Monday, 23rd September 2024

Anura Kumara Dissanayake: ಭಾರತದ ಬಗ್ಗೆ ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ನಿಲುವು ಏನಿರಬಹುದು?

Anura Kumara Dissanayake

ಶ್ರೀಲಂಕಾ ಎದುರಿಸಿದ ಭೀಕರ ಆರ್ಥಿಕ ಬಿಕ್ಕಟ್ಟಿನ (economic crisis) ಅನಂತರ ನಡೆದ ಮೊದಲ ಅಧ್ಯಕ್ಷೀಯ ಚುನಾವಣೆಯಲ್ಲಿ ಜನತಾ ವಿಮುಕ್ತಿ ಪೆರಮುನ (JVP) ಒಕ್ಕೂಟದ ನ್ಯಾಷನಲ್ ಪೀಪಲ್ಸ್ ಪವರ್ (NPP) ನಾಯಕ ಅನುರಾ ಕುಮಾರ ದಿಸ್ಸಾನಾಯಕೆ (Anura Kumara Dissanayake) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಜಿತ್ ಪ್ರೇಮದಾಸ ಮತ್ತು ಹಾಲಿ ಅಧ್ಯಕ್ಷರಾಗಿದ್ದ ರನಿಲ್ ವಿಕ್ರಮಸಿಂಘೆ ಅವರನ್ನು ಸೋಲಿಸಿದ್ದಾರೆ.

ಚುನಾವಣೆ ಗೆದ್ದ ಬಳಿಕ ಅನುರಾ ಕುಮಾರ ದಿಸ್ಸಾನಾಯಕೆ ಯಾರು, ಅವರ ಆರಂಭಿಕ ಜೀವನ ಹೇಗಿತ್ತು, ರಾಜಕೀಯ ನಾಯಕನಾಗಿ ಅವರು ಬೆಳೆದು ಬಂದ ರೀತಿ, ಅವರ ಧ್ಯೇಯೋದ್ದೇಶಗಳ ಕುರಿತು ಎಲ್ಲರ ಕುತೂಹಲ ಹೆಚ್ಚಾಗಿದೆ. ಅದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರಂಭಿಕ ಜೀವನ

ಶ್ರೀಲಂಕಾ ರಾಜಧಾನಿ ಕೊಲಂಬೊದಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ಅನುರಾಧಪುರ ಜಿಲ್ಲೆಯ ತಂಬುಟ್ಟೆ ಗಾಮ ಗ್ರಾಮದಲ್ಲಿ ದಿಸ್ಸಾನಾಯಕೆ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ದಿಸ್ಸಾನಾಯಕೆ ಅವರ ತಂದೆ ದಿನಗೂಲಿ ನೌಕರನಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಆದರೂ ಅವರು ತಮ್ಮ ಮಗನಿಗೆ ಉತ್ತಮ ಶಿಕ್ಷಣ ನೀಡಿದರು. ದಿಸ್ಸಾನಾಯಕೆ ಅವರು ಕೆಲನಿಯಾ ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಪಡೆದಿದ್ದಾರೆ.

ರಾಜಕೀಯ ಪ್ರವೇಶ

ವಿದ್ಯಾರ್ಥಿ ಜೀವನದಲ್ಲೇ ರಾಜಕೀಯದ ಬಗ್ಗೆ ಅಪಾರ ಆಸಕ್ತಿ ವಹಿಸಿದ್ದ ದಿಸ್ಸಾನಾಯಕೆ ಕ್ಯಾಂಪಸ್‌ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಆಗಿನ ಶ್ರೀಲಂಕಾ ಅಧ್ಯಕ್ಷರಾಗಿದ್ದ ಜಯವರ್ಧನೆ ಮತ್ತು ಆರ್. ಪ್ರೇಮದಾಸ ಅವರ ಆಡಳಿತದ ವಿರುದ್ಧ1987 ಮತ್ತು 89 ರ ನಡುವೆ ನಡೆದ ಜೆವಿಪಿಯ ಸರ್ಕಾರಿ ವಿರೋಧಿ ಸಶಸ್ತ್ರ ದಂಗೆಯಲ್ಲಿ ಪಾಲ್ಗೊಂಡಿದ್ದರು.

