Friday, 25th October 2024

ಉಪವಾಸ ಧರಣಿ ನಿರತ ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲು

ನವದೆಹಲಿ: ದೆಹಲಿಗೆ ಸಮರ್ಪಕ ನೀರು ಬಿಡುವಂತೆ ಹರ್ಯಾಣ ಸರ್ಕಾರವನ್ನು ಒತ್ತಾಯಿಸಿ ದೆಹಲಿ ಸಚಿವೆ ಅತಿಶಿ ಆರಂಭಿಸಿದ್ದ ಉಪವಾಸ ಧರಣಿ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಸಚಿವೆ ಅತಿಶಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೆಹಲಿಗೆ ಸಮರ್ಪಕ ನೀರು ಒದಗಿಸುವಂತೆ ಒತ್ತಾಯಿಸಿ ಭೋಗಲ್​ನಲ್ಲಿ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ದೆಹಲಿ ಸಚಿವೆ ಅತಿಶಿ ಆರೋಗ್ಯ ಹೆದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಎಲ್​ಎನ್​ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಉಪವಾಸದ ನಾಲ್ಕನೇ ದಿನವಾದ ಸೋಮವಾರ ಆಸ್ಪತ್ರೆ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ, ಆರೋಗ್ಯ ಕ್ಷೀಣಿಸುತ್ತಿರುವುದನ್ನು ಕಂಡ ವೈದ್ಯರು ಆಸ್ಪತ್ರೆಗೆ ದಾಖಲಾಗು ವಂತೆ ಸಲಹೆ ನೀಡಿದ್ದಾರೆ, ಆದರೂ ಅವರು ನಿರಾಕರಿಸಿದ್ದರು.

ಸೋಮವಾರ ರಾತ್ರಿ ಅವರ ರಕ್ತದಲ್ಲಿರುವ ಸಕ್ಕರೆ ಪ್ರಮಾಣ 43ಕ್ಕೆ ಕುಸಿದಿತ್ತು, ಮಂಗಳವಾರ ಬೆಳಗಿನ ಜಾವ 36ಕ್ಕೆ ಕುಸಿದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.