Friday, 20th September 2024

ಜೆಇಇ ಪರೀಕ್ಷೆ: ಕರ್ನಾಟಕದ ಗೌರಬ್‍ದಾಸ್’ಗೆ ಮೊದಲ ರ‍್ಯಾಂಕ್

ನವದೆಹಲಿ: ಜೆಇಇ ಪರೀಕ್ಷೆ ಬರೆದಿದ್ದ 44 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದು ಗಮನ ಸೆಳೆದಿದ್ದರೆ, ಕರ್ನಾಟಕದ ಗೌರಬ್‍ದಾಸ್ ಮೊದಲ ರ‍್ಯಾಂಕ್ ಪಡೆದುಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

18 ಅಭ್ಯರ್ಥಿಗಳು ಅತ್ಯುನ್ನತ ರ್ಯಾಂಕ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವರುಗಳಲ್ಲಿ ಕರ್ನಾ ಟಕದ ಗೌರಬ್‍ದಾಸ್ ಒಬ್ಬರಾಗಿರುವುದು ಉಲ್ಲೇಖಾರ್ಹ. ಗೌರಬ್‍ದಾಸ್(ಕರ್ನಾಟಕ), ವೈಭವ್ ವಿಶಾಲ್ (ಬಿಹಾರ), ದುಗ್ಗಿನೇನಿ ವೆಂಕಟ ಪರ್ನೇಶ್(ಆಂಧ್ರ), ಸಿದ್ದಾಂತ್ ಮುಖರ್ಜಿ, ಅಂಶುಲ್ ವರ್ಮಾ, ಮೃದುಲ್‍ ಅಗರ್‍ವಾಲ್(ರಾಜಸ್ಥಾನ್), ರುಚಿರ್ ಬನ್ಸಾಲ್, ಕಾವ್ಯ ಚೋಪ್ರಾ(ದೆಹಲಿ), ಅಮಯ್ ಸಿಂಘಾಲ್, ಪಸಲ್ ವೀರಶೀವ, ಕರ್ಣಂಲೋಕೇಶ್, ಕಂಚನ್‍ಪಲ್ಲಿ ರಾಹುಲ್ ನಾಯ್ಡು(ಆಂಧ್ರ), ಪುಲ್ಕಿತ್ ಗೋಯಲ್(ಪಂಜಾಬ್) ಮತ್ತು ಗುರುಮ್ರಿತ್‍ಸಿಂಗ್(ಚಂಡಿಗಢ).

ವರ್ಷಕ್ಕೆ ನಾಲ್ಕು ಬಾರಿ ನಡೆಸಲಾಗುವ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್‍ನ ಮೊದಲ ಪರೀಕ್ಷೆ ಫೆಬ್ರವರಿಯಲ್ಲಿ ನಡೆಸಲಾಗಿತ್ತು. ಎರಡನೆ ಪರೀಕ್ಷೆಗಳನ್ನು ಮಾರ್ಚ್ ತಿಂಗಳಲ್ಲಿ ನಡೆಸಲಾಗಿತ್ತು. ಮೂರನೆ ಮತ್ತು ನಾಲ್ಕನೆ ಪರೀಕ್ಷೆಗಳನ್ನು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಸಬೇಕಿತ್ತು.

ಜುಲೈ 20 ರಿಂದ 25 ರವರೆಗೆ ಮೂರನೆ ಹಂತ ಹಾಗೂ ಆ.26 ರಿಂದ ಸೆ.2ರವರೆಗೆ ನಾಲ್ಕನೆ ಹಂತದ ಪರೀಕ್ಷೆಗಳನ್ನು ನಡೆಸಲಾಗಿತ್ತು. ನಾಲ್ಕು ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ ಸೇರಿದಂತೆ ಪ್ರಾದೇಶಿಕ 13 ಭಾಷೆಗಳಲ್ಲಿ ನಡೆಸಲಾಗಿದ್ದ ಜೆಇಇ ಮುಖ್ಯ ಪರೀಕ್ಷೆಯನ್ನು ದೇಶದ 9.34 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.