Friday, 20th September 2024

Rahul Gandhi: ರಾಹುಲ್‌ ಗಾಂಧಿಯನ್ನು ಪ್ರಶ್ನಿಸಿದ ಪತ್ರಕರ್ತನ ಮೇಲೆ ಕಾಂಗ್ರೆಸ್‌ ನಾಯಕರ ಹಲ್ಲೆ! ಕಾರಣ ಬಾಂಗ್ಲಾ ಹಿಂದೂ ಕುರಿತ ಪ್ರಶ್ನೆ

rahul gandhi

ನವದೆಹಲಿ: ಬಾಂಗ್ಲಾ ಹಿಂದೂಗಳ (Bangla Hindus) ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯದ ಕುರಿತು ರಾಹುಲ್‌ ಗಾಂಧಿಯವರ (Rahul Gandhi) ನಡೆಯ ಬಗ್ಗೆ ಪ್ರಶ್ನೆ ಕೇಳಿದ್ದರಿಂದ (Interview) ರೊಚ್ಚಿಗದ್ದ ಕಾಂಗ್ರೆಸ್‌ (Congress) ನಾಯಕರು ಸ್ಯಾಮ್‌ ಪಿತ್ರೋಡಾ (Sam Pitroda) ಅವರ ಎದುರೇ ಟೀವಿ ಸ್ಟುಡಿಯೋದಲ್ಲೇ ಸಂದರ್ಶನಕಾರನ ಮೇಲೆ ಹಲ್ಲೆ ನಡೆಸಿದ್ದಾರೆ.

ರಾಹುಲ್‌ ಗಾಂಧಿ ಅಮೆರಿಕದ ಟೆಕ್ಸಾಸ್‌ಗೆ ಆಗಮಿಸುವುದಕ್ಕೂ ಮುನ್ನ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ಜೊತೆ ಇಂಡಿಯಾ ಟುಡೇ ವರದಿಗಾರ ರೋಹಿತ್‌ ಶರ್ಮಾ ಸಂದರ್ಶನ ನಡೆಸಿದ್ದರು. ಸಂದರ್ಶನದ ಕಡೆಯ ಭಾಗದಲ್ಲಿ ರೋಹಿತ್‌, ಅಮೆರಿಕ ಸಂಸದರ ಭೇಟಿ ವೇಳೆ ರಾಹುಲ್‌ ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಯ ವಿಷಯ ಪ್ರಸ್ತಾಪಿಸುತ್ತಾರೆಯೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪಿತ್ರೋಡಾ ಉತ್ತರಿಸುವ ಮುನ್ನ ಅಲ್ಲಿದ್ದ 30 ಕಾಂಗ್ರೆಸ್‌ ನಾಯಕರು ಇದು ವಿವಾದಿತ ವಿಷಯ ಎಂದು ಕೂಗಾಡುತ್ತಾ ರೋಹಿತ್‌ ಮೈಕ್‌, ಮೊಬೈಲ್‌ ಕಿತ್ತೆಸೆದು ಹಲ್ಲೆ ನಡೆಸಿದ್ದಾರೆ. ‘ಬಂದ್ ಕರೋ, ಬಂದ್ ಕರೋ” ಎಂದು ಹಲ್ಲೆ ನಡೆಸಿದರು. ಘಟನೆ ಬಳಿಕ ಸಂದರ್ಶನದ ವೇಳೆ ಹಲ್ಲೆ ನಡೆದ ದೃಶ್ಯಗಳು ಹೊರಗೆ ಬರದಂತೆ ಅಳಿಸಿ ಹಾಕಿದ್ದಾರೆ.

