Friday, 20th September 2024

‘ಮಹಾರಾಷ್ಟ್ರ ಸದನ’ ನಿರ್ಮಾಣದ ಹಗರಣ: ಛಗನ್‌ ಭುಜಬಲ್‌ ದೋಷಮುಕ್ತ

ಮುಂಬೈ: ‘ಮಹಾರಾಷ್ಟ್ರ ಸದನ’ ನಿರ್ಮಾಣದ ಹಗರಣಕ್ಕೆ ಸಂಬಂಧಿಸಿ, ಎನ್‌ಸಿಪಿ ನಾಯಕ, ಸಚಿವ ಛಗನ್‌ ಭುಜಬಲ್‌ ಹಾಗೂ ಇತರ ಏಳು ಮಂದಿಯನ್ನು ವಿಶೇಷ ನ್ಯಾಯಾಲಯ ಗುರುವಾರ ದೋಷಮುಕ್ತಗೊಳಿಸಿದೆ.

ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪ್ರತಿಪಾದಿಸಿದ್ದರು. ಭುಜಬಲ್‌ ಅವರ ಜತೆಗೆ, ಪುತ್ರ ಪಂಕಜ್‌, ಸೋದರ ಸಂಬಂಧಿ ಸಮೀರ್‌ ಮತ್ತು ಇತರ ಐವರನ್ನು ಖುಲಾಸೆಗೊಳಿಸಲಾಗಿದೆ. ಭುಜಬಲ್‌ ಅವರ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಮತ್ತು ತಪ್ಪು ಲೆಕ್ಕಾಚಾರದಿಂದ ಕೂಡಿವೆ ಎಂದು ಭುಜಬಲ್‌ ಅವರ ವಕೀಲ ಪ್ರಸಾದ್‌ ಢಾಕೆಫಾಲ್ಕರ್‌, ಸಜಲ್‌ ಯಾದವ್ ಮತ್ತು ಸುದರ್ಶನ್‌ ಖವಾಸೆ ಪ್ರತಿಪಾದಿಸಿದರು.

2016ರಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರೂ ವಿಚಾರಣೆ ನಡೆಸಲು ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ ಎಂದು ವಾದಿಸಿದರು. ಭುಜಬಲ್‌ ಮತ್ತು ಅವರ ಕುಟುಂಬದ ಸದಸ್ಯರು ನಿರ್ಮಾಣ ಕಂಪನಿಯ ಕೆ.ಎಸ್‌. ಚಮಂಕಾರ್‌ ಎಂಟರ್‌ಪ್ರೈಸಸ್‌ನಿಂದ ಕಿಕ್‌ಬ್ಯಾಕ್‌ ಪಡೆದಿದ್ದಾರೆ. ಹೀಗಾಗಿ, ಅವರ ಅರ್ಜಿ ವಜಾಗೊಳಿಸಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳ ಪರ ವಕೀಲರು ವಾದಿಸಿದ್ದರು.

2005-06ರಲ್ಲಿನ ಪ್ರಕರಣ ಇದಾಗಿದ್ದು, ಛಗನ್‌ ಭುಜಬಲ್‌ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ನಿರ್ಮಾಣದ ಗುತ್ತಿಗೆಯನ್ನು ಕಂಪನಿಯೊಂದಕ್ಕೆ ನೀಡಿದ್ದರು. ಗುತ್ತಿಗೆ ಪಡೆದ ಕಂಪನಿ ಶೇ.80ರಷ್ಟು ಲಾಭ ಮಾಡಿಕೊಂಡಿದೆ. ಆದರೆ, ಸರ್ಕಾರದ ಸುತ್ತೋಲೆ ಅನ್ವಯ ಶೇ.20ರಷ್ಟು ಮಾತ್ರ ಗುತ್ತಿಗೆದಾರರು ಲಾಭ ಮಾಡಿಕೊಳ್ಳಲು ಅವಕಾಶವಿದೆ ಎಂದು ಎಸಿಬಿ ಆರೋಪಿಸಿತ್ತು.

ಮಹಾರಾಷ್ಟ್ರ ಸದನವನ್ನು ಆರಂಭದಲ್ಲಿ ₹13.5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ನಂತರ, ನಿರ್ಮಾಣದ ವೆಚ್ಚದ ಮೊತ್ತವನ್ನು ₹50 ಕೋಟಿಗೆ ಹೆಚ್ಚಿಸಲಾಯಿತು. ಗುತ್ತಿಗೆ ಪಡೆದ ಚಮಂಕಾರ್ಸ್‌ ಕಂಪನಿಯಿಂದ ಭುಜಬಲ್‌ ಅವರಿಗೆ ₹13.5 ಕೋಟಿ ಕಿಕ್‌ಬ್ಯಾಕ್‌ ದೊರೆತಿದೆ ಎಂದು ಎಸಿಬಿ ಆರೋಪಿಸಿತ್ತು.