1995ರಲ್ಲಿ ಸಮಾಜವಾದಿ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಸಂಘಟಕ ಸ್ಥಾನಕ್ಕೆ ಏರಿದ ದಿಸ್ಸಾನಾಯಕೆ ಅನಂತರ ಜೆವಿಪಿಯ ಕೇಂದ್ರ ಕಾರ್ಯಕಾರಿ ಸಮಿತಿಗೆ ನೇಮಕಗೊಂಡರು. 1998ರಲ್ಲಿ ಅವರು ಜೆವಿಪಿಯ ರಾಜಕೀಯ ಬ್ಯೂರೋ ಸದಸ್ಯರಾದರು.

2000ರಲ್ಲಿ ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶಿಸಿದ ಅವರು ಸಂಸತ್ತಿನ ಸದಸ್ಯರಾಗಿದ್ದು, ಜೆವಿಪಿ ಅಧ್ಯಕ್ಷ ಕುಮಾರತುಂಗಾ ಅವರ ಆಡಳಿತವನ್ನು ಬೆಂಬಲಿಸಿದರು. ಇವರ ಪಕ್ಷವು 2002ರಲ್ಲಿ ಸಿಂಹಳೀಯ ರಾಷ್ಟ್ರೀಯವಾದಿಗಳೊಂದಿಗೆ ಸೇರಿಕೊಂಡು ತಮಿಳು ಬಂಡಾಯ ಗುಂಪು ಎಲ್ ಟಿಟಿಇಯೊಂದಿಗೆ ಶಾಂತಿ ಮಾತುಕತೆಗೆ ನಿರಾಕರಿಸಿತು. ಕೊಲಂಬೊದಲ್ಲಿ ಸಿಂಹಳ ಪ್ರಾಬಲ್ಯದ ಸರ್ಕಾರದ ವಿರುದ್ಧ ಸಶಸ್ತ್ರ ದಂಗೆಯನ್ನು ನಡೆಸಿತು.

ಮಹಿಂದಾ ರಾಜಪಕ್ಸೆ ಅವರ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲೈಯನ್ಸ್ (UPFA) ನೊಂದಿಗೆ ಮೈತ್ರಿ ಮಾಡಿಕೊಂಡ ಅನಂತರ 2004ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೆವಿಪಿ ಪ್ರಾಮುಖ್ಯತೆ ಪಡೆಯಿತು. ಎಲ್‌ಟಿಟಿಇಯೊಂದಿಗೆ ಕದನ ವಿರಾಮ ವಿರೋಧಿ ವಿರೋಧಿ ನಿಲುವಿನಿಂದಲೇ ಪ್ರಚಾರ ಪಡೆಯಿತು.

Anura Kumara Dissanayake

ಬೌದ್ಧ ಧರ್ಮಕ್ಕೆ ಬೆಂಬಲ

ದಿಸ್ಸಾನಾಯಕೆ ಅವರು ಚುನಾವಣಾ ಪ್ರಚಾರದಲ್ಲಿ ಬೌದ್ಧ ಸನ್ಯಾಸಿಗಳ ಬೆಂಬಲ ಪಡೆದರು. ಬೌದ್ಧ ಧರ್ಮಕ್ಕೆ ಅಗ್ರಗಣ್ಯ ಸ್ಥಾನ ನೀಡುವ ಸಂವಿಧಾನದ 9ನೇ ವಿಧಿಗೆ ಯಾವುದೇ ತಿದ್ದುಪಡಿ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿರುವ ಅವರು ಜೆವಿಪಿ ನೇತೃತ್ವದ ಸಮ್ಮಿಶ್ರ ಎನ್‌ಪಿಪಿ 9ನೇ ವಿಧಿಯನ್ನು ರಕ್ಷಿಸಲು ಬದ್ಧವಾಗಿದೆ ಎಂದು ಹೇಳಿದ್ದರು.

