Sunday, 8th September 2024

ಲಖೀಂಪುರ ಖೇರಿ ಗಲಭೆ ಪ್ರಕರಣ: ಆಶಿಷ್‌ ಮಿಶ್ರಾ ಜಾಮೀನು ರದ್ದು

#Ashish Mishra

ನವದೆಹಲಿ: ಉತ್ತರ ಪ್ರದೇಶದ ಲಖೀಂಪುರ ಖೇರಿ ಗಲಭೆ ಪ್ರಕರಣದಲ್ಲಿ ಕೇಂದ್ರ ಸಚಿವರ ಪುತ್ರ ಆಶಿಷ್‌ ಮಿಶ್ರಾ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಫೆಬ್ರವರಿಯಲ್ಲಿ ಅಲಹಾ ಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾರ ಪುತ್ರ ಆಶಿಷ್‌ ಮಿಶ್ರಾ ಲಖೀಂಪುರ ಖೇರಿ ಗಲಭೆ ಪ್ರಕರಣದ ಆರೋಪಿ. ಆಶಿಷ್‌ ಮಿಶ್ರಾಗೆ ಜಾಮೀನು ನೀಡಿರುವುದನ್ನು ಲಖೀಂಪುರ ಖೇರಿ ಗಲಭೆಯಲ್ಲಿ ಮೃತಪಟ್ಟ ರೈತರ ಕುಟುಂಬದವರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.

2021ರ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಗಲಭೆ ನಡೆದಿತ್ತು. ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹತ್ತಿಸಲಾಗಿತ್ತು. ನಾಲ್ವರು ರೈತರು ಮೃತಪಟ್ಟಿದ್ದರು.

ಲಖೀಂಪುರ ಖೇರಿ ಗಲಭೆ ಪ್ರಕರಣದ ಬಗ್ಗೆ ಮೊದಲು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದರು. ಬಳಿಕ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳು ತ್ತಿದ್ದಂತೆ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಯಿತು.

ಆಶಿಷ್ ಮಿಶ್ರಾ ಜಾಮೀನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರ ನೇತೃತ್ವದ ಪೀಠ ಒಂದು ವಾರದಲ್ಲಿ ಪೊಲೀಸರ ಮುಂದೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.

2022ರ ಫೆಬ್ರವರಿ 10ರಂದು ಅಲಹಾಬಾದ್ ಹೈಕೋರ್ಟ್ ಆಶಿಷ್‌ ಮಿಶ್ರಾಗೆ ಜಾಮೀನು ನೀಡಿತ್ತು. ಗಲಭೆಯಲ್ಲಿ ಮೃತಪಟ್ಟ ರೈತರ ಕುಟುಂಬದವರು ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ನೀಡಿರುವ ಆದೇಶವನ್ನು ಪ್ರಶ್ನೆ ಮಾಡಿದ್ದರು.ಸೋಮವಾರ ಜಾಮೀನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್ ಹೈಕೋರ್ಟ್ ಅನಗತ್ಯ ಅಂಶಗಳನ್ನು ಪರಿಗಣಿಸಿದೆ ಎಂದು ಹೇಳಿದೆ ಮತ್ತು ಆಶಿಷ್ ಮಿಶ್ರಾ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

error: Content is protected !!