Friday, 20th September 2024

ಮಣಿಪುರ ಹಿಂಸಾಚಾರ: ಮಹಿಳೆ ಸೇರಿ 9 ಮಂದಿ ಸಾವು, 15 ಮಂದಿಗೆ ಗಾಯ

ಗುವಾಹಟಿ: ಮಣಿಪುರ ಹಿಂಸಾಚಾರದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಂಗಳವಾರ ರಾತ್ರಿ ಮತ್ತೆ ಹಿಂಸಾಚಾರ ನಡೆದಿದೆ. ತಡರಾತ್ರಿ ಚರ್ಚ್‌ನಲ್ಲಿ ಕೆಲ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಓರ್ವ ಮಹಿಳೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯ ಗೊಂಡಿದ್ದಾರೆ.

ಪೂರ್ವ ಇಂಫಾಲ್‌ನ ಖಮೆನ್‌ಲೋಕ್ ಪ್ರದೇಶದ ಚರ್ಚ್‌ನಲ್ಲಿ ಈ ಬರ್ಬರ ಘಟನೆ ನಡೆದಿದೆ. ಗಾಯಾಳುಗಳನ್ನು ಇಂಫಾಲದ ರಾಜ್ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಡಿನ ದಾಳಿಯ ವೇಳೆ ಚರ್ಚ್‌ನಲ್ಲಿ ಸುಮಾರು 25 ಮಂದಿ ಇದ್ದರು. ಏಕಾಏಕಿ ಚರ್ಚ್‌ಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿನ ದಾಳಿ ಹಿಂದೆ ಕುಕಿ ಸಮುದಾಯದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಒಂದು ದಿನದ ಹಿಂದಷ್ಟೇ, ಪೂರ್ವ ಇಂಫಾಲ್‌ನ ಚೌರಚಂದ್‌ಪುರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸ್ವಯಂ ಸೇವಕರೊಬ್ಬರು ಸಾವನ್ನಪ್ಪಿ, ಮತ್ತು 8 ಮಂದಿ ಗಾಯಗೊಂಡಿದ್ದರು.

ಮೀಸಲಾತಿ ವಿಚಾರವಾಗಿ ಮಣಿಪುರದಲ್ಲಿ ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವೆ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಹಿಂಸಾಚಾರ ನಡೆಯುತ್ತಿದೆ. ಎರಡು ಬಣಗಳ ನಡುವಿನ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ಜೀವಗಳು ಬಲಿಯಾಗಿದ್ದು, ನೂರಾರು ಮನೆಗಳು ಸುಟ್ಟು ಭಸ್ಮವಾಗಿವೆ. ರಾಜ್ಯದಲ್ಲಿ ಶಾಂತಿ ನೆಲೆಸಲು ಸರ್ಕಾರ ಶಾಂತಿ ಸಮಿತಿ ರಚಿಸಿದೆ.

ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಲ್ಲದೆ, ಸಂಸದರು ಮತ್ತು ವಿವಿಧ ರಾಜಕೀಯ ಪಕ್ಷಗಳ ಸದಸ್ಯರು, ಮಾಜಿ ಆಡಳಿತ ಅಧಿಕಾರಿಗಳು, ಶಿಕ್ಷಣ ತಜ್ಞರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಶಾಂತಿಗಾಗಿ ಶ್ರಮಿಸುತ್ತಿದ್ದಾರೆ. ಜೂನ್​ 15 ರವರೆಗೆ ಇಡೀ ರಾಜ್ಯದಲ್ಲಿ ಇಂಟರ್‌ನೆಟ್ ಸೇವೆಯನ್ನು ನಿಷೇಧಿಸಲಾಗಿದೆ. ಆದರೂ, ರಾಜ್ಯದಲ್ಲಿ ಹಿಂಸಾಚಾರ ನಿಲ್ಲುತ್ತಿಲ್ಲ.