Friday, 20th September 2024

Heavy Rain: ಭಾರೀ ಮಳೆಗೆ ಆಂಧ್ರ, ತೆಲಂಗಾಣ ತತ್ತರ; 10 ಬಲಿ- 100ಕ್ಕೂಅಧಿಕ ರೈಲುಗಳು ರದ್ದು

Heavy rain

ಹೈದರಾಬಾದ್‌: ತೆಲಂಗಾಣ(Telangana) ಮತ್ತು ಆಂಧ್ರಪ್ರದೇಶ(Andra Pradesh)ದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ(Heavy Rain)ಯಿಂದಾಗಿ ಸಂಭವಿಸುತ್ತಿರುವ ದುರಂತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಆಗ್ತಿದೆ. ಭಾನುವಾರ ಉಂಟಾದ ಪ್ರವಾಹ(Flood)ಕ್ಕೆ  ಸಿಲುಕಿ ಮತ್ತೆ 10ಜನ ಮೃತಪಟ್ಟಿದ್ದಾರೆ. ಇನ್ನು ಹಲವಾರು ಪ್ರದೇಶಗಳಲ್ಲಿ ಪ್ರವಾಹ ಮತ್ತು ಜಲಾವೃತವಾಗಿದೆ ಮತ್ತು ರಸ್ತೆ ಮತ್ತು ರೈಲು ಸಂಚಾರ(Train) ಸ್ಥಗಿತಗೊಳಿಸಲಾಗಿದೆ.

ಎರಡೂ ರಾಜ್ಯಗಳಲ್ಲಿ ನದಿಗಳು ಭಾರೀ ಮಳೆಯಿಂದ ಉಕ್ಕಿ ಹರಯುತ್ತಿದ್ದು, ಪ್ರವಾಹ ಸ್ಥಿತಿ ನಿರ್ಮಾಣಗೊಂಡಿದೆ. ಸಾವಿರಾರು ಜನರನ್ನು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳು ಪ್ರವಾಹ ಪ್ರದೇಶಗಳಿಂದ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಯಿತು. ಇನ್ನು ಇಲ್ಲಿಯವರೆಗೆ 100 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ. ಆದರೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಇತರ ರಾಜ್ಯಗಳಿಗೆ ಸೇವೆ ಸಲ್ಲಿಸುವ ದಕ್ಷಿಣ ಮಧ್ಯ ರೈಲ್ವೆ ಜಾಲದ ಅನೇಕ ಸ್ಥಳಗಳಲ್ಲಿ ಭಾರೀ ಮಳೆ ಮತ್ತು ಹಳಿಗಳ ಮೇಲೆ ನೀರು ಹರಿಯುವ ಕಾರಣದಿಂದ ಹಲವಾರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

 ಸಿಎಂಗಳ ಜತೆ ಪ್ರಧಾನಿ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಅವರ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಅವರಿಗೆ ಭರವಸೆ ನೀಡಿದ್ದಾರೆ. ತೆಲಂಗಾಣ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಪ್ರತ್ಯೇಕ ಮಳೆ ಸಂಬಂಧಿತ ಘಟನೆಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ನಗರದ ಹಲವೆಡೆ ಜಲಾವೃತವಾಗಿರುವ ಹೈದರಾಬಾದ್‌ನಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಈ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌
ತೆಲಂಗಾಣದ ಆದಿಲಾಬಾದ್, ನಿಜಾಮಾಬಾದ್, ರಾಜಣ್ಣ ಸಿರ್ಸಿಲ್ಲಾ, ಯಾದಾದ್ರಿ ಭುವನಗಿರಿ, ವಿಕಾರಾಬಾದ್, ಸಂಗಾರೆಡ್ಡಿ, ಕಾಮರೆಡ್ಡಿ ಮತ್ತು ಮಹಬೂಬ್‌ನಗರ ಜಿಲ್ಲೆಗಳಲ್ಲಿ ಸೋಮವಾರ ಅತಿ ಹೆಚ್ಚು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ತುರ್ತು ಪರಿಶೀಲನಾ ಸಭೆ ನಡೆಸಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಕ್ಷಣದ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತುರ್ತು ಕೆಲಸಗಳಿದ್ದಲ್ಲಿ ಮಾತ್ರ ಮನೆಯಿಂದ ಹೊರಬರುವಂತೆ ಅವರು ಜನರಿಗೆ ಮನವಿ ಮಾಡಿದರು.
ಆಂಧ್ರಪ್ರದೇಶದಲ್ಲಿ ಶನಿವಾರದಿಂದ ಒಂಬತ್ತು ಮಳೆ ಸಂಬಂಧಿ ಸಾವುಗಳು ಮತ್ತು ಒಂದು ನಾಪತ್ತೆ ಪ್ರಕರಣ ವರದಿಯಾಗಿದೆ.
ಅತಿ ಹೆಚ್ಚು ಹಾನಿಗೊಳಗಾದ ವಿಜಯವಾಡ ಜಿಲ್ಲೆಯಲ್ಲಿ, ಜಿಲ್ಲೆಯ ಹೊರವಲಯದಲ್ಲಿರುವ ಬುಡಮೇರು ಎಂಬ ಹಳ್ಳವು ಭಾನುವಾರ ಹಲವು ಕಡೆಗಳಲ್ಲಿ ಉಕ್ಕಿ ಹರಿಯುತ್ತಿದ್ದು, ಅನೇಕ ನಗರ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು. ಶ್ರೀಕಾಕುಳಂ, ವಿಜಯನಗರಂ, ಪಾರ್ವತಿಪುರಂ ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು, ಕಾಕಿನಾಡ ಮತ್ತು ನಂದ್ಯಾಲ ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ.