Friday, 20th September 2024

ಆರೋಪಿಗೆ ಅನಗತ್ಯ ಕಿರುಕುಳ: ಪೊಲೀಸರಿಗೆ 25,000 ದಂಡ

ನವದೆಹಲಿ: ಫೆಬ್ರವರಿ 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯೊಬ್ಬ ರಿಗೆ ಅನಗತ್ಯ ಕಿರುಕುಳ ನೀಡಿದ್ದಕ್ಕಾಗಿ ದಿಲ್ಲಿಯ ನ್ಯಾಯಾಲಯ ಪೊಲೀಸರಿಗೆ ದಂಡ ವಿಧಿಸಿದೆ.

ದೂರುಗಳನ್ನು ಪ್ರತ್ಯೇಕಿಸಲು ಹಾಗೂ ಎಲ್ಲಾ ಏಳು ಮಂದಿ ಆರೋಪಿಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಲೇವಾರಿಗೊಳಿಸುವಲ್ಲಿ ಉಂಟಾದ ವಿಳಂಬಕ್ಕೆ ಪೊಲೀಸರಿಗೆ ರೂ 25,000 ದಂಡ ಪಾವತಿಸುವಂತೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಗರ್ಗ್ ಆದೇಶಿಸಿದ್ದಾರೆ.

ಹಿಂಸಾಚಾರ ಪ್ರಕರಣಗಳ ಸೂಕ್ತ ತನಿಖೆಗೆ ಕೈಗೊಂಡ ಕ್ರಮಗಳ ಕುರಿತು ವಿಸ್ತೃತ ವರದಿ ನೀಡುವಂತೆ ನ್ಯಾಯಾ ಲಯವು ತನ್ನ ಅ.12ರ ಆದೇಶದಲ್ಲಿ ದಿಲ್ಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ಥಾನ ಅವರಿಗೆ ನಿರ್ದೇಶನ ನೀಡಿತ್ತು.

ದಿಲ್ಲಿಯ ಭಜನಪುರ ಪ್ರದೇಶದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಐದು ಹಿಂಸಾಚಾರ ಪ್ರಕರಣಗಳನ್ನು ಒಂದೇ ಎಫ್‍ಐಆರ್‍ನಲ್ಲಿ ಸೇರಿಸಿದ್ದೇಕೆ ಎಂದು ನ್ಯಾಯಾಲಯ ಪ್ರಶ್ನಿಸಿತ್ತಲ್ಲದೆ ಅಕಿಲ್ ಅಹ್ಮದ್ ಎಂಬಾತನ ದೂರನ್ನು ಅದರಿಂದ ಪ್ರತ್ಯೇಕಿಸುವಂತೆ ಸೂಚಿಸಿತ್ತು.