Thursday, 19th September 2024

Jammu & Kashmir Election : ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಇಂದು ಮೊದಲ ಹಂತದ ಚುನಾವಣೆ

Jammu and Kashmir Election

ಬೆಂಗಳೂರು : ಜಮ್ಮ ಮತ್ತು ಕಾಶ್ಮೀರದ ವಿಧಾನಸಭೆಗೆ (Jammu & Kashmir Election) ಸೆಪ್ಟೆಂಬರ್ 18ರ ಬುಧವಾರ (ಇಂದು) ಮೊದಲ ಹಂತದ ಚುನಾವಣೆ ನಡೆಯಲಿದೆ. 24 ಕ್ಷೇತ್ರಗಳಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಜನರು ಮತದಾನ ಮಾಡಲಿದ್ದಾರೆ. ಭಯೋತ್ಪಾದನೆ ಸೇರಿದಂತೆ ನಾನಾ ಕಾರಣಗಳಿಗೋಸ್ಕರ ಭಾರತದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಆಯೋಜಿಸುವ ಉದ್ದೇಶದಿಂದ ಬಹು ಹಂತದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಮೊದಲ ಹಂತದಲ್ಲಿ ದಕ್ಷಿಣ ಕಾಶ್ಮೀರದ 16 ಕ್ಷೇತ್ರಗಳು ಮತ್ತು ಜಮ್ಮು ವಿಭಾಗದ 8 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಪಾಂಪೋರ್, ಟ್ರಾಲ್, ಪುಲ್ವಾಮಾ, ರಾಜ್ಪೋರಾ, ಜೈನಾಪೊರಾ, ಶೋಪಿಯಾನ್, ಡಿ.ಎಚ್.ಪೋರಾ, ಕುಲ್ಗಾಮ್, ದೇವ್ಸರ್, ದೂರು, ಕೊಕರ್ನಾಗ್ (ಎಸ್ಟಿ), ಅನಂತ್‌ನಾಗ್‌ ಪಶ್ಚಿಮ, ಅನಂತ್‌ನಾಗ್‌ ಶ್ರೀಗುಫ್ವಾರಾ ಬಿಜ್ಬೆಹರಾ, ಶಾಂಗಸ್ ಅನಂತ್‌ನಾಗ್‌ ಪೂರ್ವ, ಪಹಲ್ಗಾಮ್, ಇಂದರ್ವಾಲ್, ಕಿಶ್ತ್ವಾರ್, ಪಡ್ಡರ್- ನಾಗಸೇನಿ, ಭದರ್ವಾ, ದೋಡಾ, ದೋಡಾ ಪಶ್ಚಿಮ, ರಂಬನ್ ಮತ್ತು ಬನಿಹಾಲ್ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

219 ಅಭ್ಯರ್ಥಿಗಳು ಕಣದಲ್ಲಿ

24 ವಿಧಾನಸಭಾ ವಿಭಾಗಗಳಲ್ಲಿ 90 ಸ್ವತಂತ್ರರು ಸೇರಿದಂತೆ 219 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿನ ಮತದಾರರು 10 ವರ್ಷಗಳಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಮೊದಲ ಹಂತದಲ್ಲಿ 11,76,462 ಪುರುಷರು, 11,51,058 ಮಹಿಳೆಯರು ಮತ್ತು 60 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 23,27,580 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸುಗಮ ಮತದಾನಕ್ಕಾಗಿ ಆಯೋಗವು 3,276 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಒಟ್ಟು 14,000 ಮತಗಟ್ಟೆ ಸಿಬ್ಬಂದಿ ನಿರ್ವಹಿಸಲಿದ್ದಾರೆ.

ಸಿಪಿಐ (ಎಂ) ನ ಮೊಹಮ್ಮದ್ ಯೂಸುಫ್ ತಾರಿಗಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್, ನ್ಯಾಷನಲ್ ಕಾನ್ಫರೆನ್ಸ್‌ನ ಸಕೀನಾ ಇಟೂ ಮತ್ತು ಪಿಡಿಪಿಯ ಸರ್ತಾಜ್ ಮದ್ನಿ ಮತ್ತು ಅಬ್ದುಲ್ ರೆಹಮಾನ್ ವೀರಿ ಮೊದಲ ಹಂತದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.

ತಾರಿಗಾಮಿ ಕುಲ್ಗಾಮ್ ವಿಧಾನಸಭಾ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್ ಅವರು ದೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಮೂರನೇ ಅವಧಿಗೆ ಅಧಿಕಾರ ಬಯಸಿದ್ದಾರೆ. ಎನ್‌ಸಿಯ ಸಕೀನಾ ಇಟೂ ದಮ್ಹಾಲ್ ಹಾಜಿಪೋರಾದಿಂದ ಮತ್ತೊಂದು ಅವಧಿಗೆ ಸ್ಪರ್ಧಿಸುತ್ತಿದ್ದಾರೆ. ಪಿಡಿಪಿಯ ಸರ್ತಾಜ್ ಮದ್ನಿ (ದೇವ್ಸರ್) ಮತ್ತು ಅಬ್ದುಲ್ ರೆಹಮಾನ್ ವೀರಿ (ಶಂಗುಸ್-ಅನಂತ್ನಾಗ್) ಕೂಡ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಪಿಡಿಪಿಯ ಯುವ ಘಟಕದ ನಾಯಕ ವಾಹಿದ್‌ ಪಾರಾ ಪುಲ್ವಾಮಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ತಾರಿಗಾಮಿ ಕೂಡ ಸಯಾರ್ ಅಹ್ಮದ್ ರೇಶಿಯಲ್ಲಿ ಸ್ಪರ್ಧೆ ಎದುರಿಸುತ್ತಿದ್ದಾರೆ.

