Saturday, 26th October 2024

Kolkata Row: ದುರ್ಗಾ ಪೂಜಾ ಪೆಂಡಾಲ್‌ಗೆ ನುಗ್ಗಿ ಅನ್ಯಕೋಮಿನ ದುಷ್ಕರ್ಮಿಗಳಿಂದ ದಾಂಧಲೆ; ದುರ್ಗಾ ಮೂರ್ತಿ ಧ್ವಂಸಗೊಳಿಸುವುದಾಗಿ ಬೆದರಿಕೆ

kolkata row

ಕೋಲ್ಕತ್ತಾ: ಅನ್ಯಕೋಮಿನ ದುಷ್ಕರ್ಮಿಗಳ ಗುಂಪೊಂದು ದುರ್ಗಾ ಪೂಜಾ ಪೆಂಡಾಲ್‌ಗೆ ನುಗ್ಗಿ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿರುವ ಘಟನೆ ಪಶ್ಚಿಮ ಬಂಗಾಳ(West Bengal)ದಲ್ಲಿ ನಡೆದಿದೆ. ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ಘಟನೆ(Kolkata Row) ನಡೆದಿದ್ದು, ನ್ಯೂ ಬೆಂಗಾಲ್ ಸ್ಪೋರ್ಟಿಂಗ್ ಕ್ಲಬ್‌ನ ಪೂಜಾ ಪೆಂಡಾಲ್‌ ಮುಸ್ಲಿಮ್ ಗುಂಪೊಂದು ನುಗ್ಗಿ ಹಿಂದೂ ಆಚರಣೆಗಳನ್ನು ನಿಲ್ಲಿಸುವಂತೆ ಪೂಜಾ ಸಂಘಟಕರಿಗೆ ಬೆದರಿಕೆ ಹಾಕಿದೆ. ಸುಮಾರು 50-60 ಸದಸ್ಯರನ್ನು ಒಳಗೊಂಡ ಮುಸ್ಲಿಂ ಗುಂಪು ಆಚರಣೆಯನ್ನು ನಿಲ್ಲಿಸದಿದ್ದರೆ ದುರ್ಗೆಯ ಮೂರ್ತಿಯನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದರು.

ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದ ನ್ಯೂ ಬೆಂಗಾಲ್ ಸ್ಪೋರ್ಟಿಂಗ್ ಕ್ಲಬ್ ದುರ್ಗಾ ಪೂಜೆಯನ್ನು ಆಯೋಜಿಸಿತ್ತು. ಈ ವೇಳೆ ಪೆಂಡಾಲ್‌ಗೆ ನುಗ್ಗಿದ ದುಷ್ಕರ್ಮಿಗಳ ತಂಡ ಗದ್ದಲ ಸೃಷ್ಟಿಸಿದೆ. ಅಲ್ಲದೇ ಆಚರಣೆಗಳನ್ನು ನಿಲ್ಲಿಸದಿದ್ದರೆ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲೇ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸಿ ಕಾರ್ಯಕ್ರಮದ ಆಯೋಜಕರು ಪೊಲೀಸರಿಗೆ ದೂರು ಬರೆದಿದ್ದಾರೆ.

ಇನ್ನು ಈ ದೂರಿನ ಪ್ರತಿಯನ್ನು ಪಶ್ಚಿಮ ಬಂಗಾಳದ ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ, ಸುವೆಂದು ಅಧಿಕಾರಿ X ನಲ್ಲಿ ಹಂಚಿಕೊಂಡಿದ್ದಾರೆ. ಅವರು ಮುಸ್ಲಿಂ ಯುವಕರು ಪೆಂಡಾಲ್ ಒಳಗೆ ನುಗ್ಗಿ ಗದ್ದಲವನ್ನು ಸೃಷ್ಟಿಸುತ್ತಿರುವ ವೀಡಿಯೊವನ್ನೂ ಕೂಡ ಶೇರ್‌ ಮಾಡಿ ಕಿಡಿಕಾರಿದ್ದಾರೆ. ಕೋಲ್ಕತ್ತಾ ಪೊಲೀಸ್‌ ಉನ್ನತಾಧಿಕಾರಿಯಾಗಿರುವ ಮನೋಜ್ ಕುಮಾರ್ ವರ್ಮಾ (IPS) ಇದೇನಿದು? ಕೋಲ್ಕತ್ತಾ ಪೊಲೀಸರ ವ್ಯಾಪ್ತಿಯಲ್ಲಿರುವ ದುರ್ಗಾಪೂಜಾ ಪಂಗಡಕ್ಕೆ ನುಗ್ಗಿ, ಆಚರಣೆಗಳನ್ನು ನಿಲ್ಲಿಸದಿದ್ದರೆ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕುವ ಧೈರ್ಯ ಗೂಂಡಾಗಳಿಗೆ ಹೇಗೆ ಬಂತು? ಎಂದು ಪ್ರಶ್ನಿಸಿದ್ದಾರೆ.

“ನ್ಯೂ ಬೆಂಗಾಲ್ ಸ್ಪೋರ್ಟಿಂಗ್ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಘಟನೆಯ ವೀಡಿಯೊ ತುಣುಕನ್ನು ಸಹ ಒದಗಿಸಿದ್ದಾರೆ. ಇಂತಹ ಘಟನೆಗಳು ನಡೆಯಲು ಹೇಗೆ ಸಾಧ್ಯ? ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಜರುಗಿಸುತ್ತೀರಿ? ಇದು ಕೋಲ್ಕತ್ತಾ, ಢಾಕಾ ಅಲ್ಲ ಎಂಬುದನ್ನು ದುಷ್ಕರ್ಮಿಗಳಿಗೆ ಅರ್ಥ ಮಾಡಿಸಿ” ಎಂದು ಪೋಸ್ಟ್‌ ಮಾಡಿದ್ದಾರೆ.

ಅಕ್ಟೋಬರ್ 11 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ದೂರಿನಲ್ಲಿ ಸಂಘಟಕರು ಉಲ್ಲೇಖಿಸಿದ್ದಾರೆ. “ಸುಮಾರು 50-60 ಮುಸ್ಲಿಮರು ನಮ್ಮ ಪೂಜಾ ಮಂಟಪಕ್ಕೆ ಬಂದು ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರು. ಪೂಜಾ ವಿಧಿವಿಧಾನಗಳನ್ನು ನಿಲ್ಲಿಸದಿದ್ದರೆ ಮಾತೆ ದುರ್ಗೆಯ ವಿಗ್ರಹವನ್ನು ಸಹ ಒಡೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನೂ ಓದಿ: Dussehra Rally: ಶಿಂಧೆ vs ಠಾಕ್ರೆ; ಶಿವಸೇನೆ ಎರಡೂ ಬಣಗಳಿಂದ ದಸರಾ ರ್‍ಯಾಲಿ- ಚುನಾವಣೆಗೂ ಮುನ್ನ ಶಕ್ತಿ ಪ್ರದರ್ಶನ