Friday, 20th September 2024

GST Council Meeting : ಕ್ಯಾನ್ಸರ್ ಔಷಧಗಳ ಜಿಎಸ್‌ಟಿ ಕಡಿತ, ಆರೋಗ್ಯ ವಿಮೆ ಕುರಿತ ನಿರ್ಧಾರ ಮುಂದಕ್ಕೆ

GST Council Meeting

ನವದೆಹಲಿ: ಕೆಲವು ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲು ಜಿಎಸ್‌ಟಿ ಕೌನ್ಸಿಲ್‌ನ 54ನೇ ಸಭೆಯಲ್ಲಿ (GST Council Meeting) ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. ಸೋಮವಾರ ನಡೆದ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೀತಾರಾಮನ್, ಕೆಲವು ಕ್ಯಾನ್ಸರ್ ಔಷಧಗಳ ಮೇಲಿನ ದರವನ್ನು ಶೇಕಡಾ 12 ರಿಂದ 5 ಕ್ಕೆ ಇಳಿಸಲಾಗಿದೆ ಎಂದು ಹೇಳಿದರು. ಮಂಡಳಿಯು ನಮ್ಕೀನ್‌ ತಿಂಡಿಗಳ ಮೇಲಿನ ದರವನ್ನು ಶೇಕಡಾ 18 ರಿಂದ 12 ಕ್ಕೆ ಇಳಿಸಿದೆ ಎಂದು ಅವರು ಹೇಳಿದರು.

ಕಳೆದ ಆರು ತಿಂಗಳಲ್ಲಿ ಆನ್ಲೈನ್ ಗೇಮಿಂಗ್‌ನಿಂದ ಉತ್ಪತ್ತಿಯಾಗುವ ಆದಾಯವು ಶೇಕಡಾ 412 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಆನ್ಲೈನ್ ಗೇಮಿಂಗ್ ಮತ್ತು ಕ್ಯಾಸಿನೊಗಳ ಸ್ಥಿತಿಯನ್ನು ಸಲ್ಲಿಸಲಾಗಿದೆ. ಆನ್‌ಲೈನ್‌ ಗೇಮಿಂಗ್‌ನಿಂದ ಬರುವ ಆದಾಯವು ಆರು ತಿಂಗಳಲ್ಲಿ ಶೇಕಡಾ 412 ರಷ್ಟು ಏರಿಕೆಯಾಗಿದ್ದು 6,909 ಕೋಟಿ ರೂ.ಗೆ ತಲುಪಿದೆ ಎಂದು ಅವರು ಹೇಳಿದ್ದಾರೆ. ಕಳೆದ ಆರು ತಿಂಗಳಲ್ಲಿ ಕ್ಯಾಸಿನೊಗಳಿಂದ ಬರುವ ಆದಾಯವು ಶೇಕಡಾ 34 ರಷ್ಟು ಹೆಚ್ಚಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಆರೋಗ್ಯ ವಿಮೆಗೆ ಸಂಬಂಧಿಸಿದಂತೆ, ದರ ಕಡಿತದ ಬಗ್ಗೆ ಹೊಸ ಜಿಒಎಂ (ಸಚಿವರುಗಳ ಗುಂಪು) ಅನ್ನು ರಚಿಸಲು ನಿರ್ಧರಿಸಿದೆ. ಅದು ಅಕ್ಟೋಬರ್ ಅಂತ್ಯದ ವೇಳೆಗೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಸೀತಾರಾಮನ್ ಹೇಳಿದರು.

“ಎರಡು ಹೊಸ ಜಿಎಂಒಗಳನ್ನು ರಚಿಸಲ ನಿರ್ಧರಿಸಲಾಗಿದೆ. ಒಂದು ವೈದ್ಯಕೀಯ ಮತ್ತು ಆರೋಗ್ಯ ವಿಮೆ. ಇದು ಬಿಹಾರದ ಉಪಮುಖ್ಯಮಂತ್ರಿ ನೇತೃತ್ವದ ಜಿಒಎಂ ಆಗಿರುತ್ತದೆ. ಸೀಮಿತ ಉದ್ದೇಶಕ್ಕಾಗಿ ಹೊಸ ಸದಸ್ಯರನ್ನು ಸೇರಿಸಲಾಗುತ್ತದೆ. ಅವರು ಈ ವಿಷಯವನ್ನು ಪರಿಶೀಲಿಸುತ್ತಾರೆ ಮತ್ತು ಅಕ್ಟೋಬರ್ 2024 ರ ಅಂತ್ಯದ ವೇಳೆಗೆ ವರದಿ ನೀಡುತ್ತಾರೆ ಎಂದು ನಾವು ಬಯಸಿದ್ದೇವೆ. ನವೆಂಬರ್‌ನ್ಲಲಿ ಸಭೆ ಸೇರಲಿರುವ ಜಿಎಸ್ಟಿ ಮಂಡಳಿಯು ಜಿಒಎಂನಿಂದ ಬರುವ ಈ ವರದಿಯ ಆಧಾರದ ಅಂತಿಮಗೊಳಿಸಲಾಗುತ್ತದೆ ಎಂದು ಸೀತಾರಾಮನ್ ಹೇಳಿದರು.

ಇದನ್ನೂ ಓದಿ: Mpox case : ಭಾರತದಲ್ಲಿ ಪತ್ತೆಯಾದ ಮಂಕಿಪಾಕ್ಸ್‌ ವೈರಸ್‌ ಆತಂಕಕಾರಿಯೇ; ಕೇಂದ್ರದ ಸ್ಪಷ್ಟನೆ ಏನು?

ಜಿಎಸ್ಟಿ ಕೌನ್ಸಿಲ್ ನಿರ್ಧಾರಗಳ ಬಗ್ಗೆ ಮಾತನಾಡಿದ ಪಿಡಬ್ಲ್ಯೂಸಿ ಇಂಡಿಯಾದ ಪಾಲುದಾರ ಪ್ರತೀಕ್ ಜೈನ್, “ಜಿಎಸ್ಟಿ ಕೌನ್ಸಿಲ್ ಕೆಲವು ದೂರಗಾಮಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದು ರಿಯಲ್ ಎಸ್ಟೇಟ್, ಐಟಿ (ಡೇಟಾ ಹೋಸ್ಟಿಂಗ್), ವಿದೇಶಿ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಉದ್ಯಮದ ವಿಶಾಲ ಶ್ರೇಣಿಗೆ ಪರಿಹಾರ ನೀಡುತ್ತದೆ. ದರ ತರ್ಕಬದ್ಧಗೊಳಿಸುವಿಕೆ ಅಗತ್ಯ ಇದೆ ಎಂದು ತೋರುತ್ತದೆ. ಹೆಚ್ಚಿನ ವಿವರ ಚರ್ಚಿಸಲು ಕೌನ್ಸಿಲ್ ಶೀಘ್ರದಲ್ಲೇ ಮತ್ತೆ ಸಭೆ ಸೇರಲಿದೆ. ಇದಕ್ಕಾಗಿ ಉದ್ಯಮವನ್ನು ಸಿದ್ಧಪಡಿಸಬೇಕಾಗಿದೆ ಎಂದು ಅವರು ಹೇಳಿದರು.