Friday, 20th September 2024

ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ಅನಿಲ್ ಪರಬ್‌

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್‌ ಅವರು ಮಂಗಳವಾರ ಜಾರಿ ನಿರ್ದೇಶನಾ ಲಯದ ಎದುರು ವಿಚಾರಣೆಗಾಗಿ ಹಾಜರಾದರು.

ಮಹಾರಾಷ್ಟ್ರ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಹೊಂದಿರುವ ಪರಬ್‌ ಅವರಿಗೆ ಜಾರಿ ನಿರ್ದೇಶನಾಲಯ ಈ ಪ್ರಕರಣದ ವಿಚಾರಣೆಗೆ ಹಾಜರಾ ಗಲು ಶನಿವಾರ ಎರಡನೇ ಬಾರಿಗೆ ಸಮನ್ಸ್‌ ಜಾರಿ ಮಾಡಿತ್ತು. ತನಿಖಾ ಕಚೇರಿಗೆ ತೆರಳುವ ಮುನ್ನ ಮಾತನಾಡಿದ ಸಚಿವ ಪರಬ್‌, ಪ್ರಕರಣದಲ್ಲಿ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ಹೇಳಿದರು.

ನಾನು ಇಂದು ಇ.ಡಿ ಎದುರು ವಿಚಾರಣೆಗೆ ಹಾಜರಾಗುತ್ತಿದ್ದೇನೆ. ತನಿಖಾ ಸಂಸ್ಥೆಯವರು ಯಾವ ಉದ್ದೇಶಕ್ಕಾಗಿ ಕರೆದಿದ್ದಾರೆಂದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಶಿವಸೇನಾ ಮುಖ್ಯಸ್ಥ ದಿ. ಬಾಳಾಸಾಹೇಬ್‌ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಸಚಿವರು ಹೇಳಿದರು. ‘ನಾನು ವಿಚಾರಣೆಗೆ ಸಹಕರಿಸುತ್ತೇನೆ. ಇ.ಡಿ ಅಧಿಕಾರಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ’ ಎಂದು ಅವರು ಹೇಳಿದರು.

ಮೂರು ಅವಧಿಗೆ ಶಾಸಕರಾಗಿರುವ ಅನಿಲ್ ಪರಬ್‌ ಅವರಿಗೆ ಜಾರಿ ನಿರ್ದೇಶನಾಲಯ ಆ. 31ರಂದು ಸಮನ್ಸ್‌ ನೀಡಿತ್ತು. ಆದರೆ, ಸಚಿವರು ಈಗಾಗಲೇ ನಿಗದಿ ಯಾಗಿರುವ ಕಾರ್ಯಕ್ರಮಗಳನ್ನು ಉಲ್ಲೇಖಿಸಿ, ವಿಚಾರಣೆಗೆ ಹಾಜರಾಗಲು ಸಾಧ್ಯವಾಗದೆ ಕಾಲಾವಕಾಶ ನೀಡಬೇಕೆಂದು ತನಿಖಾ ಸಂಸ್ಥೆಗೆ ಮನವಿ ಮಾಡಿದ್ದರು.

ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ‍್ರಕರಣದ ತನಿಖೆಯ ಭಾಗವಾಗಿ, ಪರಬ್ ಅವರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು.