Friday, 18th October 2024

India Canada row: ಬಿಷ್ಣೋಯ್‌ ಗ್ಯಾಂಗ್‌ ಜೊತೆ ಭಾರತದ ಏಜೆಂಟ್‌ಗಳಿಗೆ ನಂಟು; ಕೆನಡಾ ಗಂಭೀರ ಆರೋಪ

canada

ನವದೆಹಲಿ: ಲಾರೆನ್ಸ್‌ ಬಿಷ್ನೋಯ್‌ ಗ್ಯಾಂಗ್‌(Bishnoi Gang) ಜತೆಗೂಡಿಕೊಂಡು ಭಾರತದ ಗುಪ್ತಚರ ಇಲಾಖೆ ಸಿಬ್ಬಂದಿ ಕೆನಡಾದಲ್ಲಿ ಭಯೋತ್ಪಾದಕಾ ಚಟುವಟಿಕೆ ನಡೆಸುತ್ತಿದೆ ಎಂದು ಕೆನಡಾ ಪೊಲೀಸರು(India Canada row) ಗಂಭೀರ ಆರೋಪ ಮಾಡಿದ್ದಾರೆ. ಭಾರತವು ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿದ ನಂತರ ಮತ್ತು ಒಟ್ಟಾವಾದಿಂದ ತನ್ನ ರಾಯಭಾರಿಯನ್ನು ಹಿಂತೆಗೆದುಕೊಂಡ ನಂತರ, ಕೆನಡಾ ಭಾರತದ ವಿರುದ್ಧ ಮತ್ತೆ ಆರೋಪಗಳನ್ನು ಮಾಡಲು ಶುರು ಮಾಡಿದೆ.

ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ (RCMP) ಸಹಾಯಕ ಕಮಿಷನರ್‌ ಬ್ರಿಗಿಟ್ಟೆ ಗೌವಿನ್‌ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು, ಬಿಷ್ಣೋಯ್‌ ಗ್ಯಾಂಗ್‌ ಅನ್ನು ಬಳಸಿಕೊಂಡು ಭಾರತ ಕೆನಡಾದಲ್ಲಿ ಖಲಿಸ್ತಾನಿ ನಾಯಕರನ್ನು ಗುರಿಯಾಗಿಸಿದೆ. ಬಿಷ್ಣೋಯ್‌ ಗ್ಯಾಂಗ್‌ ಭಾರತ ಸರ್ಕಾರದ ಏಜೆಂಟ್‌ಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿದ್ದಾರೆ.

ಇನ್ನು ಕೆನಡಾದ ಆರೋಪವನ್ನು ಅಲ್ಲಗಲೆದಿರುವ ಭಾರತ, ಮತ್ತೆ ಆಧಾರರಹಿತ ಆರೋಪ ಮಾಡಲು ಕೆನಡಾ ಪ್ರಾರಂಭಿಸಿದೆ. ಇದು ಹಾಸ್ಯಾಸ್ಪದ. ಟ್ರುಡೊ ನೇತೃತ್ವದ ಸರ್ಕಾರವು ಕೆನಡಾದೊಳಗಿನ ಖಲಿಸ್ತಾನ್ ಪರ ಶಕ್ತಿಗಳಿಗೆ ಕುಮ್ಮಕ್ಕು ನೀಡುವ ಮೂಲಕ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದ ಭಾರತವು ಈ ಹೇಳಿಕೆಗಳನ್ನು ʼಅಸಂಬದ್ಧʼ ಎಂದು ಹೇಳಿದೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ವಿಚಾರಕ್ಕೆ ಸಂಬಂಧಿಸಿ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದಲ್ಲಿನ ಭಾರತೀಯ ಹೈ ಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರನ್ನು ʼಆಸಕ್ತಿಯ ವ್ಯಕ್ತಿʼ (Person of interest) ಎಂದಿರುವ ಕೆನಡಾದ ಆರೋಪವನ್ನು ಭಾರತ ನಿರಾಕರಿಸಿದೆ. ಜತೆಗೆ ಈ ಹೇಳಿಕೆಯನ್ನು ಖಂಡಿಸಿದೆ.

ಪ್ರಕರಣದ ಹಿನ್ನೆಲೆ

ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆ ದಿನವನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನನ್ನು ಕೆನಡಾದ ಸುರ‍್ರೆ ನಗರದಲ್ಲಿ ಕೊಲೆ ಮಾಡಲಾಗಿತ್ತು. ಪಂಜಾಬಿಗಳೇ ಹೆಚ್ಚಿರುವ ಸುರ‍್ರೆ ನಗರದ ಗುರುನಾನಕ್‌ ಸಿಖ್‌ ಗುರುದ್ವಾರದ ಬಳಿಕ ಖಲಿಸ್ತಾನಿ ಉಗ್ರನ ಹತ್ಯೆ ನಡೆದಿತ್ತು. ಖಲಿಸ್ತಾನ್‌ ಟೈಗರ್‌ ಫೋರ್ಸ್‌ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್‌ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿತ್ತು. ಈತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಸುಳ್ಳು ಆರೋಪ ಹೊರಿಸುತ್ತಲೇ ಇದೆ.

ಈ ಸುದ್ದಿಯನ್ನೂ ಓದಿ: India Canada row : ಭಾರತ- ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು; ರಾಯಭಾರಿಗಳನ್ನು ಹೊರಗಟ್ಟಿದ ಭಾರತ