Thursday, 19th September 2024

ಬಿರ್ ಭೂಮ್ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಐವರ ಅಮಾನತು

ಕೋಲ್ಕತಾ: ಬಿರ್ ಭೂಮ್ ನಲ್ಲಿ ಇತ್ತೀಚೆಗೆ ನಡೆದ ಎಂಟು ಜನರ ಸಜೀವ ದಹನ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ವಿಪಕ್ಷ ಭಾರತೀಯ ಜನತಾ ಪಕ್ಷದ ಶಾಸಕರು ಕೋಲಾಹಲ ಎಬ್ಬಿಸಿದ್ದು, ಐವರನ್ನು ಅಮಾನತುಗೊಳಿಸಲಾಗಿದೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ವಿಪಕ್ಷದ ಬಿಜೆಪಿ ಶಾಸಕರ ನಡುವೆ ವಿಧಾನಸಭೆ ಕಲಾಪದಲ್ಲಿ ಮಾತಿನ ಚಕಮಕಿ ನಡೆದು, ಕಲಾಪಕ್ಕೆ ಅಡ್ಡಿಯನ್ನುಂಟು ಮಾಡಿರುವುದಾಗಿ ತಿಳಿಸಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದು ಸರ್ಕಾರದ ವಿರುದ್ಧ ಕಲಾಪದಲ್ಲಿ ಬಿಜೆಪಿ ಶಾಸಕರು ಘೋಷಣೆ ಕೂಗಿದ್ದರು. ಹಿಂಸಾಚಾರದ ವಿಚಾರದಲ್ಲಿ ಟಿಎಂಸಿ ಮತ್ತು ಬಿಜೆಪಿ ಶಾಸಕರ ನಡುವೆ ಘರ್ಷಣೆ ನಡೆದಿದ್ದು, ಅನುಚಿತವಾಗಿ ವರ್ತಿಸಿದ ಸುವೇಂದು ಅಧಿಕಾರಿ ಸೇರಿದಂತೆ 5 ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿರುವುದಾಗಿ ವರದಿ ವಿವರಿಸಿದೆ.

ಪಶ್ಚಿಮಬಂಗಾಳ ಸರ್ಕಾರ ಕೋಲ್ಕತಾ ಪೊಲೀಸರನ್ನು ಸಿವಿಲ್ ಡ್ರೆಸ್ ನಲ್ಲಿ ಕಲಾಪಕ್ಕೆ ಕರೆಯಿಸಿದ್ದು, ಇದರಿಂದಾಗಿ ಘರ್ಷಣೆ ಉಂಟಾಗಿರುವುದಾಗಿ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.