ಜಮ್ಮು ವಿಭಾಗದ ಎಂಟು ಸ್ಥಾನಗಳಲ್ಲಿ ಏಳು ಸ್ಥಾನಗಳಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟದ ನಡುವೆ ತೀವ್ರ ಮುಖಾಮುಖಿ ಕಾಣುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಜಮ್ಮುವಿನಲ್ಲಿ ಮಾಜಿ ಸಚಿವರಾದ ಸಜ್ಜಾದ್ ಕಿಚ್ಲೂ (ಎನ್ಸಿ), ಖಾಲಿದ್ ನಜೀದ್ ಸುಹರ್ವರ್ಡಿ (ಎನ್ಸಿ), ವಿಕರ್ ರಸೂಲ್ ವಾನಿ (ಕಾಂಗ್ರೆಸ್), ಅಬ್ದುಲ್ ಮಜೀದ್ ವಾನಿ (ಡಿಪಿಎಪಿ), ಸುನಿಲ್ ಶರ್ಮಾ (ಬಿಜೆಪಿ), ಶಕ್ತಿ ರಾಜ್ ಪರಿಹಾರ್ (ದೋಡಾ ಪಶ್ಚಿಮ) ಮತ್ತು ಮೂರು ಬಾರಿ ಶಾಸಕರಾಗಿರುವ ಗುಲಾಮ್ ಮೊಹಮ್ಮದ್ ಸರೂರಿ ಕಣದಲ್ಲಿದ್ದಾರೆ.

ಇದನ್ನೂ ಓದಿ: J&K assembly elections : ಜಮ್ಮು- ಕಾಶ್ಮೀರ ಚುನಾವಣೆಗೆ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ; ಅಲ್ಪ ಸಂಖ್ಯಾತ ಆಯೋಗ ಸೇರಿದಂತೆ ಇನ್ನೇನಿವೆ?

ಮಾಜಿ ಶಾಸಕ ದಲೀಪ್ ಸಿಂಗ್ ಪರಿಹಾರ್ (ಬಿಜೆಪಿ), ಮಾಜಿ ಎಂಎಲ್ಸಿ ಫಿರ್ದೌಸ್ ತಕ್ ಮತ್ತು ಇಮ್ತಿಯಾಜ್ ಶಾನ್ (ಪಿಡಿಪಿ), ಕಿಶ್ತ್ವಾರ್ ಜಿಲ್ಲಾ ಅಭಿವೃದ್ಧಿ ಮಂಡಳಿಯ ಹಾಲಿ ಅಧ್ಯಕ್ಷರಾಗಿರುವ ಎನ್ಸಿಯ ಪೂಜಾ ಠಾಕೂರ್, ಬಿಜೆಪಿಯ ಯುವ ಮುಖ ಶಗುನ್ ಪರಿಹಾರ್, ಅವರ ತಂದೆ ಅಜಿತ್ ಪರಿಹಾರ್ ಮತ್ತು ಚಿಕ್ಕಪ್ಪ ಅನಿಲ್ ಪರಿಹಾರ್ ಮತ್ತು ಎಎಪಿಯ ಮೆಹ್ರಾಜ್ ದಿನ್ ಮಲಿಕ್ ಕಣದಲ್ಲಿರುವ ಇತರ ಪ್ರಮುಖ ಮುಖಗಳಲ್ಲಿ ಸೇರಿದ್ದಾರೆ.

ಕ್ಷೇತ್ರಗಳ ಮರುವಿಂಗಡಣೆ

ಸ್ಥಳೀಯ ನಿವಾಸಿಗಳ ಪ್ರಕಾರ, ಇತ್ತೀಚಿನ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯು ಅವರ ಅಲ್ಲಿನ ಮತದಾನ ಸ್ವರೂಪವನ್ನು ಬದಲಾಯಿಸಿದೆ. ರಾಜಕೀಯ ಪಕ್ಷಗಳು ತಮ್ಮ ಕಾರ್ಯತಂತ್ರ ಮತ್ತು ಅಭ್ಯರ್ಥಿಗಳ ಆಯ್ಕೆಯನ್ನು ಮರುರೂಪಿಸುವಂತೆ ಮಾಡಿದೆ.

ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಬಿಜೆಪಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಅಪ್ನಿ ಪಾರ್ಟಿ, ಸಿಪಿಐ (ಎಂ), ಜೆ &ಕೆ ಪೀಪಲ್ಸ್ ಕಾನ್ಫರೆನ್ಸ್ ಮತ್ತು ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳು. ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರೆ, ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಐದು ಭರವಸೆಗಳನ್ನು ನೀಡಿದೆ.

Leave a Reply

Your email address will not be published. Required fields are marked *