ಪ್ರಕರಣದ ಬಗ್ಗೆ ವರದಿಗಾರ ಹೇಳಿದ್ದು ಇಷ್ಟು: ನಾನು ಸ್ಯಾಮ್ ಪಿತ್ರೋಡಾ ಜೊತೆ, ಬಾಂಗ್ಲಾ ಹಿಂದೂಗಳ ಮೇಲಿನ ದಾಳಿ ಬಗ್ಗೆ ರಾಹುಲ್‌ ಗಾಂಧಿ ನಿಲುವಿನ ಬಗ್ಗೆ ಪ್ರಸ್ತಾಪಿಸಿದೆ. ಅಷ್ಟರಲ್ಲೇ ರಾಹುಲ್ ಬೆಂಬಲಿಗರಲ್ಲಿ ಒಬ್ಬ ವ್ಯಕ್ತಿ ನನ್ನ ಮೈಕ್ ಕಿತ್ತುಕೊಳ್ಳಲು ಯತ್ನಿಸಿದ. ಅದನ್ನು ನಾನು ವಿರೋಧಿಸಿದೆ. ಇನ್ನೊಬ್ಬ ನನ್ನ ಮೊಬೈಲ್ ಬಲವಂತವಾಗಿ ಕಿತ್ತುಕೊಂಡು ರೆಕಾರ್ಡ್ ನಿಲ್ಲಿಸಿದ. ಈ ವೇಳೆ ಬೆಂಬಲಿಗರು ನೂಕಾಟ ಹಲ್ಲೆ ಮಾಡಲು ಮುಂದಾದರು. ಸ್ಯಾಮ್ ಪಿತ್ರೋಡಾ ಶಾಂತವಾಗಿರುವಂತೆ ಒತ್ತಾಯಿಸಿದರೂ ರಾಹುಲ್ ಬೆಂಬಲಿಗರು ಸುಮ್ಮನಾಗಲಿಲ್ಲ. ಈ ವೇಳೆ ಸ್ಯಾಮ್ ಕೂಡ ನನ್ನಂತೆ ನಡುಗಿಹೋದದ್ದು ಕಾಣಿಸಿತು.

ಕನಿಷ್ಠ 15 ಜನರು ಕೊಠಡಿಯಲ್ಲಿ ಕೂರಿಸಿ ಸಂದರ್ಶನದ ಅಂತಿಮ ಪ್ರಶ್ನೆಯನ್ನು, ಹಲ್ಲೆ ದೃಶ್ಯವನ್ನು ಬಲವಂತವಾಗಿ ತೆಗೆಸಿಹಾಕಿದರು. ನನ್ನ ಮೊಬೈಲ್ ಬಲವಂತದಿಂದ ಅನ್‌ಲಾಕ್ ಮಾಡಿ ಸಂದರ್ಶನದ ವಿಡಿಯೋ ದೃಶ್ಯ ಅಳಿಸಲು ಮುಂದಾದರು. ಸಂದರ್ಶನದ ಯಾವುದೇ ಕುರುಹು ಉಳಿದಿಲ್ಲ ಎಂದು ಖಚಿತಪಡಿಕೊಳ್ಳಲು ಐಕ್ಲೌಡ್ ಸಹ ಪರಿಶೀಲನೆ ನಡೆಸಿದರು. ರೆಕಾರ್ಡ್‌ ಸಮಯದಲ್ಲಿ ನನ್ನ ಮೊಬೈಲ್ ಏರ್‌ಪ್ಲೇನ್ ಮೋಡ್‌ನಲ್ಲಿದ್ದುದರಿಂದ ವಿಡಿಯೋ ಸಿಂಕ್ ಆಗಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಬೆಂಬಲಿಗರ ಕೈಯಲ್ಲಿ ಸಿಲುಕಿದ ಮೂವತ್ತು ನಿಮಿಷಗಳ ಯಾತನಾಮಯ ಘಟನೆಯನ್ನು ರೋಹಿತ್‌ ಶರ್ಮಾ ಬಿಚ್ಚಿಟ್ಟರು.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿ ಕಡೆಯಿಂದ ರಾಯ್‌ಬರೇಲಿಯ ಕ್ಷೌರಿಕನಿಗೆ ಸಿಕ್ತು ಭರ್ಜರಿ ಉಡುಗೊರೆ; ಕಾರಣವೇನು?