ದಿಸ್ಸಾನಾಯಕೆ ಭಾರತ ವಿರೋಧಿಯೇ?

ದಿಸ್ಸಾನಾಯಕೆ ಅವರ ಜೆವಿಪಿಯು ಭಾರತ ಮತ್ತು ಶ್ರೀಲಂಕಾ ನಡುವಿನ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ವ್ಯಾಪಾರ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು (CEPA) ವಿರೋಧಿಸಿದೆ. ತಮಿಳು ಮೂಲದ ಎಸ್ಟೇಟ್ ಕಾರ್ಮಿಕರನ್ನು “ಭಾರತೀಯ ವಿಸ್ತರಣೆಯ ಸಾಧನ” ಎಂದು ದೂರಿದೆ.

ದಿಸ್ಸಾನಾಯಕೆ ಅವರು ಕಚ್ಚತೀವು ದ್ವೀಪವನ್ನು ಯಾವುದೇ ಕಾರಣಕ್ಕೂ ಭಾರತಕ್ಕೆ ಹಿಂದಿರುಗಿಸುವುದಿಲ್ಲ ಎಂದು ಹೇಳಿದ್ದಾರೆ. ಇದೆಲ್ಲವನ್ನು ಗಮನಿಸಿದಾಗ ಅವರು ಭಾರತೀಯ ವಿರೋಧಿ ನಿಲುವನ್ನು ಹೊಂದಿರುವುದು ಸ್ಪಷ್ಟವಾದಂತಿದೆ.

ತಮಿಳರ ಕುರಿತು ಅವರ ನಿಲುವು ?

ಯಾವುದೇ ಅಧಿಕಾರ ತಮಿಳರಿಗೆ ನೀಡುವುದಕ್ಕೆ ಜೆವಿಪಿಯ ತೀವ್ರ ವಿರೋಧವಿದೆ. ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಸಹಿ ಮಾಡಿರುವ 1987ರ ಇಂಡೋ-ಲಂಕಾ ಒಪ್ಪಂದಕ್ಕೂ ಪಕ್ಷದ ವಿರೋಧವಿದೆ. ತಮಿಳು ಪ್ರಾಬಲ್ಯವಿರುವ ಈಶಾನ್ಯದಲ್ಲಿ ಭೂಕಂದಾಯ ಮತ್ತು ಪೊಲೀಸರ ಮೇಲೆ ಹೆಚ್ಚಿನ ನಿಯಂತ್ರಣ ನೀಡಲು ಪ್ರಾಂತೀಯ ಮಂಡಳಿಗಳನ್ನು ರಚಿಸಿರುವ ಸಂವಿಧಾನದ 13ನೇ ತಿದ್ದುಪಡಿಗೂ ಪಕ್ಷ ವಿರೋಧ ವ್ಯಕ್ತಪಡಿಸಿದೆ.

ದಿಸ್ಸಾನಾಯಕೆ ಅವರ ಪಕ್ಷ ಪ್ರಣಾಳಿಕೆಯಲ್ಲಿ “ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಯಾವುದೇ ರಾಜಿ ಮಾಡಿಕೊಳ್ಳದೆ ಖಚಿತಪಡಿಸುವುದಾಗಿ ಹೇಳಿದೆ.

1987ರ ಒಪ್ಪಂದದ ಭರವಸೆಯಂತೆ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳ ವಿಲೀನದ ವಿರುದ್ಧ ಪಕ್ಷವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಇದು 2007ರಲ್ಲಿ ಆ ಪ್ರಾಂತ್ಯಗಳ ಔಪಚಾರಿಕ ವಿಲೀನಕ್ಕೆ ಕಾರಣವಾಯಿತು.
ಕೃಷಿ, ಭೂಮಿ ಮತ್ತು ನೀರಾವರಿ ಸಚಿವರಾಗಿದ್ದ ದಿಸ್ಸಾನಾಯಕೆ ಅವರು ಎಲ್‌ಟಿಟಿಇಗೆ ಸುನಾಮಿಯ ಅನಂತರದ ನೆರವು ನೀಡಲು ತಿರಸ್ಕರಿಸಿದ್ದರು.

