Thursday, 19th September 2024

Arvind Kejriwal: ಸಿಎಂ ಸ್ಥಾನದಿಂದ ಕೆಳಗಿಳಿದ ಕೇಜ್ರಿವಾಲ್‌; ಲೆಫ್ಟಿನೆಂಟ್‌ ಗವರ್ನರ್‌ಗೆ ರಾಜೀನಾಮೆ ಸಲ್ಲಿಕೆ

Arvind Kejriwal

ನವದೆಹಲಿ: ಆಮ್‌ ಆದ್ಮಿ ಪಾರ್ಟಿ (Aam Aadmi Party) ಮುಖಂಡ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಇಂದು ಲೆಫ್ಟಿನೆಂಟ್‌ ಗವರ್ನರ್‌ ಅವರನ್ನು ಭೇಟಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ಕೇಜ್ರಿವಾಲ್‌ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಅವರ ಉತ್ತರಾಧಿಕಾರಿಯಾಗಿ ಇಂದು ಆತಿಶಿ ಮರ್ಲೇನಾ ಅವರನ್ನು ದೆಹಲಿ ಸಿಎಂ ಆಗಿ ಆಪ್‌ ನೇಮಿಸಿದೆ. ಇದೀಗ ಇದರ ಬೆನ್ನಲ್ಲೇ ಕೇಜ್ರಿವಾಲ್‌ ತಮ್ಮ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ ಸಕ್ಸೇನಾ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಕೇಜ್ರಿವಾಲ್‌ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಆಪ್‌ ಮುಖಂಡ ಗೋಪಾಲ್‌ ರೈ, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಕೇಜ್ರಿವಾಲ್‌ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ. ನಮ್ಮ ನೂತನ ಸಿಎಂ ಆಗಿ ಆತಿಶಿ ಅವರನ್ನು ನೇಮಿಸಲಾಗಿದೆ. ಅವರು ಸರಕಾರವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಭಾನುವಾರ, ಕೇಜ್ರಿವಾಲ್ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವಾಗ ರಾಜೀನಾಮೆ ನೀಡುವ ನಿರ್ಧಾರ ಘೋಷಿಸಿದ್ದರು. “ನಾನು 2 ದಿನಗಳ ನಂತರ ರಾಜೀನಾಮೆ ನೀಡಲಿದ್ದೇನೆ. ನಾನು ಪ್ರಾಮಾಣಿಕನೇ ಎಂದು ಜನರನ್ನು ಕೇಳಿ. ಅವರು ಪ್ರತಿಕ್ರಿಯಿಸುವವರೆಗೂ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಜನರು ನನಗೆ ಪ್ರಾಮಾಣಿಕತೆಯ ಪ್ರಮಾಣಪತ್ರವನ್ನು ನೀಡಿದ ನಂತರವೇ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ. ಜೈಲಿನಿಂದ ಹೊರಬಂದ ನಂತರ ‘ಅಗ್ನಿಪರೀಕ್ಷೆ’ಗೆ ಒಳಪಡಲು ಬಯಸುತ್ತೇನೆ” ಎಂದು ನಾಯಕ ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಪಡೆದ ನಂತರ ದೆಹಲಿಯ ತಿಹಾರ್ ಜೈಲಿನಿಂದ ಹೊರಬಂದ ಎರಡು ದಿನಗಳ ನಂತರ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Atishi Marlena: ದೆಹಲಿಯ ಮೂರನೇ ಮಹಿಳಾ ಸಿಎಂ ಆಗಿರುವ ಆತಿಶಿ ಹಿನ್ನೆಲೆ ಏನು? ರಾಜಕೀಯ ಪಯಣ ಹೇಗೆ ಶುರುವಾಯ್ತು? ಇಲ್ಲಿದೆ ಡಿಟೇಲ್ಸ್‌