುಪತಿ ಲಡ್ಡುತಯಾರಿಕೆಗೆ ದನದ ಕೊಬ್ಬು ಬಳಕೆ; ಲ್ಯಾಬ್ ವರದಿಯಲ್ಲಿ ದೃಢ

irupati Laddoo

ಹೈದರಾಬಾದ್: ತಿರುಪತಿಯಲ್ಲಿ ಪ್ರಸಾದವಾಗಿ ರೂಪದಲ್ಲಿ ನೀಡಲಾಗುವ ಲಡ್ಡುಗಳನ್ನು (Tirupati Laddoo) ತಯಾರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಹಾಗೂ ತಾಳೆ ಎಣ್ಣೆ ಬಳಸಿರುವುದು ಲ್ಯಾಬ್‌ನಲ್ಲಿ ದೃಢವಾಗಿದೆ. ಈ ವಿಷಯದ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಹಿಂದಿನ ಸರ್ಕಾರವಿದ್ದ ವೈಎಸ್ಆರ್ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಿಚಾರದಲ್ಲಿ ವಾದ ಪ್ರತಿವಾದ ಮುಂದುವರಿದಿದೆ.

ವೈಎಸ್‌ಆರ್‌ಪಿ ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದಿದೆ ಎಂದು ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಿಂದ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಮಾಂಸ ಟಾಲೋ ಮತ್ತು ಹಂದಿಮಾಂಸದ ಕುರುಹುಗಳಿವೆ ಎಂದು ವರದಿ ಸೂಚಿಸಿದೆ.

“ತಿರುಪತಿ ಲಡ್ಡು ಕೂಡ ಕಳಪೆ ಗುಣಮಟ್ಟದ ಪದಾರ್ಥಗಳಿಂದ ತಯಾರಿಸಲಾಗಿದೆ. ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಬಳಸಿದ್ದಾರೆ ಎಂದು ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಪ್ಪ ಸೇರಿದಂತೆ ಗುಣಮಟ್ಟದ ಪದಾರ್ಥಗಳನ್ನು ಈಗ ಬಳಸಲಾಗುತ್ತಿದೆ ಎಂದು ತಮ್ಮ ಸರ್ಕಾರ ಖಚಿತಪಡಿಸಿದೆ. ದೇವಾಲಯದಲ್ಲಿ ಆಹಾರ ಪದಾರ್ಥಗಳು ಸುಧಾರಿತ ಗುಣಮಟ್ಟದ್ದಾಗಿವೆ ಎಂದು ಅವರು ಘೋಷಿಸಿದ್ದಾರೆ.

ನಾಯ್ಡು ಅವರ ಪುತ್ರ ಮತ್ತು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಕೂಡ ಹಿಂದಿನ ಸರ್ಕಾರದ ವಿರುದ್ಧದಾಳಿ ನಡೆಸಿದ್ದಾರೆ.

ತಿರುಮಲದಲ್ಲಿರುವ ವೆಂಕಟೇಶ್ವರ ದೇವಾಲಯವು ನಮ್ಮ ಅತ್ಯಂತ ಪವಿತ್ರ ದೇವಾಲಯ. ಜಗನ್ ಮೋಹನ್ ರೆಡ್ಡಿ ಆಡಳಿತವು ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ತಿಳಿದು ನನಗೆ ಆಘಾತವಾಗಿದೆ. ಅವರಿಗೆ ನಾಚಿಕೆಯಾಗಬೇಕು. ಅವರ ಸರ್ಕಾರವು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ವೈಎಸ್‌ಆರ್‌ಪಿ ಇದೊಂದು “ದುರುದ್ದೇಶಪೂರಿತ” ಹೇಳಿಕೆ ಎಂದು ಹೇಳಿದ್ದಾರೆ. ರಾಜಕೀಯ ಲಾಭಕ್ಕಾಗಿ ಟಿಡಿಪಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ. ಇಂತಹ ಅತಿರೇಕದ ಹೇಳಿಕೆಗಳನ್ನು ನೀಡುವ ಮೂಲಕ ನಾಯ್ಡು ಅವರು ದೇವಾಲಯದ ಪಾವಿತ್ರ್ಯವನ್ನು ಮತ್ತು ಕೋಟ್ಯಂತರ ಭಕ್ತರಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: Tirupati : ತಿರುಪತಿ ದೇವಾಲಯ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ! ಸಿಎಂ ಚಂದ್ರಬಾಬು ನಾಯ್ಡು ಆರೋಪ

ರಾಜಕೀಯದ ಲಾಭಕ್ಕಾಗಿ ಚಂದ್ರಬಾಬು ನಾಯ್ಡು ಕೆಟ್ಟ ಕೆಲಸ ಮಾಡಲು ಹಿಂಜರಿಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ” ಎಂದು ವೈಎಸ್‌ಆರ್‌ಪಿಯ ವೈವಿ ಸುಬ್ಬಾ ರೆಡ್ಡಿಹೇಳಿದ್ದಾರೆ. ಈ ಬಗ್ಗೆ ಪ್ರಮಾಣ ಮಾಡಲು ಸಿದ್ದ ಹಾಗೂ ಅವರು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ವೈಎಸ್‌ಆರ್‌ಪಿ ವಿರುದ್ಧ ಕಾಂಗ್ರೆಸ್ ಕೂಡ ದಾಳಿ ಮಾಡಿದ್ದು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಈ ಹೇಳಿಕೆಯು ಲಕ್ಷಾಂತರ ಹಿಂದೂಗಳು ಪೂಜಿಸುವ ದೇವರ ಪಾವಿತ್ರ್ಯಕ್ಕೆ ಹಾನಿಕಾರಕ ಎಂದು ಅವರು ತೆಲುಗಿನಲ್ಲಿ ಹೇಳಿದ್ದಾರೆ.

ತಿರುಪತಿಯಲ್ಲಿ ಪ್ರತಿದಿನ ಅಂದಾಜು ಮೂರು ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಇವುಗಳನ್ನು ತಯಾರಿಸಲು, ದೇವಾಲಯದ ಟ್ರಸ್ಟ್ ಪ್ರತಿ ಆರು ತಿಂಗಳಿಗೊಮ್ಮೆ ನೀಡಲಾಗುವ ಇ-ಟೆಂಡರ್ ಮೂಲಕ ಭಾರಿ ಪ್ರಮಾಣದ ತುಪ್ಪವನ್ನು ಖರೀದಿಸಲಾಗುತ್ತಿದೆ.