Anura Kumara Dissanayake

ಸಶಸ್ತ್ರ ಪಡೆಗಳಿಗೆ ಬೆಂಬಲ

ಎಲ್‌ಟಿಟಿಇ ಮತ್ತು ಅದರ ನಾಯಕ ಪ್ರಭಾಕರನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ವೇಳೆ ಜೆವಿಪಿ ಎಸ್‌ಎಲ್ ಸಶಸ್ತ್ರ ಪಡೆಗಳನ್ನು ಬೆಂಬಲಿಸಿದೆ. ಶ್ರೀಲಂಕಾ ಸೇನೆಯ ಯುದ್ಧಾಪರಾಧಗಳ ಬಗ್ಗೆ ಅಂತಾರಾಷ್ಟ್ರೀಯ ತನಿಖೆಗೆ ದಿಸ್ಸಾನಾಯಕೆ ನಿರಂತರ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ.

ಯುದ್ಧಾಪರಾಧದ ಆರೋಪ ಹೊತ್ತಿರುವ ಸೇನಾ ಅಧಿಕಾರಿಗಳು ಕೂಡ ಜೆವಿಪಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಜನರಲ್ ಅರುಣಾ ಜಯಶೇಖರ ಅವರಿಗೆ ರಕ್ಷಣಾ ನೀತಿಯ ಕರಡು ರಚನೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. 2004 ರಿಂದ 2007 ರ ನಡುವೆ ಹೈಟಿಯಲ್ಲಿ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದಾಗ ಅವರ ವಿರುದ್ಧ ಮಕ್ಕಳ ಕಳ್ಳಸಾಗಣೆ ದಂಧೆ ಆರೋಪ ಕೇಳಿಬಂದಿತ್ತು.

Anura Dissanayake : ಶ್ರೀಲಂಕಾ ನೂತನ ಅಧ್ಯಕ್ಷ ಅನುರಾ ದಿಸ್ಸಾನಾಯಕೆಗೆ ಪ್ರಧಾನಿ ಮೋದಿ ಅಭಿನಂದನೆ

ಎಎಂಎಫ್ ನಿಂದ ಹಣ ಹಿಂಪಡೆಯುವಲ್ಲಿ ಭಿನ್ನಾಭಿಪ್ರಾಯ

ಆರ್ಥಿಕ ಸುಧಾರಣೆಗಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಬೇಲ್‌ಔಟ್ ಹಣವನ್ನು ಪಡೆಯುವ ದೇಶಗಳಿಗೆ ವಿಶಿಷ್ಟವಾಗಿ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸುತ್ತದೆ. ಇದರಲ್ಲಿ ಸಾಮಾನ್ಯವಾಗಿ ಸರ್ಕಾರದ ವೆಚ್ಚವನ್ನು ಕಡಿಮೆ ಮಾಡುವ, ತೆರಿಗೆಗಳನ್ನು ಹೆಚ್ಚಿಸುವ ಮತ್ತು ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುವಂತಹ ಆರ್ಥಿಕ ನೀತಿ ಸುಧಾರಣೆಗಳನ್ನು ಜಾರಿಗೆ ತರುವ ಷರತ್ತುಗಳನ್ನು ಒಳಗೊಂಡಿರುತ್ತದೆ.

ಶ್ರೀಲಂಕಾ ತನ್ನ 3 ಶತಕೋಟಿ ಡಾಲರ್ ಮೌಲ್ಯದ ಬೇಲ್‌ಔಟ್ ಪ್ಯಾಕೇಜ್‌ನಿಂದ 350 ಕೋಟಿ ಮೌಲ್ಯದ ಹಣ ಬಿಡುಗಡೆಗಾಗಿ ಕಾಯುತ್ತಿದೆ. ದಿಸ್ಸಾನಾಯಕೆ ಅವರು ತಮ್ಮ ಪಕ್ಷವು ಒಪ್ಪಂದದ ಷರತ್ತುಗಳ ಬಗ್ಗೆ ಮರು ಮಾತುಕತೆ ನಡೆಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದರು.