Saturday, 21st September 2024

ದೆಹಲಿ ಚಲೋ ಆಂದೋಲನ: ಗಲಭೆ ಸೃಷ್ಟಿ, ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ಕೇಸ್

ಅಂಬಾಲಾ: ವಿವಿಧ ಕೃಷಿ ಮಸೂದೆ ವಿರೋಧಿಸಿ ದೆಹಲಿ ಚಲೋ ಆಂದೋಲನ ನಡೆಸುತ್ತಿರುವ ರೈತರ ವಿರುದ್ಧ ಹರಿಯಾಣ ಪೊಲೀಸರು ಕೊಲೆ ಯತ್ನ, ಗಲಭೆ ಸೃಷ್ಟಿಸಿದ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೇಸ್ ದಾಖಲಿಸಿ ದ್ದಾರೆ.

ರಾಜ್ಯ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖ್ಯಸ್ಥ ಗುರ್ನಮ್ ಸಿಂಗ್ ಚಾರುಣಿ ಮತ್ತು ಇತರ ಹಲವು ರೈತರ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಡ್ ಕಾನ್‌ಸ್ಟೆಬಲ್ ಪರ್ದೀಪ್ ಕುಮಾರ್ ಅವರ ದೂರಿನ ಆಧಾರದ ಮೇಲೆ ಪರಾವೊ ಪೊಲೀಸ್ ಠಾಣೆಯಲ್ಲಿ ನೂರಾರು ರೈತರು ವಿರುದ್ಧ ಕೇಸ್ ದಾಖಲಿಸಲಾಗಿದೆ.

ಬಿಕೆಯು ಹರಿಯಾಣ ಮುಖ್ಯಸ್ಥ ಚಾರುಣಿ ಮತ್ತು ಇತರರು ಅಂಬಾಲಾದ ಮೊಹ್ರಾ ಗ್ರಾಮದ ಬಳಿ ಜಮಾಯಿಸಿದ್ದರು. ಈ ವೇಳೆ ಪೊಲೀಸ್ ತಂಡವನ್ನು ಮುನ್ನಡೆಸುತ್ತಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಹೋಗದಂತೆ ಚಾರುಣಿಯನ್ನು ಕೇಳಿ ಕೊಂಡರು. ಆದರೆ ನಿರಾಕರಿಸಿ ಮುಂದೆ ಹೋಗಿದ್ದರಿಂದ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ.