Thursday, 19th September 2024

ಕೃಷಿ ಕಾನೂನುಗಳ ವಿರುದ್ಧ ಹೋರಾಟ: ಇನ್ನೋರ್ವ ರೈತನ ಆತ್ಮಹತ್ಯೆ

ಚಂಡೀಘಡ: ಕೃಷಿ ಕಾನೂನುಗಳ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ಹರಿಯಾಣದ ಜಿಂದ್ ಗ್ರಾಮದ ರೈತ , ಪ್ರತಿಭಟನೆ ನಡೆಯುತ್ತಿರುವ ಟಿಕ್ರಿ ಗಡಿಯಿಂದ ಅನತಿ ದೂರದಲ್ಲಿ ಭಾನುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ರೈತ ಆತ್ಮಹತ್ಯೆ ನೋಟ್ ವೊಂದನ್ನು ಬರೆದಿಟ್ಟಿದ್ದು, ಜಿಂದ್ ಗ್ರಾಮದ ರೈತ ಕರ್ಮವೀರ್ ಸಿಂಗ್, ಟಿಕ್ರಿಯಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಪಾರ್ಕ್ ವೊಂದರ ಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹ ಬೆಳಗ್ಗೆ ಪತ್ತೆಯಾಗಿದೆ ಎಂದು ಸಿಟಿ ಪೊಲೀಸ್ ಠಾಣೆ ಎಸ್ ಎಚ್ ಒ ಹೇಳಿದ್ದಾರೆ.

ರೈತ ಸಹೋದರರೇ, ಮೋದಿ ಸರ್ಕಾರ ದಿನದಿಂದ ದಿನಕ್ಕೆ ದೂಡುತ್ತಿದ್ದು, ಕೃಷಿ ಕಾನೂನುಗಳು ಯಾವಾಗ ರದ್ದು ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹದಿನೈದು ದಿನಗಳ ಹಿಂದಷ್ಟೇ ಟಿಕ್ರಿ ಗಡಿಯಲ್ಲಿ ಹರಿಯಾಣದ ರೈತರೊಬ್ಬರು ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ಸೇರಿಸಿದ ನಂತರ ಮೃತಪಟ್ಟಿದ್ದರು.