Sunday, 6th October 2024

Fire Accident: ಬೆಳ್ಳಂಬೆಳಗ್ಗೆ ಅಗ್ನಿ ಅವಘಡ; ಬೆಂಕಿ ತಗುಲಿ 7 ಮಂದಿಯ ಸಜೀವ ದಹನ

Fire Accident

ಮುಂಬೈ: ಮಹಾರಾಷ್ಟ್ರದ ಚೆಂಬೂರ್‌ (Chembur)ನ 2 ಅಂತಸ್ತಿನ ಕಟ್ಟಡದಲ್ಲಿ ಭಾನುವಾರ (ಅಕ್ಟೋಬರ್‌ 6) ಬೆಳ್ಳಂಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ. ಚೆಂಬೂರಿನ ಸಿದ್ಧಾರ್ಥ್ ಕಾಲೋನಿಯಲ್ಲಿರುವ ಅಂಗಡಿಯೊಂದರಲ್ಲಿ ಶಾರ್ಟ್‌ ಸರ್ಕ್ಯೂಟ್‌ (Short Circuit) ಸಂಭವಿಸಿ ಭಾರಿ ಬೆಂಕಿ ಕಾಣಿಸಿಕೊಂಡು, ಅದು ಇಡೀ ಕಟ್ಟಡಕ್ಕೆ ಆವರಿಸಿ ಅದರ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದ ಕುಟುಂಬದ 7 ಮಂದಿ ಸಜೀವ ದಹನವಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ (Fire Accident).

ʼʼಭಾನುವಾರ ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಈ ಅನಾಹುತ ಸಂಭವಿಸಿದೆ. ನೆಲಮಹಡಿಯಲ್ಲಿರುವ ವಿದ್ಯುತ್ ವಸ್ತುಗಳನ್ನು ಹೊಂದಿರುವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು ಮತ್ತು ಕುಟುಂಬ ವಾಸಿಸುತ್ತಿದ್ದ ಮೇಲಿನ ಮಹಡಿಗೆ ಹರಡಿತುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಪ್ಯಾರಿಸ್ ಗುಪ್ತಾ (7), ನರೇಂದ್ರ ಗುಪ್ತಾ (10), ಮಂಜು ಪ್ರೇಮ್ ಗುಪ್ತಾ (30), ಅನಿತಾ ಗುಪ್ತಾ (39), ಪ್ರೇಮ್ ಗುಪ್ತಾ (30), ವಿಧಿ ಗುಪ್ತಾ ಮತ್ತು ಗೀತಾ ಗುಪ್ತಾ ಎಂದು ಗುರುತಿಸಲಾಗಿದೆ. ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಾಯಿಸಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಭಿವಾಂಡಿಯಲ್ಲಿಯೂ ಅಗ್ನಿ ಅನಾಹುತ

ಮಹಾರಾಷ್ಟ್ರದ ಭಿವಾಂಡಿ ತಾಲೂಕಿನ ಲಾಜಿಸ್ಟಿಕ್ಸ್ ಗೋದಾಮಿನಲ್ಲಿ ಶನಿವಾರ ಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ. ಗೋದಾಮಿನಲ್ಲಿ ಪ್ಲಾಸ್ಟಿಕ್ ವಸ್ತುಗಳ ಜತೆಗೆ ಬಟ್ಟೆ, ರಾಸಾಯನಿಕಗಳು ಮತ್ತು ತೈಲ ಸಂಗ್ರಹವಿತ್ತು ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ (TMC) ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Kenya Fire accident: ಕೀನ್ಯಾ ಶಾಲೆಯಲ್ಲಿ ಭಾರೀ ಅಗ್ನಿ ದುರಂತ; 17 ಮಕ್ಕಳು ಸಜೀವ ದಹನ

ʼʼಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಜವಳಿ ಮತ್ತು ರಾಸಾಯನಿಕಗಳಂತಹ ವಸ್ತುಗಳು ಬೆಂಕಿಯ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದವು. ಪರಿಸರದಲ್ಲಿ ದಟ್ಟ ಹೊಗೆ ಆವರಸಿತ್ತುʼʼ ಎಂದು ಅದಿಕಾರಿಯೋಬ್ಬರು ಮಾಹಿತಿ ನೀಡಿದ್ದಾರೆ. ಬೆಂಕಿಯನ್ನು ಹತೋಟಿಗೆ ತರಲು 6 ಅಗ್ನಿ ಶಾಮಕ ವಾಹನಗಳು ಕಾರ್ಯ ನಿರತವಾಗಿದ್ದವು.