Friday, 20th September 2024

ಬಿಜೆಪಿಗೆ ಆಘಾತ ನೀಡಿದ ಹಂಗ್‌ಶಾ “ತಿಪ್ರಾ ಮೋಥಾ” ಗೆ ಸೇರ್ಪಡೆ

ಗರ್ತಲ: ತ್ರಿಪುರಾದಲ್ಲಿ ಐಪಿಎಫ್‌ಟಿಯೊಂದಿಗೆ ಸಮ್ಮಿಶ್ರ ಸರಕಾರ ಮುನ್ನಡೆ ಸುತ್ತಿರುವ ಬಿಜೆಪಿ, ಮುಂಬರುವ ರಾಜ್ಯ ಚುನಾ ವಣೆಗೆ ಮುನ್ನ ಬುಡಕಟ್ಟು ಪ್ರದೇಶಗಳಲ್ಲಿ ಭಾರಿ ಆಘಾತ ಎದುರಿಸಿದೆ.

ಸ್ವಾಯತ್ತ ಜಿಲ್ಲಾ ಕೌನ್ಸಿಲ್‌ನಲ್ಲಿ ಬಿಜೆಪಿಯ ವಿಪಕ್ಷ ನಾಯಕ ಹಂಗ್‌ಶಾ ಕುಮಾರ್ ತ್ರಿಪುರಾ ಅವರು ಬುಧವಾರ ಬೃಹತ್ ಬುಡಕಟ್ಟು ಬೆಂಬಲಿಗ ರೋಂದಿಗೆ ತಿಪ್ರಾ ಮೋಥಾಗೆ ಸೇರ್ಪಡೆಗೊಂಡಿದ್ದಾರೆ. ತಿಪ್ರಾ ಮೋಥಾ ರಾಜ್ಯದ ಏಕೈಕ ಬುಡಕಟ್ಟು ಮಂಡಳಿಯಲ್ಲಿ ಆಡಳಿತ ಪಕ್ಷವಾಗಿದೆ.

 

ಹಂಗ್‌ಶಾ ಕುಮಾರ್ ತ್ರಿಪುರಾ ಜೊತೆಗೆ, 3,000 ಕುಟುಂಬಗಳ 6,500 ಜನರು “ತಿಪ್ರಾ ಮೋಥಾ” ಗೆ ಸೇರ್ಪಡೆಗೊಂಡಿದ್ದಾರೆ. ತಿಪ್ರಾ ಮೋಥಾ ನಾಯಕ ರಾಜ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಅವರಿಂದ ಪಕ್ಷದ ಧ್ವಜಗಳನ್ನು ಸ್ವೀಕರಿಸಿ ಪಕ್ಷಕ್ಕೆ ಅಧಿಕೃತವಾಗಿ ಸೇರಿದರು.

2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬ ರ್ಮಾ ಅವರು ಬಿಜೆಪಿಗೆ ಪ್ರಮುಖ ಎದುರಾಳಿಯಾಗಿದ್ದಾರೆ. ತ್ರಿಪುರಾದಲ್ಲಿ ತಿಪ್ರಾ ನೇತೃತ್ವದ ಬಿಜೆಪಿ ವಿರೋಧಿ ರಾಜಕೀಯ ರಂಗವು ಹೊರಹೊಮ್ಮುವ ಸೂಚನೆಗಳಿವೆ.

ಬುಡಕಟ್ಟು ಬೆಂಬಲಿಗರ ದೊಡ್ಡ ಪ್ರಮಾಣದ ಪಕ್ಷಾಂತರದ ಪಕ್ಷದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಬಿಜೆಪಿ ಹೇಳಿದೆ. ಮುಂದಿನ ವರ್ಷದ ನಡೆಯ ಲಿರುವ ರಾಜ್ಯ ಚುನಾವಣೆಗೆ ಕೇವಲ ಆರು ತಿಂಗಳುಗಳು ಮಾತ್ರ ಬಾಕಿಯಿದೆ.

ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಬಿಜೆಪಿ ಕೆಲಸ ಮಾಡದ ಕಾರಣ ಬಿಜೆಪಿ ತೊರೆದಿದ್ದೇನೆ ಎಂದು ಹಂಗ್‌ಶಾ ಕುಮಾರ್ ತ್ರಿಪುರಾ ಹೇಳಿದ್ದಾರೆ. ಕೇವಲ ಸಚಿವರು ಮತ್ತು ಶಾಸಕರು ಮಾತ್ರ ಸಂಪತ್ತು ಗಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತ್ರಿಪುರ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿ ಕುತೂಹಲಕ್ಕೆ ಕಾರಣವಾಗಿತ್ತು. ತ್ರಿಪುರ ರಾಜ್ಯದ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮಾಣಿಕ್ ಸಹಾ ಕಳೆದ ತಿಂಗಳು ರಾಜ್ಯಸಭೆ ಸದಸ್ಯರಾಗಿ ಸಹ ಆಯ್ಕೆಯಾಗಿದ್ದರು.

ಬಿಜೆಪಿಯ ಪ್ರಮುಖ ನಾಯಕ ಹಂಗ್‌ಶಾ ಕುಮಾರ್ ತ್ರಿಪುರಾ 6,000ಕ್ಕೂ ಹೆಚ್ಚು ಬುಡಕಟ್ಟು ಬೆಂಬಲಿಗರೊಂದಿಗೆ ಬಿಜೆಪಿ ತೊರೆದಿರುವುದು ಕೂಡ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಸಂಕಷ್ಟಕ್ಕೆ ಈಡು ಮಾಡುವ ಸಾಧ್ಯತೆಯಿದೆ.